ಜನವರಿ 26 ರ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯ ವೇಳೆ ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಧರ್ಮೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಜನವರಿ 26 ರಂದು ಕೆಂಪು ಕೋಟೆಯ ಆವರಣದಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿರುವುದರಲ್ಲಿ ಬಂಧಿತನ ಪಾತ್ರವೂ ಖಚಿತವಾಗಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಮೂರು ಕರಾಳ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ದ ಜನವರಿ 26 ರಂದು ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿಯಲ್ಲಿ ಕೆಂಪು ಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು.
ಇದನ್ನೂ ಓದಿ:ಕೆಂಪು ಕೋಟೆಯಲ್ಲಿ ಅಹಿತಕರ ಘಟನೆ: ದೀಪ್ ಸಿಧು ವಾರ ಮೊದಲೇ ತಯಾರಿ ನಡೆಸಿದ್ದನೆ?
ಟ್ರಾಕ್ಟರ್ ರ್ಯಾಲಿಯ ಮೂಲಕ ಅನೇಕ ಪ್ರತಿಭಟನಾಕಾರರು ತಮ್ಮ ಟ್ರಾಕ್ಟರುಗಳ ಸಮೇತ ಕೆಂಪು ಕೋಟೆಯನ್ನು ತಲುಪಿದ್ದರು. ಅವರಲ್ಲಿ ಕೆಲವು ವ್ಯಕ್ತಿಗಳು ಸಿಖ್ ಧಾರ್ಮಿಕ ಧ್ವಜ ಮತ್ತು ರೈತರ ಧ್ವಜವನ್ನು ಕೆಂಪು ಕೋಟೆಯ ಪ್ರಾಂಗಣದಲ್ಲಿರುವ ಖಾಲಿ ಕಂಬಕ್ಕೆ ಏರಿಸಿದ್ದರು. ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನಿಸಲಾಗಿದೆ ಎಂದು ಸರ್ಕಾರದ ಪರವಾಗಿರುವ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿ ಗೊಂದಲ ಸೃಷ್ಟಿಸಿದ್ದವು.
ನಂತರದಲ್ಲಿ ಹಲವು ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ರಾಷ್ಟ್ರಧ್ವಜಕ್ಕೆ ಯಾವುದೆ ಹಾನಿ ಮಾಡಲಾಗಿಲ್ಲ ಹಾಗೂ ರೈತರು ತಮ್ಮ ಧ್ವಜಗಳನ್ನು ಏರಿಸುವ ಸಮಯದಲ್ಲಿ ರಾಷ್ಟ್ರಧ್ವಜ ಸಾಮಾನ್ಯ ಸ್ಥಳದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು ಎಂದು ವರದಿ ಮಾಡಿ ಗೊಂದಲಕ್ಕೆ ತೆರೆಎಳೆದಿದ್ದವು. ಅಲ್ಲದೆ ಅಲ್ಲಿ ನಡೆದ ಅಹಿತಕರ ಘಟನೆಗೆ ಕಾರಣ ಕೂಡಾ ಬಿಜೆಪಿ ಬೆಂಬಲಿಗರು ಎಂದು ದಾಖಲೆ ಸಮೇತ ಫ್ಯಾಕ್ಟ್ಚೆಕ್ ವೆಬ್ಸೈಟ್ಗಳು ನಿರೂಪಿಸಿದ್ದವು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ