Homeಮುಖಪುಟನ್ಯಾಯಿಕ ಪರಂಪರೆಗೆ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರ ಕೊಡುಗೆ

ನ್ಯಾಯಿಕ ಪರಂಪರೆಗೆ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರ ಕೊಡುಗೆ

- Advertisement -
- Advertisement -

ಸರ್ವೋಚ್ಚ ನ್ಯಾಯಾಲಯದಲ್ಲಿ 7 ವರ್ಷ ಸೇವೆ ಸಲ್ಲಿಸಿ ಜಸ್ಟಿಸ್ ರೋಹಿಂಗ್ಟನ್ ನಾರಿಮನ್ ಅವರು ಆಗಸ್ಟ್ 12ರಂದು ನಿವೃತ್ತಿ ಹೊಂದಿದರು. ಅವರ ನಿವೃತ್ತಿಯ ನಂತರ ಇಂದಿರಾ ಜೈಸಿಂಗ್, ಆನಂದ್ ಗ್ರೋವರ್, ಸಂಜಯ್ ಹೆಗಡೆ ಅವರನ್ನು ಒಳಗೊಂಡಂತೆ ಅನೇಕ ಹಿರಿಯ ವಕೀಲರು ಲೇಖನಗಳನ್ನು ಬರೆದರು ಮತ್ತು ನಾರಿಮನ್ ಅವರು ನ್ಯಾಯಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ’ಸಹೋದರ ನಾರಿಮನ್ ಅವರ ನಿವೃತ್ತಿಯಿಂದ, ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕಾಯುತ್ತಿದ್ದ ಒಂದು ಸಿಂಹವನ್ನು ಕಳೆದುಕೊಂಡಾಗಿದೆ ಎನಿಸುತ್ತಿದೆ’ ಎಂದು ಹೇಳಿದ್ದು ಮುಖ್ಯ ನ್ಯಾಯಮೂರ್ತಿ ರಮಣ ಅವರು.

ಜಸ್ಟಿಸ್ ನಾರಿಮನ್ ಅವರ ಸೇವೆಗೆ ಬಂದ ಪ್ರಶಂಸೆಯ ಸುರಿಮಳೆಯು ಜಸ್ಟಿಸ್ ಬೋಬಡೆ ಅವರು ನಿವೃತ್ತರಾದಾಗ ಬಂದ ಕಟುಕೆಗಳಿಗೆ ತದ್ವಿರುದ್ಧವಾಗಿತ್ತು. ಈ ವ್ಯತ್ಯಾಸವು ಸರ್ವೋಚ್ಚ ನ್ಯಾಯಾಲಯದ ಎರಡು ವಿಭಿನ್ನ ಅನುಸಂಧಾನದ ಮಾದರಿಗಳನ್ನು ಸೂಚಿಸುತ್ತದೆ. ಇದು ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿ ನಿಲ್ಲುವ ನ್ಯಾಯಾಧೀಶರು ಹಾಗೂ ಸಂವಿಧಾನವನ್ನು ರಕ್ಷಿಸುವ ತಮ್ಮ ಪ್ರತಿಜ್ಞೆಯನ್ನು ಮರೆತು, ’ಕಾರ್ಯಾಂಗಕ್ಕಿಂತ ಹೆಚ್ಚಿನ ಕಾರ್ಯಾಂಗದ ಮನಸ್ಥಿತಿ’ಯವರಾಗಿ ಕೆಲವು ನ್ಯಾಯಾಧೀಶರು ಇರುತ್ತಾರೆ ಎಂದು ತಿಳಿಸುತ್ತದೆ. ಸಂವಿಧಾನದ ರಕ್ಷಣೆಯಲ್ಲಿ ಕಾರ್ಯಾಂಗವನ್ನು ಎದುರುಹಾಕಿಕೊಳ್ಳಲು ಹೆದರದೇ ಇರುವ ನ್ಯಾಯಾಧೀಶರು ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ. ತುರ್ತುಪರಿಸ್ಥಿತಿಯನ್ನು ನ್ಯಾಯಸಮ್ಮತಗೊಳಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಭಿನ್ನಮತ (ಡಿಸೆಂಟ್) ತೋರಿದ ಜಸ್ಟಿಸ್ ಖನ್ನಾ ಅವರು ಇತಿಹಾಸ ಸೃಷ್ಟಿಸುತ್ತಾರೆ, ತುರ್ತುಪರಿಸ್ಥಿತಿಯ ಕುಖ್ಯಾತ ತೀರ್ಪನ್ನು ನೀಡಿದ ಜಸ್ಟಿಸ್ ಬೇಗ್ ಅಲ್ಲ.

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಜಸ್ಟಿಸ್ ಖನ್ನಾ ಅವರಿಗೆ ಇದ್ದ ಬದ್ಧತೆ ಮತ್ತು ಸ್ಪಷ್ಟ ನಿಲುವಿಗೆ ತಮ್ಮ ಮೆಚ್ಚುಗೆಯನ್ನು ಜಸ್ಟಿಸ್ ನಾರಿಮನ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರು ತಮ್ಮ ಪ್ರಮುಖ ತೀರ್ಪುಗಳಲ್ಲಿ ಮೂಲಭೂತ ಹಕ್ಕುಗಳ ವಿಸ್ತಾರದ ಪರಿಧಿಯ ನ್ಯಾಯಿಕ ತಿಳಿವಳಿಕೆಯನ್ನು ಗಟ್ಟಿಗೊಳಿಸಿದ್ದಾರೆ. ಅವರು ಬರೆದ ಪ್ರಮುಖ ತೀರ್ಪುಗಳಲ್ಲಿ ಶ್ರೇಯಾ ಸಿಂಘಲ್ (ಮಾಹಿತಿ ತಂತ್ರಜ್ಞಾನದ ಕಾಯಿದೆಯ ಸೆಷನ್ 66ಎಅನ್ನು ರದ್ದುಗೊಳಿಸಿದ್ದು), ಪುಟ್ಟಸ್ವಾಮಿ (ಭಾರತೀಯ ಸಂವಿಧಾನದಲ್ಲಿ ಖಾಸಗಿತನ ಹಕ್ಕು ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ ಎಂದು ಹೇಳಿದ್ದು), ಶಾಯರಾ ಬಾನೊ (ತ್ರಿವಳಿ ತಲಾಕ್ ಅನ್ನು ರದ್ದುಗೊಳಿಸಿದ್ದು), ನವತೇಜ್ ಸಿಂಗ್ ಜೋಹರ್ (ಭಾರತೀಯ ದಂಡಸಂಹಿತೆಯ ಸೆಕ್ಷನ್ 377ಅನ್ನು ಕಡಿತಗೊಳಿಸಿದ್ದು), ಇಂಡಿಯನ್ ಯಂಗ್ ಲಾಯರ್‍ಸ್ ಅಸೋಸಿಯೇಷನ್ (ಕೇರಳದಲ್ಲಿ ಶಬರಿಮಲೈ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಿದ್ದು), ಪರಮವೀರ್ ಸಿಂಗ್ ಸೈನಿ (ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ನಿರ್ದೇಶಿಸಿದ್ದು) ಕೆಲವು.

ಜಸ್ಟಿಸ್ ನಾರಿಮನ್ ಅವರ ಆಲೋಚನೆಗಳು ಸ್ಪಷ್ಟಪಡಿಸುವುದೇನೆಂದರೆ, ಬಹುಸಂಖ್ಯಾತರು ಏನೇ ಯೋಚಿಸಲಿ, ಒಬ್ಬ ವ್ಯಕ್ತಿಯ ಘನತೆ, ಖಾಸಗಿತನ ಮತ್ತು ಅಭಿವ್ಯಕ್ತಿಯ ಹಕ್ಕನ್ನು ರಕ್ಷಿಸಲೇಬೇಕೆಂಬುದು. ಏಕೆಂದರೆ ಅದನ್ನೇ ನಮ್ಮ ಸಂವಿಧಾನ ಸ್ಪಷ್ಟವಾಗಿ ಪ್ರತಿಪಾದಿಸುವುದು. ಬಹುಸಂಖ್ಯಾತ ನಿಲುವಿಗೆ ವಿರುದ್ಧವಾಗಿ ಕಾನೂನು ಹೇಗೆ ನಿಲ್ಲುತ್ತದೆ ಎಂಬುದನ್ನು ಅವರು ಸೆಪ್ಟೆಂಬರ್ 2018ರಲ್ಲಿ ನೀಡಿದ ಮೂರು ತೀರ್ಪುಗಳು ಸ್ಪಷ್ಟಪಡಿಸುತ್ತವೆ. ಈ ತೀರ್ಪುಗಳನ್ನು ಇತರ ನ್ಯಾಯಮೂರ್ತಿಗಳಾದ ಜಸ್ಟಿಸ್ ಚಂದ್ರಚೂಡ್, ಮಿಶ್ರಾ, ಖಾನ್ವಿಲಕರ್ ಹಾಗೂ ಮಿಸ್ರ ಅವರು ಸೇರಿ ನೀಡಿದ್ದರು.

2018ರ ನವತೇಜ್ ಸಿಂಗ್ ಜೋಹರ್ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನ್ಯಾಯಾಲಯ ಹೇಳಿದ್ದೇನೆಂದರೆ, ಸಮಲೈಂಗಿಕ ವರ್ತನೆಯನ್ನು ಅಪರಾಧೀಕರಣಗೊಳಿಸುವ ಐಪಿಸಿಯ 377 ಸೆಕ್ಷನ್‌ನಿಂದ ಎಲ್‌ಜಿಬಿಟಿ ವ್ಯಕ್ತಿಗಳ ಘನತೆ ಮತ್ತು ಸ್ವಾತಂತ್ರದ ಹಕ್ಕನ್ನು ಉಲ್ಲಂಘನೆಯಾಗುತ್ತದೆ ಎಂದು. 2018ರ ಜೋಸೆಫ್ ಶೈನ್ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಪುರುಷ ವ್ಯಭಿಚಾರವನ್ನು ಅಪರಾಧೀಕರಣಗೊಳಿಸುವ ಐಪಿಸಿಯ ಸೆಕ್ಷನ್ 497ಅನ್ನು ರದ್ದುಗೊಳಿಸಲಾಯಿತು. ವ್ಯಭಿಚಾರದ ಬಗ್ಗೆ ಇರುವ ಕಾಯಿದೆಯು ಲೈಂಗಿಕತೆಯ ಪಿತೃಪ್ರಧಾನ ತಿಳಿವಳಿಕೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಆ ತಿಳಿವಳಿಕೆಯು ’ಸಮಾಜದ ಎಲ್ಲಾ ಸದಸ್ಯರಿಗೆ ಮುಕ್ತ, ಸಮಾನ ಮತ್ತು ಘನತೆಯ ಅಸ್ತಿತ್ವಕ್ಕೆ ಇರುವ ಬದ್ಧತೆಯ ಸಾಂವಿಧಾನಿಕ ನೈತಿಕತೆಗೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ಅದೇ ವರ್ಷದ ಇಂಡಿಯನ್ ಯಂಗ್ ಲಾಯರ್ಸ್ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಶಬರಿಮಲೈ ದೇವಸ್ಥಾನದಲ್ಲಿ 10ರಿಂದ ಐವತ್ತು ವಯಸ್ಸಿನ ಮಹಿಳೆಯರು ಪೂಜೆ ಸಲ್ಲಿಸಬಾರದು ಎಂಬ ನಿಯಮಗಳನ್ನು ರದ್ದುಗೊಳಿಸಿತು. ಆ ತೀರ್ಪಿನಲ್ಲಿ ’ಒಬ್ಬ ಮಹಿಳೆಯ ಮುಟ್ಟಿನ ಸ್ಥಿತಿಯು ಅತ್ಯಂತ ವೈಯಕ್ತಿಕ ಹಾಗೂ ಅವಳ ಖಾಸಗಿತನದ ಅವಿಭಾಜ್ಯ ಅಂಗ’ ಎಂದು ಹಾಗೂ ಅದು ಯಾವುದೇ ರೀತಿಯ ಬಹಿಷ್ಕಾರಕ್ಕೆ ಮತ್ತು ನಿರಾಕರಣೆಗೆ ಆಧಾರವಾಗಬಾರದು ಎಂದು ವಾದಿಸಲಾಗಿತ್ತು. ನ್ಯಾಯಾಲಯ ಸ್ಪಷ್ಟಪಡಿಸಿದ್ದೇನೆಂದರೆ, ’ಆದ್ಯತೆಗಳ ಸಾಂವಿಧಾನಿಕ ಕ್ರಮ’ದಲ್ಲಿ ’ಧರ್ಮದ ಸ್ವಾತಂತ್ರಕ್ಕೆ ಇರುವ ವೈಯಕ್ತಿಕ ಹಕ್ಕು’ ಎಂಬುದು ’ಸಮಾನತೆ’, ಸ್ವಾತಂತ್ರ ಮತ್ತು ವೈಯಕ್ತಿಕ ಸ್ವಾತಂತ್ರಗಳ ಸಾಂವಿಧಾನಿಕ ಪ್ರತಿಪಾದನೆಗಳಿಗೆ ಒಳಪಟ್ಟಿರುತ್ತದೆ.

ಆದರೆ, ’ಸಾಂವಿಧಾನಿಕ ನೈತಿಕತೆ’ ಮತ್ತು ’ಪರಿವರ್ತಕ ಸಂವಿಧಾನಕತೆ’ ಎಂದು ಕರೆಯಲಾದ ಈ ಹೂರಣವನ್ನು ಶೀಘ್ರವೇ ಬದಲಿಸಲಾಯಿತು. ಶಬರಿಮಲೈ ತೀರ್ಪನ್ನು ಮರುವಿಚಾರಣೆ ಅಥವಾ ರಿವ್ಯೂ ಮಾಡಲು ನೇಮಿಸಿದ ನ್ಯಾಯಾಲಯದ ಬೆಂಚ್ ನೀಡಿದ ತೀರ್ಪು, ಸಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯುವ ದಾರಿಯಿಂದ ಅದು ಹಿಂದೆಂದೂ ಕಾಣದಂತ ರೀತಿಯಲ್ಲಿ ಹಿಂದೆ ಸರಿದಿದ್ದು ಸ್ಪಷ್ಟವಾಯಿತು. ಮರುವಿಚಾರಣೆಯ ಪರಿಧಿಯು ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಅತ್ಯಂತ ಚಿಕ್ಕ ಪರಿಧಿಯದ್ದಾಗಿದ್ದು, ’ಅದರಲ್ಲಿ ಒಂದು ದಾಖಲೆಯ/ತೀರ್ಪಿನ ನಿಟ್ಟಿನಲ್ಲಿ ಅತ್ಯಂತ ರಾಚುವಂತೆ ದೋಷ ಇದ್ದರೆ’ ಮಾತ್ರ ನ್ಯಾಯಾಲಯವು ಅದನ್ನು ಪರೀಕ್ಷಿಸುತ್ತದೆ ಹಾಗೂ ಅಂತಹ ರಾಚುವಂತ ದೋಷ ಕಂಡುಬರದೇ ಇದ್ದರೆ ಆ ಮರುವಿಚಾರಣೆಯ ಅರ್ಜಿಯನ್ನು (ರಿವ್ಯೂ ಪೆಟಿಷನ್) ವಜಾಗೊಳಿಸಲಾಗುತ್ತದೆ. ಶಬರಿಮಲೈ ತೀರ್ಪಿನ ಮರುವಿಚಾರಣೆಯನ್ನು ವಜಾಗೊಳಿಸದೇ ಇದ್ದದ್ದು, ಅದರಲ್ಲೂ ಅರ್ಜಿ ಸಲ್ಲಿಸಿದವರು ’ದಾಖಲೆಯ ನಿಟ್ಟಿನಲ್ಲಿ ಅತ್ಯಂತ ರಾಚುವಂತೆ ದೋಷ ಇದೆ’ ಎಂದು ಸಾಬೀತುಪಡಿಸದೇ ಇದ್ದರೂ, ಅದನ್ನು ವಜಾಗೊಳಿಸದೇ ಇದ್ದದ್ದು ನ್ಯಾಯಾಲಯಗಳು ಯಾವ ರೀತಿಯ ರಾಜಕೀಯ ಜರೂರುಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದವು ಎಂಬುದನ್ನು ಸ್ಪಷ್ಟಗೊಳಿಸುತ್ತದೆ.

ಕೊರೊನಾಶಬರಿಮಲೈ ತೀರ್ಪಿನ ನಂತರ ಅದರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ತೀರ್ಪಿನ ವಿರುದ್ಧದ ಪ್ರತಿಭಟನೆಯ ನಾಯಕತ್ವವನ್ನು ಒಕ್ಕೂಟ ಸರ್ಕಾರದ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಅದರ ಹಿಂದಿನ ಶಕ್ತಿಯಾದ ಆರ್‌ಎಸ್‌ಎಸ್ ವಹಿಸಿಕೊಂಡಿದ್ದವು. ಆಗ ಬಿಜೆಪಿಯ ಅಧ್ಯಕ್ಷರಾಗಿದ್ದ ಅಮಿತ ಶಾ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಅಸಹಕಾರ ನೀಡುವಂತೆ ಬಹಿರಂಗ ಕರೆ ನೀಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರು ’ನ್ಯಾಯಾಲಯಗಳು ಅನುಷ್ಠಾನಗೊಳಿಸಲಾಗದಂತಹ ತೀರ್ಪುಗಳನ್ನು ನೀಡಬಾರದು’ ಎಂದು ಪುಕ್ಕಟ್ಟೆ ಸಲಹೆಯನ್ನೂ ನೀಡಿದ್ದರು. ಆಡಳಿತ ಪಕ್ಷದ ಅಧ್ಯಕ್ಷನಾಗಿ, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಸರಿಸಬಾರದು ಎಂದು ಸಾರ್ವಜನಿಕವಾಗಿ ವಾದಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು.

ಇದು ನ್ಯಾಯಾಲಯಗಳಿಗೆ ಒಂದು ರೀತಿಯ ಬೆದರಿಕೆ ಆಗಿತ್ತು; ಬಹುಸಂಖ್ಯಾತರ ಧಾರ್ಮಿಕ ಭಾವನೆಗಳ ಮೇಲೆ ಸಂವಿಧಾನಾತ್ಮಕ ನೈತಿಕತೆಯನ್ನು ಎತ್ತಿಹಿಡಿಯಬಾರದು ಎಂಬುದೇ ಈ ಬೆದರಿಕೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯವು ಗಟ್ಟಿಯಾಗಿ ತನ್ನ ನಿಲುವನ್ನು ಪ್ರತಿಪಾದಿಸುವುದನ್ನು ಬಿಟ್ಟು, ಒತ್ತಡಕ್ಕೆ ಮಣಿಯಿತು. ಜಸ್ಟಿಸ್ ಗೋಗೊಯಿ, ಎ.ಎಂ. ಖಾನ್ವಿಲಕರ್ ಮತ್ತು ಇಂದು ಮಲ್ಹೋತ್ರ ಅವರುಗಳು ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮಣಿದು, ಮರುವಿಚಾರಣೆಯ ಪರಿಧಿಯನ್ನು ಮೀರಿ ಈ ವಿಷಯವನ್ನು ಮರುಪರಿಶೀಲಿಸಲು ಅವಕಾಶ ನೀಡಿದರು.

ಜಸ್ಟಿಸ್ ಚಂದ್ರಚೂಡ್ ಮತ್ತು ನಾರಿಮನ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವನ್ನು ನೋಡಿದರೆ, ಶಬರಿಮಲೈ ತೀರ್ಪನ್ನು ಮರಪರಿಶೀಲಿಸಲು ಯಾವ ರೀತಿಯ ಒತ್ತಡ ಹೇರಲಾಗಿತ್ತು ಎಂಬುದು ಗೊತ್ತಾಗುತ್ತದೆ. ಈ ಇಬ್ಬರು ನ್ಯಾಯಾಧೀಶರು ಹೇಳಿದ್ದೇನೆಂದರೆ, ’ನಂಬಿಕೆ ಮತ್ತು ಶ್ರದ್ಧೆಯ ವಿಷಯಗಳು ನ್ಯಾಯಾಲಯಗಳಿಂದ ಪರಿಶೀಲಿಸುವುದು ಸಾಧ್ಯವಿಲ್ಲ’ ಎಂದು ಕೆಲವು ನುರಿತ ವಕೀಲರು ಅತ್ಯಂತ ತೀವ್ರತೆಯ ವಾದಗಳನ್ನು ಮಂಡಿಸಿದ್ದಾರೆ. ಹಾಗೂ ಇಂತ ವಾದಗಳನ್ನು ತಿರಸ್ಕರಿಸಬೇಕಿದೆ ಏಕೆಂದರೆ ಅವುಗಳು ’ಆರ್ಟಿಕಲ್ 25’ ರ ಉಲ್ಲಂಘನೆಯಾಗುತ್ತವೆ. ಈ ನ್ಯಾಯಾಧೀಶರು ಆರ್ಟಿಕಲ್ 25ರಲ್ಲಿ ಹೇಳಿದ್ದನ್ನೇ ಪ್ರತಿಪಾದಿಸಿದರು; ಅದರ ಅನುಗುಣವಾಗಿ ಒಬ್ಬ ವ್ಯಕ್ತಿಗೆ ತನ್ನ ಇಚ್ಛೆಯ ಧರ್ಮದ ಅನುಸರಿಸಲು, ಆಚರಿಸಲು, ಪ್ರಚಾರ ಮಾಡುವ ಸಂವಿಧಾನಾತ್ಮಕ ಹಕ್ಕನ್ನು ಹೊಂದಿದ್ದಾಳೆ/ನೆ ಹಾಗೂ ಇಂತಹ ಹಕ್ಕು ಸಮಾನತೆಯ ಮತ್ತು ಘನತೆಯ ಹಕ್ಕಿನಂತೆ ಮೂಲಭೂತ ಹಕ್ಕಿನಂತೆ ಪರಿಗಣಿಸಬೇಕು ಎಂದು ಹೇಳಿದ್ದರು.

ಈ ಅಲ್ಪಸಂಖ್ಯಾತ ತೀರ್ಪಿನ ಅರ್ಥ ಅತ್ಯಂತ ಸ್ಪಷ್ಟವಾಗಿತ್ತು; ರಾಜಕೀಯ ಕಾರ್ಯಾಂಗವು ಹೇಳುತ್ತಿರುವ ಅಭಿಪ್ರಾಯವು ಅತ್ಯಂತ ಸ್ಪಷ್ಟವಾಗಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಹಾಗಾಗಿ ಅದು ತಿರಸ್ಕರಿಸಲು ಅರ್ಹ. ಮುಂದೆ ಬರೆಯುತ್ತ, ’ಶಬರಿಮಲೈ ದೇವಸ್ಥಾನದಲ್ಲಿ ಪೂಜಿಸಲು ಇರುವ ಮೂಲಭೂತ ಹಕ್ಕನ್ನು ಚಲಾಯಿಸಲು ಆಗದಂತೆ 10ರಿಂದ 50ರ ವಯಸ್ಸಿನ ಮಹಿಳೆಯನ್ನು ತಡೆದಿರುವ ಈ ಸನ್ನಿವೇಶದಲ್ಲಿ ಈ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ಪುನರ್‌ಸ್ಥಾಪಿಸಬೇಕು. ಯಾರೆಲ್ಲ ಈ ತೀರ್ಪಿನ ಅನುಗುಣವಾಗಿ ನಡೆಯುವುದಿಲ್ಲವೋ, ಸಚಿವರು, ರಾಜ್ಯದ ಮತ್ತು ಒಕ್ಕೂಟದ ಹಾಗೂ ಎಂಪಿ ಮತ್ತು ಶಾಸಕರಿಗೆ ಸಂಬಂಧಿಸಿದಂತೆ, ಈ ತೀರ್ಪಿನ ಅನುಗುಣವಾಗಿ ನಡೆಯದಿದ್ದರೆ, ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ, ಸಂರಕ್ಷಿಸುವ ಹಾಗೂ ರಕ್ಷಿಸಲು ಅವರುಗಳು ತೆಗೆದುಕೊಂಡ ಸಂವಿಧಾನಾತ್ಮಕ ವಚನದ ಉಲ್ಲಂಘನೆಯಾಗುತ್ತದೆ’ ಎಂದಿತ್ತು.

ಶಬರಿಮಲೈ ಮರುಪರಿಶೀಲನೆಯ ಅರ್ಜಿಯಲ್ಲಿ ಬಂದ ಜಸ್ಟಿಸ್ ನಾರಿಮನ್ ಅವರ ಭಿನ್ನಾಭಿಪ್ರಾಯಗಳು ಅವರ ಬಗ್ಗೆ ಹೇಳುವುದೇನೆಂದರೆ, ಅವರು ತಮ್ಮ ನ್ಯಾಯಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವಾಗ ಕಾರ್ಯಾಂಗ ಒತ್ತಡಗಳಿಗೆ ಮಣಿಯುತ್ತಿದ್ದಿಲ್ಲ. ಬಹುಸಂಖ್ಯಾತರ ಭಾವನೆಗಳು ತಾರಕಕ್ಕೆ ಏರಿದಾಗ ಒಬ್ಬ ವ್ಯಕ್ತಿಯ ಘನತೆ ಮತ್ತು ಖಾಸಗಿತನಕ್ಕೆ ಇರುವ ಗೌರವದ ಸಂವಿಧಾನಾತ್ಮಕ ಮೌಲ್ಯಗಳ ಬಗ್ಗೆ ಅವರು ಗಟ್ಟಿಯಾಗಿ ನಂಬಿ ಪ್ರತಿಪಾದಿಸುತ್ತಿದ್ದರು. ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಅವರು ನೀಡಿದ ಅಭಿಪ್ರಾಯವು ಬಹುಸಂಖ್ಯಾತವಾದಿ ಪರಿಸರದಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಒಬ್ಬ ನ್ಯಾಯಾಧೀಶರ ಪಾತ್ರ ಏನಿರಬೇಕು ಎಂಬುದನ್ನು ಅದ್ಭುತವಾಗಿ ಹೇಳಲಾಗಿದೆ. ಅವರು ಹೇಳುವುದು:

“ಭಾರತದ ಸಂವಿಧಾನದಲ್ಲಿ ಇರುವ ಮೂಲಭೂತ ಹಕ್ಕುಗಳ ಅಧ್ಯಾಯದ ಉದ್ದೇಶವೇನು ಎಂದರೆ, ಒಬ್ಬ ವ್ಯಕ್ತಿಯ ಸ್ವಾತಂತ್ರ ಮತ್ತು ಘನತೆಯ ವಿಷಯವನ್ನು ಬಹುಸಂಖ್ಯಾತವಾದಿ ಸರಕಾರಗಳ ಕೈಗೆ ಸಿಗದಂತೆ ದೂರದಲ್ಲಿ ಇರಿಸುವುದು ಮತ್ತು ಅದರಿಂದ ಸಂವಿಧಾನಾತ್ಮಕ ನೈತಿಕತೆಯನ್ನು ನ್ಯಾಯಾಲಯಗಳಿಂದ ಅನ್ವಯಗೊಳಿಸಲಾಗಿ, ಜೊತೆಗೆ ’ಪ್ರತ್ಯೇಕವಾದ ಮತ್ತು ಹೆಚ್ಚು ಒಳಗೊಳ್ಳದೆ ಹೋದ’ ಅಲ್ಪಸಂಖ್ಯಾತರ ಹಕ್ಕುಗಳೊಂದಿಗೆ, ಈ ಎಲ್ಲರ ಹಕ್ಕುಗಳನ್ನು ಪರಿಣಾಮಕಾರಿಯಾಗುವಂತೆ ಮಾಡುವುದು. ಇಂತಹ ಒಂದು ಅಲ್ಪಸಂಖ್ಯಾತ ಸಮುದಾಯ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟಿದೆ, ಈ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕುಗಳ ಸುಪರ್ದುದಾರನಾಗಿದೆ. ಈ ಮೂಲಭೂತ ಹಕ್ಕುಗಳು ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಿಲ್ಲ. ಹಾಗೂ ಸಾಮಾಜಿಕ ನೈತಿಕತೆಯ ವಿಷಯಗಳಲ್ಲಿ ಯಾವುದು ಸಾಂಪ್ರದಾಯಿಕ ಎಂಬುದನ್ನು ತಿಳಿಸಲು ಬಹುಸಂಖ್ಯಾತವಾದಿ ಸರಕಾರಗಳಿಗೆ ಅವಕಾಶವಿರುವುದಿಲ್ಲ. ಭಾರತದಲ್ಲಿ
ಸಂವಿಧಾನಿಕತೆಯ ಬ್ರಹ್ಮಾಂಡದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯವು ಉತ್ತರ ನಕ್ಷತ್ರ ಇದ್ದಂತೆ. ಸಂವಿಧಾನಿಕ ನೈತಿಕತೆಯು ಎಂದಿಗೂ ಬೇರೆ ಬೇರೆ ಬಹುಸಂಖ್ಯಾತವಾದಿ ಆಳ್ವಿಕೆಗಳ ಮೇಲೆ ಹಾಗೂ ಸಾಮಾಜಿಕ ನೈತಿಕತೆಯನ್ನು ಬದಲಿಸುವ ನಿರ್ದಿಷ್ಟ ನೋಟಗಳನ್ನು ಹೇರುವುದರ ಮೇಲೆ ಜಯ ಸಾಧಿಸುತ್ತದೆ”.

ಮೂಲಭೂತ ಹಕ್ಕುಗಳ ಅಧ್ಯಾಯವನ್ನು ’ಉತ್ತರ ನಕ್ಷತ್ರ’ ಎಂದು ನೋಡುವ ನಾರಿಮನ್ ಅಂತಹ ನ್ಯಾಯಾಧೀಶರು ನಮಗೆ ಬೇಕಿದ್ದಾರೆ ಹಾಗೂ ನಮ್ಮ ಸಂವಿಧಾನ ಹೇಳುತ್ತದೆ ಎಂಬ ಕಾರಣಕ್ಕೆ ಬಹುಸಂಖ್ಯಾತರು ಏನೇ ಅಂದುಕೊಳ್ಳಲಿ ಅಲ್ಪಸಂಖ್ಯಾತರಿಗೆ ಘನತೆ ಮತ್ತು ತನ್ನತನ ರಕ್ಷಿಸಲು ಗಟ್ಟಿಯಾಗಿ ನಿಲ್ಲುವ ನ್ಯಾಯಾಧೀಶರ ಅಗತ್ಯ ಖಂಡಿತವಾಗಿಯೂ ಇದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪರ್ಯಾಯ ಕಾನೂನುವೇದಿಕೆ (ಎಎಲ್‌ಎಫ್‌ನ) ಸ್ಥಾಪಕ ಸದಸ್ಯರು


ಇದನ್ನೂ ಓದಿ: RSS ತಾಲಿಬಾನ್‌ನಂತೆ ಆಡಳಿತ ನಡೆಸಲು ಬಯಸುತ್ತದೆ: ನಟ ಚೇತನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...