ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಆಂದೋಲನವು ಶನಿವಾರ ತನ್ನ ನೂರನೇ ದಿನಕ್ಕೆ ಕಾಲಿಡುತ್ತಿದೆ. ಈ ಹಿನ್ನಲೆಯಲ್ಲಿ ರೈತ ಸಂಘಗಳ ಮುಖಂಡರು ತಮ್ಮ ಚಳುವಳಿ ಮುಗಿದಿಲ್ಲ, ಇದು ಇನ್ನೂ ತೀವ್ರಗೊಳ್ಳುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ರೈತ ಆಂದೋಲನವು ಏಕತೆಯ ಸಂದೇಶವನ್ನು ರವಾನಿಸಿದ್ದು, ರಾಜಕೀಯವಾಗಿ ಮರಳಿ ರೈತರತ್ತ ನೋಡುವಂತೆ ಮಾಡಿದೆ ಎಂದು ಅವರು ಶುಕ್ರವಾರ ಹೇಳಿದ್ದಾರೆ.
ಮೂರು ತಿಂಗಳಿನಿಂದ, ಸಿಂಗು, ಟಿಕ್ರಿ ಮತ್ತು ಗಾಜಿಪುರದ ಗಡಿಗಳು, ದೇಶದ ವಿವಿಧ ಭಾಗಗಳ, ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ಸಾವಿರಾರು ರೈತರು ಆಕ್ರಮಿಸಿಕೊಂಡಿರುವ ಪಟ್ಟಣಗಳಾಗಿ ಮಾರ್ಪಟ್ಟಿವೆ.
ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ರಾಕೇಶ್ ಟಿಕಾಯತ್ ಪ್ರತಿಭಟನೆ ಅಗತ್ಯವಿರುವವರೆಗೂ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿ ವಿರುದ್ಧ ಅಭಿಯಾನಕ್ಕೆ ಮುಂದಾದ ದೆಹಲಿ ರೈತ ಮುಖಂಡರು
“ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಸರ್ಕಾರವು ನಮ್ಮ ಮಾತುಗಳನ್ನು ಆಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ” ಎಂದು ಚಳವಳಿಯ ಮುಂಚೂಣಿಯಲ್ಲಿರುವ ನಾಯಕರಾದ ಟಿಕಾಯತ್ ತಿಳಿಸಿದ್ದಾರೆ.
ಸರ್ಕಾರ ಮತ್ತು ರೈತ ಸಂಘಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ, ಒಮ್ಮತಕ್ಕೆ ಬರಲು ವಿಫಲರಾಗಿದ್ದಾರೆ. ಇದುವರೆಗೂ ಒಟ್ಟು ಹನ್ನೊಂಡು ಸುತ್ತಿನ ಮಾತುಕತೆಗಳು ನಡೆದಿವೆ.
ಸೆಪ್ಟೆಂಬರ್ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಕೇಂದ್ರವು ಹೇಳುತ್ತಿದ್ದು, ಅದು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪ್ರತಿಪಾದಿಸಿದೆ.
ಈ ಹೊಸ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಯನ್ನು ಕಿತ್ತು ಹಾಕುತ್ತದೆ ಮತ್ತು “ಮಂಡಿ” (ಸಗಟು ಮಾರುಕಟ್ಟೆ) ವ್ಯವಸ್ಥೆ ಇಲ್ಲವಾಗಲು ದಾರಿ ಮಾಡಿಕೊಟ್ಟಂತಾಗುತ್ತವೆ ಎಂಬ ಆತಂಕವನ್ನು ಪ್ರತಿಭಟನಾ ನಿರತ ರೈತರು ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರ ಪ್ರಕಾರ, ಶನಿವಾರ ತನ್ನ 100 ನೇ ದಿನವನ್ನು ಪೂರ್ಣಗೊಳಿಸಲಿರುವ ಆಂದೋಲನವು ಪ್ರತಿಭಟನೆಯ ತಕ್ಷಣದ ವ್ಯಾಪ್ತಿಯನ್ನು ಮೀರಿ ಹೆಚ್ಚಿನದನ್ನು ಸಾಧಿಸಿದ್ದು, ಇದು ರೈತರಲ್ಲಿ ರಾಷ್ಟ್ರವ್ಯಾಪಿ ಐಕ್ಯತೆಯನ್ನು ಹುಟ್ಟುಹಾಕಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ