ಕ್ವಿಟ್ ಇಂಡಿಯಾ ದಿನದ ನೆನಪಿನಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ “#ನಿರುದ್ಯೋಗವೇ_ಭಾರತಬಿಟ್ಟು_ತೊಲಗು
#Unemployment_QuitIndia” ಹೆಸರಿನಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿ ಯುವಜನರಿಂದ ವಿಶಿಷ್ಟ ಆಂದೋಲನ ಆರಂಭವಾಗಿದೆ. ಉದ್ಯೋಗಕ್ಕಾಗಿ ಯುವಜನರು ಮತ್ತು ಕೆವಿಎಸ್ ಆರಂಭಿಸಿರುವ ನಿರುದ್ಯೋಗದ ವಿರುದ್ಧದ ಅಭಿಯಾನದಲ್ಲಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ನಿರುದ್ಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವಜನರು ಉದ್ಯೋಗ ಸೃಷ್ಟಿಗಾಗಿ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಉದ್ಯೋಗ ಸೃಷ್ಟಿಯಿಂದಲೇ ದೇಶದ ಅಭಿವೃದ್ದಿ ಸಾಧ್ಯ ಎಂದು ವಾದಿಸಿದ್ದಾರೆ.
‘ಬದುಕುವ ಹಕ್ಕು’ ಯಾವುದೇ ಸಂವಿಧಾನ ಕೊಟ್ಟ ಹಕ್ಕಲ್ಲ. ಅದು ಪ್ರತಿಯೊಬ್ಬರಿಗೂ ಜನ್ಮದತ್ತವಾಗಿ ಬಂದಿರುವ ಹಕ್ಕು. ಎಲ್ಲರೂ ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕಾದುದು ಪ್ರಭುತ್ವದ ಕರ್ತವ್ಯ. ಅದಕ್ಕಾಗಿ ಎಲ್ಲಾ ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಅದರ ಹೊಣೆಗಾರಿಕೆ. ಪ್ರಭುತ್ವವು ನಿರುದ್ಯೋಗಿಗಳಿಗೆ ಕೆಲಸವಿಲ್ಲದಂತಹ ಮತ್ತು ಉದ್ಯೋಗಿಗಳಿಂದ ಕೆಲಸ ಕಿತ್ತುಕೊಳ್ಳುವಂತಹ ವಾತಾವರಣ ಸೃಷ್ಟಿಸುತ್ತಿದೆ ಎಂದರೆ ಅದು ಜನ್ಮದತ್ತವಾದ ನಮ್ಮ ‘ಬದುಕುವ ಹಕ್ಕ’ನ್ನು ಕಿತ್ತುಕೊಳ್ಳುತ್ತಿದೆ ಎಂದೇ ಅರ್ಥ ಎಂದು ಕಲಬುರಗಿಯ ಕುಮಾರ್ ಬುರಡಿಕಟ್ಟಿ ಪ್ರತಿಕ್ರಿಯಿಸಿದ್ದಾರೆ.
“ಪುರುಷಾಧಿಪತ್ಯ ಸಂಕೋಲೆಗಳಿಂದ ಹೊರಬಂದು ಸ್ವಾವಲಂಭಿ ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳುತ್ತಿದ್ದ ಮಹಿಳೆಯರು, ಮತ್ತೆ ಪುರುಷಾಧಿಪತ್ಯ ಮೌಲ್ಯಗಳಲ್ಲಿ ಬಂಧಿಯಾಗುತ್ತಿರುವುದಕ್ಕೆ ನಿರುದ್ಯೋಗವು ಒಂದು ಕಾರಣ. ಉದ್ಯೋಗ ನಮ್ಮ ಹಕ್ಕು. ನಿರುದ್ಯೋಗ ಭಾರತ ಬಿಟ್ಟು ತೊಲಗಲಿ.” – ಕಾವ್ಯ ಸಮತಳ.
“ಅಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ದೇಶಬಿಟ್ಟು ತೋಲಗಿ ಎಂಬ ಘೋಷಣೆ ಕೂಗುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಸಂಕಲ್ಪ ಮಾಡಿದ್ದರು . .!
ಇಂದು ನಮ್ಮ ಯುವ ತಲೆಮಾರು ಜನರನ್ನು ಕಿತ್ತುತಿನ್ನುತ್ತಿರುವ ನಿರುದ್ಯೋಗ, ಬಡತನ, ಅನಕ್ಷರತೆ ಮತ್ತು ಅಸಮಾನತೆ ಎಂಬ ಸಮಸ್ಯೆಗಳು ದೇಶಬಿಟ್ಟು ತೋಲಗಲಿ ಎಂಬ ಮತ್ತೊಂದು ಘೋಷಣೆ ಕೂಗುವ ಮೂಲಕ ನಿಜವಾದ ಅರ್ಥದಲ್ಲಿ ವ್ಯಕ್ತಿಯನ್ನು ಸ್ವಾತಂತ್ರ್ಯಗೊಳಿಸಬೇಕಿದೆ” ಎಂದು ಪ್ರಾಧ್ಯಾಪಕರಾದ ಡಾ.ಕಿರಣ್ ಗಾಜನೂರುರವರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅರುಣ್ ಜೋಳದ ಕೂಡ್ಲಿಗಿಯವರು “ಕ್ವಿಟ್ ಇಂಡಿಯಾ ಚಳವಳಿ’ ಯ ಸಾರ್ಥಕ ನೆನಪೆಂದರೆ, ಭಾರತ ಬಿಟ್ಟು ತೊಲಗಬೇಕಾದ ಸಂಗತಿಗಳನ್ನು ಆಯ್ದು.. ಅವುಗಳನ್ನು ತೊಲಗಿಸಲು ನಾವು ಸಕ್ರಿಯವಾಗುವುದು.
‘ನಿರುದ್ಯೋಗ’ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಆಳುವ ಸರಕಾರ ಉದ್ಯೋಗಗಳನ್ನು ಸೃಷ್ಠಿಸುತ್ತಲೇ ನಿರುದ್ಯೋಗವನ್ನು ತೊಲಗಿಸಬೇಕು. ಈ ಉದ್ಯೋಗ ಸೃಷ್ಟಿಗಾಗಿ ಸರಕಾರಗಳ ಮೇಲೆ ಗರಿಷ್ಠ ಒತ್ತಡ ತರಬೇಕಿದೆ. ಹಾಗಾದಲ್ಲಿ ‘ನಿರುದ್ಯೋಗವೇ ಭಾರತ ಬಿಟ್ಟು ತೊಲಗು’ ದನಿಗೆ ಬಲ ಬರುತ್ತದೆ.” ಎಂದು ಪ್ರತಿಕ್ರಿಯಿಸಿದ್ದಾರೆ.
ಭಗತ್ ಸಿಂಗ್, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರು ಹೋರಾಡಿದ್ದು ಸ್ವತಂತ್ರ ಮತ್ತು ಸಮೃದ್ಧ ಭಾರತಕ್ಕಾಗಿಯೇ ಹೊರತು ನಿರುದ್ಯೋಗ ಭಾರತಕ್ಕಾಗಿ ಅಲ್ಲ. ಬನ್ನಿ ನಿರುದ್ಯೋಗದ ವಿರುದ್ಧ ಸಮರಹೂಡೋಣ.
ಯುವ ಜನರೆ, ನಾವು ಬದುಕುವ ಜಗತ್ತನ್ನು ನಾವೆ ರೂಪಿಸಬೇಕು.
ತಿಳಿಯಿರಿ ನಾವು ತೊಂದರೆಯಲ್ಲ. ನಾವು ಪರಿಹಾರ ಎಂಬ ಮಾತುಗಳು ಕೇಳಿಬಂದಿವೆ.
ದಾವಣಗೆರೆ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಿರುದ್ಯೋಗದ ಕುರಿತು ಸಂವಾದ ಕಾರ್ಯಕ್ರಮ ನಡೆದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Good news