Homeಮುಖಪುಟಯುಪಿ ಚುನಾವಣೆ ಹಿನ್ನೆಲೆ: ರಾಜ್ಯಸಭೆಯಲ್ಲಿ ಶ್ರೀಕೃಷ್ಣ ಜನ್ಮಭೂಮಿ ವಿಷಯ ಪ್ರಸ್ತಾಪಿಸಿದ BJP!

ಯುಪಿ ಚುನಾವಣೆ ಹಿನ್ನೆಲೆ: ರಾಜ್ಯಸಭೆಯಲ್ಲಿ ಶ್ರೀಕೃಷ್ಣ ಜನ್ಮಭೂಮಿ ವಿಷಯ ಪ್ರಸ್ತಾಪಿಸಿದ BJP!

- Advertisement -
- Advertisement -

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಲಿದೆ. ಆಡಳಿತರೂಢ ಪಕ್ಷವಾದ ಬಿಜೆಪಿ ಅಭಿವೃದ್ದಿ ಹೆಸರಲ್ಲಿ ಮತ ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪಕ್ಷವು ಮತ್ತೆ ಹಿಂದುತ್ವದ ಬೆನ್ನು ಬಿದ್ದಿದೆ. ಗುರುವಾರ ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಯಲ್ಲಿ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಭೂ ವಿವಾದದ ವಿಷಯವನ್ನು ಪ್ರಸ್ತಾಪಿಸಿ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಕಾನೂನನ್ನು ರದ್ದುಗೊಳಿಸುವ ಕಾನೂನಿಗಾಗಿ ಒತ್ತಾಯಿಸಿದ್ದಾರೆ.

ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಹರನಾಥ್ ಸಿಂಗ್ ಯಾದವ್ ಅವರು ‘‘1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯನ್ನು ಅಸಂವಿಧಾನಿಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾಯಿದೆಯು, ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿರುವ ಯಾವುದೇ ಪೂಜಾ ಸ್ಥಳವನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ ಮತ್ತು ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಹಾಗೆಯೆ ಕಾಪಾಡಿಕೊಳ್ಳಬೇಕು ಎಂದು ಹೇಳುತ್ತದೆ.

ಇದನ್ನೂ ಓದಿ:ಡಿ.6 ಬಾಬರಿ ಮಸೀದಿ ಧ್ವಂಸ ದಿನ: ಮಥುರಾದಲ್ಲಿ ನಿಷೇದಾಜ್ಞೆ, ಪೊಲೀಸ್ ಬಿಗಿ ಭದ್ರತೆ

ಈ ಕಾಯಿದೆಯು ಅಯೋಧ್ಯೆಯ ಬಾಬರಿ ಮಸೀದಿ ಪ್ರಕರಣಕ್ಕೆ ವಿನಾಯಿತಿ ನೀಡುತ್ತದೆಯಾದರೂ, ಇತರ ಯಾವುದೇ ಧಾರ್ಮಿಕ ಸ್ಥಳಗಳ ಮೇಲಿನ ನ್ಯಾಯಾಲಯಗಳಲ್ಲಿನ ಎಲ್ಲಾ ಕಾನೂನು ವಿವಾದಗಳನ್ನು 1991 ರ ಕಾಯಿದೆಯ ಪ್ರಕಾರ ಇತ್ಯರ್ಥಗೊಳಿಸಬೇಕಾಗಿದೆ.

“ಈ ನಿಬಂಧನೆಯು ಸಮಾನತೆಯ ಹಕ್ಕಿನ ಸಾಂವಿಧಾನಿಕ ನಿಬಂಧನೆಯನ್ನು ಮಾತ್ರವಲ್ಲದೆ ಸಾಂವಿಧಾನಿಕ ಪೀಠಿಕೆಯ ಭಾಗವಾಗಿರುವ ಜಾತ್ಯತೀತತೆಯನ್ನು ಉಲ್ಲಂಘಿಸುತ್ತದೆ. ಯಾವುದೇ ನಾಗರಿಕರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಬಾರದು ಎಂದು ಈ ಕಾನೂನು ಹೇಳುವುದು ವಿಚಿತ್ರವಾಗಿದೆ. ಈ ಕಾನೂನನ್ನು ಪ್ರಶ್ನಿಸುವಂತಿಲ್ಲ” ಎಂದು ಹರನಾಥ್ ಸಿಂಗ್‌ ಹೇಳಿದ್ದಾರೆ.

“ವಿದೇಶಿ ಆಕ್ರಮಣಕಾರರು ಕೃಷ್ಣ ಜನ್ಮಭೂಮಿ ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ಬಲವಂತವಾಗಿ ಆಕ್ರಮಿಸಿಕೊಂಡಿರುವುದಕ್ಕೆ ಕಾನೂನು ‘ಕಾನೂನು ಮಾನ್ಯತೆ’ ನೀಡುತ್ತದೆ. ಈ ಅನಿಯಂತ್ರಿತ ಮತ್ತು ಅಸಂವಿಧಾನಿಕ ಕಾನೂನು ಹಿಂದೂಗಳು, ಜೈನರು, ಸಿಖ್ ಮತ್ತು ಬೌದ್ಧರು ತಮ್ಮ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಕಸಿದುಕೊಂಡಿದೆ. ಜೊತೆಗೆ, ಈ ಕಾನೂನು ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನ ನಡುವೆ ತಾರತಮ್ಯವನ್ನು ಮಾಡುತ್ತದೆ. ಆದರೆ ಇವರಿಬ್ಬರೂ ವಿಷ್ಣುವಿನ ಅವತಾರಗಳು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮಥುರಾ-ವೃಂದಾವನ್ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯ 22 ವಾರ್ಡ್‌ಗಳಲ್ಲಿ ಮದ್ಯ, ಮಾಂಸ ನಿಷೇಧ!

“ಒಂದೇ ಕಾರ್ಯಗಳು ಮತ್ತು ಸನ್ನಿವೇಶಗಳಿಗೆ ಎರಡು ಕಾನೂನುಗಳು ಇರುವಂತಿಲ್ಲ. ನಾಗರಿಕರಿಗೆ ನ್ಯಾಯಾಲಯಗಳ ಬಾಗಿಲುಗಳನ್ನು ಮುಚ್ಚಲು ಸಾಧ್ಯವಿಲ್ಲ. ಈ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯು ಕೇವಲ ಅಸಂವಿಧಾನಿಕ ಮಾತ್ರವಲ್ಲ, ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರ ಧಾರ್ಮಿಕ ಭಾವನೆಗಳ ವಿರುದ್ಧದ ಕ್ರೌರ್ಯವಾಗಿದೆ. ಈ ಕಾನೂನನ್ನು ತಕ್ಷಣವೇ ರದ್ದುಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಸಂಸದ ಈ ಪ್ರಸ್ತಾವನೆಗೆ ವಿರೋಧ ಪಕ್ಷದ ಕೆಲವು ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆರ್‌ಜೆಡಿಯ ಮನೋಜ್ ಕುಮಾರ್ ಝಾ, “ಸೌಹಾರ್ದತೆ ಮತ್ತು ಸಾಮರಸ್ಯದ ಕಲ್ಪನೆಯನ್ನು ರಕ್ಷಿಸಲು ಸಂಸತ್ತಿನಲ್ಲಿ 1991 ರ ಕಾಯಿದೆಯನ್ನು ಅಂಗೀಕರಿಸಲಾಯಿತು. ಬಿಜೆಪಿ ಸಂಸದರು ಪಂಡೋರಾ ಪೆಟ್ಟಿಗೆಯನ್ನು ತೆರೆದಿದ್ದಾರೆ. ಧಾರ್ಮಿಕ ಘರ್ಷಣೆಗಳ ಹೆಸರಿನಲ್ಲಿ ರಾಷ್ಟ್ರವು ಸಾಕಷ್ಟು ನಷ್ಟವನ್ನು ಅನುಭವಿಸಿದೆ, ಭಾರತದ ಸಾಮಾಜಿಕ ರಚನೆಯನ್ನು ಕದಡಬೇಡಿ” ಎಂದು ಹೇಳಿದ್ದಾರೆ.

ಅಯೋಧ್ಯೆ ಮತ್ತು ವಾರಣಾಸಿ ಮಾದರಿಯಲ್ಲಿ ಮಥುರಾದಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕಳೆದ ವಾರ ಟ್ವೀಟ್ ಮಾಡಿದ್ದನ್ನು ಅನುಸರಿಸಿ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾವನೆಯಾಗಿದೆ.

ಇದನ್ನೂ ಓದಿ:ಮಥುರಾ: ಈದ್ಗಾ ಮಸೀದಿ ತೆರವು ಕೋರಿದ್ದ ಮನವಿ ವಜಾ

ಮಥುರಾದಲ್ಲಿ ಪ್ರಮುಖವಾದ ಶಾಹಿ ಈದ್ಗಾ ಮಸೀದಿ ಇದ್ದು, ಅದರ ಪಕ್ಕವೇ ದೇವಸ್ಥಾನವಿದೆ. ಮಸೀದಿಯ ಜಾಗ ಕೃಷ್ಣನ ಜನ್ಮಸ್ಥಳ ಎಂದು ಬಿಜೆಪಿ ಬೆಂಬಲಿತ ಸಂಘಟನೆಳು ವಾದಿಸುತ್ತಿವೆ. ಹೀಗಾಗಿ ಮಸೀದಿಯು ವರ್ಷಗಳಿಂದ ಕಾನೂನು ಹೋರಾಟದ ಕೇಂದ್ರವಾಗಿದೆ.

ಈ ಹಿಂದೆ ದೀರ್ಘಕಾಲ ಇದ್ದ ವಿವಾದವನ್ನು ಅಕ್ಟೋಬರ್ 1968 ರಲ್ಲಿ ನ್ಯಾಯಾಲಯವು ಅದನ್ನು ನಿರ್ವಹಿಸುವ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘದ ನಡುವೆ ಒಪ್ಪಂದ ನಡೆಸಿ ವಿವಾದವನ್ನು ಇತ್ಯರ್ಥ ಮಾಡಲಾಗಿತ್ತು. ಆದರೆ ಅಯೋಧ್ಯೆ ಬಾಬರಿ ಮಸೀದಿ ಧ್ವಂಸಗೊಂಡ ನಂತರ ವಿವಾದವನ್ನು ಮತ್ತೆ ಪುನಶ್ಚೇತನಗೊಳಿಸಲಾಗಿದೆ.

ಬಿಜೆಪಿ ಬೆಂಬಲಿತ ಸಂಘಟನೆಗಳು ಈ ಒಪ್ಪಂದವನ್ನು ರದ್ದುಗೊಳಿಸಬೇಕು ಮತ್ತು ಮಥುರಾದ ಈದ್ಗಾ ಮತ್ತು ದೇವಾಲಯದ ಸಂಪೂರ್ಣ ಸಂಕೀರ್ಣವನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿದೆ.

ಇದನ್ನೂ ಓದಿ:ಕಾಶಿ ಮತ್ತು ಮಥುರಾದಲ್ಲಿ ಇನ್ನೂ ಎರಡು ಉಳಿದಿವೆ ಅವುಗಳನ್ನು ಅಳಿಸಿಹಾಕಬೇಕು: ಕೆ. ಎಸ್. ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಾಡಲು ಕೆಲಸವಿಲ್ಲದ, ಹೇಳಿಕೊಳ್ಳಲು ಸಾಧನೆಗಳಿಲ್ಲದ ಎಲ್ಲದಕ್ಕೂ ಮೀರಿ ಮಾನವ ಕುಲಕ್ಕೆ ರಾಕ್ಷಸರಂತೆ ಕಾಡುತ್ತಿರುವ ದುರುಳರು ಇದನ್ನ ಬಿಟ್ಟು ಇನ್ನೇನು ಮಾಡಲು ಸಾಧ್ಯ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...