Homeರಾಜಕೀಯಉಡುಪಿ-ಚಿಕ್ಕಮಗಳೂರಲ್ಲಿ ಶೋಭಾ ಸಂಚು?

ಉಡುಪಿ-ಚಿಕ್ಕಮಗಳೂರಲ್ಲಿ ಶೋಭಾ ಸಂಚು?

- Advertisement -
ಮೀನು ಮತ್ತು ಕಾಫಿ ಘಮಲಿನ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ರಾಜಕೀಯ ಬರುವ ಪಾರ್ಲಿಮೆಂಟ್ ಚುನಾವಣೆ ಹೊತ್ತಿಗೆ ಮಗ್ಗಲು ಬದಲಿಸುವುದು ಖರೆ. ಎಂಪಿ ನಿಧಿ ಸರಿಯಾಗಿ ಬಳಸದ, ಸದಾ ಕ್ಷೇತ್ರಕ್ಕೆ ನಾಟ್ ರೀಚಬಲ್ ಆಗಿರುವ ಹಾಲಿ ಸಂಸದೆ ಬೇಬಿಯಕ್ಕ ಯಾನೆ ಶೋಭಾ ಕರಂದ್ಲಾಜೆಗೆ ಜನರು ಕಂಡಲ್ಲಿ ಉಗಿಯುತ್ತಿದ್ದಾರೆ. ಶೋಭಾಗೂ ದಿಲ್ಲಿ ರಾಜಕಾರಣ ಬೋರ್ ಹೊಡೆಸಿರುವಂತಿದೆ. ರಾಜ್ಯ ರಾಜಕಾರಣದ ಯಡ್ಡಿಯಜ್ಜನನ್ನು ಬಿಟ್ಟು ಹೋಗುವ ಮನಸ್ಸು ಶೋಭಾಗೆ ಒಂಚೂರು ಇಲ್ಲ. ಹಾಗಾಗಿ ಆಕೆ ಎಂಪಿ ಟಿಕೆಟ್ ಬೇಡವೇ ಬೇಡವೆಂದು ಹಠ ಹಿಡಿದು ಕೂತಿದ್ದಾರೆ. ಈ ವಿರಹ ರಾಜಕಾರಣದ ಚಡಪಡಿಕೆ ಬಿಜೆಪಿ ಬಿಡಾರದಲ್ಲಿ ನಾನಾ ನಮೂನೆಯ ಚರ್ಚೆ-ತರ್ಕ ಎಬ್ಬಿಸಿಬಿಟ್ಟಿದೆ.
ಸಂಸದೆಯಾದ ಮರುಘಳಿಗೆಯೇ ಕ್ಷೇತ್ರ ಮರೆತ ಶೋಭಾ ಕರಾವಳಿ-ಮಲೆನಾಡು ಭಾಗದ ಒಂದೇ ಒಂದು ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕ್ಷೇತ್ರದ ಜನರು ದೂರು-ದುಮ್ಮಾನ ಹೇಳಿದರೂ ಉದಾಸೀನ-ಉದ್ಧಟವಾಗಿ ಮಾತಾಡಿ ಸಾಗಹಾಕಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನೇ ಕೆರಳಿಸಿಬಿಟ್ಟಿದೆ. ತಾನೊಬ್ಬ ಇಂಟರ್‍ನ್ಯಾಷನಲ್ ರೈಟಿಸ್ಟ್  ಸರದಾರಿಣಿ ಎಂಬ ಭ್ರಮೆಯಲ್ಲಿ ದಿಲ್ಲಿ-ಬೆಂಗಳೂರಲ್ಲಿ ಹಾರಾಡಿ ಕಾಲಹರಣ ಮಾಡಿದ ಶೋಭಕ್ಕ ಹೆಣಗಳು ಉರುಳಿದ ಕಡೆಯೆಲ್ಲ ಲಾಭದ ಲೆಕ್ಕಾಚಾರ ನಡೆಸಿ ಮತಾಂಧ ಮಾತುಗಾರಿಕೆ ನಡೆಸಿದ್ದಷ್ಟೇ ಶೋಭಾ ಘನಕಾರ್ಯ. ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆ ಪ್ರಕರಣದಿಂದ ಬಂಟ್ವಾಳದ ಕೋಮುಗಲಭೆಯ ತನಕ, ಅಲ್ಲಿಂದ ಹೊನ್ನಾವರದ ಪರೇಶ್ ಮೇಸ್ತನ ಸಾವಿನ ಸೂತಕದಿಂದ ಸುರತ್ಕಲ್‍ನ ದೀಪಕ್‍ರಾವ್ ಹತ್ಯೆವರೆಗಿನ ಕಮ್ಯುನಲ್ ಕರಾಮತ್ತು ನಡೆಸಿದ ಅರ್ಧದಷ್ಟಾದರು ಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡಿದ್ದರೆ ನೊಂದವರ ಹಾರೈಕೆಯಾದರೂ ಶೋಭಾಗೆ ಸಿಗುತ್ತಿತ್ತು.
ಶೋಭಾಗೆ ಉಡುಪಿ-ಚಿಕ್ಕಮಗಳೂರಿನಲ್ಲಿ ತನ್ನ ಬಗ್ಗೆ ಇರುವ ಈ ತಿರಸ್ಕಾರದ ಭಾವನೆ ಅರ್ಥವಾಗಿದೆ. ಬಿಜೆಪಿಗೆ ಅನುಕೂಲವಾಗಬಲ್ಲ ಹಿಂದುತ್ವದ ಅಖಾಡವಿದೆಂಬ ಸಾರ್ವತ್ರಿಕ ಅಭಿಪ್ರಾಯವಿದ್ದರೂ ಶೋಭಾಗೆ ಮಾತ್ರ ಗೆಲ್ಲುವ ಧೈರ್ಯವಿಲ್ಲ. ಆಂಟಿ-ಇನ್‍ಕಂಬೆನ್ಸಿ ಅಲೆ ಆಕೆಯ ಮುಖಕ್ಕೆ  ಅಪ್ಪಳಿಸುತ್ತಲೇ ಇದೆ. ಹಿಂದೊಮ್ಮೆ ತನಗೆ ಎಂಪಿಗಿರಿಗೆ ಸ್ಪರ್ಧಿಸುವ ಯೋಚನೆ ಇಲ್ಲವೆಂದು ಆಕೆಯೇ ಹೇಳಿದ್ದರು. ಆಗ ಯಡ್ಡಿ ಹಾಗೆಲ್ಲ ಸಾರ್ವಜನಿಕವಾಗಿ ಹಲುಗಬೇಡವೆಂದು “ಶಿಷ್ಯೆ”ಗೆ ಸಲಹೆ ನೀಡಿದ್ದರು. ಆಗಿಂದ ಶೋಭಾ ನಿರಾಕರಣೆ, ನಿರಾಸಕ್ತಿ ಮಾತು ಬಾಯಿಂದ ಹೇಳಬಾರದಂತೆ ಎಚ್ಚರವಹಿಸಿದ್ದರಾದರೂ, ಒಳಗೊಳಗೆ ಗುಲಾಮನೊಬ್ಬನನ್ನು ಬಿಜೆಪಿ ಕ್ಯಾಂಡಿಡೇಟ್ ಮಾಡುವ ಕರಾಮತ್ತು ಶುರುಹಚ್ಚಿಕೊಂಡಿದ್ದಾರೆ. ತಾನು ಹಾಕಿದ ಗೆರೆ ಮೀರದವ ಕಾಂಗ್ರೆಸ್‍ನಲ್ಲಿದ್ದರೂ ಸರಿ, ಆತನನ್ನಾದರೂ ಬಿಜೆಪಿಗೆ ಕರೆತಂದು ಅಖಾಡಕ್ಕೆ ಇಳಿಸುವ ಯೋಚನೆ ಶೋಭಕ್ಕನದು.
ಬಿಜೆಪಿಯಿಂದ ಸಂಸದನಾಗುವ ಕನಸು ಕಾಣುತ್ತಿರುವ ಬಂಟರ ಜಯಪ್ರಕಾಶ್ ಹೆಗ್ಡೆಯೆಂದರೆ ಅರೆಭಾಷೆ ಒಕ್ಕಲಿಗರ ಶೋಭಕ್ಕನಿಗೆ ಅಷ್ಟಕಷ್ಟೇ. ರಾಜಕಾರಣದಲ್ಲಿ ಪಳಗಿದ ಜಯಪ್ರಕಾಶ್ ಹೆಗ್ಡೆ ಕುಂದಾಪುರದ ಅಖಂಡ ಬ್ರಹ್ಮಚಾರಿ ಶಾಸಕ ಹಾಲಾಡಿ ಶ್ರೀನಿವಾಸ್‍ಶೆಟ್ಟಿಯನ್ನು ಎದುರು ಹಾಕಿಕೊಂಡಿದ್ದಾರೆ. ಇದು ಬಂಟರ ಒಳರಾಜಕೀಯ. ಈ ಹಾಲಾಡಿ ಮತ್ತು ಕುಮಾರಿ ಶೋಭಾ ಕರಂದ್ಲಾಜೆ ಪರಮಾಪ್ತರು. ಹಾಲಾಡಿ ಹೇಗಾದರೂ ಮಾಡಿ ಜಯಪ್ರಕಾಶ್‍ಗೆ ಬಿಜೆಪಿ ಟಿಕೆಟ್ ಸಿಗದಂತೆ ಮಾಡಲು ಶೋಭಕ್ಕನ ಮೂಲಕ ಆಟ ಆಡುತ್ತಿದ್ದಾರೆ. ಶೋಭಕ್ಕನಿಗೂ ಚಾಲಾಕಿ ಜಯಪ್ರಕಾಶ್  ಬಿಜೆಪಿಯ ಎಂಪಿಯಾಗೋದು ಬೇಕಾಗಿಲ್ಲ. ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷರ ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಕಾರ್ಯದರ್ಶಿ ಕಂ ದಿವಂಗತ ಭೂಗತ ದೊರೆ ಶರತ್ ಶೆಟ್ಟಿಯ ನೆಂಟ ವಿಕ್ರಮಾರ್ಜುನ ಹೆಗ್ಡೆಗಳಿಗೆ ಎಂಪಿಯಾಗುವ ಅರ್ಹತೆ ಇರಲಿ, ಬಿಜೆಪಿ ಟಿಕೆಟ್ ತರುವ ಪ್ರಭಾವವೂ ಇಲ್ಲ.
ಹೀಗಾಗಿ ಶೋಭಕ್ಕ ಒಂದು ಹಂತದಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋತು ಸುಣ್ಣವಾಗಿರುವ ಮಾಜಿ ಶಾಸಕ ಜೀವರಾಜ್‍ರನ್ನು ಅಭ್ಯರ್ಥಿ ಮಾಡಿದರೆ ಹೇಗೆಂದು ಚಿಂತನೆ ನಡೆಸಿದ್ದರು. ಆದರೆ ಇದಕ್ಕೆ ಸೀಟಿ ರವಿ ಒಪ್ಪುತ್ತಿಲ್ಲ. ತಾನು ಮತ್ತೊಮ್ಮೆ ಶಾಸಕನಾಗುವ ಭಾಗ್ಯ ಕಾಣಲು ಜಯಪ್ರಕಾಶ್ ಹೆಗ್ಡೆ ಹೆಲ್ಪ್ ಕಾರಣವೆಂದು ನಂಬಿರುವ ಉಡುಪಿಯ ರಂಗೀಲಾ ಶಾಸಕ ರಘುಪತಿ ಭಟ್ಟ, ಸಿ.ಟಿ.ರವಿ ಮತ್ತು ಕಾರ್ಕಳದ ಅರೆ ಬಿಲ್ಲವ-ಅರೆ ಬ್ರಾಹ್ಮಣ ಸುನೀಲ್ ಕುಮಾರ್ ಎಂಬ ಶೋಭಾನ ಈ ತ್ರಿಮೂರ್ತಿ ಶತ್ರುಗಳು ಜಯಪ್ರಕಾಶ್ ಹೆಗ್ಡೆಯೇ ಯೋಗ್ಯ ಹುರಿಯಾಳೆಂದು ಹೈಕಮಾಂಡ್ ಎದುರು ವಾದಿಸುತ್ತಲೇ ಇದ್ದಾರೆ. ಜಯಪ್ರಕಾಶ್ ಸಂಸದನಾದರೆ ಪಾರ್ಟಿಯಲ್ಲಿ ತನ್ನ ವಿರೋಧಿ ಗ್ಯಾಂಗ್ ಬಲಗೊಳ್ಳುತ್ತದೆಂಬ ಆತಂಕದಿಂದ ಶೋಭಾ ಉಡುಪಿ ಚಿಕ್ಕಮಗಳೂರಿಗೆ ಮೀನುಗಾರ ಸಮುದಾಯದ ಕÁ್ಯಂಡಿಡೇಟ್ ನಿಲ್ಲಿಸಿದರೆ ಗೆಲುವು ಸುಲಭವೆಂದು ತರ್ಕ ಮಾಡುತ್ತಿದ್ದಾರೆ.
ಶೋಭಾ ಮನಸ್ಸಿನಲ್ಲಿರುವ ಮೀನುಗಾರ(ಮೊಗವೀರ) ಬೇರಾರು ಅಲ್ಲ,  ಕಾಂಗ್ರೆಸ್ಸಿನ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್!! ಶುದ್ಧ ಸಮಯ ಸಾಧಕತನವನ್ನೇ ಸಿದ್ಧಾಂತ ಮಾಡಿಕೊಂಡಿರುವ ಪ್ರಮೋದ್ ಮಧ್ವರಾವ್ ಕಾಂಗ್ರೆಸ್‍ನ ಮಾಜಿ ಸಚಿವೆ, ಬಿಜೆಪಿಯ ಮಾಜಿ ಸಂಸದೆ ಮನೋರಮಾ ಮಧ್ವರಾಜ್‍ಗೆ ತಕ್ಕ ಮಗ. ಮಮೋರಮಾ ರಾಜಕಾರಣದ ಕೊನೆತನಕವೂ ತನ್ನ ಏಳಿಗೆಗೆ ಕಾರಣರಾದವರಿಗೆ ಋಣಿಯಾಗಿರಲಿಲ್ಲ. ಮಗ ಪ್ರಮೋದ್‍ನೂ ಅಷ್ಟೇ ಕೃತಘ್ನ ರಾಜಕೀಯ ಮೈಗೂಡಿಸಿಕೊಂಡು ಮುನ್ನಡೆದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಈತ ಬಿಜೆಪಿ ಪಾಲಾಗಲು ಹವಣಿಸಿದ್ದ. ಈತ ನಡೆಸುವ ಮೀನು ಉದ್ಯಮದ ಫ್ಯಾಕ್ಟರಿ, ಪೆಟ್ರೋಲ್ ಬಂಕ್‍ನ ಲಫಡಾ, ಬ್ಯಾಂಕ್ ಸಾಲದ ಸೂತ್ರ ಹಿಡಿದು ಸಾಕ್ಷ್ಯಾತ್ ಅಮಿತ್ ಶಾ ಈತನಿಗೆ ಬ್ಲ್ಯಾಕ್‍ಮೇಲ್ ಮಾಡಿದ್ದರೆಂಬ ವದಂತಿಗಳಿವೆ. ತನ್ನ ಉದ್ಯಮಗಳ ಉಳಿವಿಗಾಗಿ ಲಾಂಗ್‍ಜಂಪ್‍ಗೆ ರೆಡಿಯಾಗಿದ್ದ ಪ್ರಮೋದ್‍ಗೆ ಅಡ್ಡಗಾಲು ಹಾಕಿದ್ದು ಬಿಜೆಪಿಯ ಜಯಪ್ರಕಾಶ್ ಹೆಗ್ಡೆ ಮತ್ತು ರಘುಪತಿ ಭಟ್ಟ!
ಒಂದೇ ಅವಧಿಯಲ್ಲಿ ಪ್ರಮೋದ್ ನಾಲ್ಕು ನಾಲ್ಕು ಪ್ರಮೋಷನ್ ಪಡೆದರೂ ಕಾಂಗ್ರೆಸ್ಸಿಗೆ ನಿಷ್ಠನಾಗಿರುವಂತೆ ನಡೆದುಕೊಂಡಿಲ್ಲ. ಧನಬಲದ ಅಹಂಕಾರದಲ್ಲಿ ಪಕ್ಷದ ಕಾರ್ಯಕರ್ತರನ್ನೂ ಕಡೆಗಣಿಸಿದ್ದರು. ಯಾವುದೋ ಪೊಕ್ಕು ಸರ್ವೆಯವನ ಬಂಡಲ್ ಸಮೀಕ್ಷಾ ವರದಿ ನಂಬಿ ತಾನು ಮತ್ತೆ ಗೆಲ್ತೀನೆಂಬ ಭ್ರಮೆಗೆ ಬಿದ್ದಿದ್ದ ಪ್ರಮೋದ್, ಈಗ ಮತ್ತೆ ಜ್ಯೋತಿಷ್ಯ ಮಾರ್ತಾಂಡನ ಢೋಂಗಿ ಶಾಸ್ತ್ರ ನಂಬಿ ಕೇಂದ್ರ ರಕ್ಷಣಾ ಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ!
ರಕ್ಷಣಾ ಮಂತ್ರಿಯಾಗಲು ಮೊದಲು ಎಂಪಿಯಾಗಬೇಕಲ್ಲವಾ? ಕಾಂಗ್ರೆಸ್ಸಿನ ದೊಡ್ಡವರು ಪ್ರಮೋದ್‍ಗೆ ಎಂಪಿ ಟಿಕೆಟ್ ಕೊಡಲು ರೆಡಿಯಿದ್ದಾರೆ. ಆದರೆ ಕಾಂಗ್ರೆಸ್‍ನಿಂದ ಸಂಸದ ಮತ್ತು ರಕ್ಷಣಾ ಮಂತ್ರಿ ಎರಡೂ ಆಗುವ ಭರವಸೆ ಆತನಿಗಿಲ್ಲ. ಹೀಗಾಗಿ ಬಿಜೆಪಿಯತ್ತ ಕಣ್ಣು ಮಿಟುಕಿಸತೊಡಗಿದ್ದಾರೆ. ಯಥಾ ಪ್ರಕಾರ ಜಯಪ್ರಕಾಶ್ ಹೆಗ್ಡೆ ಅಂಡ್ ತ್ರಿಮೂತ್ರಿ ಗ್ಯಾಂಗ್ ಪ್ರಮೋದ್‍ರ ಬಿಜೆಪಿ ಗೃಹಪ್ರವೇಶಕ್ಕೆ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದಾರಂತೆ.
ಆದರೆ ಶೋಭಾ-ಹಾಲಾಡಿ ಶ್ರೀನಿವಾಸ್ ಮತ್ತವರ ಬಾಸ್ ಯಡ್ಡಿ ವ್ಯವಸ್ಥಿತವಾಗಿ ಪ್ರಮೋದ್ ಪರ ಲಾಬಿ ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್ ಅಮಿತ್‍ಶಾಗೂ ಪ್ರಮೋದ್ ಎಂದರೆ ಅದೊಂಥರ ಸೆಳೆತವಿದೆ. ರಘುಪತಿ ಭಟ್ಟರ ತಂಡ ಪಳಗಿಸಲು ದಿಲ್ಲಿಯಿಂದ ಪೇಜಾವರ ಸ್ವಾಮಿಗೆ ಸಂದೇಶವೂ ಬಂದಿದೆಯೆಂಬ ಸುದ್ದಿಯೀಗ ಉಡುಪಿ ರಥಬೀದಿಯಲ್ಲಿ ಹಬ್ಬಿದೆ. ಪ್ರಮೋದ್ ಮತ್ತು ರಘುಪತಿ ಭಟ್ಟ-ರವಿ-ಸುನಿಲ್ ತಂಡದ ನಡುವೆ ರಾಜಿ ಮಾಡಲು ಕಾವಿ ಕಸರತ್ತು ನಡೆಯುತ್ತಿದೆ. ಪ್ರಮೋದ್ ಬಿಜೆಪಿ ಸೇರಿದರೆ ಉಡುಪಿ-ಚಿಕ್ಕಮಗಳೂರಿಗೆ ಬಿಜೆಪಿಯಲ್ಲಷ್ಟೇ ಅಲ್ಲ ಕಾಂಗ್ರೆಸ್‍ನಲ್ಲೂ ಪಲ್ಲಟ, ತಲ್ಲಣಗಳಾಗೋದು ಗ್ಯಾರಂಟಿ. ಆಗ ಜಯಪ್ರಕಾಶ್ ಹೆಗ್ಡೆ ಮರಳಿ ಕಾಂಗ್ರೆಸ್‍ಗೆ ಸೇರುತ್ತಾರೆಂಬ ಮಾತುಗಳು ಕೇಳಿಬರಲಾರಂಭಿಸಿದೆ.
ಎಐಸಿಸಿ ಮಾಂಡಲೀಕ ಆಸ್ಕರ್ ಫರ್ನಾಂಡಿಸ್ ಜತೆ ಜಗಳ ಮಾಡಿಕೊಂಡು ಬಿಜೆಪಿಗೆ ಹೋಗಿದ್ದ ಜಯಪ್ರಕಾಶ್ ಈಗ ಅಂತರ್ ಪಿಶಾಚಿಯಂತಾಗಿದ್ದಾರೆ. ಬಿಜೆಪಿಯ ಮತೀಯ ರಾಜಕಾರಣದ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿರುವ ಜನಪರ ಅನುಭವಿ ಕೆಲಸಗಾರ ಜಯಪ್ರಕಾಶ್‍ಗೆ ಬೇರುಮಟ್ಟದ ಜನ ಸಂಪರ್ಕವಿದೆ. ಹಾಗಾಗಿ ಆಸ್ಕರ್ ಫರ್ನಾಂಡಿಸ್ ಸುಮ್ಮನಿರಿಸಿ ಜಯಪ್ರಕಾಶ್ ಹೆಗ್ಡೆಯನ್ನು ಕಾಂಗ್ರೆಸ್‍ಗೆ ತರುವ ಸಾಧ್ಯತೆ ಕಾಣಿಸುತ್ತಿದೆ. ವಯಸ್ಸಿನ ಕಿರಿಕಿರಿ-ಅನಾರೋಗ್ಯದಿಂದ ಎಐಸಿಸಿ ಮಟ್ಟದಲ್ಲಿ ಚಲಾವಣೆ ಕಳೆದುಕೊಳ್ಳುತ್ತಿರುವ ಆಸ್ಕರ್ ಫರ್ನಾಂಡಿಸ್ ಹಠಬಿಟ್ಟು ಜಯಪ್ರಕಾಶ್ ಸೇರ್ಪಡೆಗೆ ಒಪ್ಪುತ್ತಾರೆಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳಾಗುತ್ತಿದೆ. ಒಂದಂತೂ ಖರೆ, ಹೆಗ್ಡೆ ಅವಸರಕ್ಕೆ ಬೀಳದೆ ಒಂಚೂರು ಆಸ್ಕರ್-ಪ್ರಕಾಶ್‍ಚಂದ್ರಾ ಶೆಟ್ಟಿ ಜತೆ ಹೊಂದಿಕೊಂಡು ಹೋಗಿದ್ದರೆ ಇವತ್ತು ನಿರಾಯಾಸವಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ಆಗುತ್ತಿದ್ದರು, ಗೆದ್ದೂ ಬಿಡುತ್ತಿದ್ದರು.!
ಕೆಲವೇ ದಿನದಲ್ಲಿ ಉಡುಪಿ-ಚಿಕ್ಕಮಗಳೂರು ರಾಜಕೀಯ ಪಡಸಾಲೆಯಲ್ಲಿ ಅದಲು-ಬದಲು-ಕಂಚೀ ಕದಲು ಆಟ ಖಂಡಿತ.
– ಶುದ್ಧೋಧನ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...