ದ್ರೌಪದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಲೇಖಕ ಎಸ್.ಎಲ್.ಭೈರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಬೆಂಗಳೂರು ಪೊಲೀಸರಿಗೆ ಮೂರು ದೂರು ಬಂದಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಫೆಬ್ರವರಿ 21 ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ರೌಪದಿ ವಿರುದ್ಧ ಅವಹೇಳಕಾರಿ ಭೈರಪ್ಪ ಹೇಳಿಕೆ ನೀಡಿದ್ದಾರೆ. ಇದರಿಂದ ದ್ರೌಪದಿಗೆ ಅವಮಾನ ಮಾಡಿದ್ದಾರೆ. ಜೊತೆಗೆ ತಿಗಳ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನೋತ್ತರ ಸಮಯದಲ್ಲಿ ಕಾಂಗ್ರೆಸ್ ಎಂಎಲ್ಸಿ ಪಿ.ಆರ್ ಅಶೋಕ್ ಆಗ್ರಹಿಸಿದ್ದರು.
ಲೇಖಕ ಎಸ್.ಎಲ್.ಭೈರಪ್ಪ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು
“ಭೈರಪ್ಪ ಅವರ ಕೃತಿಗಳು ವಿದೇಶಿ ಭಾಷೆಗಳು ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಹೇಳಿಕೆಯು ವಿದೇಶಿ ಓದುಗರಲ್ಲಿ ನಮ್ಮ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳ ಬಗ್ಗೆ ಕೆಟ್ಟ ಪರಿಣಾಮ ಬಿರುವುದಿಲ್ಲವೇ..? ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಜೊತೆಗೆ ಕಾನೂನು ಕ್ರಮ ಜರುಗಿಸಬೇಕು” ಎಂದು ರಮೇಶ್ ಒತ್ತಾಯಿಸಿದ್ದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರು, “ದೇವನಹಳ್ಳಿ ತಾಲೂಕಿನ ತಿಗಳ ಸಂಘವು ಫೆಬ್ರವರಿ 21 ರಂದು ಭೈರಪ್ಪ ವಿರುದ್ಧ ದೂರು ಸಲ್ಲಿಸಿದೆ. ದ್ರೌಪದಿ ವಹ್ನಿಕುಲಾ ಕ್ಷತ್ರಿಯ ಸಮುದಾಯದ ದೇವತೆ. ಭೈರಪ್ಪ ಅವರ ಹೇಳಿಕೆ ತಮ್ಮ ದೇವತೆಯನ್ನು ಅವಮಾನಿಸಿದೆ. ಇದರಿಂದ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ತಿಳಿಸಿದ್ದಾರೆ’ ಎಂದು ಹೇಳಿದರು.
ಸಂಪಂಗಿರಾಮನಗರ ನಿವಾಸಿ ವೈ.ಜಗದೀಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ತಿಗಳ ಸರ್ಕಾರಿ ಮತ್ತು ವೃತ್ತಿಪರ ನೌಕರರ ಸಂಘವು ಫೆಬ್ರವರಿ 27 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದನ್ನು ಅಜ್ಞಾತ ವರದಿಯಾಗಿ ನೋಂದಾಯಿಸಲಾಗಿದೆ. ಎಲ್ಲಾ ದೂರುಗಳು ವಿಚಾರಣಾ ಹಂತದಲ್ಲಿವೆ. ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಭೈರಪ್ಪಾ, ಆಲಯದಿಂದ ಬಯಲಿಗೆ ಬಾರಪ್ಪ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್