ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದ್ದಲ್ಲದೇ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಆರು ಜನರನ್ನು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಮಣಿಮೂರ್ತೇಶ್ವರದಲ್ಲಿರುವ ಮನೋಜ್ ಮತ್ತು ಆತನ ಸ್ನೇಹಿತ ಮರಿಯಪ್ಪನ್ ಸ್ನಾನ ಮಾಡಲು ಹೊಂಡಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸ್ವಾನ ಮುಗಿಸಿ ಹಿಂದಿರುಗುವಾಗ ಕುಡಿದ ಮತ್ತಿನಲ್ಲಿದ್ದ ಒಂದು ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಕೃತ್ಯ ನಡೆಸಿದ ಗುಂಪು ಹಲ್ಲೆಗೂ ಮುನ್ನ ಆ ಯುವಕರನ್ನು ತಡೆದು ಯಾವ ಊರು ಮತ್ತು ಯಾವ ಜಾತಿ ಎಂದು ಕೇಳಿದ್ದಾರೆ. ಆಗ ಅವರು ದಲಿತರು ಎಂದು ತಿಳಿದ ತಂಡ ಇಬ್ಬರ ಮೇಲೂ ಹಲ್ಲೆ ನಡೆಸಿ ಮೂತ್ರ ವಿಸರ್ಜನೆ ಮಾಡಿದೆ ಎಂದು ವರದಿಯಾಗಿದೆ.
ಆನಂತರ ಗ್ಯಾಂಗ್ ಅವರನ್ನು ರಾತ್ರಿಯವರೆಗೂ ಸ್ಥಳದಲ್ಲಿಯೇ ಕಟ್ಟಿಹಾಕಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
”ನಮ್ಮ ಫೋನ್ಗಳು, ಎಟಿಎಂ ಕಾರ್ಡ್ಗಳನ್ನು ತೆಗೆದುಕೊಂಡು ಹೋಗಿ 5,000 ರೂ. ತೆಗೆದುಕೊಂಡಿದ್ದಾರೆ. ಈ ವೇಳೆ ನಾವು ತಪ್ಪಿಸಿಕೊಂಡು ಹತ್ತಿರದ ಸಂಬಂಧಿಕರ ಮನೆಗೆ ತಲುಪಿದೆವು. ಅಲ್ಲಿಂದ ನಮ್ಮ ಪೋಷಕರಿಗೆ ಕರೆ ಮಾಡಿದೆವು” ಎಂದು ಯುವಕರಿಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಆನಂತರ ಹಲ್ಯೆಗೊಳಗಾದ ದಲಿತ ಯುವಕರನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಂಧಿತ ಆರು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ಮತ್ತು 397 ರ ಅಡಿಯಲ್ಲಿ ಎಫ್ಐಆರ್ ಮತ್ತು SC/ST ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯ 3 (1)(r), 3 (1)(s), 3 (2)(va) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನೂ ಆರಂಭಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡು: ಗುಂಪು ದಾಳಿ; ದಲಿತ ಸಮುದಾಯದ 10 ಮಂದಿಗೆ ಗಾಯ