Homeಕರ್ನಾಟಕಹಿಜಾಬ್‌‌ಗಾಗಿ ದನಿಯೆತ್ತಿದ ವಿದ್ಯಾರ್ಥಿನಿಯರ ಫೋನ್‌‌ ನಂಬರ್‌, ವಿಳಾಸ ಲೀಕ್‌ ಮಾಡಿದ ಉಡುಪಿ ಕಾಲೇಜು!

ಹಿಜಾಬ್‌‌ಗಾಗಿ ದನಿಯೆತ್ತಿದ ವಿದ್ಯಾರ್ಥಿನಿಯರ ಫೋನ್‌‌ ನಂಬರ್‌, ವಿಳಾಸ ಲೀಕ್‌ ಮಾಡಿದ ಉಡುಪಿ ಕಾಲೇಜು!

ಹಿಜಾಬ್‌ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ಉಡುಪಿ ಕಾಲೇಜು ಬಹಿರಂಗಪಡಿಸಿದ್ದು, ವಿದ್ಯಾರ್ಥಿನಿಯರು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ.

- Advertisement -
- Advertisement -

ಹಿಜಾಬ್‌ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಉಡುಪಿಯ ಬಾಲಕಿಯ ಕಾಲೇಜಿನ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ಕಾಲೇಜಿನ ಮೂಲಗಳು ಬಹಿರಂಗಪಡಿಸಿವೆ. ಹೀಗಾಗಿ ವಿದ್ಯಾರ್ಥಿನಿಯರು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.

“ಹಿಜಾಬ್‌ಗಾಗಿ ಹೋರಾಡುತ್ತಿರುವ ಅಲಿಯಾ ಅಸ್ಸಾದಿ ಫೆಬ್ರವರಿ 9ರ ಬುಧವಾರದಂದು ದಿನವಿಡೀ ನಿಂದನೀಯ ಫೋನ್ ಕರೆಗಳನ್ನು ಸ್ವೀಕರಿಸಿದ್ದಾರೆ. ಉಡುಪಿಯ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿದ್ಯಾರ್ಥಿನಿಯರ ಫೋನ್ ನಂಬರ್‌‌ಗಳು, ಪೋಷಕರ ಹೆಸರುಗಳು ಮತ್ತು ಮನೆಯ ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲಾಗಿದೆ” ಎಂದು ವರದಿ ಹೇಳಿದೆ.

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಮುಂದುವರಿಸಬೇಕೆಂದು ಹೋರಾಡುತ್ತಿರುವ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಅಸ್ಸಾದಿ ಕೂಡ ಒಬ್ಬರು.

ಈ ಎಲ್ಲಾ ಆರು ವಿದ್ಯಾರ್ಥಿನಿಯರ ಪ್ರವೇಶ ಪತ್ರಗಳು ಉಡುಪಿ ಪದವಿ ಪೂರ್ವ ಕಾಲೇಜಿನಿಂದ ಬುಧವಾರ ಸೋರಿಕೆಯಾಗಿದ್ದವು. ಈ ಸಂಬಂಧ ಆನ್‌ಲೈನ್‌ ಸಂದೇಶವನ್ನು ಪಡೆದಿರುವುದಾಗಿ ದಿ ಕ್ವಿಂಟ್ ವರದಿ ಮಾಡಿದೆ.

ಕಾಲೇಜಿನ ಲೆಡ್ಜರ್‌ನಿಂದ ತೆಗೆದುಕೊಳ್ಳಲಾದ ಪ್ರವೇಶ ನಮೂದೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಲಾದ ಪಿಡಿಎಫ್‌‌ ಹರಿದಾಡಿದೆ. ಈ ದಾಖಲೆಗಳು ಕಾಲೇಜಿನಿಂದಲೇ ಸೋರಿಕೆಯಾಗಿರುವುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿರಿ: ಉಡುಪಿ: ಎಂಜಿಎಂ ವಿದ್ಯಾರ್ಥಿಗಳನ್ನು ಹಿಂಜಾವೇ, ಬಿಜೆಪಿ ಪ್ರಚೋದಿಸಿದ್ದು ಹೀಗೆ…

ಕಾಲೇಜಿನ ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷರಾಗಿರುವ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್, “ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಕೂರಿಸಲಾಗದು” ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರವೇಶಾತಿ ದಾಖಲೆಗಳನ್ನು ಕಾಲೇಜಿಗೆ ಮಾತ್ರ ಸಲ್ಲಿಸಲಾಗಿದೆ ಎಂದು ನೊಂದ ವಿದ್ಯಾರ್ಥಿನಿಯರು ದಿ ಕ್ವಿಂಟ್‌ಗೆ ಸ್ಪಷ್ಟಪಡಿಸಿದ್ದಾರೆ.

ನೊಂದ ಹೆಣ್ಣು ಮಕ್ಕಳ ಮನೆಗಳು ಟಾರ್ಗೆಟ್‌?

ಅಲಿಯಾ ಅಸ್ಸಾದಿ ಮತ್ತು ಹಜ್ರಾ ಶಿಫಾ ಇತರರು ಜನವರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ವೈಯಕ್ತಿಕ ವಿವರಗಳು ಲೀಕ್‌ ಆದ ಹಿನ್ನೆಲೆಯಲ್ಲಿ ಅಸ್ಸಾದಿಯವರು ‘ದಿ ಕ್ವಿಂಟ್’ ಜಾಲತಾಣದೊಂದಿಗೆ ಮಾತನಾಡುವಾಗ ಬುರ್ಕಾವನ್ನು ಧರಿಸಿದ್ದರು.

“ನಾನು ಇನ್ನು ಮುಂದೆ ನನ್ನ ಮುಖವನ್ನು ತೋರಿಸಲು ಸೂಕ್ತವೆನಿಸುವುದಿಲ್ಲ. ನಾನು ಹೇಗೆ ಕಾಣುತ್ತೇನೆ ಮತ್ತು ನನ್ನ ಮನೆ ಎಲ್ಲಿದೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಯಾರಾದರೂ ನನ್ನನ್ನು ಗುರಿಯಾಗಿಸಿಕೊಂಡರೆ ಏನು ಮಾಡುವುದು?” ಎಂದು ಆ ಹೆಣ್ಣುಮಗಳು ಪ್ರಶ್ನಿಸಿದ್ದಾಳೆ.

ಹಿಜಾಬ್ ಧರಿಸುವುದನ್ನು ಮುಂದುವರಿಸುವ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಹಜ್ರಾ ಶಿಫಾ, “ನನ್ನ ಹೆತ್ತವರಿಗೂ ಅಪರಿಚಿತ ನಂಬರ್‌‌ಗಳಿಂದ ಕರೆಗಳು ಬರುತ್ತಿವೆ. ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದ್ದೇನೆ. ಗೌಪ್ಯ ವಿವರಗಳು ಸಾರ್ವಜನಿಕರಿಗೆ ಹೇಗೆ ತಲುಪಿದವು ಎಂಬುದನ್ನು ವಿವರಿಸಬೇಕೆಂದು ಕಾಲೇಜು ಆಡಳಿತವನ್ನು ಒತ್ತಾಯಿಸಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿರಿ: ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್‌‌

“ನಾನು ಹಾವುಗಳನ್ನು ಪ್ರೀತಿಸುತ್ತೇನೆ. ನಾನು ವೈಲ್ಡ್‌ಲೈಫ್‌ ಫೋಟೋಗ್ರಾಫರ್‌ ಆಗಲು ಬಯಸುತ್ತೇನೆ. ಈಗ ಯಾರೂ ನನ್ನ ಮಹತ್ವಾಕಾಂಕ್ಷೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಮತ್ತೇಕೆ ನಮ್ಮನ್ನು ಇಷ್ಟು ಟಾರ್ಗೆಟ್ ಮಾಡಿದ್ದಾರೆ?” ಎಂದು ಕೇಳುವ ವಿದ್ಯಾರ್ಥಿನಿ ಅಲಿಯಾ, “ಬಿಜೆಪಿ ಶಾಸಕ ರಘುಪತಿ ಭಟ್ ಕಾಲೇಜು ಅಧಿಕಾರಿಗಳಿಗೆ ಮತ್ತು ಕೇಸರಿ ಶಾಲು ಹಾಕುವ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಅವರು ಕೇಸರಿ ಶಾಲು ಧರಿಸುವುದನ್ನು ಬೆಂಬಲಿಸುವ ಮೂಲಕ ಹಿಜಾಬ್‌ಗಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಕೋಮುವಾದಿಕರಿಸಿದ್ದಾರೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವಂತೆ ಅವರು ಪ್ರೇರೇಪಿಸಿದರು. ಈಗ ಅವರು ಕಾಲೇಜು ಮಾತ್ರವಲ್ಲದೆ ನಮ್ಮ ಮನೆಗಳನ್ನೂ ಆತಂಕಕ್ಕೆ ತಳ್ಳಿದ್ದಾರೆ” ಎಂದು ಆಲಿಯಾ ಆರೋಪಿಸಿದ್ದಾರೆ.

ವೈದ್ಯೆಯಾಗಬೇಕು ಅಥವಾ ರೇಡಿಯಾಲಜಿಸ್ಟ್ ಆಗಬೇಕು ಶಿಫಾ ಇಚ್ಛಿಸಿದ್ದಾರೆ. “ಇದು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಕೇವಲ ಓದಲು ಮತ್ತು ಜೀವನದಲ್ಲಿ ಏನಾದರೂ ಸಾಧಿಸಲು ಬಯಸುತ್ತೇನೆ” ಎಂದು ಹತಾಶೆಯಿಂದ ನುಡಿಯುತ್ತಾರೆ ಶಿಫಾ.

ಸೋರಿಕೆಯಾದ ಡೇಟಾದ ಬಗ್ಗೆ ಪ್ರತಿಕ್ರಿಯಿಸಲು ಕಾಲೇಜು ನಿರಾಕರಿಸಿದೆ. (ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರನ್ನು ಸಂಪರ್ಕಿಸಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ವಾಟ್ಸ್‌ಆಪ್‌ ಮೂಲಕ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಪ್ರಾಂಶುಪಾಲರಾದ ರುದ್ರೇಗೌಡ ನೀಡಿಲ್ಲ. ಪ್ರತಿಕ್ರಿಯೆ ನೀಡಿದ್ದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಇದನ್ನೂ ಓದಿರಿ: ’ಹಿಜಾಬ್‌ ಧರಿಸಿ ಶಾಲೆಗೆ ಹೋಗುವುದನ್ನು ನಿರಾಕರಿಸುವುದು ಭಯಾನಕ’: ಮಲಾಲಾ

ಮುಸ್ಲಿಂ ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತರಲು ಮಾರ್ಕ್ಸ್ ಕಾರ್ಡ್, ಪೋಷಕರ ಆದಾಯ ಪ್ರಮಾಣ ಪತ್ರದ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳುತ್ತದೆ.

ಎಲ್ಲರೂ ತಮ್ಮ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ನಮ್ಮ ವಿದ್ಯಾಭ್ಯಾಸ ಕಳಪೆಯಾಗಿದೆ ಎಂದು ನಿಂದಿಸಲಾಗುತ್ತಿದೆ ಎಂದು ಆಲಿಯಾ ತಿಳಿಸಿದ್ದಾರೆ.

“ನಾವು ಹತ್ತನೇ ತರಗತಿಯಲ್ಲಿ ಕಳಪೆ ಸಾಧನೆ ಮಾಡಿದ್ದೇವೆ ಎಂಬ ನಕಲಿ ಮೌಲ್ಯಮಾಪನವನ್ನು ಅವರು ಪ್ರಸಾರ ಮಾಡುತ್ತಿದ್ದಾರೆ. ನಾವು ಈಗ ತರಗತಿಯ ಕಲಿಕೆಯನ್ನು ಕಳೆದುಕೊಳ್ಳುವ ಬಗ್ಗೆ ಅವರು ಏಕೆ ಚಿಂತಿಸುತ್ತಿಲ್ಲ?” ಎಂದು ಬಹಳ ನೊಂದು ಕೇಳುತ್ತಾರೆ ಆಲಿಯಾ.

ಈ ವರ್ಷ ಏಪ್ರಿಲ್‌ನಲ್ಲಿ ಪಿಯು ಪರೀಕ್ಷೆಗಳು ನಡೆಯುವ ನಿರೀಕ್ಷೆಯಿದೆ. ಜನವರಿಯಲ್ಲಿ ಈ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಿಂದ ಹೊರಹಾಕಲಾಯಿತು. “ಎರಡು ತಿಂಗಳೊಳಗೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದ್ದರೂ ತರಗತಿಗೆ ನಮ್ಮನ್ನು ಕೂರಿಸುತ್ತಿಲ್ಲ” ಎಂದು ಶಿಫಾ ನೊಂದುಕೊಳ್ಳುತ್ತಾರೆ.

ವಿದ್ಯಾರ್ಥಿನಿಯರು ಕಡಿಮೆ ಅಂಕಗಳನ್ನು ಪಡೆದಿದ್ದಾರೆ ಎಂಬುದು ಸುಳ್ಳು ಎಂದು ‘ದಿ ಕ್ವಿಂಟ್’ ಖಾತ್ರಿಪಡಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ದಿ ಕ್ವಿಂಟ್ ಹೇಳಿದೆ. ಉದಾಹರಣೆಗೆ, ಮುಸ್ಕಾನ್ ಜೈನಾಬ್ ಹತ್ತನೇ ತರಗತಿಯಲ್ಲಿ ಶೇ. 87.52ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ರೇಶಮ್ ಅವರು ಸಮಾಜ ವಿಜ್ಞಾನದಲ್ಲಿ ಶೇ. 80ರಷ್ಟು ಅಂಕ, ಒಟ್ಟಾರೆಯಾಗಿ ಶೇ. 67.52 ಅಂಕಗಳನ್ನು ಪಡೆದಿದ್ದಾರೆ. ಆಲಿಯಾ ಅಸ್ಸಾದಿ ಅವರು ಸಮಾಜ ವಿಜ್ಞಾನದಲ್ಲಿ ಶೇ.83 ಅಂಕ ಹಾಗೂ ಒಟ್ಟಾರೆಯಾಗಿ ಶೇ. 66.72 ಅಂಕಗಳನ್ನು ಗಳಿಸಿದ್ದಾರೆ.

ಈಗ ಹರಿದಾಡಿರುವ ದಾಖಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರ ಆದಾಯದ ವಿವರಗಳೂ ಇವೆ.

“ನನ್ನ ತಂದೆ ಆಟೋ ಚಾಲಕ. ಮೊದಲು ಅವರು ನನ್ನನ್ನು ಶ್ರೀಮಂತರು ಎಂದು ದೂಷಿಸಿದರು. ನಾವು ಬಡವರಾಗಿದ್ದೇವೆ. ಇವರು ತೊಂದರೆ ಕೊಡುವವರು ಎಂದು ಹೇಳುತ್ತಿದ್ದಾರೆ” ಎಂದು ಆಲಿಯಾ ನೋವು ತೋಡಿಕೊಂಡಿದ್ದಾರೆ. ವಾರ್ಷಿಕವಾಗಿ ರೂ. 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರನ್ನು ವಾಟ್ಸಾಪ್ ಫಾರ್ವರ್ಡ್‌ಗಳಲ್ಲಿ ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. “ದುಡ್ಡು ತೆಗೆದುಕೊಂಡು ಹಿಜಾಬ್ ಧರಿಸಿ ಬರುವ ಹುಡುಗಿಯರೆಂದು ನಮ್ಮನ್ನು ಅವರು ದೂಷಿಸಿದ್ದಾರೆ. ನಾವು ನಮ್ಮ ಧಾರ್ಮಿಕ ನಂಬಿಕೆಗಾಗಿ ಹಿಜಾಬ್‌ ಧರಿಸುತ್ತೇವೆ ಹೊರತು, ಹಣಕ್ಕಾಗಿ ಅಲ್ಲ” ಎನ್ನುತ್ತಾರೆ ಶಿಫಾ.

“ಈ ದ್ವೇಷ ಅಭಿಯಾನದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವಾಗ ಈ ವಿದ್ಯಾರ್ಥಿಗಳು ಕೆಲವು ದಿನಗಳಿಂದ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ.

“ನಾನು ಕಳೆದುಕೊಂಡ ಮೊದಲ ಸಂಗತಿಯೆಂದರೆ ನನ್ನ ಮಾನಸಿಕ ಶಾಂತಿ. ನಾವು ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದೇವೆ. ನಾನು ಸಮಯವನ್ನು ಕಳೆದುಕೊಂಡೆ, ಬಹಳಷ್ಟು ಮಾಧ್ಯಮಗಳಿಗೆ ಬೈಟ್‌ಗಳನ್ನು ನೀಡಿದೆ. ನನಗೂ ನರ್ವಸ್ ಆಗಿದೆ. ಇದು ನಿಜವಾಗಿಯೂ ಕಷ್ಟಕರವಾಗಿದೆ” ಎನ್ನುತ್ತಾರೆ ಆಲಿಯಾ. ಪ್ರತಿ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ, “ಹೆಚ್ಚಿನ ವಿವಾದವನ್ನು ತಪ್ಪಿಸಲು ತನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ” ಎನ್ನುತ್ತಾರೆ ವಿದ್ಯಾರ್ಥಿನಿ. ಆದರೆ ಕಾಲೇಜಿನ ಡೇಟಾ ಸೋರಿಕೆಯಿಂದ ಈ ವಿದ್ಯಾರ್ಥಿನಿಯರ ಜೀವನ ಇನ್ನಷ್ಟು ಕಠಿಣವಾಗಿದೆ.

ಈ ಪ್ರಕ್ರಿಯೆಯಲ್ಲಿ ಅಸ್ಸಾದಿ ತಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದಾರೆ. “ಈ ಸಮಸ್ಯೆಯಿಂದಾಗಿ ನಾನು ನನ್ನ ಅನೇಕ ಮುಸ್ಲಿಮೇತರ ಸ್ನೇಹಿತರನ್ನು ಕಳೆದುಕೊಂಡೆ. ನಮ್ಮನ್ನು ವಿರೋಧಿಸುವಂತೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಆಲಿಯಾ ಆಶಾವಾದ ವ್ಯಕ್ತಪಡಿಸಿದ್ದಾರೆ.

“ನನ್ನ ಮುಸ್ಲಿಮೇತರ ಸ್ನೇಹಿತರು ನಮ್ಮನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ” ಎಂದು ಶಿಫಾ ಹೇಳಿದ್ದಾರೆ. ಓದಲು ಕುಳಿತಾಗಲೆಲ್ಲ ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶಿಫಾ.

ವರದಿ ಕೃಪೆ: ದಿ ಕ್ವಿಂಟ್


ಇದನ್ನೂ ಓದಿರಿ: ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...