ತಮ್ಮ ಅನಾರೋಗ್ಯ ಪೀಡಿತ ತಾಯಿಗೆ ಆಮ್ಲಜನಕ ಸಿಲಿಂಡರ್ ಬೇಕೆಂದು ವ್ಯಕ್ತಿಯೊಬ್ಬರು ಗಟ್ಟಿಯಾಗಿ ಮಾತನಾಡಿದ್ದಕ್ಕೆ, ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಅವರು “ಎರಡೇಟು ತಿನ್ನುತ್ತಿ” ಎಂದು ಹೇಳುವ ವೀಡಿಯೊ ಗುರುವಾರದಂದು ವೈರಲ್ ಆಗಿದೆ. ಘಟನೆಯ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಮಧ್ಯಪ್ರದೇಶದ ಆಸ್ಪತ್ರೆಯಿಂದ ಆಮ್ಲಜನಕ ಸಿಲಿಂಡರ್ಗಳನ್ನು ಲೂಟಿ ಮಾಡಿದ ಘಟನೆ ನಡೆದ ಎರಡು ದಿನಗಳ ನಂತರ ದಮೋಹ್ನ ಸಂಸದರಾಗಿರುವ ಪ್ರಹ್ಲಾದ್ ಪಟೇಲ್ ಅಲ್ಲಿನ ಜಿಲ್ಲಾ ಆಸ್ಪತ್ರೆಯನ್ನು ಪರಿಶೀಲಿಸುತ್ತಿದ್ದರು.
“ಕೊರೊನಾ ರೋಗಿಯಾಗಿರುವ ತನ್ನ ತಾಯಿಗೆ ಆಮ್ಲಜನಕ ಸಿಲಿಂಡರ್ ಬೇಕಿತ್ತು, 36 ಗಂಟೆಗಳ ನಂತರ ನೀಡುವುದಾಗಿ ಹೇಳಲಾಗಿತ್ತು, ಆದರೆ ಅದನ್ನು ಇನ್ನೂ ಒದಗಿಸಲಾಗಿಲ್ಲ” ಎಂದು ಸಂತ್ರಸ್ತ ವ್ಯಕ್ತಿಯು ಪ್ರಹ್ಲಾದ್ ಪಟೇಲ್ ಜೊತೆ ಬೆರಳು ಎತ್ತಿ ಮಾತನಾಡಿದ್ದರು. ಇದಕ್ಕೆ ಕೋಪಗೊಂಡ ಮಂತ್ರಿ ಅವರ ಬೆರಳನ್ನು ಕೆಳಕ್ಕೆ ಇಳಿಸುವಂತೆ ಸೂಚಿಸಿ, “ಈ ರೀತಿ ಮಾತನಾಡಿದರೆ ಎರಡೇಟು ತಿನ್ನುತ್ತಿ. (ಐಸಾ ಬೊಲೆಗಾ ತು ದೊ ಖಾಯೇಗಾ)” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!
ಆದರೆ ಸಂತ್ರಸ್ತ ವ್ಯಕ್ತಿಯೂ ಅಷ್ಟಕ್ಕೆ ನಿಲ್ಲಿಸದೆ, ತಾನು ಏಟು ತಿನ್ನಲು ಸಿದ್ದನಾಗಿರುವುದಾಗಿ ಹೇಳಿದ್ದು, ತನ್ನ ತಾಯಿ ಆಗಲೇ ಹೊಡೆತಗಳನ್ನು ತಿನ್ನುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.
ನಂತರ ಘಟನೆಯನ್ನು ವಿಡಿಯೊ ಮಾಡಲಾಗುತ್ತಿದೆ ಎಂದು ಅರಿತುಕೊಂಡ ಪ್ರಹ್ಲಾದ್ ಪಟೇಲ್ ಆ ವ್ಯಕ್ತಿಗೆ, “ಶಾಂತನಾಗು, ನಿನಗೆ ಆಮ್ಲಜನಕ ನೀಡಲು ನಿರಾಕರಿಸುತ್ತಿದ್ದಾರೆಯೆ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಸಾಹಯಕತೆಯಿಂದ ಉತ್ತರಿಸಿದ ಸಂತ್ರಸ್ತ ವ್ಯಕ್ತಿಯು, “ಹೌದು ನನಗೆ ಆಮ್ಲಜನಕ ನಿರಾಕರಿಸಲಾಗಿದೆ” ಎಂದು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಮುಖ್ಯ ವಕ್ತಾರ ಕೆ.ಕೆ. ಮಿಶ್ರಾ, “ದಾಮೋಹ್ನಲ್ಲಿ ಮತದಾನಕ್ಕೂ ಮೊದಲು ಎಲ್ಲಾ ಸೋಂಕಿತರನ್ನು ಮಂತ್ರಿಗಳ ಕಾರಿನಲ್ಲಿ ಭೋಪಾಲ್ ಮತ್ತು ಜಬಲ್ಪುರ ಆಸ್ಪತ್ರೆಗಳಲ್ಲಿ ಭರ್ತಿ ಮಾಡುತ್ತಿದ್ದರು. ಈಗ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯನ್ನು ಉಳಿಸಲು ಆಮ್ಲಜನಕಕ್ಕಾಗಿ ಮನವಿ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ!. ಅವರ ಕೆಲಸ ಮುಗಿದಿದೆ” ಎಂದು ಹೇಳಿದ್ದಾರೆ.
दमोह में मतदान के पहले हर संक्रमित को प्रदेश के मंत्री कारों से भोपाल-जबलपुर अस्पतालों में भर्ती करवा रहे थे,अब जिला अस्पताल में अपनी माँ को बचाने के लिए ऑक्सीजन की गुहार करने वाले BJP कार्यकर्ता को दो चांटे देने की बात कह रहे हैं केंद्रीय मंत्री श्री प्रह्लाद पटेल! काम निकल गया! pic.twitter.com/7A4KNT64QN
— KK Mishra (@KKMishraINC) April 22, 2021
ಮಂಗಳವಾರ ರಾತ್ರಿ, ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಕುಟುಂಬ ಸದಸ್ಯರು ಬಲವಂತವಾಗಿ ಆಮ್ಲಜನಕ ಸಿಲಿಂಡರ್ಗಳನ್ನು ಕಸಿದುಕೊಂಡ ಘಟನೆ ನಡೆದಿತ್ತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಆಸ್ಪತ್ರೆ ಆಡಳಿತ ಮಂಡಳಿಯು ಪೊಲೀಸರನ್ನು ಕರೆಯಬೇಕಾಗಿ ಬಂದಿತ್ತು.
ಇದನ್ನೂ ಓದಿ: ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?: ಅಘೋಷಿತ ಲಾಕ್ಡೌನ್ಗೆ ಸಿದ್ದರಾಮಯ್ಯ ಕಿಡಿ