ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ನಾಳೆಯ ಉದ್ದೇಶಿತ ರ್ಯಾಲಿಗೆ ಬೆಂಬಲವಾಗಿ ಮುಂಬೈನ ಅಜಾದ್ ಮೈದಾನದಲ್ಲಿ ಸೇರಿರುವ ಬೃಹತ್ ರೈತ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಇಲ್ಲಿನ ರಾಜ್ಯಪಾಲರಿಗೆ ಕಂಗನಾ ರಾಣಾವತ್ ಅವರನ್ನು ಭೇಟಿಯಾಗಲು ಸಮಯವಿದೆ. ರೈತರನ್ನು ಭೇಟಿಯಾಗಲು ಸಮಯವಿಲ್ಲ’ ಎಂದು ಆರೋಪಿಸಿದ್ದಾರೆ.
‘ಪಂಜಾಬ್ ಏನು ಪಾಕಿಸ್ತಾನವಾ? ಅದು ನಮ್ಮದೇ ದೇಶದ ರಾಜ್ಯ. ಪ್ರತಿಭಟಿಸುತ್ತಿರುವ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ್ ಮತ್ತು ಇತರ ರಾಜ್ಯಗಳ ರೈತರನ್ನು ಪಂಜಾಬಿ ರೈತರು ಎಂದು ಕೇಂದ್ರ ಕರೆಯುತ್ತಿದೆ. ಪಂಜಾಬ್ ಏನೂ ಪಾಕಿಸ್ತಾನ ಅಲ್ಲವಲ್ಲ’ ಎಂದು ಶರದ್ ಪವಾರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸತ್ತಿನಲ್ಲಿ ಹಲವಾರು ಹಿರಿಯ ಸದಸ್ಯರು ಕೃಷಿ ಕಾಯ್ದೆಗಳ ಕುರಿತು ದೊಡ್ಡ ಚರ್ಚೆಗೆ ಆಗ್ರಹಿಸಿದರೂ ಮೋದಿ ಸರ್ಕಾರ ಅದನ್ನು ಮನ್ನಿಸಲಿಲ್ಲ. ಎಲ್ಲ ಪಕ್ಷಗಳ ಸದಸ್ಯರು ಇರುವ ಸೆಲೆಕ್ಟ್ ಕಮೀಟಿ ಈ ಕಾಯ್ದೆಗಳನ್ನು ಪರಿಶೀಲಿಸಲು ಅವಕಾಶ ನೀಡಿ ಎಂದೆವು. ಆದರೆ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸಿ ಕಾಯ್ದೆಗಳನ್ನು ಅಂಗೀಕಾರ ಮಾಡಿತು’ ಎಂದು ಅವರು ಹೇಳಿದರು.
ಮಹಾರಾಷ್ಟ್ರದ 21ಕ್ಕೂ ಹೆಚ್ಚು ಜಿಲ್ಲೆಗಳಿಂದ ಮುಂಬೈ ಅಜಾದ್ ಮೈದಾನಕ್ಕೆ ಸಾವಿರಾರು ರೈತರು ಆಗಮಿಸಿದ್ದಾರೆ. ಜನವರಿ 24ರಿಂದ ರೈತರ ವಿವಿಧ ತಂಡಗಳು ಆಗಮಿಸುತ್ತಿದ್ದು, ಜ. 26ರಂದು ಬೃಹತ್ ರೈತ ಸಮಾವೇಶ ನಡೆಯಲಿದೆ.
ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯ ಮುನ್ನಾ ದಿನ ದೆಹಲಿಯ ರೈತ ಮುಖಂಡರು ತಮ್ಮ ಹೋರಾಟದ ಮುಂದಿನ ನಡೆಯನ್ನು ಘೋಷಿಸಿದ್ದಾರೆ. ಫೆಬ್ರವರಿ 01 ರಂದು ಕೇಂದ್ರ ಬಜೆಟ್ ಮಂಡನೆಯ ದಿನ ಪಾರ್ಲಿಮೆಂಟ್ಗೆ ಪಾದಯಾತ್ರೆ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸುವುದಾಗಿ ರೈತರು ಘೋಷಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ