ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ನಿರಂತರ 11 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟಕ್ಕೆ ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಡಿಸೆಂಬರ್ 8 ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡುವುದಾಗಿ ತಿಳಿಸಿವೆ. ದೆಹಲಿ ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಮತ್ತು ಇಂಡಿಯಾ ಟೂರಿಸ್ಟ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ರೈತರ ಪ್ರತಿಭಟನೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದೆ.
“ಕೃಷಿ ಮತ್ತು ಸಾಗಣೆ ತಂದೆಯ ಇಬ್ಬರು ಮಕ್ಕಳಂತೆ” ಎಂದು ಹೇಳಿರುವ ಇಂಡಿಯಾ ಟೂರಿಸ್ಟ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಸತೀಶ್ ಸೆಹ್ರಾವತ್ ಅವರು ಹೇಳಿದ್ದಾರೆ. ಅವರು 51 ಸಾರಿಗೆ ಸಂಘಟನೆಗಳು ತಮ್ಮ ಭಾರತ್ ಬಂದ್ ಕರೆಯಲ್ಲಿ ರೈತರನ್ನು ಬೆಂಬಲಿಸಲು ನಿರ್ಧರಿಸಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 8ಕ್ಕೆ ರೈತರಿಂದ ಭಾರತ್ ಬಂದ್: ಎಲ್ಲೆಡೆ ಹರಿದುಬರುತ್ತಿರುವ ಬೆಂಬಲದ ಮಹಾಪೂರ
ದೆಹಲಿ ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಶನ್ ಅಧ್ಯಕ್ಷ ಪರ್ಮೀತ್ ಸಿಂಗ್ ಗೋಲ್ಡಿ ಮಾತನಾಡಿ, ರೈತರು ನಮ್ಮ ವ್ಯವಹಾರದ ಬೇರುಗಳಾಗಿದ್ದು, ನಾವು ನಮ್ಮ ರೈತ ಸಹೋದರರನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಡಿಸೆಂಬರ್ 2 ರಂದು, ರೈತರ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 08 ರಿಂದ ದೇಶಾದ್ಯಂತ ಅಗತ್ಯ ಸರಕುಗಳ ಸಾಗಾಣಿಕೆ ನಿಲ್ಲಿಸುತ್ತೇವೆ ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ (AIMTC) ಎಚ್ಚರಿಕೆ ನೀಡಿತ್ತು. AIMTC ರಾಷ್ಟ್ರದಾದ್ಯಂತ 95 ಲಕ್ಷ ಟ್ರಕ್ಕರ್ ಮತ್ತು ಇತರ ಘಟಕಗಳನ್ನು ಪ್ರತಿನಿಧಿಸುತ್ತದೆ.
“ನಾವು ಹೋರಾಟ ನಿರತ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 08 ರಂದು ಬಂದ್ಗೆ ಕರೆ ನೀಡಲಿದ್ದೇವೆ. ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಕ್ಕಾ ಜಾಮ್ ಮಾಡಲಿದ್ದೇವೆ. ನಮ್ಮ ವಾಹನಗಳ ಸಂಚಾರವನ್ನು ಬಂದ್ ಮಾಡಿ ಅಗತ್ಯ ಸರಕುಗಳ ಸಾಗಾಣಿಕೆಯನ್ನು ನಿಲ್ಲುಸುತ್ತೇವೆ” ಎಂದು AIMTC ಅಧ್ಯಕ್ಷ ಕುಲ್ತರಣ್ ಸಿಂಗ್ ಅತ್ವಲ್ ತಿಳಿಸಿದ್ದರು.
ಇದನ್ನೂ ಓದಿ: ರೈತರ ಬೇಡಿಕೆ ಈಡೇರದಿದ್ದರೆ ದೇಶಾದ್ಯಂತ ಅಗತ್ಯ ಸರಕುಗಳ ಸಾಗಾಣಿಕೆ ನಿಲ್ಲಿಸುತ್ತೇವೆ: ಸಾಗಾಣಿಕೆದಾರ ಒಕ್ಕೂಟದ ಎಚ್ಚರಿಕೆ