Homeಮುಖಪುಟಸಂಸತ್ತಿನಲ್ಲಿ ಪ್ರಜ್ವಲಿಸಿದ ಮಹುವಾ ಮೊಯಿತ್ರಾ ರವರ ಭಾಷಣದ ಕನ್ನಡ ಅನುವಾದ

ಸಂಸತ್ತಿನಲ್ಲಿ ಪ್ರಜ್ವಲಿಸಿದ ಮಹುವಾ ಮೊಯಿತ್ರಾ ರವರ ಭಾಷಣದ ಕನ್ನಡ ಅನುವಾದ

ಈ ಮಣ್ಣಲಿ ಪ್ರತಿಯೊಬ್ಬನ ರಕ್ತ ಬೆರೆತಿದೆ, ಹಿಂದೂಸ್ತಾನ್ ಯಾರಪ್ಪನ ಆಸ್ತಿಯಲ್ಲ… ಎಂದು ಸಂಸತ್ತಿನಲ್ಲಿ ಗುಡುಗಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರ

- Advertisement -
- Advertisement -

17ನೇ ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರ ಹಲವು ಭಾಷಣಗಳು ದೇಶದ ಗಮನ ಸೆಳೆದಿವೆ. ಆಡಳಿತ ಕೂಟದ ಬಹುತೇಕರ ಭಾಷಣಗಳು ವಾಸ್ತವವನ್ನು ಬಿಚ್ಚಿಡಲಿಲ್ಲ. ಪಶ್ಚಿಮ ಬಂಗಾಳದ ಕೃಷ್ಣನಗರದ ಟಿಎಂಸಿಯ ಸಂಸದೆ ಮಹುವಾ ಮೊಯಿತ್ರ ( Mahua Moitra ) ಅವರ ಭಾಷಣ ದೇಶದ ವಾಸ್ತವ ಪರಿಸ್ಥಿತಿಯನ್ನು ತೆರದಿಟ್ಟಿದ್ದಲ್ಲದೆ, ಎಲ್ಲಡೆ ವೈರಲ್ ಆಗಿದೆ. ದೇಶದ ಹಲವು ವಿಶ್ವಾಸಾರ್ಹ ಮೀಡಿಯಾಗಳು ಮಹುವಾರ ಭಾಷಣವನ್ನು ಅರ್ಥಪೂರ್ಣ ಎಂದು ಬಣ್ಣಿಸಿವೆ. ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಮಹುನಾರ ಭಾಷಣವನ್ನು ‘ವರ್ಷದ ಭಾಷಣ’ ( Speech of the Year) ಎಂದು ಗುರುತಿಸಿದೆ..

ಎಳೆಎಳೆಯಾಗಿ ವಾಸ್ತವ ಬಿಚ್ಚಿಟ್ಟ ‘ಕೆಂಡಸಂಪಿಗೆ’

ಸಂಸದೆಯಾಗುವ ಮೊದಲು ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿದ್ದ ಮಹುನಾ ಕರಾರುವಕ್ಕು ವಾಸ್ತವವನ್ನು ಗಣಿತಶಾಸ್ತ್ರ ಪಾಠ ಮಾಡಿದಂತೆ ನಿರೂಪಿಸಿದರು. ಅವರ ಭಾಷಣದಲ್ಲಿ ನೋವಿತ್ತು, ವರ್ತಮಾನದ ತಲ್ಲಣಗಳ ಕುರಿತು ಆತಂಕವಿತ್ತು. ಅಲ್ಲಿ ಆಕ್ರೋಶವೂ ಇತ್ತು. ಪ್ರತಿ ಮಾತಿನ ಅಂತರಾಳದಲ್ಲಿ ಈ ನೆಲ ಈ ದೇಶದ ಎಲ್ಲ ನಿವಾಸಿಗಳ ಹಕ್ಕು ಎಂಬ ಮಂಡನೆಯಿತ್ತು. ಆದರೆ ಅಲ್ಲೆಲ್ಲೂ ಒಣ ಆರ್ಭಟ ಮುನ್ನೆಲೆಯಲ್ಲಿ ಇರಲೇ ಇಲ್ಲ. ಅವರ ಮಾತುಗಳ ಆಳದಲ್ಲಿ ತಾಯಿಯ ಮಮಕಾರ ಮತ್ತು ಹೋರಾಟದ ಸಂಘರ್ಷ ಎರಡೂ ಇದ್ದವು. ತಣ್ಣಗಿನ ಸಾಲುಗಳ ನಡುನಡುವೆ ಜೀವಪರ ಕಾವ್ಯವನ್ನು ಉಲ್ಲೇಖಿಸುತ್ತ ಮಹುನಾ ಆಡಳಿತ ಪಕ್ಷದ ಕ್ರೌರ್ಯವನ್ನು ತಣ್ಣಗೆ ಅನಾವರಣ ಮಾಡಿದರು. ಇದು ಚೀರಾಟದಲ್ಲೇ ಸತ್ಯವನ್ನು ಸಾಯಿಸುವ ಬಾಯಿಬಡುಕರಿಗೆ ಪಾಠದಂತಿತ್ತು.

 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಚೋದನಾಕಾರಿ ರಾಷ್ಟ್ರೀಯತೆ, ಬಂಗಾಳ, ಅಸ್ಸಾಂಗಳಲ್ಲಿ ಜಾರಿಯಾಗುತ್ತಿರುವ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ), ನಾಗರಿಕ ಮಸೂದೆಯಂತಹ ವಲಸೆ-ವಿರೋಧಿ ಕಾನೂನುಗಳು, ಧಾರ್ಮಿಕ ಘೋಷಣೆಗಳು, ಮಾಧ್ಯಮ ಕಂಪನಿಗಳ ನಿಯಂತ್ರಣ, ಮಾನವ ಹಕ್ಕುಗಳ ನಿರ್ಲಕ್ಷ್ಯವನ್ನು ತೀಕ್ಷ್ಣವಾಗಿ ಖಂಡಿಸಿದ ಅವರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಏರುತ್ತಿರುವ ದ್ವೇಷ ಅಪರಾಧಗಳನ್ನು ವರ್ಷಗಳಿಂದ ಸ್ಟಾರ್ಟ್‍ಅಪ್ ಕಂಪನಿಗಳ ‘ಬೆಳವಣಿಗೆ ಕಾಣುತ್ತಿರುವ ಮೌಲ್ಯಮಾಪನಕ್ಕೆ ಜೋಡಿಸಿದ ಮಹುವಾ, ದೇಶದ ಜನರಲ್ಲಿ ಹೆಚ್ಚುತ್ತಿರುವ ಭೀತಿಯ ಭಾವನೆಯನ್ನು ವಿವರಿಸಲು ಜಾನಪದವನ್ನು ಬಳಸಿದರು. ಆಡಳಿತ ಸರ್ಕಾರವು ಫ್ಯಾಸಿಸ್ಟ್ ಆಡಳಿತದತ್ತ ಜಾರುತ್ತಿದೆ ಎನ್ನುವ ಸತ್ಯಾಂಶವನ್ನು ಅಂಕಿಅಂಶಗಳಿಂದ ಪಟ್ಟಿ ಮಾಡಿದ ಅವರು, ಇದನ್ನು ಮನಗಾಣಿಸಲು ಮೌಲಾನಾ ಅಜಾದರ ನುಡಿ, ಕವಿಗಳಾದ ರಾಮಧರಿ ಸಿಂಗ್ ದಿನಕರ್ ಮತ್ತು ರಾಹತ್ ಇಂದೋರಿ ಅವರ ಕಾವ್ಯಸಾಲುಗಳನ್ನು ಉಲ್ಲೇಖಿಸಿದರು. ‘ಸಭಿ ಕಾ ಖೂನ್ ಶಾಮೀಲ್ ಯಹಾ ಕಿ ಮಿಟ್ಟಿ ಮೆ, ಕಿಸಿ ಕಾ ಬಾಪ್ ಕಾ ಹಿಂದೊಸ್ತಾನಿ ಥೋಡಿ ಹೈ.. ಈ ಮಣ್ಣಲಿ ಪ್ರತಿಯೊಬ್ಬನ ರಕ್ತ ಬೆರೆತಿದೆ, ಹಿಂದೊಸ್ತಾನ್ ಯಾರಪ್ಪನ ಆಸ್ತಿಯೂ ( ನೆಲವೂ) ಅಲ್ಲ…

ಅಮೆರಿಕದ ‘ಹತ್ಯಾಕಾಂಡ ಮ್ಯೂಸಿಯಂ’ನಲ್ಲಿರುವ, ಫ್ಯಾಸಿಸಂನ ಏಳು ಪೂರ್ವಭಾವಿ ಲಕ್ಷಣಗಳನ್ನು ಒಳಗೊಂಡ ಪೋಸ್ಟರ್ ಒಂದನ್ನು ಉಲ್ಲೇಖಿಸಿದ ಅವರು, ಭಾರತೀಯ ವರ್ತಮಾನವನ್ನು ಈ ಏಳು ಲಕ್ಷಣಗಳನ್ನು ಬಳಸಿ ವಿವರಿಸುತ್ತ ಹೋದರು.

ಭಾಷಣದ ಆರಂಭದಲ್ಲಿ, ‘ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ದೊರೆತ ಅಮೋಘ ಬಹುಮತವನ್ನು ವಿನಯದಿಂದ ಸ್ವೀಕರಿಸಿದ್ದಾಗಿ ತಿಳಿಸಿದ ಅವರು, ಈ ಅಗಾಧ ಬಹುಮತವೇ ಅದಕ್ಕೆ (ಈ ಸರ್ಕಾರಕ್ಕೆ) ಎಚ್ಚರಿಕೆಯೂ ಆಗಿದೆ, ಈ ಅಗಾಧ ಬಹುಮತದ ಕಾರಣಕ್ಕಾಗಿಯೇ ನೀವು ನಮ್ಮನ್ನು ಆಲಿಸಬೇಕಾದ ಅಗತ್ಯವಿದೆ, ನಮ್ಮ ಭಿನ್ನಮತವನ್ನು ಕೇಳಿಸಿಕೊಳ್ಳುವ ಜರೂರತ್ತು ಇದೆ. ವಿಪಕ್ಷಗಳ ಸಂಖ್ಯೆ ಅಲ್ಪ ಇರುವುದರಿಂದ, ಸರ್ಕಾರದ ಸಂಖ್ಯೆ ಬೃಹತ್ ಇರುವುದರಿಂದ ಅದು ಆಡಿದ್ದೇ ಆಟವಾಗಬಾರದೆಂದರೆ ಭಿನ್ನಮತವೂ ಇಂದು ಮಹತ್ವದ್ದಾಗಿದೆ. ಈ ಸದನವು ವಿಪಕ್ಷಕ್ಕೆ ಸೇರಿದ್ದರಿಂದ ಇವತ್ತು ನಾನು ನನ್ನ ನಿಲುವನ್ನು ಹೇಳಲು ನಿಂತಿದ್ದೇನೆ’’ ಎಂದರು. ಪಕ್ಷಭೇದ ಮರೆತು ಹಿರಿಯ ಸಂಸತ್ ಪಟುಗಳೆಲ್ಲ ಮಹುವಾರ ಭಾಷಣವನ್ನು ಗಂಭೀರವಾಗಿ ಆಲಿಸಿದ ಹೊತ್ತು ಅದು.

ಮಹುವಾರ ಪಾಯಿಂಟ್-ಟು-ಪಾಯಿಂಟ್ ವಿಮರ್ಶೆ

(ಅಮೆರಿಕದ ‘ಹತ್ಯಾಕಾಂಡ ಮ್ಯೂಸಿಯಂ’ನಲ್ಲಿರುವ, ಫ್ಯಾಸಿಸಂನ ಏಳು ಪೂರ್ವಭಾವಿ ಲಕ್ಷಣಗಳನ್ನು ಪ್ರಸ್ತಾಪಿಸುತ್ತ)

1. ರಾಷ್ಟ್ರೀಯತೆ ಕುರಿತು:

‘ಈ ದೇಶ ಇಂದು ಭಾಗವಾಗುತ್ತಿದೆ. ಇಲ್ಲೊಂದು ಬಲಾಢ್ಯವಾದ ಮತ್ತು ನಿರಂತರವಾದ ರಾಷ್ಟ್ರೀಯತೆಯು ಈ ದೇಶದ ಸೌಹಾರ್ದ, ಸಹಜೀವನದ ಎಳೆಯನ್ನು ತುಂಡರಿಸುತ್ತಿದೆ. ಈ ರಾಷ್ಟ್ರೀಯತೆ ಹುರುಳಿಲ್ಲದ್ದು, ಅನ್ಯದ್ವೇಷದ್ದು ಮತ್ತು ಸಂಕುಚಿತವಾದುದು. ಅದಕ್ಕೆ ವಿಭಜಿಸುವುದರಲ್ಲಿ ಆಸಕ್ತಿಯಿದೆ, ಒಗ್ಗೂಡಿಸುವುರದಲ್ಲಲ್ಲ ಎಂದರು. ಧಾರ್ಮಿಕ ಘೋಷಣೆ ಮತ್ತು ಸಂಕೇತ, ಲಾಂಛನಗಳನ್ನು ರಾಜಕೀಕರಣಗೊಳಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ‘ಯಾವುದೇ ಭಾರತೀಯನಿಗೆ ತಾನು ದೇಶಭಕ್ತ ಎಂದು ತೋರಿಸಲು ಯಾವುದೇ ಒಂದು (ಏಕೈಕ) ಸಂಕೇತವೂ ಇಲ್ಲ, ಯಾವುದೇ ಒಂದು ಘೋಷಣೆಯೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

2. ಮಾನವ ಹಕ್ಕುಗಳು ಮತ್ತು ಹಲ್ಲೆಗಳ ಕುರಿತು:

2017ರಲ್ಲಿ ರಾಜಸ್ಥಾನದಲ್ಲಿ ಪೆಹ್ಲ್‍ಖಾನ್‍ರಿಂದ ಹಿಡಿದು ಕಳೆದ ವಾರ ಜಾರ್ಖಂಡಿನಲ್ಲಿ ತಬ್ರೇಜ್ ಅನ್ಸಾರಿವರೆಗೆ ಹಲ್ಲೆ, ಕೊಲೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಮಾನವ ಹಕ್ಕುಗಳ ಕುರಿತು ಸರ್ಕಾರದ ‘ಪುನರಾವರ್ತಿತ ಅಸಡ್ಡೆ’ಯೂ ಈಗ ಎಲ್ಲ ಹಂತಗಳಿಗೂ ಪ್ರವೇಶಸಿದೆ ಎಂದು ವಿಷಾದಿಸಿದರು. 2014-19 ಅವಧಿಯಲ್ಲಿ ದ್ವೇಷ ಅಪರಾಧಗಳಲ್ಲಿ ಹತ್ತು ಪಟ್ಟು ಏರಿಕೆಯನ್ನು ಇ-ಕಾಮರ್ಸ್ ಸ್ಟಾರ್ಟ್‍ಅಪ್ ಒಂದರ ಮೌಲ್ಯಮಾನಕ್ಕೆ ಹೋಲಿಸಿದ ಮಹುವಾ, ‘ಈ ದೇಶದಲ್ಲಿ ಕೆಲವು ಶಕ್ತಿಗಳು ‘ಅಲ್ಲಿ’ ಕುಳಿತು ಈ ಸಂಖ್ಯೆಗಳನ್ನು ಏರಿಸುವ ಕೆಲಸದಲ್ಲಿ ನಿರತವಾಗಿವೆ ಎಂದು ಕಿಡಿ ಕಾರಿದರು.

3. ಮೀಡಿಯಾ ಕಂಪನಿಗಳ ನಿಯಂತ್ರಣ ಕುರಿತು:

ಭಾರತದ ಐದು ಬೃಹತ್ ಸುದ್ದಿ ಮೀಡಿಯಾ ಸಂಸ್ಥೆಗಳು ಇವತ್ತು ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿವೆ ಅಥವಾ ಋಣದಲ್ಲಿವೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಸರ್ಕಾರಿ-ವಿರೋಧಿ ಸ್ಟೋರಿಗಳನ್ನು ಮಾನಿಟರ್ ಮಾಡಲು 120 ಜನರನ್ನು ನೇಮಿಸಿಕೊಂಡಿದೆ. ಟಿವಿ ಚಾನೆಲ್‍ಗಳು ತಮ್ಮ ಪ್ರೈಮ್‍ಟೈಮನ್ನು ಆಡಳಿತ ಪಕ್ಷದ ಪ್ರಪಗಂಡಾಗಳನ್ನು ಪ್ರಸಾರ ಮಾಡಲು ವ್ಯಯಿಸುತ್ತಿವೆ ಎಂದ ಅವರು, ಆಡಳಿತ ಪಕ್ಷದ ಜಾಹಿರಾತು ವೆಚ್ಚ ಮತ್ತು ಬ್ಲಾಕ್ ಮಾಡಲಾಗಿರುವ ಚಾನೆಲ್‍ಗಳ ವಿವರಗಳ ಅಂಕಿಸಂಖ್ಯೆ ಒದಗಿಸಲು ಆಗ್ರಹಿಸಿದರು.

ಹೆಚ್ಚುತ್ತಿರುವ ಫೇಕ್‍ನ್ಯೂಸ್ ಭೀತಿ ಕುರಿತು ಪ್ರಸ್ತಾಪಿಸಿದ ಅವರು, ಕಳೆದ ಚುನಾವಣೆಗಳು ರೈತರ ಸಂಕಷ್ಟ, ನಿರುದ್ಯೋಗ ಇಶ್ಯೂಗಳ ಮೆಲೆ ನಡೆಯದೇ, ವ್ಯಾಟ್ಸಾಪ್, ಫೇಕ್‍ನ್ಯೂಸ್ ಮತ್ತು ತಿರುಚುವ ಮನಸ್ಸುಗಳ ಮೇಲೆಯೇ ಜರುಗಿವೆ ಎಂದರು.

4. ರಾಷ್ಟ್ರೀಯ ಸುರಕ್ಷತೆ ಕುರಿತು:

ಮಕ್ಕಳನ್ನು ಹೆದರಿಸಲು ಬಳಸುತ್ತಿದ್ದ ‘ಕಾಲಾ ಭೂತ್’ (ಕಪ್ಪಗಿನ ದೆವ್ವ)ನ ಎಚ್ಚರಿಕೆಯ ಕತೆಯು ಈಗ ಎಲ್ಲ ಕಡೆಯೂ ವ್ಯಾಪಕವಾಗಿದೆ. ರಾಷ್ಟ್ರೀಯ ಸುರಕ್ಷತೆ ಮತ್ತು ವೈರಿಗಳನ್ನು ಗುರುತಿಸುವಿಕೆಯಲ್ಲಿ ಒಂದು ಗೀಳು ಸೇರಿಕೊಂಡಿದೆ. ಸೇನೆಯ ಸಾಧನೆಗಳನ್ನೆಲ್ಲವೂ ಒಬ್ಬ ವ್ಯಕ್ತಿಯಿಂದ ಆಕ್ರಮಿಸಲ್ಪಿಟ್ಟಿವೆ. ಇಂತಹ ಒಂದು ರಾಜಕೀಯ ವಾತಾವರಣದಲ್ಲಿ ಭಯೋತ್ಪಾದನೆ ಕೃತ್ಯಗಳು ಹೆಚ್ಚಿರುವುದು ವ್ಯಂಗ್ಯ ಎಂದ ಅವರು, ಸೈನಿಕರ ಸಾವಿನಲ್ಲಿ ಶೇ. 106 ರಷ್ಟು ಏರಿದ್ದನ್ನು ಪ್ರಸ್ತಾಪಿಸಿದರು.

5. NRC, CAA ಕುರಿತು:

ಈಗ ನಾಗರಿಕ ಎಂಬ ಪದದ ಮರುವ್ಯಾಖ್ಯಾನ ನಡೆದಿದೆ. ಎನ್‍ಆರ್‌ಸಿ ಮತ್ತು ಸಿಎಎ ಕೇವಲ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದೆ. ಈ ದೇಶವನ್ನು ಹರಿಯಲಾಗುತ್ತಿದೆ. ನಾಗರಿಕರನ್ನು ಅವರ ಮನೆಯಿಂದ ಹೊರ ಹಾಕಿ ಅವರನ್ನು ‘ಅಕ್ರಮ ವಲಸೆಗಾರರು’ ಎನ್ನಲಾಗುತ್ತಿದೆ. ಈ ದೇಶದಲ್ಲಿ 50 ವರ್ಷಗಳಿಂದ ಬದುಕಿರುವ ಜನರು ತಾವು ಭಾರತೀಯರು ಎಂದು ಪ್ರಮಾಣಿಸಲು ಒಂದು ಕಾಗದದ ತುಂಡನ್ನು ತೋರಿಸಬೇಕಾಗಿದೆ ಎಂದರು.

ನರೇಂದ್ರ ಮೋದಿ ಮತ್ತು ಸ್ಮೃತಿ ಇರಾನಿಯವರ ಮೇಲೆ ಪರೋಕ್ಷವಾಗಿ ಹರಿಹಾಯ್ದ ಅವರು, ‘ತಾವು ಕಾಲೇಜುಗಳಲ್ಲಿ ಅಧ್ಯಯನ ಮಾಡಿದ್ದೇವೆ ಎಂದು ತೋರಿಸಲು ಡಿಗ್ರಿ ಪತ್ರಗಳನ್ನು ಒದಗಿಸಲಾಗದ ಸಚಿವರಿರುವ ಈ ದೇಶದಲ್ಲಿ, ಹೊರಹಾಕಲ್ಪಟ್ಟ ಜನರನ್ನು ಈ ದೇಶಕ್ಕೆ ಸೇರಿದವರು ಎಂದು ತೋರಿಸಲು ಕಾಗದ ಪತ್ರಗಳನ್ನು ತೋರಿಸಲು ನೀವು ಕೇಳುತ್ತಿದ್ದಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಎಂದೂ ಸರ್ಕಾರ ಮತ್ತು ಧರ್ಮಗಳು ಈ ಪರಿ ಸಮಾಗಮವಾಗಿರಲಿಲ್ಲ. ಸಂಸದರು ರಾಮಜನ್ಮಭೂಮಿಯ 2.77 ಎಕರೆ ಭೂಮಿಯ ಬಗ್ಗೆ ಕಾಳಜಿ ಹೊಂದಿದ್ದಾರೆಯೇ ವಿನಃ ಉಳಿದ ಭಾರತವನ್ನು ಪ್ರತಿನಿಧಿಸುವ 800 ಮಿಲಿಯನ್ ನೆಲದ ಬಗ್ಗೆ ಅಲ್ಲ ಎಂದು ಅವರು ಪರೋಕ್ಷವಾಗಿ ರಾಮಮಂದಿರ ವಿವಾದವನ್ನು ಖಂಡಿಸಿದರು.

6. ಬುದ್ದಿಜೀವಿಗಳಿಗೆ ಅಗೌರವ ಮತ್ತು ಭಿನ್ನಮತವನ್ನು ಹತ್ತಿಕ್ಕುವುದರ ಬಗ್ಗೆ:

ಈ ಎಲ್ಲದರಲ್ಲಿ ಬಹು ಅಪಾಯಕಾರಿ ವಿಷಯವೆಂದರೆ ಬುದ್ದಿಜೀವಿಗಳು ಮತ್ತು ಕಲೆಯ ಮೇಲೆ ಸರ್ಕಾರದ ಸಂಪೂರ್ಣ ತಿರಸ್ಕಾರ ಧೋರಣೆ. ಇಲ್ಲಿ ಭಿನ್ನಮತ, ಭಿನ್ನಧ್ವನಿಯನ್ನು ಸಾಕಷ್ಟು ಹತ್ತಿಕ್ಕಲಾಗಿದೆ. ಉದಾರವಾದಿ ಶಿಕ್ಷಣಕ್ಕೆ ಧನಸಹಾಯವನ್ನು ಕಡಿತಗೊಳಿಸಲಾಗಿದೆ. ಸಂವಿಧಾನದ 51ನೇ ಅನುಚ್ಛೇದ ವೈಜ್ಞಾನಿಕ ಮನೋಭಾವವನ್ನು ಆಗ್ರಹಿಸುತ್ತದೆ. ಆದರೆ ಈಗ ನಾವು ಭಾರತವನ್ನು ಕತ್ತಲ ದಿನಗಳಿಗೆ ದೂಡುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ಹೈಸ್ಕೂಲ್ ಪಠ್ಯಗಳನ್ನು ತಿರುಚಲಾಗಿದೆ ಮತ್ತು ವಿಕೃತಗೊಳಿಸಲಾಗಿದೆ. ಭಿನ್ನಮತ, ಭಿನ್ನಧ್ವನಿ ಇರಲಿ, ಪ್ರಶ್ನಿಸುವುದನ್ನೇ ನಿಮಗೆ ಸಹಿಸಲಾಗುತ್ತಿಲ್ಲ.

7. ಚುನಾವಣಾ ಆಯೋಗದಲ್ಲಿ ಕೇಂದ್ರ ಆರೋಪಿತ ಹಸ್ತಕ್ಷೇಪದ ಕುರಿತು:

ಚುನಾವಣಾ ವ್ಯವಸ್ಥೆಯ ಸ್ವಾತಂತ್ರ್ಯ ಸವಕಳಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ವೆಚ್ಚವಾದ ಹಣದ ಮೊತ್ತದ ಬಗ್ಗೆ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಂಡಿಲ್ಲ? ಚುನಾವಣೆಗಾಗಿ 60 ಸಾವಿರ ಕೋಟಿ ವೆಚ್ಚವಾಗಿದೆ, ಇದರಲ್ಲಿ ಶೇ. 50ರಷ್ಟನ್ನು ಒಂದೇ ಪಾರ್ಟಿ ವೆಚ್ಚ ಮಾಡಿದೆ ಎಂದು ವಿವರಿಸಿದರು.

ಸಂಸದರನ್ನು ಉದ್ದೇಶಿಸಿ ಅವರು, ‘ನೀವು ಇತಿಹಾಸದ ಯಾವ ಭಾಗದಲ್ಲಿ ನೀವು ನಿಲ್ಲಲು ಬಯಸುತ್ತೀರಿ, ಅದನ್ನು ಎತ್ತಿ ಹಿಡಿಯುವ ಕಡೆಗೋ ಅಥವಾ ಅದನ್ನು ನಾಶ ಮಾಡುತ್ತಿರುವವರ ಕಡೆಯೋ’ ಎಂದು ಪ್ರಸ್ನಿಸಿದರು.

( ಇದಕ್ಕೆ ಪೂರಕವಾಗಿ ರಹಮತ್ ತರಿಕೇರೆ ಅವರ ‘ಭಾರತೀಕರಣಗೊಳ್ಳಿರಿ-ಹಾಗೆಂದರೇನು’ ಮತ್ತು ‘ದೇಶ ಬಿಟ್ಟು ಹೋಗು’ ಎಂಬ ಕರೆ- ಈ ಬರಹಗಳನ್ನು (ಧರ್ಮಪರೀಕ್ಷೆ ಕೃತಿ) ಓದಬಹುದು)


ಇದನ್ನೂ ಓದಿ: ಸಂಸತ್ತಿನಲ್ಲಿ ಮಹುವಾ ಮೊಯಿತ್ರ ಬಿರುಗಾಳಿ ಭಾಷಣ: ಯಾವುದೇ ಕ್ರಮವಿಲ್ಲವೆಂದ ಕೇಂದ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಒಬ್ಬ ವಿದ್ಯೆವಂತೆ /ವಂತ ಸಂಸದರು ಮಾತ್ರ ಈ ನೆಲೆಯಲ್ಲಿ ಮಾತನಾಡಲು ಸಾಧ್ಯ.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....