ಬೆಲೆ ಏರಿಕೆ, ರೈತರ ಸಮಸ್ಯೆ ಮತ್ತು ಕ್ರೋನಿ ಕ್ಯಾಪಿಟಲಿಸಂಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರು ಭಾನುವಾರ ನಡೆದ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು. ಜೊತೆಗೆ ಹಿಂದುತ್ವ ಹಾಗೂ ಹಿಂದೂಧರ್ಮದ ವ್ಯತ್ಯಾಸಗಳನ್ನು ವಿಶ್ಲೇಷಿಸಿದರು.
ರಾಜಸ್ಥಾನದ ಜೈಪುರದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಅವರು ಹಿಂದುತ್ವ ಹಾಗೂ ಬಿಜೆಪಿ ವಿರುದ್ಧ ದಾಳಿ ನಡೆಸಿದರು. “ನಾನು ಹಿಂದೂ. ಇವರೆಲ್ಲರೂ ಹಿಂದೂಗಳು. ಅವರು ಹಿಂದುತ್ವವಾದಿಗಳು. ನಾನು ವಿವರಿಸುತ್ತೇನೆ” ಎಂದು ಅವರು ಮಾತು ಆರಂಭಿಸಿದರು.
‘ಸತ್ಯಾಗ್ರಹ’ ವಿಚಾರವನ್ನು ಪ್ರಸ್ತಾಪಿಸಿದ ಅವರು, “ಮಹಾತ್ಮಾ ಗಾಂಧಿಯವರು ಸತ್ಯಾಗ್ರಹ (ಸತ್ಯದ ಹುಡುಕಾಟ) ನಡೆಸಿದರು. ಹಿಂದುತ್ವವಾದಿಗಳಿಗೆ ಅಧಿಕಾರ ಹಿಡಿದ ನಂತರ ಸತ್ಯವು ಬೇಕಾಗಿರುವುದಿಲ್ಲ” ಎಂದು ಎಚ್ಚರಿಸಿದರು.
“ಮಹಾತ್ಮ ಗಾಂಧಿಯವರು ಸತ್ಯವನ್ನು ಹುಡುಕಿದರು, ನಾಥೂರಾಂ ಗೋಡ್ಸೆ ಗಾಂಧೀಜಿಯವರಿಗೆ ಗುಂಡು ಹಾರಿಸಿದನು. ಗೋಡ್ಸೆ ಹಿಂದುತ್ವವಾದಿಯಾಗಿದ್ದನು. ಒಬ್ಬ ಹಿಂದೂ ಸತ್ಯಾಗ್ರಹದಲ್ಲಿ ಆಸಕ್ತಿ ಹೊಂದಿರುತ್ತಾನೆ. ಹಿಂದುತ್ವವಾದಿಗಳು ಸತ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ” ಎಂದು ಹೇಳಿದ್ದಾರೆ.
“ಹಿಂದೂ ಎಂದರೆ ಯಾರು? ಎಲ್ಲ ಧರ್ಮವನ್ನು ಗೌರವಿಸುವ ಮತ್ತು ಯಾರಿಗೂ ಹೆದರುವುದಿಲ್ಲ. ಅಧಿಕಾರದಲ್ಲಿರುವವರು ನಕಲಿ ಹಿಂದೂಗಳು. ಭಾರತವು ಹಿಂದುತ್ವವಾದಿ ರಾಜ್ ಅನ್ನು ಅನುಭವಿಸುತ್ತಿದೆ, ಹಿಂದೂ ರಾಜ್ ಅನುಭವಿಸುತ್ತಿಲ್ಲ. ನಾವು ಈ ಹಿಂದುತ್ವವಾದಿಗಳನ್ನು ತೊಡೆದುಹಾಕಲು ಬಯಸುತ್ತೇವೆ. ಹಿಂದೂ ರಾಜ್ ತರಲು ಬಯಸುತ್ತೇವೆ” ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು, ಗಾಂಧಿಯವರು ಪಕ್ಷದ ಆಂತರಿಕ ಸಭೆಯಲ್ಲಿ ಹಿಂದೂ ಧರ್ಮ ಮತ್ತು ಹಿಂದುತ್ವವನ್ನು ಪ್ರತ್ಯೇಕಿಸಿ ನೋಡಬೇಕೆಂದು ಹೇಳಿದ್ದರು.
“ಹಿಂದೂ ಧರ್ಮವು ಸಿಖ್, ಅಥವಾ ಮುಸ್ಲಿಮರನ್ನು ಹೊಡೆಯುವುದೇ? ಹಿಂದುತ್ವ ಖಂಡಿತ ಅದನ್ನು ಮಾಡುತ್ತದೆ. ಯಾವ ಪುಸ್ತಕದಲ್ಲಿ ಹೊಡೆಯಬೇಕೆಂದು ಬರೆಯಲಾಗಿದೆ? ನಾನು ಅದನ್ನು ನೋಡಿಲ್ಲ, ನಾನು ಉಪನಿಷತ್ತುಗಳನ್ನು ಓದಿದ್ದೇನೆ, ಹೊಡೆಯಬೇಕೆಂಬುದನ್ನು ನಾನು ಓದಿಲ್ಲ” ಎಂದು ಅವರು ಹೇಳಿದರು.
“ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ವ್ಯತ್ಯಾಸವಿದೆ ಎಂದು ನಾವು ಹೇಳುತ್ತೇವೆ. ಇದು ಸರಳವಾದ ತರ್ಕ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು? ನಿಮಗೆ ಈ ಹೊಸ ಹೆಸರು ಏಕೆ ಬೇಕು?” ಎಂದಿರುವ ರಾಹುಲ್, ಪಿಟಿಐ ಸುದ್ದಿಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರ್ಯಾಲಿಯಲ್ಲಿ ಹಾಜರಿದ್ದರು.
ಇದನ್ನೂ ಓದಿರಿ: ಮನುಷ್ಯ ವಿರೋಧಿಗಳೊಂದಿಗೆ ಹೋಗದಿರಿ: ನಿರ್ಮಲಾನಂದನಾಥ ಶ್ರೀಗಳಿಗೆ ಬಹಿರಂಗ ಪತ್ರ