ರಾಜ್ಯದಲ್ಲಿ ಸಮರ್ಥ ಮುಖ್ಯಮಂತ್ರಿ ಇದ್ದಾಗ ಉಪಮುಖ್ಯಮಂತ್ರಿಗಳು ಬೇಕೆ ಎಂಬ ಮಾಹಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸಿಯಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಉಪಮುಖ್ಯಮಂತ್ರಿಗಳ ಹುದ್ದೆ ಬೇಡ ಎಂಬುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದರು. .
ತುಮಕೂರಿಗೆ ಆಗಮಿಸಿದ್ದ ಅವರು, “ನಾನು ಪಕ್ಷದ ಹೈಕಮಾಂಡ್ ವಿರುದ್ಧ ಮಾತನಾಡಲಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಕಾರ್ಯಕರ್ತರು ಹೇಳಿದ ಅಭಿಪ್ರಾಯಗಳನ್ನೇ ನಾನು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ನಾನು ದಾವಣಗೆರೆ ಮತ್ತು ಬೆಂಗಳೂರಿನಲ್ಲಿ 15 ದಿನಗಳಿಂದ ಹೇಳುತ್ತ ಬಂದಿರುವ ಮಾತುಗಳಿಗೆ ಬದ್ದನಾಗಿದ್ದೇನೆ. ಆದರೆ ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಉಪಮುಖ್ಯಮಂತ್ರಿಗಳ ವಿರುದ್ಧ ಸಹಿಸಂಗ್ರಹ ಮಾಡಿಲ್ಲ. ಬೇರೆಯವರು ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಅದು ನನ್ನ ಗಮನಕ್ಕೂ ಬಂದಿಲ್ಲ. ಉಪಮುಖ್ಯಮಂತ್ರಿಗಳ ವಿರುದ್ಧ ಸಹಿ ಸಂಗ್ರಹಕ್ಕೆ ಮುಖ್ಯಮಂತ್ರಿಗಳು ಬೆಂಬಲ ನೀಡಿದ್ದಾರೆಂಬುದು ಸುಳ್ಳು. ಅವರು ನನಗೆ ಏನೂ ಹೇಳಿಯೂ ಇಲ್ಲ. ಬೆಂಬಲಿಸಿಯೂ ಇಲ್ಲ. ಆದರೆ ಹಲವಾರು ಶಾಸಕರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಹೈಕಮಾಂಡ್ ನಾಯಕರಿಗೆ ತಲುಪಿಸಿಯಾಗಿದೆ ಎಂದರು.
ನಾನು ಹಾದಿಬೀದಿಯಲ್ಲಿ ಮಲಗಿ ಹೋರಾಟ ಮಾಡಿದ್ದೇನೆ. ಹೊನ್ನಾಳಿಯ ಜನ ನನ್ನನ್ನು ಮೂರು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ನನ್ನ ಮೇಲೆ 200 ಕೇಸುಗಳಿವೆ. ಜನರ ಪರವಾಗಿ ಹೋರಾಟ ಮಾಡಿದ್ದರಿಂದಲೇ ನನ್ನ ಮತ್ತೆಮತ್ತೆ ಆಯ್ಕೆ ಮಾಡಿರುವುದು ಎನ್ನುವ ಮೂಲಕ ನಾನೂ ಕೂಡ ಸಚಿವನಾಗಲು ಸಮರ್ಥ ಎಂಬುದನ್ನು ಒತ್ತಿಹೇಳಿದರು.
ಬೆಂಗಳೂರು, ದಾವಣಗೆರೆಯಲ್ಲಿ ಮಾತನಾಡಿದ ಮೇಲೆ ಅವರು ಉಪಮುಖ್ಯಮಂತ್ರಿಗಳು ಕೂಡ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಏಕೆ ಹೇಳಿದರು. ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿಲ್ಲವೇ? ಹೈಕಮಾಂಡ್ ಗಮನಕ್ಕೆ ತರಬಹುದಿಲ್ಲವೇ? ನಾನು ಮಾತನಾಡಿದರೆ ಹಾದಿಬೀದಿಯಲ್ಲಿ ಮಾತನಾಡುತ್ತಾರೆ ಎನ್ನುವುದು. ಅವರು ಮಾತನಾಡಿದರೆ ಹಾದಿಬೀದಿಯಲ್ಲವೇ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಬೇಡವೆಂಬುದು ಬಹುತೇಕ ಶಾಸಕರ ಭಾವನೆಯಾಗಿದೆ ಎಂದು ಪರೋಕ್ಷವಾಗಿ ಒತ್ತಿ ಹೇಳಿದರು. ಯಡಿಯೂರಪ್ಪ ಸಮರ್ಥ ನಾಯಕರೆಂದು ಬಲವಾಗಿ ಸಮರ್ಥಿಸಿಕೊಂಡರು. ಮಾತುಮಾತಿಗೂ ನಾನು ಮೂರು ಬಾರಿ ಆಯ್ಕೆಯಾಗಿದ್ದೇನೆ. ನಾನು ದಿಢೀರ್ ಹುಟ್ಟಿಕೊಂಡ ನಾಯಕನಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಬೇಗುದಿ ಹೊರಹಾಕಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳ ಮುಂದೆ ಯಾವುದನ್ನೂ ಚರ್ಚಿಸಬೇಡಿ ಎಂದು ಹೇಳಿದ್ದಾರೆ. ಆ ಕಾರಣಕ್ಕೋಸ್ಕರ ಸುಮ್ಮನಿದ್ದೇನೆ. ನಾನು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವನು. ನನಗೂ ರಾಜಕಾರಣ ಏನೆಂಬುದು ತಿಳಿಯುತ್ತದೆ. ಪಕ್ಷದ ಹೈಕಮಾಂಡ್ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.