ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ಉಡುಪಿಯ ಬಾಲಕಿಯ ಕಾಲೇಜಿನ ವಿದ್ಯಾರ್ಥಿನಿಯರ ವೈಯಕ್ತಿಕ ವಿವರಗಳನ್ನು ಕಾಲೇಜಿನ ಮೂಲಗಳು ಬಹಿರಂಗಪಡಿಸಿವೆ. ಹೀಗಾಗಿ ವಿದ್ಯಾರ್ಥಿನಿಯರು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.
“ಹಿಜಾಬ್ಗಾಗಿ ಹೋರಾಡುತ್ತಿರುವ ಅಲಿಯಾ ಅಸ್ಸಾದಿ ಫೆಬ್ರವರಿ 9ರ ಬುಧವಾರದಂದು ದಿನವಿಡೀ ನಿಂದನೀಯ ಫೋನ್ ಕರೆಗಳನ್ನು ಸ್ವೀಕರಿಸಿದ್ದಾರೆ. ಉಡುಪಿಯ ವಾಟ್ಸಾಪ್ ಗ್ರೂಪ್ಗಳಲ್ಲಿ ವಿದ್ಯಾರ್ಥಿನಿಯರ ಫೋನ್ ನಂಬರ್ಗಳು, ಪೋಷಕರ ಹೆಸರುಗಳು ಮತ್ತು ಮನೆಯ ವಿಳಾಸ ಸೇರಿದಂತೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲಾಗಿದೆ” ಎಂದು ವರದಿ ಹೇಳಿದೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ಮುಂದುವರಿಸಬೇಕೆಂದು ಹೋರಾಡುತ್ತಿರುವ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ಮುಸ್ಲಿಂ ವಿದ್ಯಾರ್ಥಿಗಳಲ್ಲಿ ಅಸ್ಸಾದಿ ಕೂಡ ಒಬ್ಬರು.
ಈ ಎಲ್ಲಾ ಆರು ವಿದ್ಯಾರ್ಥಿನಿಯರ ಪ್ರವೇಶ ಪತ್ರಗಳು ಉಡುಪಿ ಪದವಿ ಪೂರ್ವ ಕಾಲೇಜಿನಿಂದ ಬುಧವಾರ ಸೋರಿಕೆಯಾಗಿದ್ದವು. ಈ ಸಂಬಂಧ ಆನ್ಲೈನ್ ಸಂದೇಶವನ್ನು ಪಡೆದಿರುವುದಾಗಿ ದಿ ಕ್ವಿಂಟ್ ವರದಿ ಮಾಡಿದೆ.
ಕಾಲೇಜಿನ ಲೆಡ್ಜರ್ನಿಂದ ತೆಗೆದುಕೊಳ್ಳಲಾದ ಪ್ರವೇಶ ನಮೂದೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಲಾದ ಪಿಡಿಎಫ್ ಹರಿದಾಡಿದೆ. ಈ ದಾಖಲೆಗಳು ಕಾಲೇಜಿನಿಂದಲೇ ಸೋರಿಕೆಯಾಗಿರುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಉಡುಪಿ: ಎಂಜಿಎಂ ವಿದ್ಯಾರ್ಥಿಗಳನ್ನು ಹಿಂಜಾವೇ, ಬಿಜೆಪಿ ಪ್ರಚೋದಿಸಿದ್ದು ಹೀಗೆ…
ಕಾಲೇಜಿನ ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷರಾಗಿರುವ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್, “ಹಿಜಾಬ್ ಧರಿಸಿರುವ ಮುಸ್ಲಿಂ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಕೂರಿಸಲಾಗದು” ಎಂದು ಸಮರ್ಥಿಸಿಕೊಂಡಿದ್ದಾರೆ. ಪ್ರವೇಶಾತಿ ದಾಖಲೆಗಳನ್ನು ಕಾಲೇಜಿಗೆ ಮಾತ್ರ ಸಲ್ಲಿಸಲಾಗಿದೆ ಎಂದು ನೊಂದ ವಿದ್ಯಾರ್ಥಿನಿಯರು ದಿ ಕ್ವಿಂಟ್ಗೆ ಸ್ಪಷ್ಟಪಡಿಸಿದ್ದಾರೆ.
ನೊಂದ ಹೆಣ್ಣು ಮಕ್ಕಳ ಮನೆಗಳು ಟಾರ್ಗೆಟ್?
ಅಲಿಯಾ ಅಸ್ಸಾದಿ ಮತ್ತು ಹಜ್ರಾ ಶಿಫಾ ಇತರರು ಜನವರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ವೈಯಕ್ತಿಕ ವಿವರಗಳು ಲೀಕ್ ಆದ ಹಿನ್ನೆಲೆಯಲ್ಲಿ ಅಸ್ಸಾದಿಯವರು ‘ದಿ ಕ್ವಿಂಟ್’ ಜಾಲತಾಣದೊಂದಿಗೆ ಮಾತನಾಡುವಾಗ ಬುರ್ಕಾವನ್ನು ಧರಿಸಿದ್ದರು.
“ನಾನು ಇನ್ನು ಮುಂದೆ ನನ್ನ ಮುಖವನ್ನು ತೋರಿಸಲು ಸೂಕ್ತವೆನಿಸುವುದಿಲ್ಲ. ನಾನು ಹೇಗೆ ಕಾಣುತ್ತೇನೆ ಮತ್ತು ನನ್ನ ಮನೆ ಎಲ್ಲಿದೆ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಯಾರಾದರೂ ನನ್ನನ್ನು ಗುರಿಯಾಗಿಸಿಕೊಂಡರೆ ಏನು ಮಾಡುವುದು?” ಎಂದು ಆ ಹೆಣ್ಣುಮಗಳು ಪ್ರಶ್ನಿಸಿದ್ದಾಳೆ.
ಹಿಜಾಬ್ ಧರಿಸುವುದನ್ನು ಮುಂದುವರಿಸುವ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಹಜ್ರಾ ಶಿಫಾ, “ನನ್ನ ಹೆತ್ತವರಿಗೂ ಅಪರಿಚಿತ ನಂಬರ್ಗಳಿಂದ ಕರೆಗಳು ಬರುತ್ತಿವೆ. ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದ್ದೇನೆ. ಗೌಪ್ಯ ವಿವರಗಳು ಸಾರ್ವಜನಿಕರಿಗೆ ಹೇಗೆ ತಲುಪಿದವು ಎಂಬುದನ್ನು ವಿವರಿಸಬೇಕೆಂದು ಕಾಲೇಜು ಆಡಳಿತವನ್ನು ಒತ್ತಾಯಿಸಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿರಿ: ಮಡಿಕೇರಿ: ಕೇಸರಿ ಶಾಲು ಧರಿಸಲು ಬಜರಂಗದಳ ನಾಯಕರಿಂದ ಪ್ರಚೋದನೆ; ವಿಡಿಯೊ ವೈರಲ್
“ನಾನು ಹಾವುಗಳನ್ನು ಪ್ರೀತಿಸುತ್ತೇನೆ. ನಾನು ವೈಲ್ಡ್ಲೈಫ್ ಫೋಟೋಗ್ರಾಫರ್ ಆಗಲು ಬಯಸುತ್ತೇನೆ. ಈಗ ಯಾರೂ ನನ್ನ ಮಹತ್ವಾಕಾಂಕ್ಷೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಮತ್ತೇಕೆ ನಮ್ಮನ್ನು ಇಷ್ಟು ಟಾರ್ಗೆಟ್ ಮಾಡಿದ್ದಾರೆ?” ಎಂದು ಕೇಳುವ ವಿದ್ಯಾರ್ಥಿನಿ ಅಲಿಯಾ, “ಬಿಜೆಪಿ ಶಾಸಕ ರಘುಪತಿ ಭಟ್ ಕಾಲೇಜು ಅಧಿಕಾರಿಗಳಿಗೆ ಮತ್ತು ಕೇಸರಿ ಶಾಲು ಹಾಕುವ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಅವರು ಕೇಸರಿ ಶಾಲು ಧರಿಸುವುದನ್ನು ಬೆಂಬಲಿಸುವ ಮೂಲಕ ಹಿಜಾಬ್ಗಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಕೋಮುವಾದಿಕರಿಸಿದ್ದಾರೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವಂತೆ ಅವರು ಪ್ರೇರೇಪಿಸಿದರು. ಈಗ ಅವರು ಕಾಲೇಜು ಮಾತ್ರವಲ್ಲದೆ ನಮ್ಮ ಮನೆಗಳನ್ನೂ ಆತಂಕಕ್ಕೆ ತಳ್ಳಿದ್ದಾರೆ” ಎಂದು ಆಲಿಯಾ ಆರೋಪಿಸಿದ್ದಾರೆ.
ವೈದ್ಯೆಯಾಗಬೇಕು ಅಥವಾ ರೇಡಿಯಾಲಜಿಸ್ಟ್ ಆಗಬೇಕು ಶಿಫಾ ಇಚ್ಛಿಸಿದ್ದಾರೆ. “ಇದು ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಾನು ಕೇವಲ ಓದಲು ಮತ್ತು ಜೀವನದಲ್ಲಿ ಏನಾದರೂ ಸಾಧಿಸಲು ಬಯಸುತ್ತೇನೆ” ಎಂದು ಹತಾಶೆಯಿಂದ ನುಡಿಯುತ್ತಾರೆ ಶಿಫಾ.
ಸೋರಿಕೆಯಾದ ಡೇಟಾದ ಬಗ್ಗೆ ಪ್ರತಿಕ್ರಿಯಿಸಲು ಕಾಲೇಜು ನಿರಾಕರಿಸಿದೆ. (ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಅವರನ್ನು ಸಂಪರ್ಕಿಸಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ವಾಟ್ಸ್ಆಪ್ ಮೂಲಕ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಪ್ರಾಂಶುಪಾಲರಾದ ರುದ್ರೇಗೌಡ ನೀಡಿಲ್ಲ. ಪ್ರತಿಕ್ರಿಯೆ ನೀಡಿದ್ದಲ್ಲಿ ಅಪ್ಡೇಟ್ ಮಾಡಲಾಗುವುದು.)
ಇದನ್ನೂ ಓದಿರಿ: ’ಹಿಜಾಬ್ ಧರಿಸಿ ಶಾಲೆಗೆ ಹೋಗುವುದನ್ನು ನಿರಾಕರಿಸುವುದು ಭಯಾನಕ’: ಮಲಾಲಾ
ಮುಸ್ಲಿಂ ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತರಲು ಮಾರ್ಕ್ಸ್ ಕಾರ್ಡ್, ಪೋಷಕರ ಆದಾಯ ಪ್ರಮಾಣ ಪತ್ರದ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳುತ್ತದೆ.
ಎಲ್ಲರೂ ತಮ್ಮ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ನಮ್ಮ ವಿದ್ಯಾಭ್ಯಾಸ ಕಳಪೆಯಾಗಿದೆ ಎಂದು ನಿಂದಿಸಲಾಗುತ್ತಿದೆ ಎಂದು ಆಲಿಯಾ ತಿಳಿಸಿದ್ದಾರೆ.
“ನಾವು ಹತ್ತನೇ ತರಗತಿಯಲ್ಲಿ ಕಳಪೆ ಸಾಧನೆ ಮಾಡಿದ್ದೇವೆ ಎಂಬ ನಕಲಿ ಮೌಲ್ಯಮಾಪನವನ್ನು ಅವರು ಪ್ರಸಾರ ಮಾಡುತ್ತಿದ್ದಾರೆ. ನಾವು ಈಗ ತರಗತಿಯ ಕಲಿಕೆಯನ್ನು ಕಳೆದುಕೊಳ್ಳುವ ಬಗ್ಗೆ ಅವರು ಏಕೆ ಚಿಂತಿಸುತ್ತಿಲ್ಲ?” ಎಂದು ಬಹಳ ನೊಂದು ಕೇಳುತ್ತಾರೆ ಆಲಿಯಾ.
ಈ ವರ್ಷ ಏಪ್ರಿಲ್ನಲ್ಲಿ ಪಿಯು ಪರೀಕ್ಷೆಗಳು ನಡೆಯುವ ನಿರೀಕ್ಷೆಯಿದೆ. ಜನವರಿಯಲ್ಲಿ ಈ ವಿದ್ಯಾರ್ಥಿಗಳನ್ನು ಕ್ಯಾಂಪಸ್ನಿಂದ ಹೊರಹಾಕಲಾಯಿತು. “ಎರಡು ತಿಂಗಳೊಳಗೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದ್ದರೂ ತರಗತಿಗೆ ನಮ್ಮನ್ನು ಕೂರಿಸುತ್ತಿಲ್ಲ” ಎಂದು ಶಿಫಾ ನೊಂದುಕೊಳ್ಳುತ್ತಾರೆ.
ವಿದ್ಯಾರ್ಥಿನಿಯರು ಕಡಿಮೆ ಅಂಕಗಳನ್ನು ಪಡೆದಿದ್ದಾರೆ ಎಂಬುದು ಸುಳ್ಳು ಎಂದು ‘ದಿ ಕ್ವಿಂಟ್’ ಖಾತ್ರಿಪಡಿಸಿಕೊಂಡಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ ಎಂದು ದಿ ಕ್ವಿಂಟ್ ಹೇಳಿದೆ. ಉದಾಹರಣೆಗೆ, ಮುಸ್ಕಾನ್ ಜೈನಾಬ್ ಹತ್ತನೇ ತರಗತಿಯಲ್ಲಿ ಶೇ. 87.52ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ರೇಶಮ್ ಅವರು ಸಮಾಜ ವಿಜ್ಞಾನದಲ್ಲಿ ಶೇ. 80ರಷ್ಟು ಅಂಕ, ಒಟ್ಟಾರೆಯಾಗಿ ಶೇ. 67.52 ಅಂಕಗಳನ್ನು ಪಡೆದಿದ್ದಾರೆ. ಆಲಿಯಾ ಅಸ್ಸಾದಿ ಅವರು ಸಮಾಜ ವಿಜ್ಞಾನದಲ್ಲಿ ಶೇ.83 ಅಂಕ ಹಾಗೂ ಒಟ್ಟಾರೆಯಾಗಿ ಶೇ. 66.72 ಅಂಕಗಳನ್ನು ಗಳಿಸಿದ್ದಾರೆ.
ಈಗ ಹರಿದಾಡಿರುವ ದಾಖಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರ ಆದಾಯದ ವಿವರಗಳೂ ಇವೆ.
“ನನ್ನ ತಂದೆ ಆಟೋ ಚಾಲಕ. ಮೊದಲು ಅವರು ನನ್ನನ್ನು ಶ್ರೀಮಂತರು ಎಂದು ದೂಷಿಸಿದರು. ನಾವು ಬಡವರಾಗಿದ್ದೇವೆ. ಇವರು ತೊಂದರೆ ಕೊಡುವವರು ಎಂದು ಹೇಳುತ್ತಿದ್ದಾರೆ” ಎಂದು ಆಲಿಯಾ ನೋವು ತೋಡಿಕೊಂಡಿದ್ದಾರೆ. ವಾರ್ಷಿಕವಾಗಿ ರೂ. 1 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರನ್ನು ವಾಟ್ಸಾಪ್ ಫಾರ್ವರ್ಡ್ಗಳಲ್ಲಿ ನಿರ್ದಿಷ್ಟವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. “ದುಡ್ಡು ತೆಗೆದುಕೊಂಡು ಹಿಜಾಬ್ ಧರಿಸಿ ಬರುವ ಹುಡುಗಿಯರೆಂದು ನಮ್ಮನ್ನು ಅವರು ದೂಷಿಸಿದ್ದಾರೆ. ನಾವು ನಮ್ಮ ಧಾರ್ಮಿಕ ನಂಬಿಕೆಗಾಗಿ ಹಿಜಾಬ್ ಧರಿಸುತ್ತೇವೆ ಹೊರತು, ಹಣಕ್ಕಾಗಿ ಅಲ್ಲ” ಎನ್ನುತ್ತಾರೆ ಶಿಫಾ.
“ಈ ದ್ವೇಷ ಅಭಿಯಾನದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವಾಗ ಈ ವಿದ್ಯಾರ್ಥಿಗಳು ಕೆಲವು ದಿನಗಳಿಂದ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ.
“ನಾನು ಕಳೆದುಕೊಂಡ ಮೊದಲ ಸಂಗತಿಯೆಂದರೆ ನನ್ನ ಮಾನಸಿಕ ಶಾಂತಿ. ನಾವು ಮಾನಸಿಕವಾಗಿ ಕಿರುಕುಳ ಮತ್ತು ಚಿತ್ರಹಿಂಸೆಗೆ ಒಳಗಾಗಿದ್ದೇವೆ. ನಾನು ಸಮಯವನ್ನು ಕಳೆದುಕೊಂಡೆ, ಬಹಳಷ್ಟು ಮಾಧ್ಯಮಗಳಿಗೆ ಬೈಟ್ಗಳನ್ನು ನೀಡಿದೆ. ನನಗೂ ನರ್ವಸ್ ಆಗಿದೆ. ಇದು ನಿಜವಾಗಿಯೂ ಕಷ್ಟಕರವಾಗಿದೆ” ಎನ್ನುತ್ತಾರೆ ಆಲಿಯಾ. ಪ್ರತಿ ಬಾರಿ ಸಾರ್ವಜನಿಕವಾಗಿ ಮಾತನಾಡುವಾಗ, “ಹೆಚ್ಚಿನ ವಿವಾದವನ್ನು ತಪ್ಪಿಸಲು ತನ್ನ ಮಾತುಗಳಲ್ಲಿ ಎಚ್ಚರಿಕೆ ವಹಿಸುತ್ತಿದ್ದಾರೆ” ಎನ್ನುತ್ತಾರೆ ವಿದ್ಯಾರ್ಥಿನಿ. ಆದರೆ ಕಾಲೇಜಿನ ಡೇಟಾ ಸೋರಿಕೆಯಿಂದ ಈ ವಿದ್ಯಾರ್ಥಿನಿಯರ ಜೀವನ ಇನ್ನಷ್ಟು ಕಠಿಣವಾಗಿದೆ.
ಈ ಪ್ರಕ್ರಿಯೆಯಲ್ಲಿ ಅಸ್ಸಾದಿ ತಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದಾರೆ. “ಈ ಸಮಸ್ಯೆಯಿಂದಾಗಿ ನಾನು ನನ್ನ ಅನೇಕ ಮುಸ್ಲಿಮೇತರ ಸ್ನೇಹಿತರನ್ನು ಕಳೆದುಕೊಂಡೆ. ನಮ್ಮನ್ನು ವಿರೋಧಿಸುವಂತೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಆಲಿಯಾ ಆಶಾವಾದ ವ್ಯಕ್ತಪಡಿಸಿದ್ದಾರೆ.
“ನನ್ನ ಮುಸ್ಲಿಮೇತರ ಸ್ನೇಹಿತರು ನಮ್ಮನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ” ಎಂದು ಶಿಫಾ ಹೇಳಿದ್ದಾರೆ. ಓದಲು ಕುಳಿತಾಗಲೆಲ್ಲ ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶಿಫಾ.
ವರದಿ ಕೃಪೆ: ದಿ ಕ್ವಿಂಟ್
ಇದನ್ನೂ ಓದಿರಿ: ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ