ದೇವಸ್ಥಾನದ ಉತ್ಸವ ಕಾರ್ಯಕ್ರಮದ ವೇಳೆ ಕ್ರೇನ್ ಕುಸಿದುಬಿದ್ದಿರುವ ಘಟನೆ ಭಾನುವಾರ ಸಂಜೆ ತಮಿಳುನಾಡಿನ ಅರಕ್ಕೋಣಂನ ಕೀಲ್ವೀತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ. ಈ ಉತ್ಸವದಲ್ಲಿ ಕ್ರೇನ್ ಬಳಸಲು ಅನುಮತಿ ನೀಡಿಲ್ಲ ಎಂದು ವರದಿಯಾಗಿದೆ. ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ.ಸೇಕರ್ ಬಾಬು ಅವರು ಸೋಮವಾರ ರಾಣಿಪೇಟೆಗೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ರಾಣಿಪೇಟೆ ಕಲೆಕ್ಟರ್ ಭಾಸ್ಕರ ಪಾಂಡಿಯನ್ ಮಾತನಾಡಿದ್ದು, “ಕ್ರೇನ್ ಆಪರೇಟರ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಕ್ರೇನ್ ದುರಂತದಲ್ಲಿ ಬಲಿಯಾದವರನ್ನು ಮುತ್ತುಕುಮಾರ್ (31), ಜ್ಯೋತಿಬಾಬು(19) ಮತ್ತು ಎಸ್ ಭೂಪಾಲನ್ (41) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಕಿಲ್ವೀಡಿ ಗ್ರಾಮದಲ್ಲಿ ದ್ರೌಪತಿ ಅಮ್ಮನವರ ಉತ್ಸವದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೇವರ ವಿಗ್ರಹ ಹೊತ್ತ ಕ್ರೇನ್ ಪಟ್ಟಣದಾದ್ಯಂತ ಮೆರವಣಿಗೆ ಹೊರಟಿತ್ತು. ಕ್ರೇನ್ನಲ್ಲಿ ದೇವರ ವಿಗ್ರಹದ ಜೊತೆಗೆ ಎಂಟು ಜನರು ಇದ್ದರು. ಮೆರವಣಿಗೆ ವೇಳೆ ಕ್ರೇನ್ ಕುಸಿದು ಬಿದ್ದಿದ್ದು, ಎಂಟು ಜನರು ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಅರ್ಕೊನ್ನಂ ಸರ್ಕಾರಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇನ್ನು ಐವರಿಗೆ ಗಂಭೀರ ಗಾಯಗಾಳಾಗಿದ್ದು, ವೈದ್ಯರು ಗಾಯಾಳುಗಳ ಮೇಲೆ ಹೆಚ್ಚಿನ ನಿಗಾವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತ ಸಂಭವಿಸಿದಾಗ ಸುಮಾರು 1,500 ಜನರು ಅಲ್ಲಿಯ ರಸ್ತೆ ಮತ್ತು ದೇವಸ್ಥಾನದ ಆವರಣದಲ್ಲಿ ನೆರೆದಿದ್ದರು ಎಂದು ತಿಳಿದುಬಂದಿದೆ. ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ ಮತ್ತು ಈ ಅಪಘಾತಕ್ಕೆ ಕಾರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನೆಮಿಲಿ ಪೊಲೀಸರು ತಿಳಿಸಿದ್ದಾರೆ.