“ಅವರು ‘ಜಿನ್ನಾ’ ಆರಾಧಕರು, ನಾವು ‘ಸರ್ದಾರ್ ಪಟೇಲ್’ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ, ನಾವು ಭಾರತ ಮಾತೆಗಾಗಿ ನಮ್ಮ ಪ್ರಾಣವನ್ನು ಅರ್ಪಿಸುತ್ತೇವೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ರಾಜ್ಯ ರಾಜಕೀಯದ ಸಂದರ್ಭದಲ್ಲಿ ರೈತರ ಕಬ್ಬಿನ ಸಮಸ್ಯೆಗಳ (ಕಿಸಾನ್ ಗನ್ನಾ) ಕುರಿತು ಮಾತಾಡಬೇಕೇ ಹೊರತು ಮಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ತೆಗೆದುಕೊಂಡು ಅಲ್ಲ’ ಎಂದು ಹೇಳಿದ್ದರು.
ಹೀಗಿದ್ದರೂ ಕೂಡ ವಿರೋಧ ಪಕ್ಷದವರನ್ನು ಟೀಕೆ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಮತ್ತೆ ಮಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಬಳಸಿ, ರಾಜನಾಥ್ ಸಿಂಗ್ ಅವರ ಮಾತುಗಳನ್ನು ಕಡೆಗಣಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಚುನಾವಣೆ; ಮುಗ್ಗರಿಸುತ್ತಿರುವ ಮೋದಿ-ಯೋಗಿ ಜೋಡಿ
वे 'जिन्ना' के उपासक है, हम 'सरदार पटेल' के पुजारी हैं।
उनको पाकिस्तान प्यारा है, हम माँ भारती पर जान न्योछावर करते हैं।
— Yogi Adityanath (@myogiadityanath) January 28, 2022
“ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಅವರ ಹೆಸರನ್ನು ಚುನಾವಣೆಯ ಸಮಯದಲ್ಲಿ ಏಕೆ ತರುತ್ತಾರೆ ಎಂದು ನನಗೆ ತಿಳಿದಿಲ್ಲ. ಇದನ್ನು ರಾಜಕೀಯಗೊಳಿಸಲು ಬಯಸುವವರು, ಯುಪಿ ರಾಜಕೀಯದಲ್ಲಿ ಜಿನ್ನಾ ಅವರ ಹೆಸರನ್ನು ಹೇಳಬಾರದು. ಬದಲಿಗೆ, ನಾವು ರೈತರ ಕಬ್ಬಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕು” ಎಂದು ರಾಜನಾಥ್ ಸಿಂಗ್ ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ಗುರುವಾರ (ಜ.27) ಹೇಳಿದ್ದರು.
ಹಲವಾರು ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ಮಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಬಳಸುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಜಿನ್ನಾ ಬೆಂಬಲಿಗರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್, ಜವಾಹರಲಾಲ್ ನೆಹರು ಮತ್ತು ಮಹಮ್ಮದ್ ಅಲಿ ಜಿನ್ನಾ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಎಂದು ಮಾತನಾಡಿದ್ದರು.
ಇದನ್ನೂ ಓದಿ: ಯುಪಿ ಚುನಾವಣೆ: ಅಯೋಧ್ಯೆಯಿಂದ ಪವನ್ ಪಾಂಡೆ ಎಸ್ಪಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ