Homeಕರ್ನಾಟಕಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳನ್ನು ಪತ್ರಕರ್ತ ‘ನವೀನ್‌ ಸೂರಿಂಜೆ’ ಚಿತ್ರಿಸಿರುವುದು ಹೀಗೆ...

- Advertisement -
- Advertisement -

ಕೋಮುವಾದದ ಪ್ರಯೋಗ ಶಾಲೆ ಎಂದೇ ಕುಖ್ಯಾತವಾಗಿರುವ ಕರ್ನಾಟಕದ ಕರಾವಳಿಯ ಕುರಿತು 2021ರಲ್ಲಿ ಒಂದು ಸಮೀಕ್ಷೆ ಮಾಡಲಾಗಿತ್ತು. ಪೀಪಲ್ಸ್‌ ಯೂನಿಯನ್ ಫಾರ್‌ ಲಿಬರ್ಟೀಸ್‌ ಕರ್ನಾಟಕ, ಆಲ್‌ ಇಂಡಿಯಾ ಲಾಯರ್ಸ್ ಅಸೋಸಿಯೇಷನ್‌ ಫಾರ್‌ ಜಸ್ಟೀಸ್‌, ಆಲ್‌ ಇಂಡಿಯಾ ಪೀಪಲ್ಸ್ ಫೋರಮ್‌‌ ಮತ್ತು ಗೌರಿ ಲಂಕೇಶ್‌ ನ್ಯೂಸ್‌.ಕಾಂ ಬಿಡುಗಡೆ ಮಾಡಿರುವ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಹೊರಗೆಡವಿತ್ತು. ಜನವರಿ 2021ರಿಂದ ಸೆಪ್ಟೆಂಬರ್‌ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿಕ ಘಟನೆಗಳನ್ನು ವಿಶ್ಲೇಷಿಸಿದ್ದ ಈ ವರದಿಯು ಕೇವಲ ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣಗಳು ನಡೆದಿವೆ ಎಂದು ತಿಳಿಸಿತ್ತು. ಕೇವಲ 8 ತಿಂಗಳಲ್ಲಿ ಇಷ್ಟಾದರೆ, ಬಾಬ್ರಿ ಮಸೀದಿ ದ್ವಂಸದಿಂದೀಚೆಗೆ ಆಗಿರುವ ಘಟನೆಗಳೆಷ್ಟು? ಕರಾವಳಿಯಲ್ಲಿ ಹರಿದಿರುವ ನೆತ್ತರೆಷ್ಟು?- ಕಲ್ಪಿಸಿಕೊಂಡರೂ ನಡುಗಿ ಹೋಗುತ್ತೇವೆ.

‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಮುಖ್ಯಮಂತ್ರಿಯೇ ಸಮರ್ಥಿಸುವ ಈ ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಿತ್ಯ ಒಂದಲ್ಲ ಒಂದು ಕೋಮುವ್ಯಾದಿ ಬಾಧಿಸತೊಡಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ಭೀತ, ಮಾನವೀಯ ಹಾಗೂ ಸೃಜನಶೀಲ ಪತ್ರಕರ್ತನೊಬ್ಬ ತನ್ನ ಸುತ್ತಲಿನ ಕೋಮು ಸಂಘರ್ಷವನ್ನು ದಾಖಲಿಸಿದರೆ, ಅದನ್ನು ಓದಿದ ಸಹೃದಯರು ತಲ್ಲಣಿಸದೆ ಇರುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪತ್ರಕರ್ತ ನವೀನ್‌ ಸೂರಿಂಜೆ ಅವರ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯು ಕರಾವಳಿ ಕರ್ನಾಟಕದ ಸುಮಾರು ಒಂದೂವರೆ ದಶಕಗಳ ಕೋಮು ಚರಿತ್ರೆಯನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಬಿಚ್ಚಿಡುತ್ತದೆ. ಇಲ್ಲಿ ದಾಖಲಾಗಿರುವ ಪ್ರತಿ ಘಟನೆಗೂ ದಾಖಲೆಗಳಿವೆ. ಪ್ರತ್ಯಕ್ಷದರ್ಶಿಗಳ ವಿವರಣೆಗಳಿವೆ.

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿ ದಾಖಲಿಸಲಾಗಿರುವ ಹತ್ತಾರು ಪ್ರಕರಣಗಳು ಮಾತನಾಡುವುದು ‘ಕೋಮು ದ್ವೇಷ’ದ ಕುರಿತು. ಚಿತ್ರಣಗಳು ಬೇರೆಯಾದರೂ ಕೋಮುದ್ವೇಷಗಳ ಹಿಂದಿರುವ ಕ್ರೌರ್ಯದ ಮಾದರಿ, ಕೇಸರಿಕರಣಗೊಂಡ ಪೊಲೀಸ್ ವ್ಯವಸ್ಥೆಯ ದರ್ಪ, ದೌರ್ಜನ್ಯ, ಅಮಾನವೀಯತೆ ಮಾತ್ರ ಭಿನ್ನವೇನಲ್ಲ. ಕರಾವಳಿಯ ಕೋಮುವಾದದ ನಡುವೆ ಚರ್ಚೆಯಾಗದೆ ಉಳಿದಿರುವ ಹಸಿವು, ದಾರಿದ್ರ್ಯವನ್ನು ನಾವು ಗಂಭೀರವಾಗಿ ಪರಿಗಣಿಸಲೇ ಇಲ್ಲ.

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿನ ಅಂಶಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು:

  1. ಕೇಸರೀಕರಣಗೊಂಡ ಪೊಲೀಸರು ಮತ್ತು ಮಾನವೀಯ ಪೊಲೀಸರು
  2. ಮತೀಯ ಗೂಂಡಾಗಿರಿ
  3. ಸಂಘ ಪರಿವಾರದ ಹಿಪೋಕ್ರಸಿ ಅಥವಾ ಬೂಟಾಟಿಕೆ/ ಸಂಸ್ಕೃತಿ ರಕ್ಷಕರ ಮನೋವಿಕೃತಿ
  4. ಕರಾವಳಿ ನೆಲದ ನಿಜದ ಗುಣ
  5. ಹಿಂದುತ್ವದ ಜಾಲದಲ್ಲಿ ಬಲಿಪಶುವಾಗುತ್ತಿರುವ ಬ್ರಾಹ್ಮಣೇತರರು
  6. ಮನುಷ್ಯತ್ವದ ಉಳಿವಿಗಾಗಿ ಮಿಡಿಯುತ್ತಿರುವ ಹೃದಯಗಳು
  7. ಕೋಮುವಾದದಾಚೆಗಿನ ಕರಾವಳಿ
  8. ನವೀನ್‌ ಸೂರಿಂಜೆಯ ಆತ್ಮಕತೆ
  9. ವರದಿಗಾರಿಕೆ ಮೀರಿದ ಚಿತ್ರಕತೆ ಶೈಲಿ

– ಹೀಗೆ ವಿಂಗಡಿಸಿಕೊಂಡು ವಿಶ್ಲೇಷಿಸುವುದು ಸೂಕ್ತವೆನಿಸುತ್ತದೆ.

1. ಮಾನವೀಯ ಪೊಲೀಸರು ಮತ್ತು ಕೇಸರೀರಣಗೊಂಡ ಪೊಲೀಸರು

‘ನೇತ್ರಾವತಿಯಲ್ಲಿ ನೆತ್ತರು’ ಹರಿಯದೆ ಅಷ್ಟೋ ಇಷ್ಟೋ ಅಮಾಯಕರು ಪಾರಾಗುವಲ್ಲಿ ಪೊಲೀಸ್‌ ವ್ಯವಸ್ಥೆಯ ಪಾತ್ರವೂ ಇದೆ. ಆದರೆ ಇಲ್ಲಿನ ಬಹುತೇಕ ಪ್ರಕರಣಗಳ ಕ್ರೌರ್ಯದ ಹಿಂದೆ ಪೊಲೀಸರು ನೇರ ಭಾಗೀದಾರರಾಗಿದ್ದಾರೆ. ಮತೀಯ ಗೂಂಡಾಗಿರಿ ಮಾಡಿದವರು ಕಣ್ಣೆದುರೇ ಇದ್ದರೂ ಪ್ರಕರಣ ದಾಖಲಿಸದೆ ಹಲ್ಲೆಗೊಳಗಾದರನ್ನೇ ಅಪರಾಧಿಯಾಗಿ ನೋಡುವ ಪೊಲೀಸರೇ ಇಲ್ಲಿನ ನಿಜವಾದ ಪೀಡಕರು. ಹಿಂದುತ್ವ ಪಡೆಗಳ ಕ್ರೌರ್ಯಗಳಿಗೆ ಸಾಥ್ ನೀಡಿದ್ದು ಕೇಸರಿಕರಣಗೊಂಡ ಪೊಲೀಸರ ಇದೇ ಅಕ್ರಮ ಕೂಟ.

ಇದನ್ನೂ ಓದಿರಿ: 8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

ಯಾವುದೇ ತಪ್ಪು ಮಾಡದೆ, ಬಜರಂಗದಳ ಗೂಂಡಾಪಡೆಯಿಂದ ಪೆಟ್ಟು ತಿದ್ದು ಸಾವಿನ ದವಡೆಯಲ್ಲಿ ಸಿಲುಕಿದ ಚಾಲಕ ಅಬ್ದುಲ್‌ ಸಮೀರನನ್ನು ರಕ್ಷಿಸದೆ ಗೋವುಗಳೇ ಮುಖ್ಯವೆಂದು ಭಾವಿಸುವ ಪೊಲೀಸರು, ಬಲಪಂಥೀಯರ ಪಾಲಿಗೆ ಸಿಗಂ ಎಂದೇ ಬಿಂಬಿತವಾಗಿದ್ದ ಕಂಕನಾಡಿ ಪೊಲೀಸ್ ಠಾಣೆಯ ಎಸ್‌ಐ ಅಮಾಯಕ ವೃದ್ಧರ ಮೇಲೆ ನಡೆಸಿದ ಹೇಯ ಕೃತ್ಯ, ಅಧಿಕೃತವಾಗಿ ಪರವಾನಗಿ ಪಡೆದು ದನದ ವ್ಯಾಪಾರ ಮಾಡುತ್ತಿದ್ದ ಕಬೀರ್‌ನನ್ನು ಬಜರಂಗಿ ಪೊಲೀಸ್‌ ಶೂಟೌಟ್ ಮಾಡಿದ್ದು, ದನದ ವ್ಯಾಪಾರ ಮಾಡುತ್ತಿದ್ದ ಇಳಿ ವಯಸ್ಸಿನ ಹುಸೇನಬ್ಬರನ್ನು ಕೊಂದ ಪೊಲೀಸರು, ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಅಣ್ಣನನ್ನು ಹಿಂದೂ ಯುವತಿ ಕೊಲೆ ಮಾಡಿಸಿದ್ದನ್ನು ಮುಸ್ಲಿಮರ ತಲೆಗೆ ಕಟ್ಟಿ ಹಿಂದುತ್ವ ಗುಂಪುಗಳು ಮಾಡಿದ ರಾದ್ಧಾಂತದ ಬಳಿಕ ಪೊಲೀಸರು ಅಮಾಯಕ ಮುಸ್ಲಿಮರಿಗೆ ಚಿತ್ರ ಹಿಂಸೆ ನೀಡಿದ್ದು, ಮಾರ್ನಿಂಗ್ ಮಿಸ್ಟ್‌ ಎನ್ನುವ ಹೋಮ್‌ ಸ್ಟೇ ಮೇಲೆ ಸಂಘಪರಿವಾರ ನಡೆಸಿದ ದಾಳಿಯಲ್ಲಿ ಭಾಗಿಯಾದ ಇನ್‌ಸ್ಪೆಕ್ಟರ್‌- ಹೀಗೆ ಅನೇಕ ಪ್ರಕರಣಗಳ ಹಿಂದೆ ಪೊಲೀಸರೇ ಸಂವಿಧಾನ ಬಾಹಿರ ಶಕ್ತಿಗಳಿಗೆ ಬೆಂಬಲ ನೀಡುವುದನ್ನು ನವೀನ್‌ ದಾಖಲಿಸಿದ್ದಾರೆ. ಪೂರ್ವಗ್ರಹ ಪೀಡಿತ, ಮತೀಯವಾದಿ ಪೊಲೀಸರೇ ಕರಾವಳಿಯ ನಿಜವಾದ ವಿಲನ್‌ಗಳು.

ಇಷ್ಟೆಲ್ಲದರ ನಡುವೆ ಕೇಸರಿಧಾರಿಗಳ ಹೆಡೆಮುರಿ ಕಟ್ಟಿದ ಕೆಲವು ಪೊಲೀಸರನ್ನು ಕರಾವಳಿ ಕಂಡಿದೆ. ಇಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಚಿತ್ರಣವೂ ಇದೆ. ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಬಜರಂಗದಳದವರಿಂದ ರಕ್ಷಿಸಲು ಸಹಕರಿಸಿದ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್‌, ಹಿಂದೂ ಹುಡುಗಿ, ಮುಸ್ಲಿಂ ಹುಡುಗ ಮಾತನಾಡಿದ್ದಕ್ಕೆ ಪ್ರಾಂಶುಪಾಲರಿಗೆ ಬೆದರಿಕೆ ಹಾಕುತ್ತಿದ್ದ ಸಂಘಿಗಳಿಗೆ ಎರ್‍ರಾಬಿರ್‍ರಿ ಲಾಠಿ ರುಚಿ ತೋರಿಸಿದ ಪ್ರೊಬೆಷನರಿ ಡಿವೈಎಸ್‌ಪಿ ಅಮಿತ್ ಸಿಂಗ್‌… ಈ ಥರದ ಪ್ರಕರಣಗಳನ್ನೂ ಇಲ್ಲಿ ನೋಡಬಹುದು. ಆದರೆ ಪೊಲೀಸರು ತೋರಿದ ಔದಾರ್ಯಕ್ಕಿಂತ ಕ್ರೌರ್ಯವನ್ನೇ ಕರಾವಳಿ ಹೆಚ್ಚಾಗಿ ಕಂಡಿದೆ.

2. ಮತೀಯ ಗೂಂಡಾಗಿರಿ

ಧರ್ಮ ರಕ್ಷಣೆಯ ಹೆಸರಲ್ಲಿ, ಮತೀಯ ಗೂಂಡಾಗಿರಿ (ನೈತಿಕ ಪೊಲೀಸ್‌ಗಿರಿ) ನಡೆಸಿರುವ ಸಂಘಪರಿವಾರದ ಗೂಂಡಾ ಪಡೆಗಳ ನಿಜದರ್ಶನ ಈ ಕೃತಿಯಲ್ಲಾಗಿದೆ. ಹಿಂದೂ ಮುಸ್ಲಿಂ ಜೊತೆಗಿದ್ದರೆ ಸಹಿಸದೆ ಹಲ್ಲೆ ನಡೆಸುವುದು, ಮುಸ್ಲಿಂ ಯುವಕರನ್ನು ಥಳಿಸುವುದು ನಿತ್ಯದ ವರದಿಗಳಾಗಿವೆ. ಚರ್ಚ್‌, ಹೋಮ್‌ ಸ್ಟೇಗಳ ಮೇಲೆ ನಡೆದ ಗೂಂಡಾಗಿರಿ ಪ್ರಕರಣಗಳು ಇದಕ್ಕೆ ಸಾಕ್ಷಿ.

3. ಸಂಘ ಪರಿವಾರದ ಹಿಪೋಕ್ರಸಿ ಅಥವಾ ಬೂಟಾಟಿಕೆ/ ಸಂಸ್ಕೃತಿ ರಕ್ಷಕರ ಮನೋ ವಿಕೃತಿ

‘ಎಲ್ಲಿ ಹೆಣ್ಣನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರುಗಳು ನೆಲಸಿರುತ್ತಾರೆ’, ‘ಹಿಂದೂ ನಾವೆಲ್ಲ ಒಂದು’, ‘ಗೋವು ನಮ್ಮ ತಾಯಿಯ ಸಮಾನ, ಅವುಗಳನ್ನು ರಕ್ಷಿಸಬೇಕು’- ಎಂದೆಲ್ಲ ಬೊಬ್ಬೆ ಹಾಕುವ ಸಂಘಪರಿವಾರ ವಾಸ್ತವದಲ್ಲಿ ಬೇರೆಯೇ ರೀತಿ ಇದೆ ಎಂಬುದು ಹಲವು ಪ್ರಕರಣಗಳಲ್ಲಿ ಬಯಲಾಗಿದೆ.

ಮಾರ್ನಿಂಗ್ ಮಿಸ್ಟ್‌ ಹೋಮ್‌ ಸ್ಟೇ ಮೇಲೆ ಕೇಸರಿ ಪಡೆ ದಾಳಿ ಮಾಡುತ್ತದೆ. ಬರ್ತ್‌ ಡೇ ಪಾರ್ಟಿಗೆ ಸೇರಿದ್ದ ಯುವಕ ಯುವತಿಯರನ್ನು ಅಮಾನುಷವಾಗಿ ಥಳಿಸಲಾಗುತ್ತದೆ. ಹಲ್ಲೆಗೊಳಗಾದವರು ನಂತರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಒಂದು ವೇಳೆ ಅಲ್ಲಿ ಮಾಧ್ಯಮದವರು ಇಲ್ಲದಿದ್ದರೆ ಯುವತಿಯರನ್ನು ಈ ಗೂಂಡಾಗಳು ರೇಪ್‌ ಮಾಡುತ್ತಿದ್ದರು” ಎನ್ನುತ್ತಾರೆ.

ಇದನ್ನೂ ಓದಿರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣ: ಪೊಲೀಸ್ ವೈಫಲ್ಯ

ಕೊಟ್ಟಾರಿ ಸಮುದಾಯದ ಚೈತನ್ಯ ಎಂಬ ಯುವತಿ, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೋದಾಗ ಇದೇ ಬಜರಂಗಿಗಳು ಅಡ್ಡಿಪಡಿಸುತ್ತಾರೆ. ಹಿಂದೂ ನಾವೆಲ್ಲ ಒಂದು ಎನ್ನುವ ಸಂಘಟನೆಯ ನಿಜರೂಪವಿದು. ಇನ್ನು ಗೋರಕ್ಷಣೆ ಮಾಡಬೇಕೆನ್ನುವ ಬಜರಂಗದವರೇ ವಾಸ್ತವದಲ್ಲಿ ಹಲವು ಪ್ರಕರಣಗಳಲ್ಲಿ ದನಗಳ್ಳರಾಗಿರಿದ್ದಾರೆ. ಸಂಘಪರಿವಾರದವರೇ ನಡೆಸುವ ಈ ದಂಧೆಯ ಕುರಿತು ಹಲವು ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿರುವುದನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಮತ್ತೊಂದು ಮುಖ್ಯವಾದ ಸಂಗತಿ ಇಲ್ಲಿ ಪ್ರಸ್ತಾಪವಾಗಿದೆ. ಸಂಸ್ಕೃತಿ ರಕ್ಷಣೆ ಎನ್ನುವವರು ವಾಸ್ತವದಲ್ಲಿ ಬಂಡವಾಳಶಾಹಿಗಳ  ಕೂಲಿಯಾಳುಗಳಾಗಿದ್ದಾರೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂ ಸ್ವಾಧೀನ ಮಾಡುವುದರ ವಿರುದ್ಧದ ಹೋರಾಟದಲ್ಲಿ ಪೇಜಾವರ ಶ್ರೀಗಳು ಭಾಗಿಯಾಗಿದ್ದಾಗ ಅವರ ಮೇಲುವಸ್ತ್ರವನ್ನು ಕೆಳಗೆ ಬೀಳಿಸಿದ ಗೂಂಡಾಗಳು, ಬಜಪೆಯ ನೆಲ್ಲದಡಿ ಮತ್ತು ಗುತ್ತು ಮನೆಯನ್ನು ದೈವಸ್ಥಾನ ಸಮೇತ ನೆಲಸಮ ಮಾಡಲು ಮುಂದಾದ ಅಧಿಕಾರಿಗಳಿಗೆ ಹಿಂದೂ ಜಾಗರಣಾ ವೇದಿಕೆಯ ಸುಭಾಷ್‌ ಪಡೀಲ್‌ ಬೆಂಬಲ ನೀಡುವುದು- ಇವೆಲ್ಲವೂ ಕಾರ್ಪೋರೇಟ್ ಮತ್ತು ಹಿಂದುತ್ವ ಪಡೆಯ ನಡುವಿನ ಸಂಬಂಧಗಳ ಕುರಿತು ಮಾತನಾಡುತ್ತವೆ.

4. ಕರಾವಳಿ ನೆಲದ ನಿಜದ ಗುಣ

ದಶಕಗಳ ಹಿಂದಕ್ಕೆ ಹೋದರೆ ಕರಾವಳಿ ಭಿನ್ನ ಸಂಸ್ಕೃತಿ ಹಾಗೂ ಕೋಮು ಸೌಹಾರ್ದತೆಯ ಬೀಡಾಗಿತ್ತು. ಆದರೆ ಇತ್ತೀಚಿನ ದಶಕಗಳಲ್ಲಿ ಚಿತ್ರಣವೇ ಬದಲಾಗಿದೆ. ಇಷ್ಟೆಲ್ಲದರ ನಡುವೆ ಕರಾವಳಿ ನೆಲದ ನಿಜವಾದ ಅಸ್ಮಿತೆಯ ಪ್ರಕರಣಗಳು ವರದಿಯಾಗಿವೆ. ಅನ್ಯಾಯಗಳ ವಿರುದ್ಧ ಮಾತನಾಡುವ ಸಂಘಟನೆಗಳಿವೆ. ಹಿಂದೂ ಮುಸ್ಲಿಂ ಗಲಭೆಯ ಕ್ಷಣಗಳಲ್ಲಿ ಮುಸ್ಲಿಂ ಸ್ನೇಹಿತರನ್ನು ರಕ್ಷಿಸಲು ಹೋಗಿ ಹತರಾದ ಹಿಂದೂಗಳಿದ್ದಾರೆ. ತನ್ನ ಗೆಳೆಯ ಸಮೀವುಲ್ಲಾನನ್ನು ರಕ್ಷಿಸಲು ಹೋಗಿ ಹರೀಶ್‌ ಪೂಜಾರಿಯೇ ಕೊಲೆಯಾದ ಪ್ರಕರಣ, ವಿಶೇಷ ಆರ್ಥಿಕ ವಲಯ ಹೋರಾಟದ ವೇಳೆ ಪೇಜಾವರ ಶ್ರೀಗಳ ಪರ ನಿಂತ ಜಮಾತೇ ಇಸ್ಲಾಮೀ ಹಿಂದ್‌ ಯುವಕರು, ಪಾತಕಿಯಾದರೂ ಕೋಮು ಸಹಿಷ್ಣುವಾಗಿದ್ದ ಮಹಾನ್‌ ದೈವಭಕ್ತ ಗಣೇಶ್ ಶೆಟ್ಟಿಯು ಮಾಡೂರು ಯೂಸೆಫ್‌ನನ್ನು ರಕ್ಷಿಸಲು ಹೋಗಿ ಕೊಲೆಯಾಗಿದ್ದು… ಇವೆಲ್ಲವೂ ಕರಾವಳಿಯ ಅಳಿದುಳಿದ ಅಸ್ಮಿತೆಯ ಗುರುತುಗಳಾಗಿ ದಾಖಲಾಗಿವೆ.

5. ಹಿಂದುತ್ವದ ಜಾಲದಲ್ಲಿ ಬಲಿಪಶುವಾಗುತ್ತಿರುವ ಬ್ರಾಹ್ಮಣೇತರರು

ಕೋಮುದ್ವೇಷ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ ಬಿಲ್ಲವ, ಮೊಗವೀರ ಸಮುದಾಯದ ಯುವಕರ ಕುರಿತು ವಿಷಾದದ ಛಾಯೆ ಈ ಕೃತಿಯಲ್ಲಿದೆ. ಆದರೆ ಬ್ರಾಹ್ಮಣರ ಮಕ್ಕಳಾಗಲೀ, ಮುಖಂಡರಾಗಲೀ ಜೈಲಿಗೆ ಹೋದದ್ದು ಇಲ್ಲ.

ಇದನ್ನೂ ಓದಿರಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ಚರ್ಚ್‌ ದಾಳಿಯನ್ನು ಸಮರ್ಥಿಸಿ ಅಂದಿನ ಬಜರಂಗದಳ ರಾಜ್ಯಾಧ್ಯಕ್ಷರಾಗಿದ್ದ, ಶೂದ್ರ ಸಮುದಾಯಕ್ಕೆ ಸೇರಿದ ಮಹೇಂದ್ರ ಕುಮಾರ್‌, ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾಗಿದ್ದ, ಬ್ರಾಹ್ಮಣ ಸಮುದಾಯದ ಎಂ.ಬಿ.ಪುರಾಣಿಕ್‌ ಸುದ್ದಿಗೋಷ್ಠಿ ನಡೆಸುತ್ತಾರೆ. ಆದರೆ ಮಹೇಂದ್ರ ಕುಮಾರ್‌ ಮೇಲೆ ಮಾತ್ರ ಪ್ರಕರಣದ ದಾಖಲಾಗುತ್ತದೆ. ಶರತ್‌ ಮಡಿವಾಳನ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಪಾಲು ಕೂಡ ಇರುತ್ತದೆ. ಆದರೆ ಪ್ರಕರಣ ದಾಖಲಾಗುವುದು ಮಾತ್ರ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್‌, ಕೊಟ್ಟಾರಿ ಎಂಬ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್‌ ಪಂಪ್‌ವೆಲ್‌ ವಿರುದ್ಧ. ಬ್ರಾಹ್ಮಣರಾದ ಪ್ರಭಾಕರ್‌ ಭಟ್ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಹೇಗೆ ಸಂಘ ಪರಿವಾರದವರು ದಲಿತ, ಶೂದ್ರ ಸಮುದಾಯಗಳನ್ನು ಕಾಲಾಳುಗಳಾಗಿ ಬಳಸುತ್ತಿದ್ದಾರೆಂಬುದು ಈ ಪ್ರಕರಣಗಳಿಂದ ಸಾಬೀತಾಗುತ್ತದೆ.

6. ಮನುಷ್ಯತ್ವದ ಉಳಿವಿಗಾಗಿ ಮಿಡಿಯುವ ಹೃದಯಗಳು

ಕರಾವಳಿ ಎಷ್ಟೇ ಕೇಸರೀಕರಣವಾದರೂ ಅಮಾನವೀಯ ಕೃತ್ಯಗಳ ವಿರುದ್ಧ ಹೋರಾಡುತ್ತಿರುವ, ಮನುಷ್ಯತ್ವದ ಉಳಿವಿಗಾಗಿ ಶ್ರಮಿಸುತ್ತಿರುವ ಅನೇಕರು ಇಲ್ಲಿದ್ದಾರೆ. ವಕೀಲ ದಿನೇಶ್ ಹೆಗ್ಡೆ, ಮುನೀರ್‌ ಕಾಟಿಪಳ್ಳ, ವಿದ್ಯಾ ದಿನಕರ್‌- ಹೀಗೆ ಅನೇಕರ ಕ್ರಿಯಾಶೀಲತೆಯನ್ನು ನವೀನ್‌ ದಾಖಲಿಸಿದ್ದಾರೆ. ಅವುಗಳೆಲ್ಲದರಲ್ಲೂ ನವೀನ್ ಅವರ ಪಾತ್ರವೂ ಇದೆ. ಕೃತಿಯಲ್ಲಿ ಕೆಲವೇ ಮಂದಿಯ ಹೆಸರುಗಳು ಸಾಂಕೇತಿಕವಾಗಿ ದಾಖಲಾಗಿವೆ ಎಂದು ಭಾವಿಸಬಹುದು. ಕರಾವಳಿಯ ಉಳಿವಿಗಾಗಿ ಹೋರಾಡುತ್ತಿರುವ ಹಲವು ಹೃದಯಗಳು ನಮ್ಮ ನಡುವೆಯೇ ಇವೆ.

7. ಕೋಮುವಾದದಾಚೆಗಿನ ಕರಾವಳಿ

ಹಿಂದೂ ಮುಸ್ಲಿಂ ಬೈನರಿಯಾಚೆಗಿರುವ ಅಪರಾಧದ ಜಗತ್ತನ್ನು ನವೀನ್‌ ದಾಖಲಿಸಿದ್ದಾರೆ. ಹಸಿವು ತಾಳಲಾರದೆ ಮಕ್ಕಳನ್ನು ಮಾರಿದ ಘಟನೆಗಳು, ತುತ್ತು ಅನ್ನಕ್ಕಾಗಿ ಸದಾ ಜೈಲಿಗೆ ಸೇರುವ ದಲಿತ ವ್ಯಕ್ತಿ ಸಂಜೀವ ಮುಖಾರಿ, ಮುಟ್ಟಿನ ವೇಳೆ ಸ್ಯಾನಿಟರಿ ಪ್ಯಾಡ್ ಸಿಗದೆ ಒದ್ದಾಡುತ್ತಿರುವ ಮಹಿಳಾ ಕೈದಿಗಳು- ಇವೆಲ್ಲವೂ ಕೋಮುವಾದಾಚೆಯ ಕರಾವಳಿಯ ಅಪರಾಧ ಜಗತ್ತು. ಹಿಂದುತ್ವ ಎಂದು ನಿತ್ಯವೂ ಗಲಭೆ ಸೃಷ್ಟಿಸುವವರಿಗೆ ಕಾಣದ ಹಸಿವಿನ ಜಗತ್ತು ಇದು.

8. ನವೀನ್‌ ಸೂರಿಂಜೆಯವರ ಆತ್ಮಕತೆ

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯು ಕರಾವಳಿಯ ರಕ್ತಸಿಕ್ತ ಚರಿತ್ರೆಯ ದಾಖಲೆಯಷ್ಟೇ ಅಲ್ಲದೇ, ನವೀನ್‌ ಸೂರಿಂಜೆಯವರ ಆತ್ಮಕತೆಯಂತೆಯೂ ಭಾಸವಾಗುತ್ತದೆ. ಇಲ್ಲಿನ ಅನೇಕ ಪ್ರಕರಣಗಳನ್ನು ವರದಿ ಮಾಡುವಾಗ ನವೀನ್‌ ಆ ಘಟನೆಗಳ ಭಾಗವಾಗಿದ್ದಾರೆ. ಮಾರ್ನಿಂಗ್ ಮಿಸ್ಟ್‌ ಹೋಮ್‌ ಸ್ಟೇ ದಾಳಿಯ ಪ್ರಕರಣದ ಕುರಿತು ಹತ್ತಾರು ಪುಟಗಳಲ್ಲಿ ತಮ್ಮ ಅನುಭವಗಳನ್ನು ಸೂರಿಂಜೆ ಅವರು ದಾಖಲಿಸಿದ್ದಾರೆ. ವರದಿ ಮಾಡಿದ ಕಾರಣಕ್ಕೆ ಪೊಲೀಸರು ನಡೆಸಿದ ಪಿತೂರಿಗಳನ್ನು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಕರ್ನಾಟಕ ಪೊಲೀಸ್ ಆಕ್ಟ್‌-96 ದುರ್ಬಳಕೆ ಮಾಡಿಕೊಂಡ ಪೊಲೀಸ್ ವ್ಯವಸ್ಥೆಯನ್ನು ಜೈಲಿನಲ್ಲಿದ್ದುಕೊಂಡೇ ಗಮನಿಸಿರುವ ನವೀನ್‌, ಅಮಾಯಕರ ಬಿಡುಗಡೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಮಾಜದೊಂದಿಗೆ ನಿತ್ಯ ಒಡನಾಡುವ ಪತ್ರಕರ್ತನ ಬದುಕು ವೈಯಕ್ತಿಕತೆಯಾಚೆಗೆ ಸಾಮಾಜೀಕರಣಗೊಳ್ಳುವುದನ್ನು ಇಲ್ಲಿ ಗುರುತಿಸಬಹುದು.

9. ವರದಿಗಾರಿಕೆ ಮೀರಿದ ಚಿತ್ರಕತೆಯ ಶೈಲಿ

ಪ್ರತಿಯೊಂದು ಪ್ರಕರಣವು ಸರಳವಾಗಿ ಓದಿಸಿಕೊಂಡು ಹೋಗುವುದು ಈ ಕೃತಿಯ ವೈಶಿಷ್ಟ್ಯ ಎನ್ನಬಹುದು. ಇಲ್ಲಿ ದಾಖಲಾಗಿರುವ ಘಟನೆಗಳು ಮಾಮೂಲಿ ಪತ್ರಿಕಾ ವರದಿಗಳಾಗಿಲ್ಲ. ಪ್ರತಿ ಪ್ರಕರಣವನ್ನು ಸಮಗ್ರವಾಗಿ ಕಟ್ಟಿಕೊಡುವುದನ್ನು ಇಲ್ಲಿನ ಬಿಡಿ ಲೇಖನಗಳಲ್ಲಿ ಗುರುತಿಸಬಹುದು. ನವೀನ್‌ ಸೂರಿಂಜೆ ಅವರು ದೃಶ್ಯಮಾಧ್ಯಮದ ಪತ್ರಕರ್ತರೂ ಆಗಿರುವುದರಿಂದ ಪ್ರಕರಣಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಪ್ರತಿ ಪ್ರಕರಣವೂ ಕೊನೆಯವರೆಗೆ ಕುತೂಹಲವನ್ನು ಉಳಿಸಿಕೊಂಡು ಓದಿಸಿಕೊಳ್ಳುತ್ತವೆ. ಒಂದು ರೀತಿಯಲ್ಲಿ ಚಿತ್ರಕತೆಯ ನಿರೂಪಣಾ ಮಾದರಿ ಇಲ್ಲಿದೆ. ಸೃಜನಶೀಲ ಹಾಗೂ ಧೈರ್ಯವಂತ ಸಿನಿಮಾ ನಿರ್ದೇಶಕನ ಕೈಗೆ ಈ ಕೃತಿ ಸಿಕ್ಕಲ್ಲಿ ಹತ್ತಾರು ಕಿರುಚಿತ್ರಗಳನ್ನು, ಸಿನಿಮಾಗಳನ್ನು ಮಾಡುವಷ್ಟು ಸರಕು ಇಲ್ಲಿದೆ. ಪ್ರತಿ ವರದಿಯಲ್ಲೂ ಕಥನ ಶೈಲಿ ಮನೆ ಮಾಡಿದೆ.

ಕೊನೆಯದಾಗಿ…

ಆಗಿರುವ ತಪ್ಪನ್ನು ತಿದ್ದಿ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಈ ಕೃತಿ ಮಹತ್ವದ್ದಾಗಿದೆ. ‘ಕ್ರಿಯಾ ಮಾಧ್ಯಮ’ ಪ್ರಕಟಿಸಿರುವ ಈ ಕೃತಿಗೆ ನಿವೃತ್ತ ಎ.ಸಿ.ಪಿ. ಬಿ.ಕೆ.ಶಿವರಾಂ ಮುನ್ನುಡಿ ಬರೆದಿದ್ದಾರೆ. ನೇತ್ರಾವತಿಯಲ್ಲಿ ಹರಿದಿರುವ ನೆತ್ತರಿನಲ್ಲಿ ಪೊಲೀಸ್ ವ್ಯವಸ್ಥೆಯ ಪಾಲನ್ನು ಕಂಡು ಮರುಗಿದ್ದಾರೆ.

ಇದನ್ನೂ ಓದಿರಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಪೊಲೀಸ್ ಇಲಾಖೆಯನ್ನು ಮಾನವೀಯಗೊಳಿಸಲು ಯತ್ನಿಸುತ್ತಿದ್ದ ಸದಾ ಸಮಾನತೆಗಾಗಿ ತುಡಿಯುತ್ತಿದ್ದ ಐಪಿಎಸ್ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರಿಗೆ, ಕೋಮುವಾದದ ವಿರುದ್ಧದ ಸುಧೀರ್ಘ ಹೋರಾಟದಲ್ಲಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಹಾಗೂ ಕೋಮುವಾದದ ಸಂತ್ರಸ್ತರಿಗೆ ಈ ಕೃತಿಯನ್ನು ಅರ್ಪಿಸಿರುವುದು ಅರ್ಥಪೂರ್ಣವಾಗಿದೆ.

ಪೊಲೀಸ್ ವ್ಯವಸ್ಥೆ ಸಾಂವಿಧಾನಿಕವಾಗಿ ನಡೆದುಕೊಂಡರೆ, ಹಿಂದೂ ಮುಸ್ಲಿಂ ಸೌಹಾರ್ದತೆ ನೆಲೆಸಿದರೆ, ಕರಾವಳಿ ತನ್ನ ನಿಜದ ಬೇರುಗಳನ್ನು ಅರಿತರೆ, ಸಂಘಪರಿವಾರದ ಉದ್ದೇಶಗಳನ್ನು ದಲಿತಾದಿ ಶೂದ್ರರು ಮನವರಿಕೆ ಮಾಡಿಕೊಂಡರೆ- ಈ ಕೃತಿಯ ಉದ್ದೇಶ ಸಾರ್ಥಕವಾದಂತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...