Homeಸಾಹಿತ್ಯ-ಸಂಸ್ಕೃತಿಕಥೆ'ತನುಬಿಂದಿಗೆ' ನಾಗರಾಜ ಕೋರಿಯವರ ಕತೆ

‘ತನುಬಿಂದಿಗೆ’ ನಾಗರಾಜ ಕೋರಿಯವರ ಕತೆ

- Advertisement -
- Advertisement -

ಅದು ಇಳಿಸಂಜೆ. ಊರಿಗೆ ಮಳೆ ಬಾರದಕ್ಕಾಗಿ ಊರು ದೇವಿಗೆ ತನುಬಿಂದಿಗೆ ಇಡಲು ಜನ ಮಾತಾಡಿಕೊಳ್ಳಲು ಜಮೆಯಾಗಿತ್ತು. ಊರಲ್ಲಿನ ಒಂದು ಉಪ್ಪರಿಗೆ ಮೇಲೆ ನಿಂತು, ಪಶ್ಚಿಮ ದಿಕ್ಕಿನ ಕಡೆ ನೋಡಿದರೆ ಅಡವಿಯೆಂಬೋ ಅಡವಿ ಒಣಒಣ ಕಾಣತೊಡಗಿತ್ತು. ಮತ್ತಷ್ಟು ಕಣ್ಣಗಲಿಸಿ ಊರ ದಿಕ್ಕಿಗೆ ನೋಡಿದರೆ ಮುನಿಯಪ್ಪನ ಹೊಲವೆಲ್ಲಾ ಕೆರೆ ನೀರಿನಿಂದ ಹಸಿರಾಗಿತ್ತು. ಮುನಿಯಪ್ಪ ಊರಿಗೆ ಹಸಿರು ಶೆಲ್ಲೆಯ ದೊಡ್ಡ ಸಾಹುಕಾರ. ಸಾಕಷ್ಟು ಪಿತ್ರಾರ್ಜಿತ ಆಸ್ತಿ ಇತ್ತು.

ಈ ಊರಿಗೆ ಹತ್ತನ್ನೆರಡು ಸಲ ಬರಗಾಲ ಬಂದರೂ ಊರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ಹಸಿವು ನೀಗಿಸುವ ಶಕ್ತಿ ಈತನಿಗಿತ್ತು. ಆದರೆ ಅಂತಹ ಔದಾರ್ಯದ ಗುಣ ಎಳ್ಳಷ್ಟೂ ಇರಲಿಲ್ಲ. ತಾನು ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾಗುವ ಉಪಾಯ ಹೂಡಿ ತಮ್ಮ ಹೊಲದಲ್ಲೇ ಊರು ಮಂದಿ ನೀರು ಕುಡಿಯಲೆಂದು ಕೆರೆ ಕಟ್ಟಿಸಿದ. ಆಗಿನಿಂದ ಆ ಕೆರೆ ಸಮತಟ್ಟಾಗಿ ತುಂಬಿ ತುಳುಕಿ ಆಣೆಕಟ್ಟಿನಂತೆ ವಿಶಾಲವಾಗಿ ಕಾಣುತಿತ್ತು. ಆಗಾಗ ಸರ್ಕಾರದವರು ಜನರು ನೀರು ಕುಡಿದಾದರೂ ಬದುಕಲೆಂದು ತುಂಗಭದ್ರಾ ಆಣೆಕಟ್ಟಿನಿಂದ ನೀರು ಬಿಡುತಿದ್ದರು.

ಮುನಿಯಪ್ಪ ತನ್ನ ನಾಲ್ಕೈದು ಚೇಲಾಗಳನ್ನು ಕಾವಲು ಬಿಟ್ಟು ಕೆರೆ ತುಂಬಿಸಿಕೊಳ್ಳುತಿದ್ದ. ಇದರಿಂದ ಉಳಿದವರ ಕೆರೆಕಟ್ಟೆಗಳು ನೀರಿಲ್ಲದೆ ಬಿಕೋ ಎನ್ನುತಿದ್ದವು. ಮುನಿಯಪ್ಪ ಊರಿಗೆ ಉದಾರವಾಗಿ ಕಾಣಲು, ಕೆರಿಗೆ ತಂತಿಬೇಲಿ ಹಾಕಿಸದೆ ಜನರಿಗೆ ಸರಾಗವಾಗಿ ನೀರು ಕುಡಿಯಲು ಹಾಗೆ ಬಿಟ್ಟಿದ್ದ. ತಾನು ಆ ಕೆರೆ ನೀರಿನಿಂದ ಕೊಬ್ಬು, ಶೇಂಗಾ, ಹತ್ತಿ ಸಮೃದ್ಧವಾಗಿ ಬೆಳೆಯುತಿದ್ದ. ತನ್ನ ಕೆರೆಯಲ್ಲಿ ಹೊಲೆಯರೂ ನೀರು ತುಂಬುತ್ತಿರುವುದು ಮುನಿಯಪ್ಪನಿಗೆ ಸಿಟ್ಟು ತರಿಸಿತ್ತು. ಅವರಿಗೆ ನೀರು ತುಂಬುವುದನ್ನು ನಿಷೇಧಿಸಿದ. ಅಕಸ್ಮಾತ್ತಾಗಿ ಕಣ್ಣು ತಪ್ಪಿಸಿ ನೀರು ತರಲು ಹೋದರೆ ಆಳುಗಳಿಂದ ಹಿಗ್ಗಾಮುಗ್ಗಾ ಥಳಿಸಿ ಕಳಿಸುತ್ತಿದ್ದ. ಹೊಲೆಯರು ಮುನಿಯಪ್ಪನಿಗೆ ಶಾಪ ಹಾಕಿ ಮಣ್ಣು ತೂರಿ ದೂರ ಸರಿದರು. ಆದರೆ ಕೂಲಿಗೆಂದು ಅವನ ಹೊಲಕ್ಕೆ ಹೋಗುವುದು ಅನಿವಾರ್ಯವಾಗಿತ್ತು.

ಇದನ್ನು ಓದಿ: ನೀರು (ಪುಟ್ಕತೆ)

ಮುನಿಯಪ್ಪನ ಹೊಲಕ್ಕೆ ಕೂಲಿ ಬರುತಿದ್ದ ಹೊಲೆಯರ ಸುಂಕವ್ವ ಕುರಿ ಮರಿಯನ್ನು ಜೊತೆಗೆ ಹೊಡೆದು ತರುತ್ತಿದ್ದಳು. ಒಂದಿನ ತುಂಬಿನಿಂತ ಹಚ್ಚನ ಜ್ವಾಳದ ಸಸಿಯನ್ನು ಕುರಿಮರಿ ಕಡಿದಿತ್ತು. ಮುನಿಯಪ್ಪ ಸಿಟ್ಟಿಗೇರಿ ‘ಏ..ನಿಮ್ಮೌನ್ ತುಡುಗು ರಂಡೆ ಕುರಿಮರಿ ಸರಿಗಿ ಕಟ್ಟಾಕರ ಬರಲ್ಲೇನು..’ ಎಂದು ಅಷ್ಟು ಮಂದ್ಯಾಗ ಬೈದಿದ್ದ. ಸುಂಕವ್ವ ಅವಮಾನಿತಳಾಗಿ ‘ಯಣ್ಣಾ ಬಾಯಿ ಬಿಗಿದಿಡಿದು ಮಾತಾಡು. ಹೆಣ್ಮಕ್ಕಳಂದ್ರೆ ಸೋವಿ ಸಿಕ್ಕಾರೇನು’ ಎಂದು ಒದರಾಡಿ ಕೂಲಿ ಕೆಲಸ ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದಿದ್ದಳು. ಮಣ್ಣು ತಿಂದರೂ ಪರವಾಗಿಲ್ಲ, ಮುನಿಯಪ್ಪನ ಹೊಲಕ್ಕೆ ಹೋಗಬಾರದೆಂದು ನಿಶ್ಚಯಿಸಿದಳು.

ಪೊತನಾಳ ಸಂತಿಗೆ ಹೋಗಿದ್ದ ಗಂಡ ರಂಗಪ್ಪ ಬಂದ. ಸುಂಕವ್ವಳನ್ನು ನೋಡಿ ‘ಯಾಕ ಏನಾಯಿತು. ಕೂಲಿ ಕೆಲ್ಸಕ ಹೋಗಿದ್ದಲಾ…’ ಅಂತ ಗಾಬರಿಗೊಂಡು ಕೇಳಿದ. ಸುಂಕವ್ವ ನಡೆದ ಹಕೀಕತ್ತು ಹೇಳಿದಳು. ರಂಗಪ್ಪನಿಗೂ ಬೇಜಾರಾಯಿತು. ದಿಕ್ಕು ತೋಚದೆ ಚಿಂತಿಸಿದರು. ರಂಗಪ್ಪ ‘ಈ ಬರ ಶನಿವಾರ ಬೆಂಗಳೂರಿಗೆ ದುಡ್ಯಾಕ ಹೋಗಮು.. ಮಂದೆಲ್ಲಾ ನಾಳೆ ಬರೊ ಶನಿವಾರನ ಎಲ್ಲಾರು ತಯಾರಾಗ್ಯಾರ.. ಈ ಗೋಳಾರ ತಪ್‍ತೈತಿ..’ ಎಂದು ಹೇಳಿದ.

ಬೆಂಗಳೂರಿಗೆ ದುಡಿಯಾಕ ಹೋಗುವುದನ್ನು ನೆನಪಿಸಿಕೊಂಡು ಸುಂಕವ್ವಳಿಗೆ ದುಃಖ ಉಮ್ಮಳಿಸಿ ಬಂತು. ದುಡ್ಡಿದಿದ್ದರಲ್ಲೇ ಅಷ್ಟಿಷ್ಟು ದುಡ್ಡು ಉಳಿಸಿ ಚಿನ್ನೂರು ಸಂತ್ಯಾಗ ಕುರಿಮರಿ ತಂದು, ಎಂಬತ್ತು ಕೋಳಿನೂ ಬಿಟ್ಟು ಬೆಂಗಳೂರಿಗೆ ಹೇಗೆ ಹೋಗುವುದೆಂದು ಸುಂಕವ್ವ ಚಿಂತಿತಳಾದಳು. ದುಡಿಮೆ ಅನಿವಾರ್ಯವಾಗಿತ್ತು. ಮಲ್ಲ ಬೇರೆ ಸಣ್ಣವ. ಶಿವಜ್ಜಿ ಹತ್ತಿರ ಬಿಟ್ಟು ಹೋಗಲು ಮನಸ್ಸು ಕಸಿವಿಸಿಯಾಗುತ್ತಿತ್ತು. ಶಿವಜ್ಜಿ ಆಗಾಗ ಕದ್ದುಮುಚ್ಚಿ ಸೆರೆ ಕುಡಿಯುತ್ತಿರುವುದೂ ಈ ಕಸಿವಿಸಿಗೆ ಕಾರಣವಾಗಿತ್ತು.

ಇದನ್ನು ಓದಿ: ಎಮ್ಮೆ ಕಳ್ಳರು : ಪುಟ್ಕತೆ

ಸುಂಕವ್ವನ ಮನಸ್ಥಿತಿ ಅರಿತವಳಂತೆ ಶಿವಜ್ಜಿ ‘ಇವತ್ತಿನಿಂದ ನಾನು ಕುಡಿಯಲ್ಲ. ನನ್ನ ಮೊಮ್ಮಗನ ನಾನು ನೋಡಿಕಂತಿನಿ. ನೀವು ಗಂಡ ಹೆಣ್ತಿ ಆರಾಮಾಗಿ ದುಡುಕಂಡು ಬರ್ರಿ..’ ಎಂದು ಪ್ರಮಾಣ ಮಾಡಿದಳು. ಸುಂಕವ್ವ ಅತ್ತೆ ಮಾತು ನಂಬಿ ಬರೋ ಶನಿವಾರ ಬೆಂಗಳೂರಿಗೆ ಹೋಗಲು ನಿರ್ಧರಿಸಿದಳು. ಊರಲ್ಲಿ ತನುಬಿಂದಿಗೆ ಉತ್ಸವ ಇನ್ನೂ ನಾಲ್ಕೇ ದಿನ ಉಳಿದಿತ್ತು. ಮುನಿಯಪ್ಪ ತನ್ನ ಚೇಲಾಗಳೊಂದಿಗೆ ಮಂಗಳವಾರ ನಡೆಯುವ ತನುಬಿಂದಿಗೆ ಉತ್ಸವಕ್ಕೆ ರೊಕ್ಕದ ಪಟ್ಟಿ ಮಾಡಲು ಹೇಳಿದ್ದ. ಆಗ ಎಲ್ಲರ ಮನೆಯಂತೆ ರೊಕ್ಕದ ಪಟ್ಟಿಗೆ ಸುಂಕವ್ವನ ಮನೆಗೆ ಬಂದಿದ್ದರು. ಮನೆಯಲ್ಲಿ ನೋಡಿದರೆ ಐಪೈಸೆ ಇಲ್ಲದ ಸ್ಥಿತಿ.

‘ದೈವದಂತೆ ನಾವು..’ ಎಂದು ತವರು ಮನೆಯವರು ಮಗನಿಗೆಂದು ಮಾಡಿಸಿದ್ದ ‘ಕಿವಿ ಮುರುವು’ ಒತ್ತೆ ಇಟ್ಟು ನೂರಾ ಒಂದು ರೂಪಾಯಿ ಪಟ್ಟಿ ಬರಿಸಿದಳು. ಇನ್ನುಳಿದ ದುಡ್ಡಿನಿಂದ ಬೆಂಗಳೂರಿಗೆ ಹೋಗಲು ಅಕ್ಕಿ, ಜ್ವಾಳದ ಹಿಟ್ಟು, ಹುಂಚೆಕಾರ ಮುಂತಾದವುಗಳನ್ನು ಸಿದ್ಧತೆ ಮಾಡಿಕೊಂಡಳು. ಕೆಲವರು ‘ತನುಬಿಂದಿಗೆ ಉತ್ಸವ ಮುಗಿಸಿಕೊಂಡು ಹೋಗ್ರಿ’ ಅಂತ ಸೂಕ್ಷ್ಮಿಲೆ ಒತ್ತಿ ಹೇಳಿದರು. ಆದರೆ ಸುಂಕವ್ವನ ಮನಸ್ಸು ತನುಬಿಂದಿಗೆ ಉತ್ಸವಕ್ಕಿಂತ ಹೊಟ್ಟೆ, ಬಟ್ಟೆಗಾಗಿ ದುಡಿದು, ಮಗನನ್ನು ಓದಿಸಬೇಕೆಂಬ ಛಲ ಹೂಡಿದಂತಿತ್ತು. ಮಗ ಮಲ್ಲ ಸುಂಕವ್ವನ ಸೆರಗು ಹಿಡಿದು ತಾನೂ ಬರುತ್ತೇನೆಂದು ಅಳತೊಡಗಿದ. ಶಿವಜ್ಜಿ ತಮಣಿ ಮಾಡಿ ಹತ್ತು ರೂಪಾಯಿ ಕೈಲಿಟ್ಟಾಗ ರಂಪಾಟ ಕಡಿಮೆಯಾಗಿತ್ತು. ಮಗನನ್ನು ರಮಿಸಿ ಸುಂಕವ್ವ ರಂಗಪ್ಪ ಗಂಟು ಕಟ್ಟಿದ ಚೀಲಗಳನ್ನೆಲ್ಲಾ ಹೊತ್ತುಕೊಂಡು ಬೆಂಗಳೂರಿಗೆ ತೆರಳಲು ಸಜ್ಜಾಗಿದ್ದ. ಗಾಡಿ ಕಡೆ ಹೆಜ್ಜೆ ಬೆಳೆಸಿದರು.

ಮರುದಿನ ತನುಬಿಂದಿಗೆಯ ಉತ್ಸವಕ್ಕೆ ಮಂದಿ ಮನಿಗೆ ಸುಣ್ಣಬಣ್ಣ ಬಳಿದು ಅಲಂಕೃತಗೊಳಿಸಿದ್ದರು. ದೇವಿಗುಡಿ ಹೊಸ ಕಮಾನಿನೊಂದಿಗೆ ಎದ್ದು ಕಂಡಿತು. ಶಿವಜ್ಜಿಯು ಮಂದಿಯಂತೆ ಮನೆ ಸಾರಿಸಿ, ಮನೆ ಜಗಲಿಗೆ ಸುಣ್ಣ, ಸುರುಮ, ಬಳಿದು ಸೊಸೆ ಕೊಟ್ಟು ಹೋಗಿದ್ದ ಐನೂರು ರೂಪಾಯಿಯಲ್ಲಿಯೇ ಹೋಳಿಗೆ ನೈವೇದ್ಯಕ್ಕೆ ಬೇಕಾದ ಪರಿಕರಗಳನ್ನು ಮಲ್ಲನ ಕೂಡ ತರಿಸಿ ಹಬ್ಬ ಮಾಡಲು ಶುರುಮಾಡಿತ್ತು. ಮಲ್ಲ ಹಳೆ ಪೆಟಾರಿಯಲ್ಲಿ ಮುಡುಪಾಗಿದ್ದ ಅಂಗಿ ತೊಟ್ಟುಕೊಂಡು, ಶಿವಜ್ಜಿಯು ಹೋಳಿಗೆ ಮಾಡಲಿಟ್ಟಿದ್ದ ಹೂರಣ ತಿಂದು, ದೋಸ್ತರೊಂದಿಗೆ ಉತ್ಸವದ ಕಡೆ ಹೊರಟ.

ಊರು ಮಂದಿ ಸಕಲ ವಾದ್ಯಗಳ ಸಮೇತ, ಕುಂಬಾರ ಮನಿಂದ ಮಣ್ಣಿನ ಮಡಿಕೆ, ಹೂಗಾರ ಮನಿಂದ ಸೂಸಗ, ಬಾರಕೇರಿ ಮನಿಂದ ಕಬ್ಬು, ಬಳಿಗಾರ ಮನಿಂದ ಹಸಿರು ಬಳೆ ತಂದು ಮೆರವಣಿಗೆ ಮೂಲಕ ಗಂಗಿಪೂಜೆಗೆಂದು ಬತ್ತಿ ಹೋದ ನದಿಕಡೆಗೆ ಸಾಗಿತ್ತು. ಒಂದಿಷ್ಟು ತೇವ ಇದ್ದ ಜಾಗದಲ್ಲಿ ಒರತಿ ತೋಡಿ ಗಂಗಿಪೂಜೆ ಮಾಡಿ ಪೂಜಾರಿಯಿಂದ ತನುಬಿಂದಿಗೆ ಹೊತ್ತುಕೊಂಡು ಮತ್ತೆ ಊರಕಡೆ ವಾಪಸ್ಸಾದರು. ತನುಬಿಂದಿಗೆಯ ಉತ್ಸವದಲ್ಲಿ ಯುವಕರ ಪಡೆ ಗಂಡುಗೊಡ್ಲಿ, ಆಯುಧ ಹಿಡಿದುಕೊಂಡು ಕೇಕೆ ಹೊಡಿಯುತ್ತ, ಕುಣಿಯುತ್ತ ದೇವಿಗುಡಿ ಕಡೆ ಹೆಜ್ಜೆ ಬೆಳಿಸಿದ್ದರು.

ಗಂಡುಜೋಗಮ್ಮರು ಹಡ್ಲಿಗೆ ಹಿಡಿದುಕೊಂಡು ಉಧೋ.. ಉಧೋ.. ಅನ್ನುತ್ತಾ, ಭಂಡಾರ ಉಗ್ಗುತ್ತ ಸಾಗಿದ್ದರು. ಇವರೆಲ್ಲರ ನಡುವೆ ಮುನಿಯಪ್ಪ ಬೆಳ್ಳಗೆ ಹೊಳೆಯುತ್ತ, ಜನರನ್ನು ಹೋಳುಮಾಡಿ ತನುಬಿಂದಿಗೆಯ ಉತ್ಸವವನ್ನು ಕಡಿಕಿಲೆ ಸಾಗಿಸುತಿದ್ದ. ಮಲ್ಲ ಅಷ್ಟು ಮಂದ್ಯಾಗ ತೂರಿ ತನುಬಿಂದಿಗೆ ಹೊತ್ತ ಪೂಜಾರಿಯನ್ನು ಕುತೂಹಲದಿಂದ ನೋಡಿದ. ಅಲ್ಲೇ ಮುನಿಯಪ್ಪ ಕಾಣಿಸಿದ. ತನ್ನವ್ವನಿಗೆ ಮುನಿಯಪ್ಪ ಬೈದದ್ದು, ಇವನಿಂದಾಗಿಯೇ ಊರಿನಲ್ಲಿ ಕೆಲಸವಿಲ್ಲದೇ ತಂದೆ-ತಾಯಿ ದುಡಿಯಲು ಬೆಂಗಳೂರಿಗೆ ಹೋಗುವಂತಾಗಿದ್ದು ನೆನಪಾಗಿ ಅವನೊಳಗೆ ಸಿಟ್ಟು ಉಕ್ಕಿ ಬಂತು.

ಮುನಿಯಪ್ಪನ ಹೊಲದಲ್ಲಿನ ಜ್ವಾಳವನ್ನು ಕುರಿಮರಿಗೆ ಮೇಯಿಸಲು ಇದೆ ಸರಿಯಾದ ಸಮಯವೆಂದು ಭಾವಿಸಿದ. ಆಗಲೇ ಇಳಿಸಂಜೆ. ಜೋಳದ ಹೊಲದಲ್ಲಿ ಕುರಿಮರಿ ಬಿಟ್ಟ. ಕುರಿಮರಿಗೆ ನಿಜಕ್ಕೂ ಹಬ್ಬವೆನಿಸಿತು. ತಾಸೊತ್ತಿನಲ್ಲೆ ಹೊಟ್ಟೆ ಬಿರಿಯುವಂತೆ ಮೇಯಿತು. ಮಲ್ಲ ಕುರಿಮರಿಗೆ ನೀರು ಕುಡಿಸಲು ಕೆರೆಗೆ ಬಿಟ್ಟ. ಅದು ನೀರು ಕುಡಿದನಂತರ ಹೊರ ಬಾರದೆ ಕಾಲು ಕೆಸರಲ್ಲಿ ಸಿಕ್ಕಿಕೊಂಡು ಬ್ಯಾ..ಬ್ಯಾ.. ಎಂದು ಒದರತೊಡಗಿತು. ಮಲ್ಲ ಕೆಸರಿನಿಂದ ಕುರಿಮರಿ ಹೊರ ತರಲು ನೆಗೆದ. ನೆಗೆದಿದ್ದರಿಂದಲೋ ಏನೋ.. ಹಾಕು ಮಣ್ಣಿನ ಹೊಂಡವಾದ ಕಾರಣ ಅವನ ಕಾಲು ಕೆಸರಲ್ಲಿ ಸಿಕ್ಕಿಕೊಂಡವು. ಕೂಗಿದರೂ ಯಾರೂ ಕೆರೆಯತ್ತ ಸುಳಿಯಲಿಲ್ಲ. ಆಗಲೇ ರಾತ್ರಿಯಾಗತೊಡಗಿತ್ತು. ಜನ ಉತ್ಸವದ ಅಮಲಿನಲ್ಲಿದ್ದರು. ಮಲ್ಲ ಕೊಸರಾಡಿ ಕೊಸರಾಡಿದಂತೆಲ್ಲಾ ಮತ್ತಷ್ಟು ಒಳ ಇಳಿಯತೊಡಗಿದ. ಮೇಲೇಳಲಾರದೆ ಒಳಗಿದ ಬಾಯಿಗೆ ನೀರೂ ಸಿಗದೆ..ರಾತ್ರಿ ದಟ್ಟವಾಗುತ್ತಿದ್ದಂತೆ ಮಲ್ಲನ ಉಸಿರಾಟವೂ ನಿಧಾನವಾಯಿತು. ಕೆಸರಲ್ಲಿ ಒಂದಾದ.

ಊರ ಜನ ‘ಸುಂಕವ್ವ ತನುಬಿಂದಿಗೆ ಉತ್ಸವ ಬಿಟ್ಟು ಬೆಂಗಳೂರಿಗೆ ಹೋದ್ಲು. ಅದಕ್ಕ ದ್ಯಾಮವ್ವ ಮಗನ್ನ ಬಲಿ ತಗೊಂಡು ಏನಂತ ತೋರಿಸಿದ್ಲು ನೋಡು..’ ಎಂದು ಗುಸುಗುಸು ಮಾತಾಡಿಕೊಂಡರು.

* * * *

ಸಮಾನಾಸಕ್ತ ಸಂಗಾತಿಗಳು ಪ್ರತಿ ವರ್ಷ ಆಯಾ ಕಾಲದ ಬಿಕ್ಕಟ್ಟಿನ ಸಂಗತಿಯನ್ನು ಎದುರುಗೊಳ್ಳುವ `ನಾವುನಮ್ಮಲ್ಲಿ’ ಬಳಗ ಆಗಸ್ಟ್ 17, 18 ರಂದು ಗಂಗಾವತಿಯಲ್ಲಿ `ದೇಶಭಕ್ತಿಯ ಆಯಾಮಗಳು’ ಎನ್ನುವ ಚರ್ಚೆ ಸಂವಾದವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷ ಹೊಸ ತಲೆಮಾರಿನ ಒಬ್ಬರ ಒಂದು ಕೃತಿಯನ್ನು ಆಯ್ಕೆ ಮಾಡಿ ಪ್ರಕಟಿಸುತ್ತಾರೆ. ಈ ವರ್ಷ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬನ್ನಿಗನೂರು ಗ್ರಾಮದ ನಾಗರಾಜ ಕೋರಿ ಅವರ `ತನುಬಿಂದಿಗೆ’ ಕಥಾಸಂಕಲನವನ್ನು ಆಯ್ಕೆ ಮಾಡಿ ಪ್ರಕಟಿಸುತ್ತಿದ್ದಾರೆ. ಕತೆಗಾರ ಅಮರೇಶ ನುಗಡೋಣಿ ನಾಗರಾಜ ಕೋರಿ ಕತೆಗಳ ಕುರಿತಂತೆ, `ಕಂಡ ಬದುಕನ್ನು ಅದರ ಒಡಲಿಗತ್ತಿದ ನುಡಿಯಿಂದಲೇ ಕತೆ ಮಾಡಿ ಹೇಳಿದ್ದಾನೆ. ಹೀಗಾಗಿ ಮುಗ್ದತೆ ಕಾಣುತ್ತದೆ, ಅದರಿಂದಾಗಿ ಮಳೆಬಿದ್ದ ತಿಂಗಳಲ್ಲಿ ಅಲ್ಲಲ್ಲಿ ನೆಲದ ಮೇಲೆ ಚಿಗುರುವ ಗಿಡ. ಬಳ್ಳಿಗಳಿಗೆ ಹೂ ಮೂಡುತ್ತವೆ. ಅವು ಭೂಮಿಗಿಂತ ಚೆಂದ. ಗಮನಿಸಿದರೆ, ಅವುಗಳಿಗೆ ಗೊತ್ತಾದರೆ ಮುದ ನೀಡುವಷ್ಟು ಸುಂದರವಾಗಿ ಮುಖ ತೋರಿಸುತ್ತವೆ, ಹೀಗಿವೆ ನಾಗರಾಜ ಕೋರಿಯ ಕತೆಗಳು’ ಎನ್ನುತ್ತಾರೆ. ಪತ್ರಿಕೆಯ ಓದುಗರಿಗಾಗಿ ಈ ಸಂಕಲನದ ಹೆಸರಿನ `ತನುಬಿಂದಿಗೆ’ ಕತೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...