ವಿವಾದಾತ್ಮಕ ಮೂರು ಕೃಷಿ ಮಸೂದೆಗಳು ರದ್ಧಾಗಬೇಕೆಂದು ದೆಹಲಿಯ ಕೊರೆಯುವ ಚಳಿಯಲ್ಲಿ ಒಂದು ವಾರದಿಂದ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 08 ರಿಂದ ದೇಶಾದ್ಯಂತ ಅಗತ್ಯ ಸರಕುಗಳ ಸಾಗಾಣಿಕೆ ನಿಲ್ಲಿಸುತ್ತೇವೆ ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ (AIMTC) ಎಚ್ಚರಿಕೆ ನೀಡಿದೆ.
ನಾವು ಹೋರಾಟನಿರತ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಡಿಸೆಂಬರ್ 08 ರಂದು ಬಂದ್ಗೆ ಕರೆ ನೀಡಲಿದ್ದೇವೆ. ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಕ್ಕಾ ಜಾಮ್ ಮಾಡಲಿದ್ದೇವೆ. ನಮ್ಮ ವಾಹನಗಳ ಸಂಚಾರವನ್ನು ಬಂದ್ ಮಾಡಿ ಅಗತ್ಯ ಸರಕುಗಳ ಸಾಗಾಣಿಕೆಯನ್ನು ನಿಲ್ಲುಸುತ್ತೇವೆ ಎಂದು AIMTC ಅಧ್ಯಕ್ಷ ಕುಲ್ತರಣ್ ಸಿಂಗ್ ಅತ್ವಲ್ ತಿಳಿಸಿದ್ದಾರೆ.
AIMTC ಎಂಬುದು ದೇಶಾದ್ಯಂತ ಸರಕು ಸಾಗಾಣಿಗೆ ಮಾಡುವ ಸುಮಾರು 1 ಕೋಟಿ ಗೂಡ್ಸ್ ವಾಹನಗಳ ಮಾಲೀಕರ ಒಕ್ಕೂಟವಾಗಿದೆ. “ನಮ್ಮ 65% ವಾಹನ ಮಾಲೀಕರು ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡುವ ಮೂಲಕ ಜೀವನ ಕಟ್ಟಿಕೊಂಡಿದ್ದೇವೆ. ನಮಗೆ ಅನ್ನ ನೀಡುವ ರೈತರು ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಹಾಲು, ತರಕಾರಿ, ಔಷಧಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಸಾಗಾಣಿಕೆಯನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬಾರದು” ಎಂದು AIMTC ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರೈತ ಮುಖಂಡರು ಸಚಿವರೊಂದಿಗಿನ 7 ಗಂಟೆಗಳ ಮಾತುಕತೆ ಅಂತ್ಯ: ಯಾರು ಏನು ಹೇಳಿದರು?