ಕನ್ನಡದ ‘ಈದಿನ’ ಸುದ್ದಿ ಜಾಲತಾಣ ಮಾಡಿರುವ ಚುನಾವಣಾಪೂರ್ವ ಸಮೀಕ್ಷೆಯನ್ನು ರಾಜಕೀಯ ವಿಶ್ಲೇಷಕ ಮತ್ತು ಸಮೀಕ್ಷಾ ತಜ್ಞರಾದ ಪ್ರೊ.ಯೋಗೇಂದ್ರ ಯಾದವ್ ಹಂಚಿಕೊಂಡಿರುವುದು ಟ್ವೀಟ್ ವಾರ್ಗೆ ಕಾರಣವಾಗಿದೆ.
ಸುಮಾರು 41 ಸಾವಿರ ಜನರನ್ನು ಮಾತನಾಡಿಸಿ ಮಾಡಲಾಗಿದೆ ಎನ್ನಲಾಗಿರುವ ಸರ್ವೇಯು ಕಾಂಗ್ರೆಸ್ಗೆ ಸ್ಪಷ್ಟಬಹುಮತವನ್ನು ನೀಡಿದೆ.
132ರಿಂದ 140 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ, ಬಿಜೆಪಿಗೆ 57- 65 ಸ್ಥಾನ, ಜೆಡಿಎಸ್ಗೆ 19-25 ಸ್ಥಾನ, ಇತರರು 1-5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಸರ್ವೇ ಹೇಳಿದೆ. ಉತ್ತರ ಕರ್ನಾಟಕದಲ್ಲಿ ಮಿಕ್ಕವರನ್ನು ಕಾಂಗ್ರೆಸ್ ಗುಡಿಸಿ ಹಾಕಲಿದ್ದು ದಕ್ಷಿಣ ಕರ್ನಾಟಕದಲ್ಲೂ ಮುನ್ನಡೆ ಗಳಿಸಲಿದೆ ಎಂದಿದೆ.
“ಕಾಂಗ್ರೆಸ್ಗೆ ಸ್ಪಷ್ಟವಾದ ಮತ್ತು ಯಾವುದೇ ಆತಂಕಕ್ಕೆ ಎಡೆಯಿಲ್ಲದ ರೀತಿಯ ಬಹುಮತ ಲಭ್ಯವಾಗಲಿದೆ ಎಂದು ಈ ಸಮೀಕ್ಷೆಯ ಅಂಕಿ-ಅಂಶಗಳು ತಿಳಿಸುತ್ತಿವೆ. ಇನ್ನೊಂದು ಆಪರೇಷನ್ ಕಮಲದ ಸಾಧ್ಯತೆಯನ್ನೂ ಇಲ್ಲವಾಗಿಸುವ ಹಾಗೆ 113ಅನ್ನು ಸಲೀಸಾಗಿ ದಾಟಲಿದೆ ಎಂದು ತೋರುತ್ತಿದೆ” ಎಂದು ‘ಈದಿನ’ ವರದಿ ಪ್ರಕಟಿಸಿದೆ.
“ಈ ಹಿಂದೆ ಇಂತಹ ಬಹುಮತವನ್ನು ಪಡೆದುಕೊಂಡಿದ್ದದ್ದು 2013 ಮತ್ತು 1999ರಲ್ಲಿ. ಈ ಸಾರಿ ಅವೆರಡನ್ನೂ ದಾಟಲಿದ್ದು, 1989ರ ನಂತರ ಮೂರು ದಶಕಗಳಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಬಹುದು ಎಂದು ಸಮೀಕ್ಷೆಯಿಂದ ಸಿಕ್ಕಿರುವ ಸಂಖ್ಯೆಗಳು ಹೇಳುತ್ತಿವೆ” ಎಂದು ‘ಈದಿನ’ ಸುದ್ದಿ ತಿಳಿಸಿದೆ.
“ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, 2013ರಲ್ಲಿ ಆ ಪಕ್ಷ ಒಡೆದು ಹೋಗಿದ್ದಾಗ ಉದ್ಭವವಾಗಿದ್ದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಹೊರತುಪಡಿಸಿದರೆ, ಇದು ಅದರ ಅತ್ಯಂತ ಹೀನಾಯ ಸ್ಥಿತಿಯಾಗಿರಲಿದೆ” ಎಂದು ಅಭಿಪ್ರಾಯ ತಾಳಿದೆ.
2018ರಲ್ಲಿ ಕಾಂಗ್ರೆಸ್ 38.1% ಮತದಾರರನ್ನು ಸೆಳೆದಿತ್ತು, ಬಿಜೆಪಿ 36.3%, ಜೆಡಿಎಸ್ 18.3%, ಇತರರು 7.4% ಮತಗಳನ್ನು ಪಡೆದಿದ್ದರು. ಈ ಬಾರಿ ಕಾಂಗ್ರೆಸ್ 43%, ಬಿಜೆಪಿ 33%, ಜೆಡಿಎಸ್ 16%, ಇತರರು 8% ಮತಗಳನ್ನು ಪಡೆಯಲಿದ್ದಾರೆ ಎಂದು ಸಮೀಕ್ಷೆ ನುಡಿದಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಡೆಸಲಾದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು 41,169 ಮತದಾರರನ್ನು ಮಾತನಾಡಿಸಲಾಗಿದೆ ಎಂದು ‘ಈದಿನ’ ತಿಳಿಸಿದೆ. ಇದರ ವಿವರಗಳನ್ನು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.
Breaking: Mega pre poll survey ( random sample: 41k+) by https://t.co/s948g9i5Fw shows Congress headed for a comfortable majority (134-140 seats) with 10% vote lead over BJP (57-65 seats). Losses for JDS.
Congress wave in northern regions, BJP holds coastal and central. pic.twitter.com/tbuLIihTLo— Yogendra Yadav (@_YogendraYadav) April 28, 2023
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಮತ್ತು ಯೋಗೇಂದ್ರ ಯಾದವ್ ಅವರ ನಡುವಿನ ಸೌಹಾರ್ದತೆಯನ್ನು ಥಳುಕು ಹಾಕಿದ್ದಾರೆ. ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಹುಲ್ ಅವರು ಮಾಡಿದ ಭಾರತ್ ಜೋಡೋ ಯಾತ್ರೆಗೆ ಅನೇಕ ಕಾಂಗ್ರೆಸ್ಸೇತರರು ಬೆಂಬಲ ನೀಡಿದ್ದರು. ಅದರಲ್ಲಿ ಯೋಗೇಂದ್ರ ಯಾದವ್ ಕೂಡ ಒಬ್ಬರಾಗಿದ್ದು, ಸಂತೋಷ್ ಅವರು ತಮ್ಮ ಟ್ವೀಟ್ನಲ್ಲಿ ಅದನ್ನು ಪ್ರಸ್ತಾಪಿಸಿದ್ದಂತಿದೆ.
“ತನ್ನ ಯಜಮಾನರನ್ನು ಮೆಚ್ಚಿಸಲು ಪಾದಯಾತ್ರೆಗಳು ಮತ್ತು ಆಂದೋಲನಗಳ ನಡುವೆ ಸಮೀಕ್ಷೆಗಳಿಗೆ ಅವರು ಸಮಯ ಕಂಡುಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ” ಎಂದು ಯೋಗೇಂದ್ರ ಅವರ ಹೆಸರನ್ನು ಟ್ಯಾಗ್ ಮಾಡಿ ಬಿ ಎಲ್ ಸಂತೊಷ್ ಟ್ವೀಟ್ ಮಾಡಿದ್ದಾರೆ.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯೋಗೇಂದ್ರ ಯಾದವ್, “ಸತ್ಯವನ್ನು ಸ್ವಾರಸ್ಯಕರವಾಗಿ ಕಾಣದವರು ಅಡುಗೆಯವರನ್ನೇ (ಈ ಸಂದರ್ಭದಲ್ಲಿ ಕಲ್ಪಿಸಿಕೊಂಡವರು) ದೂಷಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಶಾಸಕರನ್ನು ಖರೀದಿಸಿ ಬಹುಮತದ ಬೇಳೆ ಬೇಯಿಸಿಕೊಳ್ಳುತ್ತಿದ್ದ ಯಾರೋ ಒಬ್ಬರು ಸಮೀಕ್ಷೆಯಿಂದ ತೊಂದರೆಗೀಡಾಗಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಗಳಿಗೆ ಈದಿನ ಸಮೀಕ್ಷೆ ಅನುರಣಿಸುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿರಿ: ಲಿಂಗಾಯತರನ್ನು ಕಳ್ಳರೆಂದು ಬಿಜೆಪಿ ನಿಂದಿಸಿದೆ: ಮೋದಿ ಹೇಳಿರುವುದಾಗಿ ರಾಜ್ಯ ಬಿಜೆಪಿ ಟ್ವೀಟ್!