ಕೆಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರ ಅವಿವೇಕತನಕ್ಕೆ ಯುವಕನೊಬ್ಬ ತನ್ನ ಎಡಗಾಲು ಕಳೆದುಕೊಂಡಿದ್ದಾರೆ ಎಂಬ ಆರೋಪ ಉಳ್ಳಾಲದಲ್ಲಿ ಕೇಳಿಬಂದಿದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಪರಿಹಾರವನ್ನೂ ನೀಡದೆ ಯುವಕನ ಬದುಕಿನಲ್ಲಿ ಆಟವಾಡುತ್ತಿದೆ ಎಂದು ಡಿವೈಎಫ್ಐ ಆರೋಪಿಸಿದೆ.
ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ನೌಷಾದ್ ಎನ್ನುವ ಯುವಕ ದುಬೈನಲ್ಲಿ ಉದ್ಯೋಗದಲ್ಲಿದ್ದರು. 2021ರ ನವೆಂಬರ್ ತಿಂಗಳಲ್ಲಿ ರಜೆಯಲ್ಲಿ ಊರಿಗೆ ಬಂದಿದ್ದ ನೌಶಾದ್ಗೆ ಸಣ್ಣದೊಂದು ಬೈಕ್ ಆಕ್ಸಿಡೆಂಟ್ ಆಗಿ ಕಾಲಿಗೆ ಪೆಟ್ಟಾಗಿತ್ತು. ಈ ವೇಳೆ ಅವರು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಿಂದಾಗಿ ಅವರ ಕಾಲಿನಲ್ಲಿ ಯಾವುದೇ ಗಾಯ, ಮೂಳೆ ಮುರಿತಗಳಿಲ್ಲದೆ ತೀವ್ರ ನೋವು ಮಾತ್ರ ಇದ್ದುದರಿಂದ ಸ್ಕ್ಯಾನಿಂಗ್ ಸಹಿತ ಎಲ್ಲಾ ವಿಧದ ಪರೀಕ್ಷೆಗಳಿಗೆ ಅವರನ್ನು ಒಳಪಡಿಸಲಾಗಿತ್ತು. ಆ ವೇಳೆ ವರದಿಗಳ ಆಧಾರದ ಮೇಲೆ ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಎಂದು ಕೆಎಸ್ ಹೆಗಡೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಜೊತೆಗೆ ಸಾಮಾನ್ಯ ಚಿಕಿತ್ಸೆ, ವಿಶ್ರಾಂತಿಗಾಗಿ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದರು. ಆದರೆ ಮರು ದಿನ ಕಾಲು ವಿಪರೀತ ನೋವು ಇರುವುದಾಗಿ ನೌಶಾದ್ ತಿಳಿಸಿದಾಗ ಮತ್ತೊಂದು ದಿನ ಆಸ್ಪತ್ರೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗೆ ನೌಶಾದ್ ಅವರನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಸಿಕೊಂಡು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಎಸ್ ಹೆಗ್ಡೆ ಆಸ್ಪತ್ರೆ ವೈದ್ಯರು ನೀಡಿದ ತಪ್ಪಾದ ಚಿಕಿತ್ಸೆಯಿಂದಾಗಿ ನೌಷದ್ನ ಕಾಲು ನಿರ್ಜೀವಗೊಂಡಿತು. ಇಷ್ಟಾದ ಮೇಲೆ ಕೆಎಸ್ ಹೆಗ್ಡೆ ಆಸ್ಪತ್ರೆ ವೈದ್ಯರು 38 ಸಾವಿರ ರೂ. ಬಿಲ್ ಪಡೆದು, ಹೆಚ್ಚಿನ ಚಿಕಿತ್ಸೆ ಎಂದು ಹೇಳಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿ ನುರಿತ ವೈದ್ಯರು ಪರಿಶೀಲನೆ ನಡೆಸಿದ್ದು, ಕಾಲಿನ ಮೊಣಕಾಲಿನ ಬಳಿ ರಕ್ತನಾಳ ತುಂಡರಿಸಲ್ಪಟ್ಟಿರುವುದರಿಂದ ರಕ್ತ ಸಂಚಾರವಿಲ್ಲದೆ ಮೊಣಕಾಲಿನ ಕೆಳಗಡೆ ಕಾಲು ಗಂಭೀರವಾಗಿ ಘಾಸಿಗೊಂಡಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಅಪಘಾತ ನಡೆದ 24 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಕಾಲುನೋವು ವಾಸಿಮಾಡಬಹುದಿತ್ತು. ಆದರೆ, ಮೂರು ದಿನ ಕಳೆದಿರುವುದರಿಂದ ಕಾಲು ಕತ್ತರಿಸಬೇಕಾದ ಅನಿವಾರ್ಯತೆಯ ಕುರಿತು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕಾಲು ಉಳಿಸುವ ಎಲ್ಲಾ ಪ್ರಯತ್ನಗಳು ವಿಫಲಗೊಂಡು ಕೊನೆಗೂ ನೌಶಾದ್ನ ಎಡಗಾಲನ್ನು ಕತ್ತರಿಸಿ ತೆಗೆಯಲಾಗಿದೆ. ಈ ಆಸ್ಪತ್ರೆಯಲ್ಲಿ 4 ಲಕ್ಷದ 50 ಸಾವಿರ ರೂ. ಬಿಲ್ ಮಾಡಲಾಯಿತು. ಈ ಎಲ್ಲ ಬಿಲ್ನ್ನು ನೌಷಾದ್ ಕುಟುಂಬವೇ ಭರಿಸಿದೆ.
ಇದನ್ನೂ ಓದಿ: ”ಅನರ್ಹಗೊಳ್ಳಬೇಕಿದ್ದ ವಿವಾದಾತ್ಮಕ ಅಂಬೇಡ್ಕರ್ ಸ್ಕಿಟ್ ಮೊದಲ ಸ್ಥಾನ ಪಡೆದಿದೆ!”: ಮೂಲಗಳ ಮಾಹಿತಿ
ಈ ನೌಷದ್ ಕುಟುಂಬದವರು ಸ್ಥಿತಿವಂತರೇನಲ್ಲ, ಅವರ ತಂದೆ ಆಟೋ ಚಾಲಕ, ಈಗ ಅವರ ದುಡಿಮೆಯಿಂದಲೇ ಕುಟುಂಬ ನಡೆಯಬೇಕು. ನೌಷದ್ ಕಾಲು ಕಳೆದುಕೊಂಡು ಮೂಲೆ ಸೇರಿದ್ದಾರೆ. ಕೆಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯರ ಅಪರಾಧದಿಂದ ಕಾಲು ಕಳೆದುಕೊಂಡ ನೌಷದ್ ಪರ ಧ್ವನಿ ಎತ್ತಲು ಯಾವುದೇ ರಾಜಕಾರಣಿಗಳು, ರಾಜಕೀಯ ಪಕ್ಷ, ಜನಪ್ರತಿನಿಧಿಗಳು ಮುಂದೆ ಬರದಿರುವುದು ಖೇದಕರ ಸಂಗತಿಯಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ನೌಷಾದ್ ಈಗ ಒಂದಿಷ್ಟು ಸಹಜವಾಗಿ ಓಡಾಡಬೇಕಾದರೆ ಅವರಿಗೆ ಒಳ್ಳೆಯ ಗುಣಮಟ್ಟದ ಕೃತಕ ಕಾಲು ಜೋಡಿಸಬೇಕು. ಅದಕ್ಕೆ ಕನಿಷ್ಟ 10 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮನೆಯ ಸ್ಥಿತಿಗತಿಯೂ ಸರಿ ಇರದ ಕಾರಣ ನೌಷಾದ್ ಹಾಗೂ ಕುಟುಂಬದವರು ಜಿಲ್ಲೆಯ ದೊಡ್ಡ ಆಸ್ಪತ್ರೆಯ ವಿರುದ್ದ ಹೋರಾಟಕ್ಕಿಳಿಯಲೂ ಸಾಧ್ಯವಿಲ್ಲ ಎಂದು ಅವರು ಪರಿಹಾರಕ್ಕಾಗಿ ಅಂಗಲಾಚಿದರು. ಆ ಕ್ಷಣಕ್ಕೆ ಆಸ್ಪತ್ರೆಯವರು ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಆದರೆ ಒಂದು ವರ್ಷ ಕಳೆದರೂ ಯಾವುದೇ ಪರಿಹಾರ ನೀಡದ ಹೆಗ್ಡೆ ಮೆಡಿಕಲ್ ಕಾಲೇಜು ಧಣಿಗಳು, ಅಲೆದಾಡಿಸಿ ಇದೀಗ ನಡು ಬೀದಿಯಲ್ಲಿ ಕೈ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯು ನೌಷಾದ್ ಪರವಾಗಿ ನಿಂತಿದ್ದು, ”ಜನ ನಾಯಕರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಬೆಂಬಲಕ್ಕೆ ಬರದಿದ್ದರೇನು.. ತುಳುನಾಡಿನ ಜನ ನೌಷಾದ್ ಪರ ಹೋರಾಟದಲ್ಲಿ ಜೊತೆ ನಿಲ್ಲುತ್ತಾರೆ. ಇದು ಕೇವಲ ನೌಷದ್ ಕುಟುಂಬದ ಹೋರಾಟವಲ್ಲ ಜಿಲ್ಲೆಯ ಜನರ ಹೋರಾಟವಾಗಿದೆ. ಸದ್ಯದಲ್ಲೇ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು” ಎಂದು ಹೇಳಿದೆ.
ಇದನ್ನೂ ಓದಿ: ‘ಅನರ್ಹಗೊಳ್ಳಬೇಕಿದ್ದ ವಿವಾದಾತ್ಮಕ ಅಂಬೇಡ್ಕರ್ ಸ್ಕಿಟ್ ಮೊದಲ ಸ್ಥಾನ ಪಡೆದಿದೆ!’: ಮೂಲಗಳ ಮಾಹಿತಿ