Homeಕರ್ನಾಟಕಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

ಶ್ರದ್ಧಾಂಜಲಿ; ಶಾಶ್ವತ ಮೌನಕ್ಕೆ ಜಾರಿದ ನಿಷ್ಠುರ ಮಾತಿನ ಮಾದೇಗೌಡರು

- Advertisement -
- Advertisement -

ಜಿ. ಮಾದೇಗೌಡರು ಗಾಂಧಿವಾದಿ. ಕೆಲವರಿಗೆ ’ಇವನ್ಯಾವ ಸೀಮೆ ಗಾಂಧಿವಾದಿ’ ಅನ್ನಿಸುತ್ತಿದ್ದುದೂ ಉಂಟು. ಯಾಕೆಂದರೆ ಅವರ ಅಸಹನೆಯ ಸಿಟ್ಟಿನ ಮುಖ, ತೀಕ್ಷ್ಣವಾದ ಕಣ್ಣುಗಳು ಮತ್ತು ಈ ರೂಪಕ್ಕೆ ಮೆರಗು ಕೊಟ್ಟಂತಹ ಅವರ ನಿಷ್ಠುರವಾದ ಮಾತುಗಳು ಹಾಗೂ ಆ ಮಾತಿನಲ್ಲಿ ಅಡಗಿದ್ದ ಸತ್ಯ ಸಂಗತಿಗಳು. ಹೀಗೆ, ಗಾಂಧಿವಾದಿಗಳು ಹೀಗೂ ಇರಬಲ್ಲರು ಎಂದು ತೋರಿಸಿಕೊಟ್ಟವರು ಮಾದೇಗೌಡರು. ಮಂಡ್ಯದ ಮಣ್ಣು ರೂಪಿಸಿದ ಅಪರೂಪದ ರಾಜಕಾರಣಿಗಳ ಪೈಕಿ ಮಾದೇಗೌಡರ ವರಸೆಯೇ ಬೇರೆ. ಇತರರನ್ನು ಮೆಚ್ಚಿಸುವುದಕ್ಕಾಗಿ ಎಂದೂ ಮಾತನಾಡಿದವರಲ್ಲ. ಹಾಸ್ಯ ಅವರಿಗೆ ಹಿಡಿಸುತ್ತಿರಲಿಲ್ಲ. ಆದರೆ ಅವರ ಕೆಲವು ಮಾತುಗಳು ಹಾಸ್ಯವಾಗಿ ಪರಿವರ್ತನೆಯಾಗುತ್ತಿದ್ದವು. ಉದಾಹರಣೆಗೆ ಅವರೇ ಹೇಳಿದಂತೆ, ’ಈ ಎಸ್.ಎಂ. ಕೃಷ್ಣ ಮತ್ತೆ ಅಂಬರೀಶ್ ರಾಜಕಾರಣದಲ್ಲಿ ಯಾವ ಗೇಮೆಯನ್ನು ಮಾಡದವರು. ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಇಂತಹ ದೈಹಿಕ ಶ್ರಮದಿಂದ ದೂರವುಳಿದವರು. ಆದರೂ ಅವುರು ರಾಜಕಾರಣದಲ್ಲಿ ಏನೇನೊ ಆದ್ರು. ಒಬ್ಬ ಮೋಜುಗಾರ ಇನ್ನೊಬ್ಬ ಸೊಗಸುಗಾರ. ಈ ಹಾಳುಡುಗ್ರು ಅವುರು ಬಂದಾಗ ನ್ವಣ ಮುತ್ತಿದಂಗೆ ಮುತ್ತಿಗತವೆ. ಇದಕೇನೇಳನ’ ಎಂದಿದ್ದರು.

ಕಾವೇರಿ ವಿಷಯ ಅವರ ಜೀವನಾಡಿಯಾಗಿತ್ತು. ಕಾವೇರಿ ಸಮಸ್ಯೆ ಭುಗಿಲೇಳುವುದಕ್ಕೂ ಮೊದಲೆ ಹಾಜರಾಗಿ ಚಳವಳಿಯನ್ನ ನಿಯಂತ್ರಿಸುತ್ತಿದ್ದರು. ಅದೂ ಗಾಂಧಿ ಮಾರ್ಗದಲ್ಲಿ. ಒಮ್ಮೆ ಈ ಚಳವಳಿಯೊಳಕ್ಕೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ರಾಜಿನಾಮೆಯಿತ್ತು ಬಂದು ಸೇರಿಕೊಂಡರು. ಇದು ಮಾದೇಗೌಡರಿಗೆ
ಸಿಟ್ಟು ತರಿಸಿ ಗದರಿಸಿ ಕಳಿಸಿದ್ದರು. ಇಷ್ಟಾದರೂ ಅಂಬಿ ಮತ್ತು ಮಾದೇಗೌಡರ ನಡುವೆ ಒಳ್ಳೆ ಸಂಬಂಧವಿತ್ತು. ಒಮ್ಮೆ ಗೌಡರು ಅಂಬರೀಶ್‌ರನ್ನು ಕುರಿತು “ಲೇ ಅಂಬರೀಶ ಒಳ್ಳೆ ಬುದ್ದಿನೆ ಕಲಿಲಿಲ್ಲವಲ್ಲೊ ನೀನು” ಅಂದರು. ಅದಕ್ಕೆ ಅಂಬಿ “ಲೇ ಮುದುಕ ಮ್ಯಟ್ರೆ ಹಿಸಿಗಿ ಸಾಯಿಸಿಬುಡ್ತಿನಿ ಸುಮ್ಮನಿರು” ಎಂದರು. ಎಲ್ಲರ ಸ್ಥಾನಮಾನ ಸೊಕ್ಕನ್ನು ಮುರಿದು ತನ್ನ ವ್ಯಕ್ತಿತ್ವಕ್ಕೆ ಒಗ್ಗಿಸಿಕೊಳ್ಳುವ ಅಂಬರೀಶ್ ತನ್ನ ಇಂತಹ ಗುಣಕ್ಕೆ ಒಗ್ಗಿಕೊಳ್ಳದವರ ಬಳಿ ಸುಳಿಯುತ್ತಿರಲಿಲ್ಲ. ಉದಾಹರಣೆ ದೇವೇಗೌಡರು, ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಇಂತಹವರ ಬಳಿ ಐದು ನಿಮಿಷವೂ ಇರುತ್ತಿರಲಿಲ್ಲ. ಆದರೆ ಇಂತವರ ಸಾಲಿನ ಮಾದೇಗೌಡರನ್ನ ಪಳಗಿಸಿದ್ದರು. ಕಾವೇರಿ ವಿಷಯದಲ್ಲಿ ಇಬ್ಬರ ಅಭಿಪ್ರಾಯಗಳು ಅವರ ಮನೋಗತಕ್ಕೆ ತಕ್ಕಂತಿದ್ದವು. ಕೆರೆಕಟ್ಟೆಯ ವಿಷಯದಲ್ಲಿ ವಾಟರ್ ಪಾಲಿಸಿ ಎಂಬುದೊಂದಿದೆ. ಅಚ್ಚುಕಟ್ಟಿನ ಕಟ್ಟಕಡೆ ರೈತನಿಗೂ ನೀರು ತಲುಪಬೇಕು.

ಆದರೆ ಮಾದೇಗೌಡರು “ಡ್ಯಾಂ ನಮ್ಮದು, ಅದರ ಗೇಟಿನ ಕೀ ನನ್ನ ಬಳಿ ಇರಬೇಕು. ಬೇಕಾದ್ರೆ ನೀರು ಕೊಟ್ಟೆ ಇಲ್ದಿದ್ರೆ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದರು. ಅದೇ ಅಂಬರೀಶ್ “ನನ್ನ ಬಕೀಟಲ್ಲಿ ನೀರಿದ್ರೆ ಯರಡು ಲೋಟ ಕೊಡ್ತಿನಪ್ಪ ನೀರೆ ಇಲ್ದಿದ್ರೆ ಎಲ್ಲಿಕೊಡ್ಲಿ” ಎನ್ನುತ್ತಿದ್ದರು.

ಮಾದೇಗೌಡರ ಚಳವಳಿ ಕಾವೇರಿಗೆ ಮಾತ್ರ ಸೀಮಿತವಾಗಿತ್ತು. ಒಂದು ಬಾರಿ ಕಾವೇರಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗಕ್ಕೆ ಬಂದರು. ಈಗಾಗಲೇ ಪ್ರತಿಭಟಿಸುತ್ತಿದ್ದ ರೈತರು “ಅಯ್ಯವ್ ಏಳಯ್ಯ ಮ್ಯಾಕೆ ನಡಿಯಯ್ಯ ಈಗ ಬಂದುಬಿಟ್ಟ. ಅಲ್ಲೋಗಿ ಸಿ.ಎಂ ಅತ್ರ ಏನೇನೊ ಕ್ಯಲಸ ಮಾಡಿಸಿಕೊಳದು ಇಲ್ಲಿ ಬಂದು ಚಳವಳಿ ಮಾಡದು” ಎಂದು ಮೂದಲಿಸಿಬಿಟ್ಟರು. ಚಳವಳಿಗೆ ನನ್ನಂಥವರ ಅಗತ್ಯವಿಲ್ಲವೇನೊ ಅಂತ ಒಂದುಕ್ಷಣ ಮಾದೇಗೌಡರಿಗೆ ಅನ್ನಿಸಿಬಿಟ್ಟಿತು. ಆದರೆ, ಗಾಂಧಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ಅವರು ತಮ್ಮ ಹೋರಾಟಗಳನ್ನು ಕೈಬಿಟ್ಟವರಲ್ಲ. ಅವರ ಬದುಕಿನ ಬಹುದೊಡ್ಡ ಸಾಧನೆಯಾದ ಗಾಂಧಿ ಭವನ ನಿರ್ಮಾಣ ಪೂರ್ಣಗೊಂಡ ಮೇಲೆ ಅದರ ಮುಂದೆ ಕುಳಿತು, ಹಾಳಾಗುತ್ತಿರುವ ಯುವಜನತೆ, ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಯೋಚಿಸುತ್ತ ನಿಷ್ಠುರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಅಂತಹ ಒಂದು ಸಂದರ್ಭದಲ್ಲಿ ಅವರ ಸಮಕಾಲೀನ ರಾಜಕಾರಣಿಯಾದ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಅಭಿನಂದನಾ ಗ್ರಂಥ ತರುವ ಸಮಯದಲ್ಲಿ ಮಾತನಾಡಿಸಲು ಹೋಗಿದ್ದೆ. ಗಾಂಧಿ ಭವನದ ವರಾಂಡದಲ್ಲಿ ಕುಳಿತಿದ್ದ ಅವರ ಪಕ್ಕ ಕುಳಿತ ನಾನು “ಸಾರ್ ಹೆಚ್.ಟಿ ಕೃಷ್ಣಪ್ಪನವರ ಬಗ್ಗೆ ಒಂದು ಅಭಿನಂದನಾ ಗ್ರಂಥ ತರತಾಯಿದ್ದಿವಿ, ಅವರು ನಿಮ್ಮ ಸಮಕಾಲೀನರು ಮತ್ತು ಒಡನಾಡಿಯಾಗಿದ್ರು. ಅವುರ ಬಗ್ಗೆ ಹೇಳಿ ಸಾರ್” ಎಂದೆ. ಮಾದೇಗೌಡರು ಒಳಗಣ್ಣಾಗಿ “ಕೃಷ್ಣಪ್ಪ ನಾನು ತಾಲೂಕ್ ಬೋರ್ಡ್ ಚುನಾವಣೆ ಮುಖಾಂತರ ರಾಜಕೀಯಕ್ಕೆ ಬಂದೊ.. ಅವುರು ಇಲ್ಲೇ ಲಾಯರಾಗಿದ್ರು. ನಾಟಕದಲ್ಲಿ ಪಾರ್ಟು ಮಾಡತಿದ್ರು. ಪದ ಹೇಳತಿದ್ರು. ಮಾತ್ರ ವಳ್ಳೆ ಮನ್ಸ” ಎಂದವರು ತಿರುಗಿ ಮಾತನಾಡಲಿಲ್ಲ. ಈ ರೀತಿ ಕೇಳಲು ಬಂದವನು ಯಾವೂರ ದಾಸಯ್ಯ ಎಂದೂ ನೋಡಲಿಲ್ಲ. ’ಗಾಂಧಿ ಭವನ ಚನ್ನಾಗ್ಯದೆ ಸಾರ್’ ಎಂದೆ. “ಇನ್ನ ಚನ್ನಾಗಿರದು. ಇರೊ ಜಾಗದಲ್ಯಲ್ಲ. ಕಟ್ಟಿದ್ರೆ ಹೊರಗಡೆ ಜಾಗದಲ್ಲಿ ಗಾಡಿಗಳು ನಿಂತಗಳವು. ಆ ಡಿ.ಕೆ ಶಿವಕುಮಾರ ವಸಿ ಜಾಗ ವಡಕಂಡು ಅದೇನೊ ಕಟ್ಟಿಗಂಡ. ಬರಿ ಇಂತ ಕ್ಯಲಸಗಳಯ ಅವುರವು” ಎಂದು ಸಿಟ್ಟಾದರು. ಎದ್ದು ಬಂದೆ ಆ ನಂತರ ಹೆಚ್.ಟಿ ಕೃಷ್ಣಪ್ಪನವರ ಬಳಿ ಬಂದು “ಸಾರ್ ಮಾದೇಗೌಡ್ರು ಅದ್ಭುತ ಸಾರ್. ನಿಮ್ಮ ಇಡೀ ಜೀವನನ ಐದು ಪದದಲ್ಲಿ ಹೇಳಿ ಮುಗಿಸಿದ್ರು” ಅಂದೆ. ನಗಾಡಿದ ಅವರು “ಆಯ್ತು ಅಷ್ಟನೆ ಹಾಕಿ” ಎಂದರು. ಹಾಗೇ ಮಾಡಿದೆ. ಮಾದೇಗೌಡರ ಬಳಿ ಅನವಶ್ಯಕ ಪುಲಾರಕ್ಕೆ ಅವಕಾಶವಿರಲಿಲ್ಲ.

ವಯಸ್ಸಾದ ವ್ಯಕ್ತಿಯ ಮಾತಿನಲ್ಲಿ ಮೊದಲಿನ ನಿಷ್ಠುರತೆ ಸಿಟ್ಟು ಸೆಡವುಗಳಿರುವುದಿಲ್ಲ ಎನ್ನುತ್ತಾರೆ. ಆದರೆ ಮಾದೇಗೌಡರ ವಿಷಯದಲ್ಲಿ ಇವು ಸುಳ್ಳಾಗಿದ್ದವು. ಬದುಕಿನ ಕಟ್ಟಕಡೆಯವರೆಗೂ ಅವರು ಕಡುಪಾಗೇ ಇದ್ದರು. ಜಿಲ್ಲಾಧಿಕಾರಿಯಿಂದ ಹಿಡಿದು ಯಾರಿಗೂ ಕೇರ್ ಮಾಡದ ಮಾದೇಗೌಡರು, ಮೈಗಳ್ಳ ಅಧಿಕಾರಿಗಳಿಗೆ ಮೈಚಳಿ ಬಿಡಿಸುತ್ತಿದ್ದರು. ಕಲೆ, ಸಾಹಿತ್ಯ ಸಂಗೀತದ ಅಭಿರುಚಿಯಿಂದ ಕೆ.ವಿ ಶಂಕರೇಗೌಡರು ಜಿಲ್ಲೆಗೆ ಕೀರ್ತಿ ತಂದರೆ ಮಾದೇಗೌಡರು ತಮ್ಮ ವಿಶಿಷ್ಟ ರೀತಿಯ ರಾಜಕಾರಣದ ವರಸೆಯಿಂದ ಮಂಡ್ಯ ಜಿಲ್ಲೆಗೆ ಹೆಸರು ತಂದಿದ್ದರು. ತುಂಬ ಶಿಸ್ತಿನಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿ ಮಗನಿಗೆ ವಹಿಸಿದ್ದರು. ಮಗ ಚಿರಂಜೀವಿ ಸಿಂಗ್ ತರದ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಮಗ ರಾಜಕಾರಣಕ್ಕೆ ಬಂದಾಗ ಅವರು ಸಿಡಿಮಿಡಿಗೊಂಡು “ವಳ್ಳೆ ಅಧಿಕಾರಿಯಾಗು ಅಂದ್ರೆ ಈ ಬಡೆತದ್ದು ರಾಜಕೀಯಕ್ಕೆ ಬತ್ತಲ್ಲ ಹೇಳು” ಎಂದಿದ್ದರು.

ಒಮ್ಮೆ ಲಂಕೇಶ್ ಎದುರು ಕುಳಿತಿದ್ದ ಹೆಚ್.ಎಲ್. ಕೇಶವಮೂರ್ತಿಯವರು ಮಾದೇಗೌಡರ ಆರೋಗ್ಯದ ಬಗ್ಗೆ ಮಾತನಾಡುತ್ತ “ತುಂಬಾ ಕುಡಿತರೆ ಸಾರ್ ಎದುರಿಗಿದ್ದ ಬಾಟ್ಳಿ ಖಾಲಿ ಮಾಡಿದ ಮ್ಯಾಲೆ ಮೇಕ್ಕೇಳದು” ಎಂದರು. ತುಂಬಾ ಒಳ್ಳೆದು, ಮಾದೇಗೌಡ್ರು ಈ ವಯಸ್ಸಲ್ಲಿ ಅಷ್ಟು ಕುಡಿತರೆ ಅಂದ್ರೆ ಹೆಮ್ಮೆ ಪಡಬೇಕು ನಾವು ಎಂದು ನಕ್ಕರು. ಆದರೆ, ಮಾದೇಗೌಡರು ತುಂಬು ಜೀವನ ನಡೆಸಿ ಶಿಕ್ಷಣ ಸಂಸ್ಥೆ, ಗಾಂಧಿ ಭವನ ಮತ್ತು ಚಳವಳಿಯನ್ನು ಬಿಟ್ಟು ಹೋಗಿದ್ದಾರೆ. ಸದ್ಯಕ್ಕೆ ಮಂಡ್ಯದಲ್ಲಿ ಅವರ ಜಾಗ ತುಂಬುವವರು ಯಾರೂ ಇಲ್ಲ. ಒಂದು ಇತಿಹಾಸ ಕೊನೆಗೊಂಡಿದೆ.

  • ಬಿ ಚಂದ್ರೇಗೌಡ

ಇದನ್ನೂ ಓದಿ: ಕೊಪ್ಪಳ: ಹಿರಿಯ ಸಾಹಿತಿ, ಜನಪರ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...