Homeಮುಖಪುಟಯುಪಿ ಚುನಾವಣೆ 5ನೇ ಹಂತದ ಮತದಾನ: ಸಂಕಷ್ಟದಲ್ಲಿರುವ ಅಮೇಥಿ ಕ್ಷೇತ್ರದ ರೈತರು

ಯುಪಿ ಚುನಾವಣೆ 5ನೇ ಹಂತದ ಮತದಾನ: ಸಂಕಷ್ಟದಲ್ಲಿರುವ ಅಮೇಥಿ ಕ್ಷೇತ್ರದ ರೈತರು

ಅಮೇಥಿಯ ನಾಲ್ಕು ಕ್ಷೇತ್ರಗಳಲ್ಲಿ 2017ರಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷವು ಗೌರಿಗಂಜ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು.

- Advertisement -
- Advertisement -

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೇಲೆ ಈ ಬಾರಿ ರೈತ ಪ್ರಭಾವ ಹೆಚ್ಚಾಗಿದೆ. ಯುಪಿಯ ಪಶ್ಚಿಮ ಭಾಗದ 38 ಕ್ಷೇತ್ರಗಳಲ್ಲಿ ಜಾಟ್ ಸಮುದಾಯಕ್ಕೆ ಸೇರಿದ ರೈತರು ಹೆಚ್ಚಿನ ಪ್ರಭಾವ ಬೀರಲಿದ್ದಾರೆ. ಅದೇ ರೀತಿಯಲ್ಲಿ ಉಳಿದ ಭಾಗದಲ್ಲಿಯೂ ರೈತ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 27 ರಂದು ನಡೆಯಲಿರುವ ಐದನೇ ಹಂತದ ಮತದಾನದ ನಿರ್ಣಾಯಕ ವಿಧಾನಸಭಾ ಕ್ಷೇತ್ರಗಳಲ್ಲಿ ಅಮೇಥಿ ಕ್ಷೇತ್ರ ಒಂದಾಗಿದೆ. ಹಿಂದೆ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದ ಅಮೇಥಿ ಈಗ ಛಿದ್ರವಾಗಿದೆ. ಬಿಜೆಪಿ ಮತ್ತು ಎಸ್ಪಿ ಇಲ್ಲಿ ಬಲ ಸಾಧಿಸುತ್ತಿವೆ. ಈ ಕ್ಷೇತ್ರದಲ್ಲಿ ರೈತರು ಹಲವು ರೀತಿಯಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆ ಮತದಾನದ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಅಮೇಥಿ ಕ್ಷೇತ್ರದ ಜನರು ತಮ್ಮ ಜೀವನೋಪಾಯಕ್ಕಾಗಿ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ಅವರು ತಮ್ಮ ದೈನಂದಿನ ಬದುಕನ್ನು ಸಾಗಿಸಲು ಹೋರಾಟ ನಡೆಸುವಂತಾಗಿದೆ. ಬಿಡಾಡಿ ದನಗಳ ಕಾಟ, ರಸಗೊಬ್ಬರ, ವಿದ್ಯುತ್ ಸಮಸ್ಯೆಗಳು ಅವರ ಸಂಕಷ್ಟವನ್ನು ಹೆಚ್ಚಿಸಿವೆ.

ಕ್ಷೇತ್ರವು ಮತದಾನದ ಹೊಸ್ತಿಲಿನಲ್ಲಿದ್ದರೂ, ಅಮೇಥಿಯ ಆವಾಸ್ ವಿಕಾಸ್ ಕಾಲನಿಯಲ್ಲಿರುವ ಬ್ಲಾಕ್ ಕಚೇರಿಯಲ್ಲಿ ರಸಗೊಬ್ಬರಕ್ಕಾಗಿ ರೈತರು ನಿಂತಿದ್ದ ಸರತಿ ಸಾಲು 1.5 ಕಿ.ಮೀಗಿಂತ ಹೆಚ್ಚು ದಾಟಿದೆ. ಈ ಸಾಲು ನೋಡುವವರಿಗೆ ಎಲ್ಲಾ ರೈತರಿಗೂ ಗೊಬ್ಬರ ಸಿಗುತ್ತದೆಯೋ ಇಲ್ಲವೋ ಎಂಬ ಭಾವನೆಯನ್ನು ಹುಟ್ಟಿಸುತ್ತದೆ. ರೈತರೂ ಕೂಡ ಅದೇ ಆತಂಕದಲ್ಲಿ ನಿಲ್ಲುತ್ತಾರೆ.

ಅಲ್ಪಸ್ವಲ್ಪ ಸ್ಥಿತಿವಂತರು ಗೊಬ್ಬರವನ್ನು ಖರೀದಿಸಲು ಮುಗಿಬೀಳುತ್ತಾರೆ. ಇದರಿಂದಾಗಿ ಸಣ್ಣ ರೈತರು ಖಾಸಗಿ ಅಂಗಡಿಗಳಲ್ಲಿ ಖರೀದಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅಲ್ಲಿನ ಅನೇಕ ರೈತರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ, 45 ಕೆಜಿ ಇರುವ ಒಂದು ಗೊಬ್ಬರ ಚೀಲಕ್ಕೆ ಸರ್ಕಾರದ ದರ 270 ರೂ. ಆದರೆ ಅದೇ ರಸಗೊಬ್ಬರದ ಬೆಲೆ ಖಾಸಗಿ ಅಂಗಡಿಗಳಲ್ಲಿ 410 ರೂ. ಇದೆ ಎಂದು ರೈತರು ಹೇಳುತ್ತಾರೆ.

“ನಾನು 1,500 ರೂಪಾಯಿಗೆ ರಸಗೊಬ್ಬರವನ್ನು ಖರೀದಿಸಿದೆ. ನಾವು ಏನು ಮಾಡಬೇಕು? ನಾವು ನಮ್ಮ ಹೊಟ್ಟೆಪಾಡು ನೋಡಬೇಕೋ ಅಥವಾ ಎಲ್ಲವನ್ನೂ ಕೃಷಿಗೆ ಖರ್ಚು ಮಾಡಬೇಕೋ? ಅಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳ ಮೇಲೆ ಬಿಡಾಡಿ ದನಗಳ ಹಾವಳಿ ಮುಂದುವರಿದಿದೆ. ನಾವು ಪ್ರಾಣಿಗಳು ತಿನ್ನಲು ಕೃಷಿ ಮಾಡುತ್ತಿರುವಂತಿದೆ” ಎಂದು ಅಮೇಥಿ ಕ್ಷೇತ್ರದ ಭಗೋರಿಯಾ ಗ್ರಾಮದ ರೈತ ರಾಧೇಶ್ಯಾಮ್ ಹೇಳಿದ್ದಾರೆ.

“ನಿತ್ಯ ಬೆಳೆಗಳನ್ನು ತಿನ್ನುವ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದೆ. ಜೊತೆಗೆ ಕಾಡುಹಂದಿಗಳ ಕಾಟವೂ ಇದೆ. ಅವು ರೈತರು ಬೆಳೆದ ಕಡಲೆ, ಅವರೆಕಾಳುಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತವೆ. ಹೀಗಾಗಿ, ನಮಗೆ ಇನ್ನು ಮುಂದೆ ಕೃಷಿ ಮಾಡಬೇಕು ಎನಿಸುತ್ತಿಲ್ಲ. ಕೃಷಿಯಲ್ಲಿ ಲಾಭವೂ ಇಲ್ಲ, ನಮ್ಮ ಉಳಿತಾಯವೂ ಉಳಿದಿಲ್ಲ. ಸಾಲದ ಮರುಪಾವತಿಯ ಒತ್ತಡವು ಹೆಚ್ಚುತ್ತಿದೆ” ಎಂದು ರೈತರು ಹೇಳುತ್ತಾರೆ.

ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಅಮೇಥಿ ಜಿಲ್ಲೆಯಲ್ಲಿ 1,000 ಹಳ್ಳಿಗಳು, ನಾಲ್ಕು ತಾಲೂಕುಗಳು, 13 ಬ್ಲಾಕ್‌ಗಳನ್ನು ಹೊಂದಿದ್ದು, ಕ್ಷೇತ್ರದಲ್ಲಿ 18,67,678 ಜನಸಂಖ್ಯೆ ಇದೆ. ಅಮೇಥಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ – ಗೌರಿಗಂಜ್, ತಿಲೋಯಿ, ಜಗದೀಶ್ಪುರ ಮತ್ತು ಅಮೇಥಿ.

ಈ ಪೈಕಿ, 2017ರಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷವು ಗೌರಿಗಂಜ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಆಶಿಶ್ ಶುಕ್ಲಾ, ಬಿಜೆಪಿಯಿಂದ ಸಂಜಯ್ ಸಿನ್ಹ್, ಎಸ್ಪಿಯಿಂದ ಮಹಾರಾಜಿ ಪ್ರಜಾಪತಿ, ಬಿಎಸ್‌ಪಿಯಿಂದ ರಾಗಿಣಿ ತಿವಾರಿ ಮತ್ತು ಎಎಪಿಯಿಂದ ಅನುರಾಗ್ ಸ್ಪರ್ಧಿಸಿದ್ದಾರೆ. ಹಿಂದೆ ರಾಹುಲ್ ಗಾಂಧಿ ಸಂಸದರಾಗಿದ್ದ ಇಲ್ಲಿ ಈಗ ಸ್ಮೃತಿ ಇರಾನಿ ಗೆದ್ದಿದ್ದಾರೆ.

ಕಳೆದ ಬಾರಿ ಅಮೇಥಿ ಗೆದ್ದಿದ್ದ ಬಿಜೆಪಿ ವಿರುದ್ಧ ರೈತರು ಸಿಟ್ಟಾಗಿದ್ದಾರೆ. ಆ ಕ್ಷೇತ್ರದ ರೈತರ ಸಮಸ್ಯೆಗಳನ್ನು ಉಳಿದ ಪಕ್ಷಗಳು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ ಮತ್ತು ವಿವಿಧ ರೀತಿಯ ಭರವಸೆಗಳನ್ನು ನೀಡುತ್ತಿವೆ. ಆದರೆ, ಅಲ್ಲಿನ ರೈತರು ಯಾರ ಮೇಲೆ ವಿಶ್ವಾಸವಿಡುತ್ತಾರೆ ಎಂದು ಕಾದು ನೋಡಬೇಕಿದೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ನಾಲ್ಕು ಹಂತಗಳಲ್ಲಿ ಮತದಾನ ಮುಗಿದಿದೆ. ಉಳಿದ ಹಂತದ ಮತದಾನವು ಫೆಬ್ರವರಿ 27, ಮಾರ್ಚ್ 3 ಮತ್ತು 7 ರಂದು ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.


ಇದನ್ನೂ ಓದಿ; ನಟ ಚೇತನ್‌ಗೆ ಜಾಮೀನು ಮಂಜೂರು, ಆದರೂ ಸದ್ಯಕ್ಕೆ ಬಿಡುಗಡೆಯಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...