ಟೊಯೊಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ದರ್ಪದ ವಿರುದ್ದ ಅಲ್ಲಿನ ಕಾರ್ಮಿಕರು ನಡೆಸುತ್ತಿರುವ ಹೋರಾಟ 53 ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಸಾಮಾಜಿಕ ಹೋರಾಟಗಾರರಾದ ಎಸ್.ಆರ್. ಹಿರೇಮಠ್ ಕಾರ್ಮಿಕರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಕ್ತ ಕೊಟ್ಟೇವು-ಸ್ವಾಭಿಮಾನ ಬಿಡೆವು: 50 ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಮಿಕರ ಹೋರಾಟ!
ಪ್ರತಿಭಟನಾ ನಿರತ ಕಾರ್ಮಿಕರನ್ನು ಉದ್ದೇಶಿಸಿ ಮಾಡನಾಡಿದ ಅವರು, “ಸಾಂವಿಧಾನಿಕ ಹಕ್ಕಾಗಿರುವ ಗೌರವಯುತ ಬದುಕಿಗಾಗಿ ನಡೆಯುತ್ತಿರುವ ಕಾರ್ಮಿಕ ಸಂಘದ ಹೋರಾಟವು ಎಲ್ಲಾ ರೀತಿಯಲ್ಲಿಯೂ ನ್ಯಾಯಯುತವಾಗಿದ್ದು, ಕಾರ್ಮಿಕರ ಸುದೀರ್ಘ ಅಹಿಂಸಾತ್ಮಕ ಹೋರಾಟ ಪ್ರಶಂಸನಿಯವಾಗಿದೆ. ಹಾಗೆ ಟೊಯೊಟಾ ಆಡಳಿತ ಮಂಡಳಿಯು ಕಾರ್ಮಿಕ ಸಂಘದ ಮುಖಂಡರುಗಳ ಜೊತೆಗೆ ಮಾತನಾಡಿ ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ನ್ಯಾಯಯುತವಾಗಿ ಇಬ್ಬರೂ ಒಪ್ಪುವ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು” ಎಂದು ಅವರು ಆಗ್ರಹಿಸಿದರು.
“ಎಲ್ಲಾ ಕಡೆಯಲ್ಲೂ ಹಕ್ಕಿಗಾಗಿ ಹೋರಾಟ ನಡೆಯುತ್ತಿರುವ ಈ ಸಮಯದಲ್ಲಿ ನಿಮ್ಮ ಹೋರಾಟವು ಅದರ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದೆ ಧೃಡ ಸಂಕಲ್ಪದಿಂದ ಇದ್ದರೆ ಜಯ ದೊರೆಯುವುದು. ಹಿಂಸೆಯ ಮಾರ್ಗವು ಯಾರಿಗೂ ಒಳ್ಳೆಯದಲ್ಲ. ಎಲ್ಲಾ ರೀತಿಯಲ್ಲಿಯೂ ನಿಮಗೆ ಬೆಂಬಲವಾಗಿರುತ್ತೇವೆ. ರೈತ-ಕಾರ್ಮಿಕ-ದಲಿತರ ಐಕ್ಯ ಹೋರಾಟದ ಮೂಲಕ ನಮ್ಮ ಒಗ್ಗಟ್ಟನ್ನು ತೋರಿಸಿದ್ದೇವೆ. ಮುಂದೆಯೂ ಇದೇ ರೀತಿ ಅಹಿಂಸಾತ್ಮಕ ಹೋರಾಟದ ಮೂಲಕ ಯಶಸ್ವಿ ಆಗೋಣ” ಎಂದು ಕರೆ ಕೊಟ್ಟರು.
ಸಭೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನ ಭಟ್ಟರಹಳ್ಳಿ, RTI ಕಾರ್ಯಕರ್ತರಾದ ಕಂಚನ ಹಳ್ಳಿ ರವಿಕುಮಾರ್ ಕೂಡಾ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಟೊಯೋಟಾ ಕಾರ್ಮಿಕರು