ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಯೊಬ್ಬರು ಅರ್ಜಿದಾರನೊಂದಿಗೆ ಕನ್ನಡದಲ್ಲಿ ಮಾತನಾಡಿರುವುದು ಇದೀಗ ಸುದ್ದಿಯಾಗಿದೆ.
ವರ್ಚುವಲ್ ವಿಚಾರಣೆ ವೇಳೆ ಕಾಣಿಸಿಕೊಂಡ ದಾವೆದಾರನಿಗೆ ಭಾರತೀಯ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ವಿ ರಮಣ “ನೀವು ಇಂಗ್ಲಿಷ್ನಲ್ಲಿ ಮಾತನಾಡುತ್ತೀರಾ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅರ್ಜಿದಾರ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ವೇಳೆ, “ಸರಿ ಸಹೋದರ, ಕನ್ನಡದಲ್ಲಿ ಮಾತನಾಡೋಣ್ವಾ” ಎಂದು ಎನ್ವಿ ರಮಣ ಕೇಳಿದ್ದಾರೆ. ನಂತರ ಪಕ್ಕದಲ್ಲೇ ಇದ್ದ ಕರ್ನಾಟಕ ಮೂಲದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಅರ್ಜಿದಾರನ ಜೊತೆಗೆ ಕನ್ನಡದಲ್ಲಿ ಸಂವಹನ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಬೋಪಣ್ಣ ಅವರು ಅರ್ಜಿದಾರನ ಜೊತೆಗೆ ಕನ್ನಡದಲ್ಲಿ ಮಾತುಕತೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಪೆಗಾಸಸ್: ನ್ಯೂಯಾರ್ಕ್ ಟೈಮ್ಸ್ ವರದಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ಗೆ ಎಡಿಟರ್ಸ್ ಗಿಲ್ಡ್ ಪತ್ರ
ಭೌತಿಕವಾಗಿ ವಿಚಾರಣೆ ವೇಳೆ ಕೂಡಾ ಕನ್ನಡದಲ್ಲಿ ಮುಂದುವರಿಯಲಿ. ನಾವು ಇದನ್ನು ಕೇಳುತ್ತೇವೆಂದು ಮುಖ್ಯನ್ಯಾಯಮೂರ್ತಿ ರಮಣ ಅವರು ಹೇಳಿದ್ದಾರೆ. ಈ ವರ್ಚುವಲ್ ವಿಚಾರಣೆಯ ಸಂಭಾಷಣೆಯ ವಿವರವನ್ನು ಬಾರ್ ಅಂಡ್ ಬೆಂಚ್ ವೆಬ್ತಾಣ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಈ ಪ್ರಕರಣದಿಂದ ಇತ್ತೀಚೆಗೆ ಸ್ಥಳೀಯ ಭಾಷೆಗೆ ನ್ಯಾಯಾಲಯದಲ್ಲಿ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿರುವುದು ಸ್ಪಷ್ಟವಾಗಿದೆ. ಪ್ರಕರಣಗಳ ವಿಚಾರಣೆ ಹಾಗೂ ತೀರ್ಪು ನೀಡುವ ವಿಚಾರದಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಯ ನ್ಯಾಯಾಧೀಶರ ನೆರವನ್ನು ಪಡೆದು ವಿಚಾರಣೆ ನಡೆಸುವ ಮೂಲಕ ಹೆಚ್ಚು ಉತ್ತಮವಾಗಿ ಪ್ರಕರಣವನ್ನು ಅರ್ಥಮಾಡಿಕೊಳ್ಳಲು ಸುಪ್ರೀಕೋರ್ಟ್ ಪ್ರಯತ್ನಿಸಿದೆ. ಹೀಗಾಗಿ ಕಕ್ಷಿದಾರರಿಗೆ ಸಹ ವಿಚಾರಣೆಯನ್ನು ಅರ್ಥ ಮಾಡಿಕೊಳ್ಳಲು ಅವಕಾಶ ದೊರೆತಿದೆ.
ಟ್ವಿಟರ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಎಂಬವರು, “ಸುಪ್ರೀಂಕೋರ್ಟ್ನ ನಡೆಯಿಂದ ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆ ಬಳಸುವ ವಕೀಲರಿಗೆ ಸಹಾಯವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ‘ಗೋಡ್ಸೆ’ ಕುರಿತ ಸಿನಿಮಾ ಬಿಡುಗಡೆ ತಡೆಗಾಗಿ ಸುಪ್ರೀಂಗೆ ಅರ್ಜಿ
ಇತ್ತೀಚೆಗೆ ಗುಜರಾತ್ನಲ್ಲಿ ನಡೆದ ತತ್ವಿರುದ್ಧ ಪ್ರಕರಣವೊಂದರ ವಿಚಾರಣೆಯೊಂದರಲ್ಲಿ ಕನ್ನಡದ ನ್ಯಾಯಾಧೀಶರೊಬ್ಬರು ಅರ್ಜಿದಾರ ಗುಜರಾತಿ ಭಾಷೆಯಲ್ಲೇ ಮಾತನಾಡುತ್ತೇನೆಂದು ಹಠ ಹಿಡಿದಾಗ ಸಿಟ್ಟಾಗಿದ್ದರು. ಅರ್ಜಿದಾರ ಗುಜರಾತಿ ಭಾಷೆಯಲ್ಲಿ ಮಾತನಾಡಿದಾಗ ನ್ಯಾಯಾಧೀಶರು ಆತನಿಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡಲು ಸೂಚಿಸಿದ್ದರು. ಭಾಷೆ ಇಲ್ಲಿ ಸಮಸ್ಯೆಯಾಯಿತು.
ಅರ್ಜಿದಾರ ಗುಜರಾತಿಯಲ್ಲೇ ಮಾತನಾಡುತ್ತೇನೆ ಎಂದು ಹೇಳಿದ್ದರು. ಅದಕ್ಕೆ ಉತ್ತರವಾಗಿ ನ್ಯಾಯಾಧೀಶರು, “ಹಾಗಿದ್ದರೆ ನಾನು ಕನ್ನಡದಲ್ಲಿ ಮಾತನಾಡಿದರೆ ಹೇಗಿರುತ್ತದೆ” ಎಂದು ಪ್ರಶ್ನಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಹೀಗೆ ಕೆಲವೊಮ್ಮೆ ಸ್ಥಳೀಯ ಭಾಷೆಗಳು ವಿಚಾರಣೆಗೆ ತೊಡಕಾದರೆ, ಇನ್ನು ಕೆಲವೊಮ್ಮೆ ಸ್ಥಳೀಯ ಭಾಷೆ ಪ್ರಕರಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗಿದೆ.
ಇದನ್ನೂ ಓದಿ: ಚುನಾವಣೆಯಲ್ಲಿ ಪಕ್ಷಗಳು ನೀಡುವ ’ಉಚಿತಗಳ’ ಭರವಸೆ ಗಂಭೀರ ಸಮಸ್ಯೆ: ಸುಪ್ರೀಂ ಕೋರ್ಟ್
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಈ ಕ್ರಮ ಸ್ವಾಗತಾರ್ಹ.