ಈ ರೈತ ಚಳವಳಿ ಮೂರು ಕೃಷಿ ಕಾಯಿದೆಗಳ ರದ್ಧತಿಗಷ್ಟೇ ಸೀಮಿತವಲ್ಲ. ಇದು ಸಂಸದೀಯ, ಪ್ರಜಾಸತ್ತಾತ್ಮಕ ಸಂವಾದವನ್ನು ಪುನರ್ ಸ್ಥಾಪಿಸುವ ಚಳವಳಿಯಾಗುತ್ತಿದೆ.
ಗಣ ರಾಜ್ಯ ಸ್ಥಾಪನೆಯಾದಾಗ ರಾಜಶಾಹಿ, ಪಾಳೆಗಾರಿ ಆಳುವಿಕೆಯಿಂದ ಮುಕ್ತವಾಗಿ ನಮ್ಮನ್ನು ಆಳುವವರನ್ನು ನಾವೇ ಆರಿಸುವ ಬಡವ- ಬಲ್ಲಿದ; ದಲಿತ, ಆದಿವಾಸಿ, ಮಹಿಳೆ; ಭೂಮಿ ಹೊಂದಿದವನು- ಭೂರಹಿತ ; ಹೀಗೆ ಎಲ್ಲರೂ ಈ ಆಯ್ಕೆಯ ಯಜ್ಞದಲ್ಲಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲುದಾರರಾದರು. ಈ ರೋಮಾಂಚನವೇ ಭಾರತದ ಪ್ರಜಾಸತ್ತೆಯನ್ನು ಇಂದೂ ಉಳಿಸಿದೆ.
ಆದರೆ ಕಳೆದ 70 ವರ್ಷಗಳಲ್ಲಿ ಜನತೆಗೆ ಅನುಭವಕ್ಕೆ ಬಂದ ಸಂಗತಿ ಎಂದರೆ ಆಳುವವರನ್ನೇನೋ ಬದಲಾಯಿಸಬಹುದು. ಆದರೆ ಆಡಳಿತವನ್ನು ನಿರ್ದೇಶಿಸುವುದು ಹೇಗೆ? ಆಳುವವರನ್ನು ನಿಜಾರ್ಥದ ಜನಸೇವಕರನ್ನಾಗಿ ಮಾಡುವುದು ಹೇಗೆ?
ಆಡಳಿತದ ಪ್ರಕ್ರಿಯೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದು ಹೇಗೆ? ಸರಕಾರವೊಂದು ಜನರ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಈಡೇರಿಸುವ ಯಂತ್ರವಾಗುವುದು ಹೇಗೆ?
ಈ ವೈಫಲ್ಯವೇ ತೀವ್ರ ಹತಾಶೆ ಮತ್ತು ಸಿನಿಕತನವನ್ನು ಹುಟ್ಟು ಹಾಕಿದೆ. “ಜಾತಿ, ಹಣ, ಹೆಂಡ, ಧರ್ಮ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಮತ ಹಾಕುತ್ತಾರೆ. ಗೆದ್ದ ಮೇಲೆ ಈ ಜನ ಪ್ರತಿನಿಧಿಗಳನ್ನು ಹಿಡಿಯಲೂ ಸಾಧ್ಯವಾಗುವುದಿಲ್ಲ; ಕಡಿವಾಣ ಹಾಕಲೂ ಸಾಧ್ಯವಾಗುತ್ತಿಲ್ಲ. ಏನಿದ್ದರೂ ಮುಂದಿನ ಚುನಾವಣೆಗೆ ಕಾಯಬೇಕು. ಆಗಲೂ ಅಷ್ಟೇ. ಇವನ ಬದಲು ಇವನ ತದ್ರೂಪಿ ಅದೇ ಸ್ಥಾನವನ್ನು ಆಕ್ರಮಿಸುತ್ತಾನೆ.”
ಈ ಗೋಳು ತೀವ್ರವಾಗಿದೆ.
ಚುನಾವಣಾ ನಂತರದ ಆಡಳಿತ ಪ್ರಕ್ರಿಯೆಯಲ್ಲಿ – ಅಂದರೆ, ಸರಕಾರದ ಪ್ರತೀ ಹೆಜ್ಜೆ ಗತಿ, ನಿರ್ಧಾರಗಳು ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬ ಅರಿವಿನಿಂದ ನಾವು ಪ್ರತಿಕ್ರಿಯಿಸುತ್ತಲೇ ಇಲ್ಲ.
ಈ ಜಡತ್ವವೇ ಸರಕಾರಗಳು ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಕಾರಣವಾಗಿದೆ. ಬಹುತೇಕ ಎಲ್ಲಾ ಪಕ್ಷಗಳೂ ಒಂದೇ ಮೂಸೆಯಲ್ಲಿ ತಯಾರಾದ ವಿವಿಧ ಬಣ್ಣಗಳ ರಾಕ್ಷಸ ಗೊಂಬೆಗಳಂತಿವೆ.
ಭಾಜಪ ಕಾರ್ಪೋರೇಟ್ ಮತ್ತು ಕೋಮು ರಾಜಕಾರಣದ ಪ್ರಳಯಾಂತಕ ಮಿಶ್ರಣದ ಮೂಲಕ ಸಂವಿಧಾನ ಮತ್ತು ಅದರ ಆಶಯಗಳನ್ನು ನಿರ್ಲಜ್ಜ, ನಿರ್ಲಕ್ಷ್ಯದ ಮೂಲಕ ಹೊಸಕಿ ಹಾಕುತ್ತಿದ್ದರೆ, ಪ್ರಾದೇಶಿಕ ಪಕ್ಷಗಳು ಪಾಳೇಗಾರಿಕೆ ಗುಣ ಮತ್ತು ಜಾಗತೀಕರಣದ ಆರ್ಥಿಕತೆಯ ದಳ್ಳಾಳಿ ವರ್ತನೆಯನ್ನು ಕಣಕಣದಲ್ಲಿ ತುಂಬಿಕೊಂಡಿವೆ.
ಇಂಥಾ ಸಂಕಟದ ದಿನಗಳಲ್ಲಿ ಪ್ರಸ್ತುತ ಮೈ ಕೊಡವಿ ಎದ್ದಿರುವ ರೈತ ಪ್ರತಿಭಟನೆ ಮತ್ತೆ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದೆ.
ಟ್ರಾಕ್ಟರ್ ದೊಡ್ಡ ರೈತರ ಸಂಕೇತವಾಗಿತ್ತು; ನಿಜ. ಆದರೆ ಇಂದು ಅದು ಹೋರಾಟದ ಮುಂಚೂಣಿಯಲ್ಲಿರುವ ರೈತರ ಸಂಕೇತವಾಗಿದೆ.
ಈ ಹಿಂದೆ ಕೋಟೆಯ ದಿಡ್ಡಿ ಬಾಗಿಲು ಮುರಿಯಲು ಆನೆಗಳನ್ನು ಬಳಸುವುದಿತ್ತು. ಆದಾದ ಮೇಲೆ ಕಾಲಾಳುಗಳು ಯುದ್ಧ ಮಾಡುತ್ತಿದ್ದರು.
ಈ ಬಗ್ಗೆ ಬರುವ ಟೀಕೆ , ಗಾಸಿಪ್ಪುಗಳು ಆಳುವವರು ಎದೆಗುಂದಿರುವುದರ ಸಂಕೇತ. ಈ ಹೋರಾಟದಲ್ಲಿ ಗೆಲುವು ನಿಶ್ಚಿತ. ಯಾಕೆಂದರೆ ಮೂಲತಃ ಸರಕಾರ ಆಳದಲ್ಲಿ ಜನಸಾಮಾನ್ಯರ, ರೈತರ ಬಾಳುವೆಯನ್ನು ಛಿದ್ರಗೊಳಿಸಿ ತನ್ನ ಕಾರ್ಪೋರೇಟ್ ಗೆಣೆಕಾರರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿರುವುದು ಪ್ರತೀ ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಾಣುತ್ತಿದೆ.
ಈ ಹೋರಾಟದ ಗೆಲುವು ಇಷ್ಟು ಬಲವಿಲ್ಲದ ಸಮುದಾಯಗಳ ಹೋರಾಟಗಳಿಗೆ ನಾಂದಿಯಾಗಲಿ
ಸಂವಿಧಾನದ ಪೀಠಿಕೆಯನ್ನು ಮತ್ತು ನಿರ್ದೇಶಕ ತತ್ವಗಳನ್ನು ಮೋದಿ ಸರಕಾರದ ಎದುರು ಇಟ್ಟರೆ ಒಂದೊಂದು ಹೆಜ್ಜೆಯಲ್ಲೂ ಈ ಸರಕಾರದ ಸಂವಿಧಾನ ವಿರೋಧಿ ನಡೆ ನಿಚ್ಚಳವಾಗಿ ತೋರುತ್ತದೆ. ಸಂವಿಧಾನ ವಿರೋಧೀ ಆಂದರೆ ಜನರ ಆಶೋತ್ತರಗಳ ವಿರೋಧಿ. ಅಂದರೆ ಜನ ವಿರೋಧಿ.
ಆದ್ದರಿಂದಲೇ ಈ ರೈತ ಹೋರಾಟ ನಮ್ಮ ನೆಲಮೂಲದ ಎಲ್ಲರ ಆಶೋತ್ತರಗಳ ಪ್ರತಿರೋಧದ ಪ್ರತಿರೂಪ. ಸಂವಿಧಾನವೇ ಇಲ್ಲಿ ಜಂಗಮ ರೂಪ ತಾಳಿದೆ.
- ಕೆ.ಪಿ ಸುರೇಶ್, ಚಿಂತಕರು, ಬರಹಗಾರರು.
ಇದನ್ನೂ ಓದಿ: ಬಜೆಟ್ ದಿನ ರೈತರಿಂದ ಪಾರ್ಲಿಮೆಂಟ್ ಚಲೋ : ಸಂಸತ್ತಿಗೆ ಪಾದಯಾತ್ರೆ ನಡೆಸಲು ನಿರ್ಧಾರ
