ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ ಮೈಸೂರು-ಚೆನ್ನೈ ವಂದೇಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನೆಯಾದ ಒಂದೇ ವಾರದಲ್ಲಿ ಕರುವಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಚಲಿಸುವ ವಂದೇ ಭಾರತ್ ರೈಲು ಗುರುವಾರ ಅರಕ್ಕೋಣಂ ಬಳಿ ಕರುವಿಗೆ ಡಿಕ್ಕಿ ಹೊಡೆದಿದ್ದು, ಕರು ಸಾವನ್ನಪ್ಪಿದೆ.
ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘಟನೆ ನಂತರ ರೈಲನ್ನು ಎರಡು ನಿಮಿಷಗಳ ಕಾಲ ನಿಲ್ಲಿಸಿ ತಪಾಸಣೆ ಮಾಡಿ ಚೆನ್ನೈಗೆ ಮತ್ತೆ ಪ್ರಯಾಣ ಮುಂದುವರೆಸಿದೆ ಎಂದು ಅದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲುಮಲೈ ಮಾತನಾಡಿ, “ಕರುವಿನ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣ ದಾಖಲಿಸಿ ಭಾರಿ ದಂಡ ವಿಧಿಸಲು ಮತ್ತು ಜಾನುವಾರುಗಳನ್ನು ಹಳಿಗಳಿಗೆ ಪ್ರವೇಶಿಸದಂತೆ ಜನರಿಗೆ ಎಚ್ಚರಿಕೆ ನೀಡಲು ರೈಲ್ವೆ ಇಲಾಖೆ ಯೋಜಿಸುತ್ತಿದೆ” ಎಂದು ಹೇಳಿದ್ದಾರೆ.
ರೈಲ್ವೆ ಕಾಯಿದೆ 1989 ರ ನಿಬಂಧನೆಗಳ ಪ್ರಕಾರ, ಜಾನುವಾರುಗಳ ಮಾಲೀಕರು ಸೆಕ್ಷನ್ 154 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ. ಉದ್ದೇಶಪೂರ್ವಕ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡಿರುವುದಕ್ಕೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಇದನ್ನೂ ಓದಿ: ವಂದೇಭಾರತ್ ಮೈಸೂರು-ಬೆಂಗಳೂರು ಪ್ರಯಾಣ; 5 ನಿಮಿಷಕ್ಕಾಗಿ ₹415 ಹೆಚ್ಚುವರಿ ಪಾವತಿಸಿ!
ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಪ್ರಯಾಣಿಸುವ ಈ ರೈಲನ್ನು ಪ್ರಧಾನಿ ಮೋದಿ ಒಂದು ವಾರಗಳ ಹಿಂದೆ ಬೆಂಗಳೂರಿನಲ್ಲಿ ಉದ್ಘಾಟಿಸಿದ್ದರು. ಪ್ರಧಾನಿ ಬೆಂಗಳೂರಿನಲ್ಲಿ ಉದ್ಘಾಟಿಸಿರುವ ವಂದೇಭಾರತ್ ಸರಣಿಯ ಈ ರೈಲು ದೇಶದ ಐದನೇ ಮತ್ತು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಾಗಿದೆ. ಅಕ್ಟೋಬರ್ನಿಂದ ವಂದೇ ಭಾರತ್ ರೈಲಿಗೆ ಇದು ಐದನೇ ಅಪಘಾತವಾಗಿದೆ.