Homeಕರೋನಾ ತಲ್ಲಣಕೊರೊನಾ ಮೂರನೇ ಅಲೆಯ ಭೀತಿ; ಸನ್ನದ್ಧವಾಗಿದೆಯೇ ಸರ್ಕಾರ?

ಕೊರೊನಾ ಮೂರನೇ ಅಲೆಯ ಭೀತಿ; ಸನ್ನದ್ಧವಾಗಿದೆಯೇ ಸರ್ಕಾರ?

- Advertisement -
- Advertisement -

ವಿಶ್ವದಾದ್ಯಂತ ಭಾರಿ ಸಾವುನೋವುಗಳಿಗೆ, ಭಯ ಆತಂಕಗಳಿಗೆ ಕಷ್ಟ ನಷ್ಟಗಳಿಗೆ ಕಾರಣವಾಗಿರುವ ಕೊರೊನಾ ಸಾಂಕ್ರಾಮಿಕದ ಎರಡನೆ ಅಲೆ ಭಾರತದಲ್ಲಿ ಅಪ್ಪಳಿಸಿ ಮುಗಿದು, ಜನರು ಇನ್ನೇನು ನಿಟ್ಟುಸಿರು ಬಿಡುತ್ತಿರುವ ಹೊತ್ತಿಗೆ ಮತ್ತೆ ಮೂರನೆ ಅಲೆಯ ಭಯ ಪ್ರಾರಂಭವಾಗಿದೆ. ಎರಡನೆ ಅಲೆಯ ಬಿಕ್ಕಟ್ಟು ಎಷ್ಟು ಭೀಕರವಾಗಿತ್ತೆಂದರೆ ಇಡೀ ವಿಶ್ವವೇ ನಮ್ಮ ದೇಶದತ್ತ ತಿರುಗಿ ಅನುಕಂಪದಿಂದ ನೋಡಿತು. ವಿಶ್ವದ ಹಲವಾರು ದೇಶಗಳು ನಮಗೆ ಸಹಾಯಹಸ್ತವನ್ನೂ ಚಾಚಿದವು. ಅಲ್ಲದೆ ಎರಡನೆ ಅಲೆಯು ತೀವ್ರ ಉಲ್ಬಣಕ್ಕೆ ಕಾರಣ ದೇಶದ ಆಡಳಿತದ ನೀತಿಗಳು ಎಂದು ಹಲವು ಜಾಗತಿಕ ಮತ್ತು ಪ್ರಾದೇಶಿಕವಾದ ದಿಟ್ಟ ಮಾಧ್ಯಮಗಳು ಮತ್ತು ಪತ್ರಿಕೆಗಳು ಸಾರಿ ಸಾರಿ ಹೇಳಿದವು.

ಅಧ್ಯಯನವೊಂದರ ಪ್ರಕಾರ ಕೊರೊನಾ ಮೂರನೆ ಅಲೆಯು ಆಗಸ್ಟ್‌ನಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತವೆ ಎನ್ನಲಾಗಿದೆ. ಮತ್ತೊಂದು ಅಧ್ಯಯನದ ಪ್ರಕಾರ ಆಗಸ್ಟ್ ತಿಂಗಳ ಕೊನೆಯಲ್ಲಿ ಮೂರನೇ ಅಲೆ ಅಪ್ಪಳಿಸಲಿದ್ದು ಅಕ್ಟೋಬರ್ ಹೊತ್ತಿಗೆ ಉತ್ತುಂಗಕ್ಕೆ ಏರಲಿದೆ ಎನ್ನುತ್ತದೆ. ಎರಡನೆ ಅಲೆಯ ಉತ್ತುಂಗದಲ್ಲಿ ಭಾರತದಲ್ಲಿ ದೈನಂದಿನ ನಾಲ್ಕು ಲಕ್ಷದವರೆಗೆ ಪ್ರಕರಣಗಳು ವರದಿಯಾಗಿದ್ದವು. ಮೇ 6 ರಂದು ಒಂದೇ ದಿನದಲ್ಲಿ 4.14 ಲಕ್ಷ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದವು. ನಂತರ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಯಲು ಪ್ರಾರಂಭವಾಗಿತ್ತು. ಜೂನ್ ತಿಂಗಳಲ್ಲಿ ದೈನಂದಿನ ಪ್ರಕರಣಗಳು ಸರಾಸರಿ 40 ಸಾವಿರ ಪ್ರಕರಣಗಳು ವರದಿಯಾಗಿದ್ದು, ಜುಲೈ ತಿಂಗಳ ಮಧ್ಯಕ್ಕೆ ಸರಾಸರಿ ಕೊರೊನಾ ಪಾಸಿಟಿವ್ ಪ್ರಕರಣಗಳ ದೈನಂದಿನ ಸಂಖ್ಯೆ 38 ಸಾವಿರಕ್ಕೆ ಇಳಿದಿದ್ದವು.

ಅದಾಗ್ಯೂ, ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಆರಂಭದ ಈ ವಾರದಲ್ಲಿ, ವಾರದ ಸರಾಸರಿ ಪ್ರಕರಣಗಳು ದಿನಕ್ಕೆ 41 ಸಾವಿರದಂತೆ ಏರಿಕೆ ಕಾಣುತ್ತಿವೆ. ಇದು ಮೂರನೆ ಅಲೆಯ ಸೂಚನೆ ಇರಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಆದರೆ ಮೂರನೆ ಅಲೆಯು ಎರಡನೆ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಕೂಡ ತಜ್ಞರು ಉಲ್ಲೇಖಿಸಿದ್ದಾರೆ. ದೈನಂದಿನ ಒಂದು ಲಕ್ಷದವರೆಗೂ ಮೂರನೆ ಅಲೆಯಲ್ಲಿ ಪ್ರಕರಣಗಳು ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ ಮೂರನೆ ಅಲೆಯ ಉತ್ತುಂಗದಲ್ಲಿ ಸುಮಾರು 1.5 ಲಕ್ಷದಷ್ಟು ಪ್ರಕರಣಗಳು ವರದಿಯಾಗಲಿರುವ ಅಂದಾಜಿದೆ ಎನ್ನುತ್ತಾರೆ ತಜ್ಞರು.

PC : vijaya karnataka

ಈ ಮಧ್ಯೆ ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ದಕ್ಷಿಣದ ರಾಜ್ಯಗಳಲ್ಲಿ ಮೂರನೆ ಅಲೆಯ ಎಚ್ಚರಿಕೆಯ ಕರೆಗಂಟೆ ಬಾರಿಸಿದೆ. ಆಗಸ್ಟ್ 2ರ ಸೋಮವಾರದಂದು ದೇಶದಲ್ಲಿ ಒಟ್ಟು ವರದಿಯಾದ ಕೊರೊನಾ ಪಾಟಿಸಿವ್ ಪ್ರಕರಣದ ಸಂಖ್ಯೆ 30 ಸಾವಿರವಿದ್ದರೆ, ಇದರಲ್ಲಿ 13 ಸಾವಿರದಷ್ಟು ಪ್ರಕರಣಗಳು ಕೇರಳ ಒಂದು ರಾಜ್ಯದಲ್ಲಿಯೇ ವರದಿಯಾಗಿದೆ. ಉಳಿದಂತೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಕೂಡ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಅಂದರೆ ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಕೊರೊನಾ ಪ್ರಕರಣಗಳು ಭಾಗಶಃ ದಕ್ಷಿಣ ಭಾರತದಲ್ಲೇ ವರದಿಯಾಗುತ್ತಿರುವುದು.
ಕೊರೊನಾವನ್ನು ಎದುರಿಸಲು ವ್ಯಾಕ್ಸಿನ್ ಒಂದೇ ಅಸ್ತ್ರ ಎಂದು ತಜ್ಞರು ಈಗಾಗಲೆ ಸ್ಪಷ್ಟವಾಗಿ ಹೇಳಿದ್ದಾರೆ. ಜಗತ್ತಿನಲ್ಲಿ ಲಸಿಕೆಗಳನ್ನು ಉತ್ಪಾದಿಸುವ ಅತೀ ದೊಡ್ಡ ದೇಶವಾದ ಭಾರತವು ಲಸಿಕೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿ ಆರುವರೆ ತಿಂಗಳಾದರೂ ವ್ಯಾಕ್ಸಿನೇಷನ್ ರ್‍ಯಾಂಕಿಂಗ್‌ನಲ್ಲಿ ಜಗತ್ತಿನಲ್ಲಿ 94ನೇ ಸ್ಥಾನದಲ್ಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಕೊರೊನಾ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಭಾರತದಲ್ಲಿ ತಡವಾಗಿ ಪ್ರಾರಂಭವಾಯಿತು. ದೇಶದಲ್ಲಿ ಇದುವರೆಗೂ ಕೇವಲ 7.6% ಜನಸಂಖ್ಯೆಗಷ್ಟೇ ಎರಡು ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಗಲ್ಫ್ ದೇಶವಾದ ಯುಎಇ ತನ್ನ ದೇಶದ 72% ಜನರಿಗೆ ಸಂಪೂರ್ಣ ಎರಡು ಡೋಸ್‌ಗಳ ಲಸಿಕೆಯನ್ನು ನೀಡಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಅಮೆರಿಕ ಕೂಡಾ 50% ಜನರಿಗೆ ಎರಡು ಡೋಸ್ ಲಸಿಕೆಯನ್ನು ಈಗಾಗಲೆ ನೀಡಿದೆ. ನಮ್ಮ ದೇಶದ ಕೇವಲ 27% ಜನರಿಗಷ್ಟೇ ಒಂದು ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ವಿಶ್ವದ ಅತ್ಯಂತ ದೊಡ್ಡ ವ್ಯಾಕ್ಸಿನ್ ತಯಾರಕ ದೇಶವಾದ ಭಾರತದ ಹಲವು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳು ಬಂದ್ ಆಗಿರುವುದು ಒಂದು ವಾರದ ಹಿಂದೆ ವರದಿಯಾಗಿತ್ತು. ಅಂದರೆ ಒಕ್ಕೂಟ ಸರ್ಕಾರ ಎರಡನೆ ಅಲೆಯಲ್ಲಿ ನಡೆದ ದುರಂತದ ನಂತರ, ತಾನೇ ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನು ನಡೆಸುವುದಗಿ ಹೇಳಿಕೊಂಡರೂ, ಅದು ನಿರೀಕ್ಷಿತ ವೇಗದಲ್ಲಿಲ್ಲ ಎಂದು ಖಂಡಿತವಾಗಿಯು ಹೇಳಬಹುದು. ಅದಿನ್ನೂ ತನ್ನ ಇಮೇಜ್ ರಕ್ಷಿಸಿಕೊಳ್ಳುವ ಕೆಲಸದಲ್ಲೇ ಮುಂದುವರೆದಿದೆ.

ಕರ್ನಾಟಕದಲ್ಲಿ ಕೊರೊನಾ ಮತ್ತು ವ್ಯಾಕ್ಸಿನೇಷನ್

2014 ರಂತೆ 6.41 ಕೋಟಿ ಜನ ಸಂಖ್ಯೆಯಿರುವ ರಾಜ್ಯದಲ್ಲಿ ಸುಮಾರು 4.9 ಕೋಟಿ ಜನರು ಕೊರೊನಾ ಲಸಿಕೆ ಪಡೆಯಲು ಅರ್ಹವಿರುವ ಜನರಿದ್ದಾರೆ ಎಂಬುದು ಅಂದಾಜು. ರಾಜ್ಯದಲ್ಲಿ ಇದುವರೆಗೂ ಒಟ್ಟು 29.08 ಲಕ್ಷ ಜನರಿಗೆ ಕೊರೊನಾ ಸಾಂಕ್ರಮಿಕವು ಸೋಂಕಿತ್ತು ಎಂದು ವರದಿಯಾಗಿದೆ. ಸೋಂಕಿನಿಂದಾಗಿ ಇದುವರೆಗೆ ಮೃತಪಟ್ಟವರು 36 ಸಾವಿರ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತವೆಯಾದರೂ, ಈ ಸಂಖ್ಯೆ ಇದಕ್ಕೂ ಹೆಚ್ಚು ಎನ್ನುತ್ತವೆ ಹಲವು ಮಾಧ್ಯಮಗಳ ವರದಿಗಳು. ರಾಜ್ಯದಲ್ಲಿ 3 ಲಕ್ಷಕ್ಕಿಂತಲೂ ಹೆಚ್ಚು ಕೊರೊನಾದಿಂದ ಸಾವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಆರೋಪಿಸಿದ್ದರು.

ಉತ್ತರದ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳು ಮತ್ತು ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳು ಸಾವಿರಕ್ಕಿಂತ ಕಡಿಮೆಯಿದ್ದಾಗ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ನಮ್ಮ ರಾಜ್ಯದಲ್ಲೇ ಒಟ್ಟು ಸಕ್ರಿಯ ಪ್ರಕರಣಗಳು 24 ಸಾವಿರಕ್ಕಿಂತಲೂ ಹೆಚ್ಚಿದೆ. ಸೋಂಕಿನಿಂದಾಗಿ ಮೃತಪಟ್ಟವರರ ಸಂಖ್ಯೆ ಕೂಡಾ 1.97% ದಷ್ಟಿದೆ. ಇದು ಕೇರಳದಲ್ಲಿ 0.49% ಇದೆ.

ಸುಮಾರು 4.9 ಕೋಟಿ ಜನರು ಕೊರೊನಾ ಲಸಿಕೆ ಪಡೆಯಲು ಅರ್ಹವಿರುವ ಕರ್ನಾಟಕದಲ್ಲಿ ಎರಡು ಡೋಸ್ ಲಸಿಕೆಯನ್ನು ಪಡೆದಿರುವವರು 61.34 ಲಕ್ಷ ಜನರು ಮಾತ್ರ. ರಾಜ್ಯದ 2.43 ಕೋಟಿ ಜನರು ಲಸಿಕೆಯ ಒಂದು ಡೋಸ್ ಮಾತ್ರ ಇದುವರೆಗೂ ಪಡೆದಿದ್ದಾರೆ.

ಮೂರನೆ ಅಲೆ ಮಕ್ಕಳಿಗೆ ಅಪಾಯವೆ?

ಎರಡನೆ ಅಲೆಯ ಉತ್ತುಂಗದ ಸಮಯದಲ್ಲೇ ಮಾಧ್ಯಮಗಳಲ್ಲಿ ಕೊರೊನಾ ಮೂರನೆ ಅಲೆ ಬರಲಿದ್ದು, ಇದು ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಬಿಂಬಿಸುತ್ತಲೆ ಬರುತ್ತಿವೆ. ಆದರೆ ಇದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ ಎಂದು ಒಕ್ಕೂಟ ಸರ್ಕಾರ ಸ್ಪಷ್ಟಪಡಿಸಿದೆ. ಇದು ಹಲವು ತಜ್ಞರ ಅಭಿಪ್ರಾಯವೂ ಆಗಿದೆ.
“ಒಂದು ಮತ್ತು ಎರಡನೆ ಅಲೆಯಲ್ಲಿ ಸೋಂಕಿಗೆ ಈಡಾದ ಜನರಲ್ಲಿ 10 ರಿಂದ 15% ಮಾತ್ರ ಮಕ್ಕಳಿದ್ದರು. ಮಕ್ಕಳಿಗೆ ಲಸಿಕೆ ನೀಡುವುದನ್ನು ಇನ್ನೂ ಪ್ರಾರಂಭಿಸದೆ ಇರುವುದರಿಂದ ಮೂರನೆ ಅಲೆಯಲ್ಲಿ 40% ಮಕ್ಕಳಿಗೆ ಸೋಂಕು ಹರಡಬಹುದು. ಆದರೆ ಕೊರೊನಾ ಮಕ್ಕಳಿಗೆ ಗಂಭೀರ ಅಪಾಯವನ್ನು ಉಂಟು ಮಾಡುವುದಿಲ್ಲ” ಎಂದು ವಿಕ್ರಂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಡಾ. ಉಮೇಶ್ ಹೇಳುತ್ತಾರೆ.

ಒಕ್ಕೂಟ ಸರ್ಕಾರವು ಈಗಾಗಲೆ ಡಿಸೆಂಬರ್ ಹೊತ್ತಿಗೆ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಮೂರನೆ ಅಲೆ ಆಗಸ್ಟ್‌ನಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ, ಆದ್ದರಿಂದ ಮೂರನೆ ಅಲೆ ಜನರಿಗೆ ಅಪಾಯವನ್ನು ಉಂಟು ಮಾಡಬಹುದಲ್ಲವೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಉಮೇಶ್, “ಜನರು ಕನಿಷ್ಟ ಒಂದು ಡೋಸ್‌ನಷ್ಟಾದರೂ ಲಸಿಕೆ ಪಡೆಯುವಂತಾದರೆ, ಅಪಾಯದಿಂದ ಪಾರಾಗಬಹುದು. ಎರಡನೆ ಅಲೆಯಲ್ಲಿ ಆದಷ್ಟು ಸಾವು ನೋವುಗಳಿಂದ ತಪ್ಪಿಸಿಕೊಳ್ಳಬಹುದು” ಎಂದು ಹೇಳುತ್ತಾರೆ.

ಕೇರಳದಲ್ಲಿ ಏರುತ್ತಿರುವ ಸೋಂಕಿನ ಪ್ರಕರಣಗಳು ಮತ್ತು ಮಹಾರಾಷ್ಟ್ರದಲ್ಲಿ ಪ್ರಸ್ತುತ ಇರುವ ಸೋಂಕಿನ ಪ್ರಮಾಣ ಕರ್ನಾಟಕದ ಮೇಲೆ ಕೂಡಾ ಪರಿಣಾಮ ಬೀರಬಹುದು ಎಂದೂ ಅವರು ತಿಳಿಸಿದ್ದಾರೆ.

PC : Fortis Banglore

ರಾಜ್ಯದ ಬಗ್ಗೆ ಹೇಳಬಹುದಾದರೆ ಪ್ರಸ್ತುತ 4.9 ಕೋಟಿ ಜನರು ಲಸಿಕೆ ಪಡೆಯಲು ಅರ್ಹರಿದ್ದಾರೆ. ಈಗಾಗಲೆ 2.43 ಕೋಟಿ ಜನರು ಕನಿಷ್ಠ ಒಂದು ಡೋಸ್ ಪಡೆದವರು ಇರುವುದರಿಂದ, ಹೆಚ್ಚು ಕೊರೊನಾ ಪ್ರಕರಣ ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಸರ್ಕಾರವು ಈ ತಿಂಗಳಲ್ಲಿ ಲಸಿಕೆಯನ್ನು ಸಮರೋಪಾದಿಯಲ್ಲಿ ನೀಡಬೇಕಾಗುತ್ತದೆ. ಹೀಗಾದರೆ ಜನರು ಸೋಂಕಿನ ಗಂಭೀರ ಅಪಾಯದಿಂದ ಬಚಾವಾಗಬಲ್ಲರು. ಆದರೆ ಲಸಿಕೆ ಕೊರತೆಯಿಂದ ಮೊದಲ ಡೋಸ್ ನೀಡುವ ಲಸಿಕಾ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜುಲೈ 31ಕ್ಕೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ!.

ದೇಶಕ್ಕೆ ಕನಿಷ್ಠವೆಂದರೂ ದಿನವೊಂದಕ್ಕೆ ಸುಮಾರು ಒಂದು ಕೋಟಿ ಲಸಿಕೆಗಳು ಅಗತ್ಯವಿದ್ದು, ಸ್ವಾತಂತ್ರ್ಯೋತ್ಸವ ದಿನಕ್ಕೆ ದೇಶವು ಲಸಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸಿ ಏಳು ತಿಂಗಳನ್ನು ಪೂರೈಸಲಿದೆ. ಒಕ್ಕೂಟ ಸರ್ಕಾರ ಡಿಸೆಂಬರ್ ಹೊತ್ತಿಗೆ ದೇಶದ ಎಲ್ಲರಿಗೂ ಲಸಿಕೆಯನ್ನು ನೀಡುತ್ತೇವೆ ಎಂದು ಹೇಳಿದೆ. ಆದರೆ ಆರು ತಿಂಗಳು ಕಳೆದರೂ, ದೇಶದ 7.6% ಜನರಿಗಷ್ಟೇ ಸಂಪೂರ್ಣ ಲಸಿಕೆಯನ್ನು ನೀಡಲಾಗಿದೆ. ಈ ನಡುವೆ ದೇಶದ ಹಲವು ರಾಜ್ಯಗಳು ಜುಲೈ ಕೊನೆಯ ವಾರದಲ್ಲೇ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದೆಲ್ಲದರ ಮಧ್ಯೆ ಮೂರನೆ ಅಲೆ ಅಪ್ಪಳಿಸಲು ತಯಾರಾಗಿ ನಿಂತಿದೆ.

ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿಗಳೇನೋ ಬಂದಿದ್ದಾರೆ ಆದರೆ ಹೊಸ ಸಂಪುಟ ರಚನೆ ಇನ್ನೂ ಆಗಿಲ್ಲ. ಆರೋಗ್ಯಮಂತ್ರಿಯಾಗಿ ಹಿಂದಿನ ಸಚಿವರೇ ಉಳಿಯುವರೋ, ಹೊಸ ಸಚಿವರು ಬರುವರೋ ತಿಳಿದಿಲ್ಲ. ಒಟ್ಟಿನಲ್ಲಿ ಬಿಜೆಪಿ ಆಡಳಿತದ ಎರಡನೇ ವರ್ಶನ್ ಸರ್ಕಾರ ಕೊರೊನಾ ತಡೆಗಟ್ಟುವುದಕ್ಕೆ ಮತ್ತು ಲಸಿಕಾ ಅಭಿಯಾನಕ್ಕೆ, ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಚುರುಕಾಗಿ ಕೆಲಸ ಮಾಡುತ್ತದೋ ಇಲ್ಲವೋ ಕಾದು ನೋಡಬೇಕಿದೆ.


ಇದನ್ನೂ ಓದಿ: ಚೀನಾದಲ್ಲಿ ಏರಿಕೆಯಾದ ಕೊರೊನಾ: ಸ್ಥಳೀಯವಾಗಿ 80 ಪ್ರಕರಣಗಳು ಪತ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...