ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಪ್ರಕರಣ ದಾಖಲಾಗಿದೆ. ಮಠದ ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಮೈಸೂರಿನಲ್ಲಿ ಪ್ರಕರಣ ದಾಖಲಾಗಿದೆ.
‘ಕಾವಿ ಧರಿಸಿದವರ ಮೇಲೆ ಲೈಂಗಿಕ ಆರೋಪಗಳು’ ಬಂದಿರುವಂತಹದ್ದು, ಪ್ರಕರಣದ ದಾಖಲಾಗಿರುವಂತಹದ್ದು ಇದೇ ಮೊದಲೇ ಅಲ್ಲ. ರಾಜ್ಯ ಹಾಗೂ ದೇಶದಲ್ಲಿ ಈ ರೀತಿಯ ಹಲವು ಉದಾಹರಣಗಳಿವೆ. ಜನರ ನಂಬಿಕೆಗಳನ್ನು ಹುಸಿಗೊಳಿಸಿದ ಪ್ರಕರಣಗಳು ಸಾಕಷ್ಟಿವೆ. ಅನೇಕ ಸ್ವಾಮೀಜಿಗಳು, ಧರ್ಮಗುರುಗಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ, ಆನಂತರ ಖುಲಾಸೆಯಾದದ್ದೂ ಇದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುರುಘಾ ಶರಣರ ಪ್ರಕರಣ
ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶರಣರು ಅವರು ಹಲವು ದಿನಗಳಿಂದಲೂ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲಿ ನ್ಯಾಯ ದೊರಕುವುದಿಲ್ಲ ಎಂಬ ಆತಂಕದಲ್ಲಿ ತೊಂದರೆಗೊಳಗಾದ ವಿದ್ಯಾರ್ಥಿನಿಯರು ಮೈಸೂರಿನಲ್ಲಿರುವ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿ ಬಳಿಕ ದೂರು ದಾಖಲಿಸಿದ್ದಾರೆ.
ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಪೋಷಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ಒಡನಾಡಿ ಸಂಸ್ಥೆಯು ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ವಿಚಾರಣೆ ನಡೆಸಿದೆ ಎಂದು ವರದಿಗಳು ಹೇಳಿವೆ. ತೊಂದರೆಗೊಳಗಾದ ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯು ಆದೇಶ ಹೊರಡಿಸಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ನೀಡಿದ ದೂರು ಆಧರಿಸಿ ನಜರ್ಬಾದ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಘವೇಶ್ವರ ಸ್ವಾಮೀಜಿ ಅತ್ಯಾಚಾರ ಪ್ರಕರಣ
ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸ್ವಾಮೀಜಿಯವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳೂ ಹಿಂದೆ ಸರಿದಿದ್ದ ಬೆಳವಣಿಗೆಗಳಾಗಿದ್ದವು. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ತದನಂತರದಲ್ಲಿ ಹೈಕೋರ್ಟ್ ಎತ್ತಿಹಿಡಿದಿತ್ತು.
ಇದನ್ನೂ ಓದಿರಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಅಡಿ ಎಫ್ಐಆರ್
ರಾಮಕಥಾ ಗಾಯಕಿ 2014ರ ಆ.17ರಂದು ದೂರು ಸಲ್ಲಿಸಿ, ರಾಘವೇಶ್ವರ ಸ್ವಾಮೀಜಿ ತನ್ನ ಮೇಲೆ ಹಲವು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾರೆ. ಸ್ವಾಮೀಜಿಯಿಂದ ತಾನು ಒಟ್ಟು 169 ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದರು. ದೂರಿನ ತನಿಖೆ ನಡೆಸಿದ್ದ ಸಿಐಡಿ ತನಿಖಾಧಿಕಾರಿಗಳು ಸ್ವಾಮೀಜಿ ವಿರುದ್ಧ ದೋಷಾರೋಪಪಟ್ಟಿಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 54ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟು 2016ರ ಮಾ.31ರಂದು ಆದೇಶಿಸಿತ್ತು.
ಪಾಂಡವಪುರದ ವಿದ್ಯಾಹಂಸ ಭಾರತೀ ಸ್ವಾಮೀಜಿ ಅತ್ಯಾಚಾರ ಪ್ರಕರಣ
ಪಾಂಡವಪುರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಪೀಠಾಧ್ಯಕ್ಷ ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಮೈಸೂರಿನ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿತ್ತು. 2018ರ ಸೆಪ್ಟೆಂಬರ್ ವೇಳೆ ಚಾತುರ್ಮಾಸ ನಡೆಸುತ್ತಿದ್ದ ಸ್ವಾಮೀಜಿ ಸ್ಥಳದಿಂದ ಪರಾರಿಯಾಗಿದ್ದರು.
ಮೈಸೂರಿನ ಕುವೆಂಪು ನಗರದ ನಿವಾಸಿ ಮಹಿಳೆ ದೂರು ನೀಡಿದ್ದರು. ಚಾತುರ್ಮಾಸ ಪೂಜೆಗೆಂದು ಮನೆಗೆ ಬಂದಾಗ ಅತ್ಯಾಚಾರ ನಡೆಸಿದ್ದಾರೆ. ಸ್ವಾಮೀಜಿಗೆ ತನ್ನ ಪತಿಯೇ ಸಹಕಾರ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು.
“ಸೆ.4ರಂದು ರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ಮನೆಯ ಬೆಲ್ ಮಾಡಿದ್ದು, ಪತಿಯೇ ಬಂದಿರಬಹುದೆಂದು ಬಾಗಿಲು ತೆರೆದೆ. ನನ್ನ ಗಂಡನ ಜೊತೆ ಸ್ವಾಮೀಜಿ ಮತ್ತವನ ಐದಾರು ಚೇಲಾಗಳು ಒಳಗೆ ನುಗ್ಗಿದ್ದು, ನನ್ನ ಗಂಡ ಮತ್ತು ಸ್ವಾಮೀಜಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದು, ಪ್ರತಿರೋಧವೊಡ್ಡಿದಾಗ ಕಾರಿನಲ್ಲಿಯೇ ನನ್ನನ್ನು ಕುವೆಂಪುನಗರದಲ್ಲಿರುವ ಮೈದುನನ ಮನೆಗೆ ಕರೆದೊಯ್ದು ದಾರಿಯುದ್ದಕ್ಕೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಮೂರು ದಿನಗಳ ಒಳಗೆ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದರು.
ನಿತ್ಯಾನಂದ ಸ್ವಾಮೀಜಿ ಪ್ರಕರಣ: ಅರೆಸ್ಟ್ ವಾರೆಂಟ್
ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಳೆದ ವಾರ ಮತ್ತೊಮ್ಮೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. 2010ರಲ್ಲಿ ನಿತ್ಯಾನಂದ ಮೇಲೆ ಪ್ರಕರಣ ದಾಖಲಾಗಿದೆ.
ನಿತ್ಯಾನಂದ ಸ್ವಾಮೀಜಿಗೆ ಜಾಮೀನು ಭದ್ರತೆ ನೀಡಿರುವ ವ್ಯಕ್ತಿಗೂ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು. ಭಕ್ತೆ ಮೇಲಿನ ಅತ್ಯಾಚಾರ ಆರೋಪದ ಮೇಲೆ 2010ರಲ್ಲಿ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಂದಿನಿಂದಲೂ ವಿಚಾರಣೆ ನಡೆಯುತ್ತಿದೆ. 2019ರಿಂದ ನಿತ್ಯಾನಂದ ವಿಚಾರಣೆಗೆ ಸತತ ಗೈರಾಗಿದ್ದು, ಈಗಾಗಲೇ ದೇಶ ತೊರೆದಿದ್ದಾರೆ.
ಅಸಾರಾಂ ಬಾಪು ಅತ್ಯಾಚಾರ ಪ್ರಕರಣ
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ ವಿವಿಧ ಜೈಲು ಶಿಕ್ಷೆಗಳನ್ನು ಸ್ವಯಂ-ಘೋಷಿತ ದೇವಮಾನವ ಅಸಾರಾಂ ಬಾಪು ಎದುರಿಸುತ್ತಿದ್ದಾನೆ. ಕಳೆದ ವರ್ಷ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.
“ಕ್ಷಮಿಸಿ. ಇದು ಸಾಮಾನ್ಯ ಅಪರಾಧವಲ್ಲ. ನಿಮ್ಮ ಎಲ್ಲಾ ಆಯುರ್ವೇದ ಚಿಕಿತ್ಸೆಯನ್ನು ನೀವು ಜೈಲಿನಲ್ಲಿ ಪಡೆಯುತ್ತೀರಿ” ಎಂದು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಪೀಠವು ತಿಳಿಸಿತ್ತು.
2013ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೋಧಪುರ ನ್ಯಾಯಾಲಯವು ಏಪ್ರಿಲ್ 25, 2018 ರಂದು ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿರಿ: ಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?
ಇಂದೋರ್ನಲ್ಲಿ ಅಸಾರಾಂ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 1, 2013 ರಂದು ಜೋಧಪುರಕ್ಕೆ ಕರೆತರಲಾಯಿತು. ಅವರು ಸೆಪ್ಟೆಂಬರ್ 2, 2013 ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಇದೇ ಪ್ರಕರಣದಲ್ಲಿ ಆತನ ಸಹಚರರಾದ ಶರದ್ ಮತ್ತು ಶಿಲ್ಪಿ ಅವರಿಗೆ ನ್ಯಾಯಾಲಯವು ಅದೇ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ಅತ್ಯಾಚಾರ ಪ್ರಕರಣ
ಪಂಜಾಬ್ನ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ. ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮೀತ್ ರಮ್ ರಹೀಂ ಸಿಂಗ್ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ರೋಹ್ಟಕ್ನ ಸುನರಿಯಾ ಜೈಲುವಾಸದಲ್ಲಿದ್ದಾರೆ.
ಕೇರಳ: ಬಿಷಪ್ ಮೇಲೆ ಅತ್ಯಾಚಾರ ಪ್ರಕರಣ
ಜಲಂಧರ್ ಡಯಾಸಿಸ್ನ ಬಿಷಪ್ ಆಗಿದ್ದ ಫ್ರಾಂಕೋ ಮುಲಕ್ಕಲ್ ಮೇಲೆ ಅತ್ಯಾಚಾರ ಆರೋಪಗಳು ಬಂದಿದ್ದವು. ಮಿಷನರೀಸ್ ಆಫ್ ಜೀಸಸ್ ಸಭೆಗೆ ಸೇರಿದ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಫ್ರಾಂಕೋ ಮೇಲೆ ಹೊರಿಸಲಾಗಿತ್ತು. 2014 ಮತ್ತು 2016 ರ ನಡುವೆ ಕೇರಳಕ್ಕೆ ಭೇಟಿ ನೀಡಿದಾಗ, 43 ವರ್ಷದ ಸನ್ಯಾಸಿನಿಯ ಮೇಲೆ 13 ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪ ಹೊರಿಸಲಾಗಿತ್ತು. ಈ ಆರೋಪದ ನಂತರ ಫ್ರಾಂಕೊ ಅವರನ್ನು ಜಲಂಧರ್ ಡಯಾಸಿಸ್ ಉಸ್ತುವಾರಿಯಿಂದ ತೆಗೆದುಹಾಕಲಾಗಿತ್ತು. ಆ ನಂತರದಲ್ಲಿ ಕೇರಳದ ಕೊಟ್ಟಾಯಂ ಸೆಷನ್ಸ್ ನ್ಯಾಯಾಲಯವು ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ರಾಜ್ಯದ ಕಾನ್ವೆಂಟ್ನಲ್ಲಿ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರದ ಆರೋಪದಿಂದ ಖುಲಾಸೆಗೊಳಿಸಿತ್ತು.
Good this saffron actor swamiji under bars for right charges.
He had given lingha diksha to his friend Mr Rahul Ghandhi..recently…
So God has blessed both immensely according to past Karmas..since decades pending is giving results now..
Cheers to honesty and truth..