Homeಮುಖಪುಟಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಟ್ರಂಪ್ ಸೋತರೂ, ಟ್ರಂಪ್‌ಯಿಸಂ ಉಳಿದಿದೆ: ಆದರೂ ಯುವ ಅಮೆರಿಕ ಭರವಸೆ ಮೂಡಿಸಿದೆ

ಬಿಜೆಪಿ, RSS ನಿಲುವುಗಳನ್ನು ಬೈಡನ್ ಮತ್ತು ಕಮಲಹ್ಯಾರಿಸ್ ಯಾವ ಕಾರಣಕ್ಕು ಬೆಂಬಲಿಸಲಾರರು. ಈ ಇಬ್ಬರು ಸಹ ಮೋದಿ ಸರ್ಕಾರದ ಕಾಶ್ಮೀರ ಮತ್ತು CAA, NRC ನಿಲುವುಗಳನ್ನು ವಿರೋಧಿಸಿದ್ದಾರೆ.

- Advertisement -
- Advertisement -

ಇಡೀ ಪ್ರಪಂಚವೇ ಕುತೂಹಲದಿಂದ ನೋಡುತ್ತಿದ್ದ ಅಮೆರಿಕದ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸ್ಪಷ್ಟ ಗೆಲುವನ್ನು ದಾಖಲಿಸಿದ್ದಾರೆ. ಈ ಗೆಲುವು ಅಮೆರಿಕನ್ನರ ಮಟ್ಟಿಗೆ ನಿರೀಕ್ಷಿತವೇ ಆದರೂ ಟ್ರಂಪ್ ಬಹಳ ಹೀನಾಯವಾಗಿ ಸೋಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದ್ದು, ಸುಮಾರು 7 ಕೋಟಿಯಷ್ಟು ಜನಪ್ರಿಯ ಮತಗಳನ್ನು ನೀಡಿ ಜನ ಟ್ರಂಪ್‌ನನ್ನು ಬೆಂಬಲಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಯಾವುದೇ ಅಭ್ಯರ್ಥಿಗೆ ಸಿಕ್ಕಿರುವ ಅತಿಹೆಚ್ಚು ಮತಗಳ ದಾಖಲೆ ಅದು. ಅಷ್ಟೇ ಅಲ್ಲ ಅವರು 2014ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಸಿಕ್ಕಿದ್ದ ಜನಪ್ರಿಯ ಮತಗಳ ಸಂಖ್ಯೆಗಿಂತ ಸುಮಾರು 70 ಲಕ್ಷ ಮತಗಳು ಹೆಚ್ಚು. ಹಾಗೆಯೇ ಗೆದ್ದ ಅಭ್ಯರ್ಥಿ ಜೋ ಬೈಡೆನ್ ಅವರಿಗೆ ದೊರೆತಿರುವ ಜನಪ್ರಿಯ ಮತಸಂಖ್ಯೆ ಕೂಡ ಐತಿಹಾಸಿಕ ದಾಖಲೆ!

ಈ ಅಂಶ ಆ ದೇಶದ ನಾಗರಿಕರಲ್ಲಿ ಯಾವ ರೀತಿಯಲ್ಲಿ ರಾಜಕೀಯ ಒಡಕು ಮನೆಮಾಡಿತ್ತು ಎಂಬುದನ್ನು ಸೂಚಿಸುತ್ತದೆ. ಯಾವುದೇ ಬಲಪಂಥೀಯ ಸರ್ವಾಧಿಕಾರಿ ಧೋರಣೆಯ ಮುಖಂಡನ ರಾಜಕೀಯ ಯಶಸ್ಸು ಅಡಗಿರುವುದು ಜನರನ್ನು ಪೋಲರೈಸ್ ಮಾಡಿ, ಅಲ್ಪಸಂಖ್ಯಾತ ಸಮುದಾಯಗಳು, ದುರ್ಬಲ ಸಮುದಾಯಗಳನ್ನು ಕಡೆಗಣಿಸಿ, ತನ್ನ ಪಾಪ್ಯುಲಿಸ್ಟ್ ಧೋರಣೆಯನ್ನು ಜನರಿಗೆ ನಂಬಿಸುವಂತೆ ಮಾಡುವುದರಲ್ಲಿ. ಅದಕ್ಕಾಗಿ ಅಂತಹ ಮುಖಂಡರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು. ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳು, ಸಂಸ್ಥೆಗಳು ಯಾವುದಕ್ಕೂ ಗೌರವ ತೋರದೆ ಮುನ್ನಡೆಯಬಲ್ಲರು. ಇಂತಹ ಮುಖಂಡರ ಶಿಖರ ಪ್ರಾಯದಂತೆ ಮೆರೆದಿದ್ದು ಡೊನಾಲ್ಡ್ ಟ್ರಂಪ್. ದೇಶದ ಆಡಳಿತವನ್ನು ತನ್ನ ಸ್ವಂತ ವ್ಯವಹಾರದಂತೆ ಕಂಡವನು. ದೇಶ-ದೇಶಗಳ ನಡುವಿನ ಸಂಬಂಧಗಳನ್ನು ಸ್ವಂತ ವ್ಯವಹಾರದ ಲಾಭನಷ್ಟದಲ್ಲಿ ಅಳೆದವನು.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿರುವವರು ಎರಡನೇ ಅವಧಿಗೂ ಪುನರ್‌ಆಯ್ಕೆ ಆಗುವ ಸಾಧ್ಯತೆಗಳು ಹೆಚ್ಚು. ಆದರೆ ಈ ಬಾರಿ ಅದು ಸುಳ್ಳಾಗಿದೆ.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿರುವವರು ಎರಡನೇ ಅವಧಿಗೂ ಪುನರ್‌ಆಯ್ಕೆ ಆಗುವ ಸಾಧ್ಯತೆಗಳು ಹೆಚ್ಚು. ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು ಬುಶ್, ಬರಾಕ್ ಒಬಾಮಾ ಎಲ್ಲರೂ ಎರಡು ಅವಧಿಗಳಿಗೆ ಆಯ್ಕೆಯಾದವರೇ. ಆದರೆ ಈ ಬಾರಿ ಅದು ಸುಳ್ಳಾಗಿದೆ. ಟ್ರಂಪ್ ಈ ಹಿಂದಿನ ಚುನಾವಣೆಯಲ್ಲಿ ’ಮೇಕ್ ಅಮೆರಿಕ ಗ್ರೇಟ್ ಆಗೈನ್’ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಅಮೆರಿಕನ್ನರಲ್ಲಿ ಆದರಲ್ಲಿಯೂ ಬಿಳಿಯರು ಸಹಜವಾಗಿಯೇ ಟ್ರಂಪ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅಮೆರಿಕದಲ್ಲಿ ಆಳವಾಗಿ ಬೇರೂರಿದ್ದ ಆರ್ಥಿಕ ಅಸಮಾನತೆಯನ್ನು ಬಳಸಿಕೊಂಡು, ವಲಸೆಯಿಂದ ಮೂಲ ಅಮೆರಿಕನ್ನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಗುಮ್ಮ ಜನರಿಗೆ ತೋರಿಸಿ, ಕ್ಸೀನೋಫೋಬಿಯಾವನ್ನು ಉತ್ತೇಜಿಸಿ ಅಧ್ಯಕ್ಷಗಾದಿಗೆ ಏರಲು ಸಫಲವಾಗಿದ್ದ ಟ್ರಂಪ್, ತನ್ನ ಅವಧಿಯಲ್ಲಿ ಆ ಗುಮ್ಮವನ್ನು ನಂಬಿಸಲು ಪ್ರಯತ್ನ ಪಟ್ಟಷ್ಟು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಯಾವುದೇ ಪ್ರಯತ್ನ ಪಡಲಿಲ್ಲ. ಶಿಕಾಗೋ ನಗರದಲ್ಲಿ ಒಂದೊಂದು ಪಿನ್‌ಕೋಡ್‌ಗೆ ಅನುಗುಣವಾಗಿ ಜನರ ಸರಾಸರಿ ಆಯುಷ್ಯ ಸುಮಾರು 25% ಬದಲಾಗುತ್ತದೆ ಎಂಬ ಅಂಶ ಆರ್ಥಿಕ ಅಸಮಾನತೆಯನ್ನು ಎತ್ತಿತೋರಿಸುತ್ತದೆ.

ಜೊತೆಗೆ ಟ್ರಂಪ್‌ನ ದುರಾಡಳಿತ, ಪಕ್ಷಪಾತ ನಿಲುವುಗಳು, ಕಪ್ಪು ಜನರ ಮೇಲಿನ ದೌರ್ಜನ್ಯ ಜನಾಂಗೀಯ ನಿಂದನೆಯ ಬೇಜವಾಬ್ದಾರಿ ನಿಲುವುಗಳು ಅವರು ಎರಡನೆಯ ಅವಧಿಯಲ್ಲಿ ಸೋಲಲು ಕಾರಣವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೋವಿಡ್‌ಅನ್ನು ನಿಯಂತ್ರಣಕ್ಕೆ ತರದೆ ದ್ವೇಷದ ಮತ್ತು ಉಡಾಫೆಯ ಮಾತುಗಳಷ್ಟೇ ಆಡಿಕೊಂಡು ಸಮಯ ವ್ಯರ್ಥ ಮಾಡಿದ್ದೂ ಕಾರಣವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಅನೇಕ ಸಾಮ್ಯತೆಗಳಿವೆ. ಅದು ವ್ಯಕ್ತಿತ್ವ ಮತ್ತು ಪ್ರತಿನಿಧಿಸುವ ಪಕ್ಷಗಳ ದೃಷ್ಟಿಯಿಂದಲೇ ಗೊತ್ತಾಗುತ್ತದೆ.

ಆ ಕಾರಣಕ್ಕೆ ಭಾರತದ ಬಲಪಂಥೀಯ ಪಕ್ಷವಾದ ಬಿಜೆಪಿ ಮತ್ತು ಅದರ ಬೆಂಬಲಿತರು ಸಹಜವಾಗಿಯೇ ಟ್ರಂಪ್ ಗೆಲುವಿನ ನಿರೀಕ್ಷೆಯಲ್ಲಿದ್ದರು ಮಾತ್ರವಲ್ಲ ನರೇಂದ್ರ ಮೋದಿಯವರು ಈ ಹಿಂದೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ’ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂಬ ಘೋಷಣೆಯನ್ನು ಕೂಗಿ ಭಾರತೀಯ ಅಮೆರಿಕನ್ನರನ್ನು ಟ್ರಂಪ್ ಪರವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸಿದ್ದರು.

ಜವಾಹರ್‌ಲಾಲ್ ನೆಹರೂ ಇನ್ನೂ ಆಗ ತಾನೆ ಸ್ವಾತಂತ್ರ್ಯಗಳಿಸಿದ್ದ ಭಾರತವನ್ನು ಮುನ್ನಡೆಸುವಾಗಲೂ, ಅಲಿಪ್ತ ನೀತಿಯನ್ನು ಅನುಸರಿಸಿ ವಿಶ್ವದ ಯಾವ ಅಧಿಕಾರ ಕೇಂದ್ರಕ್ಕೂ ತಲೆಬಾಗುವುದಿಲ್ಲ ಎಂದು ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದ್ದಕ್ಕೆ ಹೋಲಿಸಿಕೊಂಡರೆ, ಅಮೆರಿಕದ ಒಂದು ಪಕ್ಷದ ಪರವಾಗಿ ಭಾರತದ ಪ್ರಧಾನಿ ಮತಯಾಚಿಸಿದ ಸಂಗತಿ ಎಷ್ಟು ಕ್ಷುಲ್ಲಕ ಎಂಬುದು ಅರಿವಿಗೆ ಬಂದೀತು! ಆದರೆ ಆದ್ಯಾವುದು ಟ್ರಂಪ್‌ನನ್ನು ಗೆಲ್ಲಿಸುವಲ್ಲಿ ಸಫಲವಾಗಿಲ್ಲ. ಅಮೆರಿಕದಲ್ಲಿ ಭಾರತೀಯ ಮೂಲದ ಬಲಪಂಥೀಯರೂ ಟ್ರಂಪ್‌ನನ್ನು ಬೆಂಬಲಿಸಿ ಮತಹಾಕಿದ್ದಾರೆ ಅನ್ನುವುದು ನಿಜವೇ ಆದರೂ ಅಮೆರಿಕದ ಹೊಸತಲೆಮಾರಿನ ಪ್ರಜ್ಞಾವಂತ ಯುವ ಜನತೆ ಟ್ರಂಪ್‌ನನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದೆ.

ವಿಶೇಷವೆಂದರೆ ಈ ಬಾರಿಯ ಚುನಾವಣೆಯಲ್ಲಿ ಅಮೆರಿಕ ದೇಶದ ಇತಿಹಾಸದಲ್ಲೇ ಹೆಚ್ಚು ಮತದಾನ ನಡೆದಿದೆ. ಆದರಲ್ಲಿಯೂ ಕಪ್ಪು ಸಮುದಾಯ ಶೇ.87ರಷ್ಟು ಮತ್ತು 18 ರಿಂದ 29ರ ಒಳಗಿನ ಯುವ ಜನತೆ ಶೇ.6.2ರಷ್ಟು ಜೋ ಬೈಡನ್ ಪರವಾಗಿ ಮತಚಲಾಯಿಸಿರುವುದು ಟ್ರಂಪ್ ಸೋಲಿಗೆ ದೊಡ್ಡ ಕಾರಣವಾಗಿದೆ.
ಜೋ ಬೈಡನ್ ಅಧಿಕೃತವಾಗಿ ಗೆಲುವು ಸಾಧಿಸಿರುವುದು ಸರಿಯೇ ಆದರು ಅಮೆರಿಕದಲ್ಲಿ ಟ್ರಂಪ್ ಪರವಾಗಿ ದೊಡ್ಡ ಮಟ್ಟದಲ್ಲಿ ಮತಗಳು ಧ್ರುವೀಕರಣವಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಟ್ರಂಪ್ ಮತ್ತು ಮೋದಿ ಇಬ್ಬರೂ ಅಧಿಕಾರಕ್ಕೆ ಬಂದಿದ್ದು ಕಲ್ಪಿತವಾದ ಹುಸಿ ಸಿದ್ಧಾಂತಗಳನ್ನೇ ಮುನ್ನೆಲೆಗೆ ತಂದು. ಭಾರತದಲ್ಲಿ ಹುಸಿ ದೇಶಪ್ರೇಮ, ಹಿಂದುತ್ವ, ಮುಸ್ಲಿಂದ್ವೇಷ ಮುಂತಾದವುಗಳೇ ಮೋದಿ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದವು. ಅದೇ ರೀತಿಯಲ್ಲೇ ಟ್ರಂಪ್ ಕೂಡ, ಅಮೆರಿಕದಲ್ಲಿ ಬಿಳಿಯರ ಸಂಖ್ಯೆ ಕಡಿಮೆಯಾಗಿದೆ, ವಲಸಿಗರ ಸಂಖ್ಯೆ ಜಾಸ್ತಿಯಾಗಿದೆ ಮಾತ್ರವಲ್ಲ, ನಮ್ಮ ಉದ್ಯೋಗಗಳೆಲ್ಲ ಬೇರೆಯವರ ಪಾಲಾಗಿದೆ, ಕಪ್ಪು ಜನಸಂಖ್ಯೆ ಜಾಸ್ತಿ ಆಗುತ್ತಿದೆ, ಮೆಕ್ಸಿಕನ್ನರು ರೇಪಿಸ್ಟರು ಹೀಗೆ ಪುಂಖಾನುಪುಂಖವಾಗಿ ಭಾಷಣ ಮಾಡಿ, ಇದಕ್ಕೆ ಪರ್ಯಾಯವಾಗಿ ಬಿಳಿಯರ ಬಲಿಷ್ಠವಾದ ಅಮೆರಿಕವನ್ನು ಕಟ್ಟುತ್ತೇವೆ ಎಂಬ ಮಾತುಗಳು ಹಲವು ಅಮೆರಿಕನ್ನರಿಗೆ ಸುಂದರವಾದ ಕನಸಾಗಿ ಕಂಡಿತು- ಆದರೆ ಈ ಭ್ರಮೆಯಿಂದ ಅಮೆರಿಕ ಜನತೆ ಬಹುಬೇಗ ಎಚ್ಚೆತ್ತುಕೊಂಡರು. ಆದರೆ ಭಾರತ ಈ ವಿಷಯದಲ್ಲಿ ಬಹಳ ಹಿಂದಿದೆ ಮತ್ತು ಅಮೆರಿಕ ಜನತೆಯಿಂದ ಕಲಿಯಬೇಕಾಗಿರುವ ಸಂಗತಿಗಳು ಬಹಳಷ್ಟಿವೆ.

ಟ್ರಂಪ್‌ಗೆ ಎದುರಾದ ಬಹಳ ಮುಖ್ಯವಾದ ಬಿಕ್ಕಟ್ಟುಗಳು: ಕೋವಿಡ್ ಮತ್ತು ಜಾರ್ಜ್‌ಫ್ಲಾಯ್ಡ್‌ನ ಕೊಲೆ
ಟ್ರಂಪ್ ಕೊರೊನಾ ವಿಪತ್ತನ್ನು ನಿರ್ವಹಿಸಿದ ರೀತಿ ಬಹಳ ಕಳಪೆಯಾಗಿತ್ತು ಮಾತ್ರವಲ್ಲ ಜನರ ಆರೋಗ್ಯದ ವಿಷಯದಲ್ಲಿ ತುಂಬಾ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದು ಒಂದೆಡೆಯಾದರೆ, ಕಪ್ಪುಜನರ ಮೇಲಿನ ದೌರ್ಜನ್ಯಗಳು ತುಂಬಾ ತೀವ್ರವಾದವು. ಇದೇ ಸಂದರ್ಭದಲ್ಲಿ ಜಾರ್ಜ್‌ಪ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯನ್ನು ಸಾರ್ವಜನಿಕವಾಗಿ ಮತ್ತು ಅತ್ಯಂತ ಕ್ರೂರವಾಗಿ ಕೊಂದ ಅಮೆರಿಕದ ಪೊಲೀಸರು ಮತ್ತು ಇಂತಹ ಘಟನೆಗಳ ನಿಯಂತ್ರಣಕ್ಕೆ ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದ ಟ್ರಂಪ್ ಆಡಳಿತ ವ್ಯವಸ್ಥೆಯ ವಿರುದ್ಧ ಅಮೆರಿಕದ ಪ್ರಜ್ಞಾವಂತ ನಾಗರಿಕರು ಕೊರೊನಾ ಸಂಕಷ್ಟದಲ್ಲಿಯೂ ಬೀದಿಗಿಳಿದು ಪ್ರತಿಭಟಿಸಿದರು. ಆ ಮೂಲಕ ಇಡೀ ಪ್ರಪಂಚಕ್ಕೆ ಟ್ರಂಪ್ ದುರಾಡಳಿತವನ್ನು ಎತ್ತಿ ತೋರಿಸಿದರು. ಅಮೆರಿಕದಲ್ಲಿ 2020ರ ಚುನಾವಣೆಯಿಂದ ಇಡೀ ದೇಶ ಒಂದು ರೀತಿಯಲ್ಲಿ ಇಬ್ಭಾಗವಾಗಿದೆ ಮತ್ತು ಟ್ರಂಪ್ ಮನಸ್ಥಿತಿಯವರು ಯಾವ ಹಂತದಲ್ಲಿಯೂ ಕಡಿಮೆಯಾಗಿಲ್ಲ ಎಂಬುದು ಗೋಚರಿಸುತ್ತದೆ.

ಆದರೆ ಅಮೆರಿಕ ದೇಶದ ಹೊಸತಲೆಮಾರು ಬಹಳ ಆರೋಗ್ಯಕರವಾಗಿ ಯೋಚಿಸುತ್ತಿರುವುದು ಮತ್ತು ಎಲ್ಲರನ್ನು ಒಳಗೊಳ್ಳುವ ಮನಸ್ಥಿತಿ ಬೆಳೆಸಿಕೊಂಡಿರುವುದು ಒಂದೆಡೆಯಾದರೆ ಅಮೆರಿಕದ ಹಳ್ಳಿಗಳಲ್ಲಿ ವಾಸಿಸುವ ಬಿಳಿಯರು ಬಹಳ ಸಾಂಪ್ರದಾಯಿಕವಾಗಿ ಯೋಚಿಸುವವರಾಗಿದ್ದು, ಇದು ಬಿಳಿಯರ ದೇಶ ಬಿಳಿಯರೆ ಆಳ್ವಿಕೆ ಮಾಡಬೇಕು ಎಂಬುವಂತಹ ಮನಸ್ಥಿತಿಯನ್ನು ಹೊಂದಿದ್ದಾರೆ. ಇವರೇ ಹೆಚ್ಚು ಟ್ರಂಪ್ ಅನುಯಾಯಿಗಳು. ಆದರೆ ನಗರಗಳಲ್ಲಿರುವ ವಿದ್ಯಾವಂತ ತಿಳಿವಳಿಕೆ ಇರುವ ಜನ ಬೈಡನ್‌ರನ್ನು ಬೆಂಬಲಿಸಿದ್ದಾರೆ. ಇದು ನಗರ ಕೇಂದ್ರೀಕೃತ ರಾಜ್ಯಗಳ ಎಲೆಕ್ಟೋರಲ್ ಕಾಲೇಜುಗಳನ್ನು ಜೋ ಬೈಡೆನ್ ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷ ಗೆದ್ದುಕೊಂಡಿರುವುದು ಸ್ಪಷ್ಟವಾಗಿ ಸೂಚಿಸುತ್ತದೆ.

Photo Courtesy: KSAT.com

ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಗೆಲುವಿನಿಂದ ಭಾರತಕ್ಕೆ ಆಗುವ ಲಾಭಗಳೇನು ಎಂಬುದು ಬಹಳ ಮುಖ್ಯವಾಗಿ ಎಲ್ಲರನ್ನು ಕಾಡುವ ಪ್ರಶ್ನೆ. ವಾಸ್ತವದ ಸಂಗತಿ ಏನೆಂದರೆ, ಈ ಮೊದಲು ಸಹ ಅಮೆರಿಕದಂತಹ ಬಂಡವಾಳಶಾಹಿ ದೇಶದಿಂದ ಭಾರತಕ್ಕೆ ಆಗಿರುವ ಉಪಯೋಗಗಳು ಅಷ್ಟಕ್ಕಷ್ಟೇ ಎಂದು ಹೇಳಬಹುದು. ಆದರೆ ಒಂದು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಬೈಡನ್ ಮತ್ತು ಕಮಲಹ್ಯಾರಿಸ್ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಲುವುಗಳನ್ನು ಯಾವ ಕಾರಣಕ್ಕು ಬೆಂಬಲಿಸಲಾರರು. ಯಾಕೆಂದರೆ ಈ ಇಬ್ಬರು ಸಹ ಮೋದಿ ಸರ್ಕಾರ ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿಲುವು, ಎನ್‌ಆರ್‌ಸಿ-ಸಿಎಎ ಕಾಯ್ದೆಗಳ ಬಗ್ಗೆ ಈ ಮೊದಲೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

ಆ ದೃಷ್ಟಿಯಿಂದ ನೋಡಿದಾಗ ಮೋದಿ ಸರ್ಕಾರಕ್ಕೆ ಆವರ ಬೆಂಬಲ ಹೆಚ್ಚು ಸಿಗಲಾರದು. ಆದರೆ ಭಾರತ ಸಾರ್ವಭೌಮ ರಾಷ್ಟ್ರವಾಗಿ ಯಾವುದೇ ದೇಶದ ಮೇಲೆ ಅವಲಂಬಿತವಾಗುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಅಮೆರಿಕದ ಸಖ್ಯ ಬಯಸಿ ನೆರೆಹೊರೆಯ ರಾಷ್ಟ್ರಗಳ ದ್ವೇಷ ಕಟ್ಟಿಕೊಳ್ಳುವುದು ಕೂಡ ದೇಶದ ಅಭಿವೃದ್ಧಿಗೆ ಮಾರಕ. ಅದು ಅಮೆರಿಕದ ಶಸ್ತ್ರಾಸ್ತ್ರ ವ್ಯವಹಾರಕ್ಕೆ ಸಹಕಾರಿಯಾಗಬಹುದು ಅಷ್ಟೆ ಹೊರತು ಭಾರತಕ್ಕೆ ಮೂರು ಕಾಸಿನ ಉಪಯೋಗವಿಲ್ಲ. ಈಗ ಪ್ರಸ್ತುತ ಬಿಜೆಪಿ ಸರ್ಕಾರದ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಟ್ರಂಪ್ ಭಜನೆಯಿಂದ ಹೊರಬಂದು, ಡೆಮಾಕ್ರಟಿಕ್ ಪಕ್ಷದ ಆಡಳಿತದ ಅಮೆರಿಕದ ಜೊತೆಗಿನ ಬಾಂಧವ್ಯವನ್ನು ಹೇಗೆ ಸರಿಪಡಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ. ಇದು ಅವರ ಆಡಳಿತದಲ್ಲಿಯೂ ಏನಾದರೂ ಧನಾತ್ಮಕ ಬದಲಾವಣೆ ತರಬಹುದೇ ಎಂಬುದು ಕೂಡ ಭರವಸೆಯ ಚಿಂತನೆ ಆಗಬಹುದು!

ಅಮೆರಿಕದ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಟ್ಸ್ ಸಿದ್ಧಾಂತಗಳಲ್ಲಿ ಸ್ಪಷ್ಟವಾದ ಭಿನ್ನತೆಗಳಿವೆ. ಭಾರತದ ಬಿಜೆಪಿಯೊಂದಿಗೆ, ಇಲ್ಲಿನ ’ರಿಪಬ್ಲಿಕನ್ ಪಾರ್ಟಿ ತುಂಬಾ ಸಾಮ್ಯತೆಗಳಿರುವುದನ್ನು ಕಾಣಬಹುದು. ಒಬ್ಬ ರಿಪಬ್ಲಿಕನ್ ಬಿಳಿಯ ಶ್ರೇಷ್ಠತೆಯನ್ನು ಒಪ್ಪುತ್ತಾನೆ. ಅದೇರೀತಿ ಭಾರತದ ಬಲಪಂಥೀಯರಿಗೆ ಹಿಂದುತ್ವ ಬಹಳ ಮುಖ್ಯವಾಗುತ್ತದೆ. ಭಾರತದಲ್ಲಿ ಹೇಗೆ ತಮ್ಮ ಜಾತಿಯವನು ಕಡು ಭ್ರಷ್ಟನಾದರೂ ನಮ್ಮವನು ಎಂಬ ಕಾರಣಕ್ಕೆ ಬೆಂಬಲಿಸುವುದನ್ನು ಮತ್ತು ಚುನಾವಣೆಯಲ್ಲಿ ಗೆಲ್ಲಿಸುವುದನ್ನು ಹೇಗೆ ಕಾಣುತ್ತೇವೆಯೋ ಇದೇ ರೀತಿ ಟ್ರಂಪ್ ಎಂಥವನೇ ಆದರೂ ನಮ್ಮವನು ಎಂಬ ಮನೋಭಾವ ಅಮೆರಿಕದ ಬಲಪಂಥೀಯ ಬಿಳಿಯರಲ್ಲಿ ಇದೆ. ಈ ಕಾರಣಕ್ಕೆ ಟ್ರಂಪ್ ಈಗ ಸೋತಿರಬಹುದು; ಆದರೆ ಟ್ರಂಪ್‌ಯಿಸಂ ಅಮೆರಿಕದಲ್ಲಿ ಇನ್ನೂ ಜೀವಂತವಾಗಿದೆ ಎಂದು ಹೇಳಬಹುದು.

ಬೈಡನ್ ಅಮೆರಿಕದಲ್ಲಿ ಈಗಿರುವ ಅಮಾನವೀಯ, ಅಲ್ಪಸಂಖ್ಯಾತರ ಬಗೆಗಿನ ಅಸಹನೆಯ ಧೋರಣೆಯನ್ನು ಪ್ರತಿನಿಧಿಸುವ ಧ್ರುವೀಕರಣವನ್ನು ಸರಿಪಡಿಸಿ, ಅಮೆರಿಕದ ಎಲ್ಲ ಜನತೆಯನ್ನು ವಿವೇಕದತ್ತ ಕೊಂಡೊಯ್ಯಬಹುದೇನೋ ಎಂಬ ಭರವಸೆಯೊಂದಿಗೆ ಅಮೆರಿಕ ಜನತೆ ಸದ್ಯಕ್ಕೆ ನಿಟ್ಟುಸಿರುಬಿಡುವಂತಾಗಿದೆ.

ಡಾ.ಅಮರ್ ಕುಮಾರ್
(ಸುಮಾರು ಐದು ದಶಕಗಳಿಂದ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ಮೂಲದ ಅಮರ್ ಕುಮಾರ್ ಜನಪರ ಚಿಂತಕರು. ಅವರ ಜೊತೆಗಿನ ಸಂವಾದದೊಂದಿಗೆ ಮೂಡಿದ ಅಮೆರಿಕ ಚುನಾವಣೆಯ ಬಗೆಗಿನ ಸಂಗತಿಗಳನ್ನು ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿರುವ ನಾರಾಯಣ ಕ್ಯಾಸಂಬಳ್ಳಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ)


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...