Homeಕರ್ನಾಟಕಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ.

- Advertisement -
- Advertisement -

ಉತ್ತರ ಕನ್ನಡದ ಗ್ರಾಮಾಂಗಣಗಳಲ್ಲೀಗ ತರಹೇವಾರಿ “ಕಂಟ್ರಿ ಪಾಲಿಟಿಕ್ಸ್” ಶುರುವಿಟ್ಟುಕೊಂಡಿದೆ! ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಹಣಾ’ಹಣಿ ನಡೆಯುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ, ಮತ್ತೊಂದು ಕೋನದಿಂದ ಯುದ್ಧ ಭೂಮಿಯತ್ತ ಕಣ್ಣು ಹಾಯಿಸಿದರೆ ಆಧಿಕಾರ ಬಲ, ಧರ್ಮ ಕಾರಣದ ಹಿಕಮತ್ತು ಕರಗತ ಮಾಡಿಕೊಂಡಿರುವ ಆಳುವ ಬಿಜೆಪಿಗೆ ಎದುರಾಳಿಯೇ ಇಲ್ಲವೇನೊ ಅನ್ನಿಸುತ್ತದೆ! ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕಾಗ್ರೇಸರು ಗ್ರಾಪಂ, ಮುಸ್ಸಿಪಾಲಿಟಿ ಮಟ್ಟಕ್ಕೆ ಇಳಿದಿರುವ ಈ ಕಾಲಮಾನದಲ್ಲಿ ಎದುರಾಗಿರುವ ಗ್ರಾಪಂ ಚುನಾವಣೆ ಎರಡು ಕಾರಣಕ್ಕೆ ಕುತೂಹಲ ಕೆರಳಿಸಿದೆ!

ಒಂದು, ಗ್ರಾಪಂಗಳಿಗೆ ಕಡು ಕೇಸರಿ ಬಣ್ಣ ಬಳಿಯುವ ಪಕ್ಕಾ ಪ್ಲಾನು ಹಾಕಿಕೊಂಡಿರುವ ಸಂಘಪರಿವಾರದ ಹಿಂದುತ್ವದ ಅಂತರ್ಜಾಲ ಅತಿ ಸಕ್ರಿಯವಾಗಿರುವುದು. ಮತ್ತೊಂದು, ಈ ಗ್ರಾಪಂ ಚುನಾವಣೆ ನಡೆದು ಇನ್ನೆರಡು ವರ್ಷದಲ್ಲಿ ಬರಲಿರುವ ಅಸೆಂಬ್ಲಿ ಇಲೆಕ್ಷನ್‌ನ ದಿಕ್ಸೂಚಿ ಎಂಬಂತಾಗಿರುವುದು. ಒಂದಂತೂ ಖರೆ – ಹದಗೊಳ್ಳುತ್ತಿರುವ ಅಖಾಡ ಉತ್ತರಕನ್ನಡದ ರಾಜಕೀಯ ಸಮೀಕರಣ ಬದಲಿಸುತ್ತಿದೆ; ಬಿಜೆಪಿ-ಕಾಂಗ್ರೆಸ್ ಒಳಗಿನ ಆಯಕಟ್ಟಿನಲ್ಲಿ ಗಮನಾರ್ಹ ಬದಲಾವಣೆ ತರುವ ಎಲ್ಲ ಸಂಕೇತಗಳೂ ಸ್ಪಷ್ಟವಾಗುತ್ತಿದೆ. ಹಳ್ಳಿಗಳ ರಸ್ತೆ, ಶಾಲೆ, ಕರೆಂಟು ಮುಂತಾದ್ದೆಲ್ಲ ಎಂಪಿ ಮಟ್ಟದ್ದಲ್ಲ; ಅದೆಲ್ಲ ಏನಿದ್ದರೂ ಎಂಎಲ್‌ಎ ಸರಿಪಡಿಸಬೇಕು. ಎಂಪಿ ಸಾಹೇಬರು ದಿಲ್ಲಿಯಲ್ಲಿ ಕುಂತು ಸಂವಿಧಾನ ಬದಲಿಸುವುವವರು ಎಂದು ದೊಡ್ಡಸ್ತಿಕೆ ಪ್ರವರ ಪ್ರದರ್ಶಿಸುತ್ತಿದ್ದ ಸಂಸದ ಅನಂತ ಹೆಗಡೆಯೂ ಈ ಸಲ ಗ್ರಾಮಗಳ ಸಣ್ಣ ಲೆವೆಲ್‌ನ ರಾಜಕೀಯಕ್ಕೆ ಇಳಿದಿದ್ದಾರೆ.

ಬಿಜೆಪಿ ಹಳ್ಳಿಗಳ ಆಡಳಿತ ವಶಪಡಿಸಿಕೊಳ್ಳಲು ವ್ಯವಸ್ಥಿತ ಕಾರ್ಯಾಚರಣೆ ಆರಂಭಿಸಿರುವಾಗ ಎದುರಾಳಿ ಕಾಂಗ್ರೆಸ್ ಉಮೇದುದಾರರಿಗಾಗಿ ತಡಕಾಡುತ್ತಿದೆ. ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಭಸ್ಮಾಸುರ ಮೇಲಾಟದಿಂದ ಇಡೀ ಪಕ್ಷವೀಗ ಬರಡಾಗಿಹೋಗಿದೆ! ಆದರೂ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಎಂಎಲ್‌ಎಯಾಗುವ ಆಸೆಯಿಟ್ಟುಕೊಂಡಿರುವ ಮಾಜಿ ಶಾಸಕರು ಮಣ್ಣು ರಸ್ತೆಯಲ್ಲಿ “ಮಣ್ಣು” ಹೊರುತ್ತಿದ್ದಾರೆ. ಬಿಜೆಪಿಯ ಹಾಲಿ ಶಾಸಕರು ತಮ್ಮ ಹಿಡಿತ ಹಳ್ಳಿಗಳಲ್ಲಿ ಬಿಗಿಮಾಡಿಕೊಂಡರೆ ಮತ್ತೆ ಟಿಕೆಟ್ ಕ್ಲೇಮ್ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಹಳ್ಳಿಗಾಡಿನಲ್ಲಿ ಬೆವರಿಳಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜಿಲ್ಲೆಯಲ್ಲಿ ಸುತ್ತು ಹೊಡೆದು ಹೋಗಿದ್ದಾರೆ.

ಉತ್ತರಕನ್ನಡದಲ್ಲಿ ಒಟ್ಟು 231 ಗ್ರಾಪಂಗಳಿವೆ. 8,65,329 ಮತದಾರರಿದ್ದಾರೆ. ಕರಾವಳಿಯ ಐದು ತಾಲ್ಲೂಕುಗಳ 105 ಗ್ರಾಪಂಗಳಿಗೆ ಡಿ.22 ರಂದು ಮತದಾನ; ಗಟ್ಟದ ಮೇಲಿನ ಏಳು ತಾಲ್ಲೂಕುಗಳ 126 ಗ್ರಾಪಂ ರಚನೆಗೆ ಡಿ.27 ರಂದು ಜನಾದೇಶ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಪಕ್ಷದ ಚಿನ್ಹೆಗಳ ಮೇಲೆ ಚುನಾವಣೆ ನಡೆಯದಾದರೂ ಅತೀ ಹೆಚ್ಚು ಜವಾರಿ ಜಗಳವನ್ನು ಮಾಜಿ-ಹಾಲಿ ಎಮ್ಮೆಲ್ಲೆಗಳು, ಎಂಪಿ, ಮಂತ್ರಿಗಳು ಹುಟ್ಟುಹಾಕಿ ತಾಕತ್ತು ತೋರಿಸಲು ಹವಣಿಸುತ್ತಿದ್ದಾರೆ. ಐದಾರು ತಿಂಗಳಲ್ಲಿ ಬರಲಿರುವ ತಾಪಂ ಮತ್ತು ಜಿಪಂ ಹೋರಾಟಕ್ಕೆ ರಣವೀಳ್ಯ ಕೊಡುವಂತಿದೆ. ಸದರಿ ಗ್ರಾಪಂ ಇಲೆಕ್ಷನ್ ಮೂಲಕ ಹಳ್ಳಿಗಳಲ್ಲಿ ಬಿಜೆಪಿ ನೆಲೆಯನ್ನು ಮಜಬೂತು ಮಾಡಿಕೊಂಡರೆ ವಲಸಿಗ ಶಾಸಕರ ಹಂಗಿರುವುದಿಲ್ಲ ಎಂಬ ಕರಾರುವಾಕ್ ಲೆಕ್ಕಾಚಾರ ಆರ್‌ಎಸ್‌ಎಸ್ ತಂತ್ರಗಾರರದು.

ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಕರಾವಳಿಯಲ್ಲಿ ಗೆದ್ದ ಬಿಜೆಪಿಯ ಮೂರು ಶಾಸಕರು ಮೂಲ ಸಿದ್ಧಾಂತದವರಲ್ಲ. ಇವರೆಲ್ಲ ವಲಸಿಗರು. ಇಲೆಕ್ಷನ್ ಹತ್ತಿರ ಬಂದಾಗಲೇ ನಿಗೂಢವಾಗಿ ಸತ್ತುಹೋದ ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಸಂಘಪರಿವಾರ ಹುಟ್ಟು ಹಾಕಿದ ಹಿಂದುತ್ವದ ಹುಚ್ಚು ಅಲೆಯೇರಿ ದಡ ತಲುಪಿದವರು. ಇವರಿಂದ ಪಾರ್ಟಿ ಬೆಳೆಯುತ್ತದೆ ಮತ್ತು ಇವರೆಲ್ಲ ಮತ್ತೆ ಗೆಲ್ಲುತ್ತಾರೆಂಬ ನಂಬಿಕೆ ಸಂಘ ಪರಿವಾರದ ಕಟ್ಟರ್ ಸರದಾರರಿಗಿಲ್ಲ. ಈಗಾಗಲೇ ಕಾರವಾರದ ರೂಪಾಲಿನಾಯ್ಕ್ ಮತ್ತು ಭಟ್ಕಳದ ಸುನೀಲ್ ನಾಯ್ಕ್ರನ್ನು ಅನ್‌ಪಾಪ್ಯುಲರ್ ಮಾಡುವ ಮಸಲತ್ತು ನಡೆದಿದೆ. ಕುಮಟೆಯ ಸಣ್ಣ ಗಾಣಿಗ ಜಾತಿಯ ದಿನಕರ ಶೆಟ್ಟಿಯ ದುಡ್ಡಿನ ವ್ಯಾಮೋಹಕ್ಕೆ ಹೆದರಿ ಬಹುಸಂಖ್ಯಾತ ಬ್ರಾಹ್ಮಣ ಅಥವಾ ಕೊಂಕಣಿ ಒಬ್ಬನಿಗೆ ಟಿಕೆಟ್ ಕೊಡುವ ನಿರ್ಧಾರ ಸಂಘ ಪರಿವಾರದ ಬೈಠಕ್‌ನಲ್ಲಿ ಅದೆಂದೋ ತೀರ್ಮಾನ ಆಗಿಹೋಗಿದೆ!!

ಆಪರೇಷನ್ ಕಮಲ ಮಾಡಿಕೊಂಡ ಹದಿನೇಳು ಅನರ್ಹ ಶಾಸಕರ ತಂಡದಲ್ಲಿರುವ ಯಲ್ಲಾಪುರದ ಮಂತ್ರಿ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿ ಯಡಿಯೂರಪ್ಪನವರ ಯುಗ ಮುಗಿದ ನಂತರ ನೆಲೆ-ಬೆಲೆ ಕಳೆದುಕೊಳ್ಳುತ್ತಾರೆಂಬುದು ಯಲ್ಲಾಪುರದ ಕಾಳಮ್ಮದೇವಿಗೂ ಪಕ್ಕಾ ಆಗಿಹೋಗಿದೆ!! ಸ್ಪೀಕರ್ ಕಾಗೇರಿಯವರನ್ನು ಶಿರಸಿ ಶಾಸಕನ ಸೀಟಿಂದ ಎಳೆದುಹಾಕಿ ತಾನು ಅಲ್ಲಿ ಕುಳಿತುಕೊಳ್ಳುವ ಕನಸು ಹಲವು ದಿನದಿಂದ ಕಾಣುತ್ತಿರುವ ಸಂಸದ ಅನಂತ್ ಹೆಗಡೆ ಈ ಗ್ರಾಪಂ ಇಲೆಕ್ಷನ್‌ನಿಂದ ಆ ಗುರಿ ಈಡೇರಿಸಿಕೊಳ್ಳು ಸ್ಕೆಚ್ ಹೆಣೆದಿದ್ದಾರೆ. ಬಿಜೆಪಿಗೆ ನೆಲೆಯಿಲ್ಲದ ಹಳಿಯಾಳದಲ್ಲಿ ಕಾಂಗ್ರೆಸ್‌ನ ಹಳೆ ಹುಲಿ ಆರ್.ವಿ ದೇಶಪಾಂಡೆ ಮತ್ತು ಅವರೇ ಸಾಕಿಸಲುಹಿ ಎರಡು ಬಾರಿ ಎಂಎಲ್‌ಸಿ ಮಾಡಿರುವ ಎಸ್.ಎಲ್ ಘೋಟನೇಕರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. 1983ರಿಂದ ಒಮ್ಮೆ ಮಾತ್ರ ಸೋತಿರುವ ದೇಶಪಾಂಡೆಗೆ ರಾಜಕೀಯ ನಿವೃತ್ತಿ ಕೊಡಿಸಿ ಹಳಿಯಾಳದ ಎಂಎ¯ ಎಯಾಗುವ ಯೋಚನೆ ಘೋಟನೇಕರ್ ಮಾಡುತ್ತಿದ್ದಾರೆ.

ಬೆಂಗಳೂರು ಮಟ್ಟದ ರಾಜಕಾರಣಿಯಾಗಿರುವ ದೇಶಪಾಂಡೆ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಘೋಟನೇಕರ್ ಜನರ ನಡುವೆ ಓಡಾಡಿಕೊಂಡಿದ್ದಾರೆ. ಬಹುಸಂಖ್ಯಾತ ಮರಾಠ ಕೋಮಿನ ಘೋಟನೇಕರ್ ಅವರ ಆಟ ಅರಿತಿರುವ ದೇಶಪಾಂಡೆ, ಅವರಿಗೆ ಮೂಗುದಾರ ಹಾಕಲು ನೋಡುತ್ತಿದ್ದಾರೆ. ಗ್ರಾಪಂ ಇಲೆಕ್ಷನ್‌ನಲ್ಲಿ ಹಳಿಯಾಳದ ಉಸ್ತುವಾರಿಯಾಗಿ ಕ್ಷೇತ್ರದಲ್ಲಿ ಭಾವಿ ಶಾಸಕನ ಗೆಟಪ್ ಪ್ರದರ್ಶಿಸಲು ಹೊರಟ ಘೋಟೇಕರ್‌ಗೆ ದೇಶಪಾಂಡೆ ಪಕ್ಕದ ಯಲ್ಲಾಪುರ ಕ್ಷೇತ್ರಕ್ಕೆ ಸಾಗಾಕಿಸಿದ್ದಾರೆ. ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಷ್ಟು ದಿನ ಆತನೊಂದಿಗೆ ಸೇರಿ ತನ್ನನ್ನ ಕಾಡಿದ ಘೋಟನೇಕರ್‌ನನ್ನು ಈಗ ಹೆಬ್ಬಾರ್‌ನ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಡಿ ದೇಶಪಾಂಡೆ ಪರಿಣಾಮಗಳಿಗಾಗಿ ಕಾದಿದ್ದಾರೆ. ಮರಾಠರು ಹೆಚ್ಚಿರುವ ಯಲ್ಲಾಪುರ, ಮುಂಡಗೋಡಲ್ಲಿ ಗೆಳೆಯ ಹೆಬ್ಬಾರ್ ಎದುರು ಸ್ಪರ್ಧಿಸುವ ಹಾಗೆ ಮಾಡಿ ಘೋಟನೇಕರ್‌ನ ಇಕ್ಕಟ್ಟಿಗೆ ಸಿಲುಕಿಸಲು ದೇಶಪಾಂಡೆ ಯೋಚನೆ ಹಾಕಿದ್ದಾರೆ!!

ಕಾರವಾರ ಮತ್ತು ಭಟ್ಕಳದಲ್ಲಿ ಅಲ್ಲಿನ ಮಾಜಿ ಶಾಸಕರಾದ ಸತೀಶ್ ಸೈಲ್ ಹಾಗೂ ಮಂಕಾಳ ವೈದ್ಯರಿಗೆ ಕಾಂಗ್ರೆಸ್ ಗೆಲ್ಲಿಸುವ ಹೊಣೆಗಾರಿಕೆ ಕೊಡಲಾಗಿದೆ. ಮತ್ತೆ ಶಾಸಕರಾಗುವ ಹಠದಲ್ಲಿರುವ ಈ ಇಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಗೆ ಪ್ರಬಲ ಮುಖಾಮುಖಿಯಾಗುವುದು ಖಂಡಿತ! ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕುಮಟೆಯ ಉಸ್ತುವಾರಿ ತಪ್ಪಿಸಿರುವುದರ ಹಿಂದೆ ಆಕೆಯ ಹಿತಶತ್ರು ದೇಶಪಾಂಡೆಯವರ ಕುತಂತ್ರವಿದೆ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿದೆ. ಇನ್ನೊಂದು ಊಹಾಪೋಹದಂತೆ ತನ್ನ ಆಪ್ತ ವಲಯದಲ್ಲಿರುವ ಶಾರದಾ ಶೆಟ್ಟಿಯವರಿಗೆ ಕ್ಷೇತ್ರವನ್ನು ಹದಮಾಡಿಸಲು, ಡಿಕೆಶಿ ಉಪಾಯವಾಗಿ ದೇಶಪಾಂಡೆಯವರನ್ನು ಕುಮಟಾದಲ್ಲಿ ಬಿಟ್ಟಿದ್ದಾರಂತೆ. ದೇಶಪಾಂಡೆಯವರು ಕುಮಟಾ ಕ್ಷೇತ್ರದ ಬಹುಸಂಖ್ಯಾತ ಬ್ರಾಹ್ಮಣ ಸಮುದಾಯದ ತಮ್ಮ ಶಿಷ್ಯ ಶಿವಾನಂದ ಹೆಗಡೆಯವರಿಗೆ ಮುಂದಿನ ಟಿಕೆಟ್ ಕೊಡಿಸಲು ಯೋಚಿಸಿದ್ದಾರಂತೆ. ಹಾಗೊಮ್ಮೆ ಬ್ರಾಹ್ಮಣರಿಗೆ ಟಿಕೆಟ್ ಕೊಡಬೇಕೆಂದಿದ್ದರೆ ಮಧು ಬಂಗಾರಪ್ಪ ಜತೆ ಕಾಂಗ್ರೆಸ್‌ಗೆ ಬರಲು ಸಿದ್ಧವಾಗಿರುವ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯೇ ಗಟ್ಟಿ ಹುರಿಯಾಳೆಂದು ದೇಶಪಾಂಡೆ ವಿರೋಧಿ ಬ್ರಾಹ್ಮಣ ಬಣ ವಾದ ಮಂಡಿಸುತ್ತಿದೆ.

ಸಣ್ಣ-ಸಣ್ಣ ಅಂತರದಲ್ಲಿ ಎರಡು ಬಾರಿ ಬಿಜೆಪಿಯಿಂದ ಕುಮಟೆಯಲ್ಲಿ ಮತ್ತು ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿರುವ ಶಶಿಭೂಷಣ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಎರಡೂ ಕಡೆ ಗೆಲ್ಲಬಲ್ಲ ಬುದ್ಧಿವಂತ-ಜನಪರ ತರುಣ. ಬಹಳ ವರ್ಷದಿಂದ ಶಿರಸಿಯಲ್ಲಿ ದರಬಾರು ಮಾಡಿಕೊಂಡಿರುವ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಅವರಿಗೆ ರೆಸ್ಟ್ ನೀಡಲಾಗಿದೆ. ಇದು ಡಿಕೆಶಿಗೆ ತೀರಾ ಸನಿಹದಲ್ಲಿರುವ ಶಿರಸಿ ಮೂಲದ ಬೆಂಗಳೂರು ನಿವಾಸಿ ಸುಷ್ಮಾ ಹೊನ್ನಾವರ(ರೆಡ್ಡಿ) ಪ್ರಭಾವದಿಂದಾದದ್ದೆಂದು ಕಾಂಗ್ರೆಸ್‌ನಲ್ಲಿ ಗೊಣಗಾಟ ನಡೆದಿದೆ. ಮಾರ್ಗರೇಟ್ ಆಳ್ವ ಬಣದ ಸುಷ್ಮಾರೆಡ್ಡಿ ಹಣವಂತ ಮಹಿಳೆ. ಶಿರಸಿಯಿಂದ ಶಾಸಕಿಯಾಗುವ ತಯಾರಿಯಲ್ಲಿ ಆಕೆ ಈಗಾಗಲೇ ಓಡಾಟ ಆರಂಭಿಸಿದ್ದಾರೆ.

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ. ಒಡೆದು ಹೋಗಿ ದುರ್ಬಲಗೊಂಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಆರ್ಭಟ ಎದುರಿಸಲಾಗುತ್ತಿಲ್ಲವೆಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ!

  • ಶುದ್ಧೋದನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...