ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಕುಂಟುತ್ತಾ ತೆವಳುತ್ತಾ ಸಾಗಿದೆ. ಕಾಮಗಾರಿಗಳಿಗಾಗಿ ತೆಗೆದಿರುವ ದೊಡ್ಡದೊಡ್ಡ ಕಂದಕಗಳು ವಾರಾನುಗಟ್ಟಲೆ ಮುಚ್ಚದೆ ಹಾಗೇ ಉಳಿದಿವೆ. ರಸ್ತೆಗಳ ವಿಸ್ತರಣೆ, ಚರಂಡಿಗಳ ನಿರ್ಮಾಣ, ಪೈಪ್ ಅಳವಡಿಸಿಕೆ ಹೀಗೆ ನಗರದೆ ಎಲ್ಲಾ ಭಾಗದಲ್ಲೂ ಏಕಕಾಲಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಎಲ್ಲಿಯೂ ಪೂರ್ಣಗೊಂಡಿಲ್ಲ. ಇದರಿಂದ ನಗರ ಅವ್ಯವಸ್ಥೆಯ ಗೂಡಾಗಿದೆ.
ಸ್ಮಾರ್ಟ್ ಸಿಟಿ ವೆಬ್ಸೈಟ್ನಲ್ಲಿ ಪೂರ್ಣಗೊಂಡಂತೆ ತೋರಿಸಿರುವ ಕಾಮಗಾರಿಗಳು ವಾಸ್ತವದಲ್ಲಿ ಜಾರಿಯೇ ಆಗಿಲ್ಲ. ಹಳೆಯ ಕಾಮಗಾರಿಗಳಗೆ ಹೊಸ ಸ್ಮಾರ್ಟ್ ಫಲಕ ಅಳವಡಿಸಿರುವುದು ಬಿಟ್ಟರೆ ಬೇರೇನೂ ಆಗಿಲ್ಲ. ಸ್ಮಾರ್ಟ್ ಸಿಟಿ ವೆಬ್ಸೈಟ್ನಲ್ಲಿ ಎರಡು ಸ್ಮಾರ್ಟ್ ಆಟೋ ನಿಲ್ದಾಣ ಕಾಮಗಾರಿ ಪೂರ್ಣಗೊಂಡ ಬಗ್ಗೆ ದಾಖಲಿಸಲಾಗಿದೆ. ಅಂತಹ ಸ್ಮಾರ್ಟ್ ಆಟೋ ಸ್ಟ್ಯಾಂಡ್ಗಳು ಎಲ್ಲಿವೇ ಎಂಬುದೇ ಜನರಿಗಿರಲಿ ಆಟೋ ಚಾಲಕರಿಗೂ ತಿಳಿದಿಲ್ಲ. ಇದು ಅಚ್ಚರಿಯ ಸಂಗತಿ. ಆದರೆ ಈ ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಬಿಲ್ ಕೂಡ ಪಡೆಯಲಾಗಿದೆ.
ಬಿ.ಎಚ್ ರಸ್ತೆಯ ಸಿದ್ದಗಂಗಾ ಪ್ರೌಢಶಾಲೆಯ ಮುಂಭಾಗ ಮತ್ತು ತುಮಕೂರು ವಿಶ್ವವಿದ್ಯಾಲಯದ ಮುಂದೆ ಸ್ಮಾರ್ಟ್ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸ್ಮಾರ್ಟ್ ಸಿಟಿ ವೆಬ್ಸೈಟ್ನಲ್ಲಿ ಫೋಟೊ ಪ್ರಕಟಿಸಿದೆ. ಆ ಎರಡೂ ಸ್ಥಳಗಳಿಗೆ ಹೋಗಿ ನೋಡಿದರೆ ಆ ನಿಲ್ದಾಣಗಳು ಧೂಳಿಡಿದು ನಿಂತಿವೆ. ಹಿಂದೆ ರಫೀಕ್ ಅಹಮದ್ ಶಾಸಕರಾಗಿದ್ದ ಕಾಲದಲ್ಲಿ ನಿರ್ಮಿಸಿದ್ದ ಬಸ್ ಶೆಲ್ಟರ್ ಗೆ ಬಣ್ಣ ಬಳಿದು ಡಿಸ್ ಪ್ಲೇ ಬೋರ್ಡ್ ಅಳವಡಿಸಿರುವುದು ಬಿಟ್ಟರೆ ಬೇರೇನೂ ಆಗಿಲ್ಲ.
ಈಗ ಬೇಸಿಗೆ ಆರಂಭವಾಗಿದೆ. ಸುಡುಬಿಸಿಲಲ್ಲಿ ಆ ಸ್ಮಾರ್ಟ್ ನಿಲ್ದಾಣಗಳ ನೆರಳಿನಲ್ಲಿ ಜನರು ಕುಳಿತುಕೊಳ್ಳ ಬೇಕಲ್ಲವೇ? ಒಬ್ಬರೂ ಇಲ್ಲ. ಅದ್ಯಾವ ಕಾರಣಕ್ಕೆ ಸ್ಮಾರ್ಟ್ ಬಸ್ ನಿಲ್ದಾಣಗಳೆಂದು ಕರೆದರೋ ತಿಳಿಯುತ್ತಿಲ್ಲ.
ತುಮಕೂರು ಅಮಾನಿಕೆರೆಯ ನಡುವೆ ಸ್ಮಾರ್ಟ್ ಡಿಸ್ ಪ್ಲೇ ಅಳವಡಿಸಿದೆ. ಅದರಲ್ಲಿ ಯಾವ ಕಾಮಗಾರಿಗಳು ಪೂರ್ಣಗೊಂಡಿವೆ. ಯಾವ ಕಾಮಗಾರಿಗಳು ನಡೆಯುತ್ತಿವೆ ಎಂಬ ಮಾಹಿತಿ ಪ್ರದರ್ಶನಗೊಳ್ಳಬೇಕು. ಆದರೆ ಪ್ರಧಾನಿ ಮೋದಿ ಅವರ ಜಾಹಿರಾತು ಬಿಟ್ಟರೆ ಬೇರೆ ಯಾವುದೇ ಕಾಮಗಾರಿಯ ವಿವರ ಅಲ್ಲಿ ಪ್ರದರ್ಶನಗೊಳ್ಳುವುದಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ. ದುಂದುವೆಚ್ಚ ಮಾಡಿರುವುದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಹೇಳುವುದು ಹೀಗೆ. “ಸ್ಮಾರ್ಟ್ ಸಿಟಿಯಿಂದ ಕೆಲವೇ ಜನರಿಗೆ ಮಾತ್ರ ಅನುಕೂಲ. ನಗರ ವಂಚಿತರಿಗೆ ಮತ್ತು ಸ್ಲಂ ಜನರಿಗೆ ಯಾವುದೇ ಅನುಕೂಲಗಳು ಇಲ್ಲ. ಐದಾರು ವಾರ್ಡ್ಗಳಲ್ಲಿ ಮಹಿಳೆಯರಿಗಾಗಿ 25 ಸ್ಮಾರ್ಟ್ ಟಾಯ್ಲೆಟ್ ಕಟ್ಟಿಸಲು ಉದ್ದೇಶಿಸಲಾಗಿದೆ.. ಮೇಲ್ವರ್ಗದ ಜನರೇ ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಟಾಯ್ಲೆಟ್ ನಿರ್ಮಾಣ ಮಾಡಿದರೆ ಏನು ಪ್ರಯೋಜನ. ಮೇಲ್ವರ್ಗದ ಜನರು ಅದಕ್ಕೆ ಹೋಗುತ್ತಾರೆಯೇ? ಇಲ್ಲ. ಬದಲಿಗೆ ಸ್ಲಂಗಳಲ್ಲಿ ಟಾಯ್ಲೆಟ್ ನಿರ್ಮಿಸಿದರೆ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ದಮನಿತರು, ಬೀದಿಬದಿ ವ್ಯಾಪಾರಿಗಳು ಸ್ಮಾರ್ಟಿ ಸಿಟಿ ಯೋಜನೆಯಲ್ಲಿ ಒಳಗೊಂಡಿಲ್ಲ. ಹೀಗಾಗಿ ‘ಲೆಕ್ಕಕೊಡಿ’ ಚಳವಳಿ ಆರಂಭಿಸಲು ಸಿದ್ದತೆ ನಡೆಸಿದ್ದೇವೆ ಎಂದು ನಾನುಗೌರಿ.ಕಾಮ್ ಗೆ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೊಳ್ಳಲು 1936 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು 1176 ಕೋಟಿ ರೂ. ನೀರು ಪೂರೈಕೆ, ಪಿಡಬ್ಲ್ಯೂಡಿ, ಹೌಸಿಂಗ್ ಮೊದಲಾದ ಇಳಾಖೆಗಳು 549 ಕೋಟಿ ಮತ್ತು ಸಾರ್ವಜನಿಕ, ಖಾಸಗಿ ಸಹಭಾಗಿತ್ವದ ಕಂಪನಿಗಳಾದ ಜಿಯೋ, ಗ್ಯಾಸ್, ವೇದಾಂತ ಕಂಪನಿಗಳು 208 ಕೋಟಿ ವೆಚ್ಚ ಮಾಡುತ್ತಿವೆ. ಈ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ನೆಲದಲ್ಲಿ ಕೇಬಲ್ ಅಳವಡಿಸುವ ಕೆಲಸ ಇನ್ನೂ ನಡೆಯುತ್ತಲೇ ಇದೆ.
ಬಿ.ಎಚ್.ರಸ್ತೆಯ ಒಂದು ಬದಿ ಎರಡು ವರ್ಷದ ಹಿಂದೆ ಚರಂಡಿ ನಿರ್ಮಾಣ ಮಾಡಲಾಗಿತ್ತು. ಈಗ ಅದೇ ಚರಂಡಿ ಕಿತ್ತು ಹಾಕಿ ಮತ್ತೊಮ್ಮೆ ಹೊಸದಾಗಿ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಅಂದರೆ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯ ಅವಾಂತರಗಳನ್ನು ಯಾರೂ ಪ್ರಶ್ನಿಸುತ್ತಿಲ್ಲ. ಪ್ರಶ್ನಿಸುವವರ ಮಾತನ್ನು ಯಾರೂ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಸ್ಮಾರ್ಟ್ ಸಿಟಿ ಅವ್ಯವಸ್ಥೆ ಮತ್ತು ಅವ್ಯಹಾರದ ಕುರಿತು ದನಿ ಎತ್ತಿದ ಮಾಜಿ ಸಚಿವ ಸೊಗಡು ಶಿವಣ್ಣ ಈಗ ಮೌನ ವಹಿಸಿದ್ದಾರೆ. ಇದರ ಹಿಂದಿರುವ ಮರ್ಮವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.