ಬೀದರ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಸೋಮವಾರ ನಡೆದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಉತ್ತಮ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮಾಜಿ ಸಚಿವ ಪ್ರಭು ಚವ್ಹಾಣ್ ವೇದಿಕೆಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಲಿಗೆ ಬಿದ್ದಿದ್ದಾರೆ. ಈ ಮೂಲಕ ಹಾಲಿ ಸಂಸದ ಭಗವಂತ ಖೂಬಾಗೆ ಟಿಕೆಟ್ ನೀಡದಂತೆ ಪರೋಕ್ಷವಾಗಿ ಮನವಿ ಮಾಡಿದ್ದಾರೆ.
ವಿಜಯೇಂದ್ರ ಸೇರಿದಂತೆ ಬಿಜೆಪಿ ರಾಜ್ಯ ಮತ್ತು ಜಿಲ್ಲಾ ನಾಯಕರು ವೇದಿಕೆಯಲ್ಲಿ ಕುಳಿತಿದ್ದ ವೇಳೆ, ಭಾಷಣ ಪೀಠದಿಂದ ನೇರವಾಗಿ ಬಂದು ಪ್ರಭು ಚವ್ಹಾಣ್ ಸಾಷ್ಟಾಂಗವೆರಗಿದ್ದಾರೆ. ದಯವಿಟ್ಟು ಸಾಮಾನ್ಯ ಕಾರ್ಯಕರ್ತನಿಗೆ, ಉತ್ತಮ ಅಭ್ಯರ್ಥಿಗೆ ಈ ಬಾರಿಯ ಬೀದರ್ ಲೋಕಸಭೆ ಕ್ಷೇತ್ರದ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ. ಇದು ನನ್ನ ಅಭಿಪ್ರಾಯ ಅಲ್ಲ, ಸಮಸ್ತ ಕಾರ್ಯಕರ್ತರ ಅಭಿಪ್ರಾಯ ಎಂದಿದ್ದಾರೆ. ಈ ವೇಳೆ ಪಕ್ಕದಲ್ಲೇ ಭಗವಂತ ಖೂಬಾ ಕುಳಿತಿದ್ದರು.
View this post on Instagram
ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಕೇಂದ್ರ ಸಚಿವರೂ ಆಗಿರುವ ಬೀದರ್ ಸಂಸದ ಭಗವಂತ ಖೂಬಾ ಅವರಿಗೆ ಮರು ಟಿಕೆಟ್ ನೀಡುವುದನ್ನು ವಿರೋಧಿಸುತ್ತಿರುವ ಪಕ್ಷದ ಮುಖಂಡರೊಂದಿಗೆ ಚರ್ಚಿಸಲು ಇತ್ತೀಚೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು.
ಈ ಸಭೆಯಲ್ಲಿ ಕರಡಿ ಸಂಗಣ್ಣ ಅವರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೆ ಟಿಕೆಟ್ ನೀಡುವುದನ್ನು ಪಕ್ಷದ ಪದಾಧಿಕಾರಿಗಳು ವಿರೋಧಿಸಿದ್ದರು. ಖೂಬಾ ಸಂಸದರಾಗಿರುವ ಬೀದರ್ನಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದಿದೆ. ಆದರೂ, ಬಿಜೆಪಿ ಶಾಸಕರು ಖೂಬಾಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದಾರೆ.
ಭಗವಂತ ಖೂಬಾ ಬಿಜೆಪಿ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ನಮ್ಮ ಭವಿಷ್ಯ ಹಾಳುಮಾಡುವ ಪ್ರಯತ್ನ ನಡೆಸಿದ್ದರು ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದರು. ಸಭೆಯಲ್ಲಿ ಖೂಬಾ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಪ್ರಭು ಚವ್ಹಾಣ್ಗೆ ಶರಣು ಸಲಗರ ಕೂಡ ಬೆಂಬಲವಾಗಿ ಮಾತನಾಡಿ ಖೂಬಾ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು.
ಈ ವೇಳೆ ಶಾಸಕರ ಮೇಲೆ ಕೋಪಗೊಂಡ ಖೂಬಾ, ಟಿಕೆಟ್ ಕೊಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿ ಸಭೆಯಿಂದ ಹೊರ ನಡೆದಿದ್ದರು. ಖೂಬಾ ಹೊರ ಹೋದ ಮೇಲೆ, ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕೆಂದು ವಿಜಯೇಂದ್ರ ಶಾಸಕರನ್ನು ಪ್ರಶ್ನಿಸಿದ್ದಾರೆ. ಆಗ, ಯಾರಿಗೆ ಬೇಕಾದರು ಕೊಡಿ, ಆದರೆ ಖೂಬಾಗೆ ಮತ್ತೆ ಟಿಕೆಟ್ ಕೊಟ್ಟರೆ ನಾವು ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಶಾಸಕರು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ಖೂಬಾ ವಿರುದ್ದ ಗಂಭೀರ ಆರೋಪ ಮಾಡಿದ್ದರು ಚವ್ಹಾಣ್ :
ಭಗವಂತ್ ಖೂಬಾ ಮತ್ತು ಪ್ರಭು ಚವ್ಹಾಣ್ ನಡುವಿನ ಕಿತ್ತಾಟ ಇಂದು ನಿನ್ನೆಯದಲ್ಲ. ಕಳೆದ ಒಂದು ವರ್ಷದಿಂದ ಈ ಇಬ್ಬರು ನಾಯಕರ ನಡುವೆ ಮುನಿಸಿದೆ. ಕಳೆದ ಆಗಸ್ಟ್ನಲ್ಲಿ ಬೀದರ್ನ ಔರಾದ್ ಪಟ್ಟಣದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಖೂಬಾ ವಿರುದ್ದ ವಾಗ್ದಾಳಿ ನಡೆಸಿದ್ದ ಚವ್ಹಾಣ್, “ಕೇಂದ್ರ ಸಚಿವ ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಅವರ ಪ್ರಯತ್ನ ವಿಫಲವಾಗಿದ್ದರಿಂದ ಈಗ ತಾನು ಸಾಕಿದ ಗೂಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಎಂದು ಗಂಭೀರ ಆರೋಪ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಖೂಬಾ, ಪ್ರಭು ಚವ್ಹಾಣ್ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ವರಿಷ್ಠರು ಅನುಮತಿ ನೀಡಿದರೆ ಅವರ ವಿರುದ್ಧ 100 ಕೋಟಿ ರೂಪಾಯಿ ಮಾನಹಾನಿ ಕೇಸ್ ದಾಖಲಿಸುವೆ ಎಂದು ಹೇಳಿದ್ದರು.
ಪದ್ಮಾಕರ್ ಪಾಟೀಲ್ಗೆ ಟಿಕೆಟ್ ನೀಡುವಂತೆ ಸಲಗರ್ ಮನವಿ
ಪ್ರಭು ಚವ್ಹಾಣ್ ಒಂದು ಕಡೆಯಾದರೆ ಶಾಸಕ ಶರಣು ಸಲಗರ್ ಮತ್ತೊಂದು ಕಡೆ ಖೂಬಾ ವಿರುದ್ದ ತಿರುಗಿ ಬಿದ್ದಿದ್ದಾರೆ. ಮರಾಠಾ ಸಮುದಾಯದ ಪದ್ಮಾಕರ್ ಪಾಟೀಲ್ ಕಳೆದ 25 ವರ್ಷಗಳಿಂದ ಪಕ್ಷದ ಕಾರ್ಯಕರ್ತರಾಗಿ, ಮಾಜಿ ಜಿಪಂ ಅಧ್ಯಕ್ಷರಾಗಿ ಸಾಕಷ್ಟು ದುಡಿದಿದ್ದಾರೆ. ಅವರಿಗೆ ಟಿಕೆಟ್ ನೀಡಿದ್ರೆ ನಮ್ಮ ಬೆಂಬಲ ಇದೆ ಎಂದು ಸಲಗರ್ ಈ ಹಿಂದೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಇದನ್ನೂ : ಮೈಸೂರು: ಅಂಬೇಡ್ಕರ್ ನಾಮಫಲಕ ಅಳವಡಿಕೆ ವಿಚಾರದಲ್ಲಿ ಘರ್ಷಣೆ: 30ಕ್ಕೂ ಅಧಿಕ ಮಂದಿಗೆ ಗಾಯ