Homeಕರ್ನಾಟಕಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ.

- Advertisement -
- Advertisement -

ಉತ್ತರ ಕನ್ನಡದ ಗ್ರಾಮಾಂಗಣಗಳಲ್ಲೀಗ ತರಹೇವಾರಿ “ಕಂಟ್ರಿ ಪಾಲಿಟಿಕ್ಸ್” ಶುರುವಿಟ್ಟುಕೊಂಡಿದೆ! ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಹಣಾ’ಹಣಿ ನಡೆಯುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ, ಮತ್ತೊಂದು ಕೋನದಿಂದ ಯುದ್ಧ ಭೂಮಿಯತ್ತ ಕಣ್ಣು ಹಾಯಿಸಿದರೆ ಆಧಿಕಾರ ಬಲ, ಧರ್ಮ ಕಾರಣದ ಹಿಕಮತ್ತು ಕರಗತ ಮಾಡಿಕೊಂಡಿರುವ ಆಳುವ ಬಿಜೆಪಿಗೆ ಎದುರಾಳಿಯೇ ಇಲ್ಲವೇನೊ ಅನ್ನಿಸುತ್ತದೆ! ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕಾಗ್ರೇಸರು ಗ್ರಾಪಂ, ಮುಸ್ಸಿಪಾಲಿಟಿ ಮಟ್ಟಕ್ಕೆ ಇಳಿದಿರುವ ಈ ಕಾಲಮಾನದಲ್ಲಿ ಎದುರಾಗಿರುವ ಗ್ರಾಪಂ ಚುನಾವಣೆ ಎರಡು ಕಾರಣಕ್ಕೆ ಕುತೂಹಲ ಕೆರಳಿಸಿದೆ!

ಒಂದು, ಗ್ರಾಪಂಗಳಿಗೆ ಕಡು ಕೇಸರಿ ಬಣ್ಣ ಬಳಿಯುವ ಪಕ್ಕಾ ಪ್ಲಾನು ಹಾಕಿಕೊಂಡಿರುವ ಸಂಘಪರಿವಾರದ ಹಿಂದುತ್ವದ ಅಂತರ್ಜಾಲ ಅತಿ ಸಕ್ರಿಯವಾಗಿರುವುದು. ಮತ್ತೊಂದು, ಈ ಗ್ರಾಪಂ ಚುನಾವಣೆ ನಡೆದು ಇನ್ನೆರಡು ವರ್ಷದಲ್ಲಿ ಬರಲಿರುವ ಅಸೆಂಬ್ಲಿ ಇಲೆಕ್ಷನ್‌ನ ದಿಕ್ಸೂಚಿ ಎಂಬಂತಾಗಿರುವುದು. ಒಂದಂತೂ ಖರೆ – ಹದಗೊಳ್ಳುತ್ತಿರುವ ಅಖಾಡ ಉತ್ತರಕನ್ನಡದ ರಾಜಕೀಯ ಸಮೀಕರಣ ಬದಲಿಸುತ್ತಿದೆ; ಬಿಜೆಪಿ-ಕಾಂಗ್ರೆಸ್ ಒಳಗಿನ ಆಯಕಟ್ಟಿನಲ್ಲಿ ಗಮನಾರ್ಹ ಬದಲಾವಣೆ ತರುವ ಎಲ್ಲ ಸಂಕೇತಗಳೂ ಸ್ಪಷ್ಟವಾಗುತ್ತಿದೆ. ಹಳ್ಳಿಗಳ ರಸ್ತೆ, ಶಾಲೆ, ಕರೆಂಟು ಮುಂತಾದ್ದೆಲ್ಲ ಎಂಪಿ ಮಟ್ಟದ್ದಲ್ಲ; ಅದೆಲ್ಲ ಏನಿದ್ದರೂ ಎಂಎಲ್‌ಎ ಸರಿಪಡಿಸಬೇಕು. ಎಂಪಿ ಸಾಹೇಬರು ದಿಲ್ಲಿಯಲ್ಲಿ ಕುಂತು ಸಂವಿಧಾನ ಬದಲಿಸುವುವವರು ಎಂದು ದೊಡ್ಡಸ್ತಿಕೆ ಪ್ರವರ ಪ್ರದರ್ಶಿಸುತ್ತಿದ್ದ ಸಂಸದ ಅನಂತ ಹೆಗಡೆಯೂ ಈ ಸಲ ಗ್ರಾಮಗಳ ಸಣ್ಣ ಲೆವೆಲ್‌ನ ರಾಜಕೀಯಕ್ಕೆ ಇಳಿದಿದ್ದಾರೆ.

ಬಿಜೆಪಿ ಹಳ್ಳಿಗಳ ಆಡಳಿತ ವಶಪಡಿಸಿಕೊಳ್ಳಲು ವ್ಯವಸ್ಥಿತ ಕಾರ್ಯಾಚರಣೆ ಆರಂಭಿಸಿರುವಾಗ ಎದುರಾಳಿ ಕಾಂಗ್ರೆಸ್ ಉಮೇದುದಾರರಿಗಾಗಿ ತಡಕಾಡುತ್ತಿದೆ. ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಭಸ್ಮಾಸುರ ಮೇಲಾಟದಿಂದ ಇಡೀ ಪಕ್ಷವೀಗ ಬರಡಾಗಿಹೋಗಿದೆ! ಆದರೂ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಎಂಎಲ್‌ಎಯಾಗುವ ಆಸೆಯಿಟ್ಟುಕೊಂಡಿರುವ ಮಾಜಿ ಶಾಸಕರು ಮಣ್ಣು ರಸ್ತೆಯಲ್ಲಿ “ಮಣ್ಣು” ಹೊರುತ್ತಿದ್ದಾರೆ. ಬಿಜೆಪಿಯ ಹಾಲಿ ಶಾಸಕರು ತಮ್ಮ ಹಿಡಿತ ಹಳ್ಳಿಗಳಲ್ಲಿ ಬಿಗಿಮಾಡಿಕೊಂಡರೆ ಮತ್ತೆ ಟಿಕೆಟ್ ಕ್ಲೇಮ್ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಹಳ್ಳಿಗಾಡಿನಲ್ಲಿ ಬೆವರಿಳಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜಿಲ್ಲೆಯಲ್ಲಿ ಸುತ್ತು ಹೊಡೆದು ಹೋಗಿದ್ದಾರೆ.

ಉತ್ತರಕನ್ನಡದಲ್ಲಿ ಒಟ್ಟು 231 ಗ್ರಾಪಂಗಳಿವೆ. 8,65,329 ಮತದಾರರಿದ್ದಾರೆ. ಕರಾವಳಿಯ ಐದು ತಾಲ್ಲೂಕುಗಳ 105 ಗ್ರಾಪಂಗಳಿಗೆ ಡಿ.22 ರಂದು ಮತದಾನ; ಗಟ್ಟದ ಮೇಲಿನ ಏಳು ತಾಲ್ಲೂಕುಗಳ 126 ಗ್ರಾಪಂ ರಚನೆಗೆ ಡಿ.27 ರಂದು ಜನಾದೇಶ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಪಕ್ಷದ ಚಿನ್ಹೆಗಳ ಮೇಲೆ ಚುನಾವಣೆ ನಡೆಯದಾದರೂ ಅತೀ ಹೆಚ್ಚು ಜವಾರಿ ಜಗಳವನ್ನು ಮಾಜಿ-ಹಾಲಿ ಎಮ್ಮೆಲ್ಲೆಗಳು, ಎಂಪಿ, ಮಂತ್ರಿಗಳು ಹುಟ್ಟುಹಾಕಿ ತಾಕತ್ತು ತೋರಿಸಲು ಹವಣಿಸುತ್ತಿದ್ದಾರೆ. ಐದಾರು ತಿಂಗಳಲ್ಲಿ ಬರಲಿರುವ ತಾಪಂ ಮತ್ತು ಜಿಪಂ ಹೋರಾಟಕ್ಕೆ ರಣವೀಳ್ಯ ಕೊಡುವಂತಿದೆ. ಸದರಿ ಗ್ರಾಪಂ ಇಲೆಕ್ಷನ್ ಮೂಲಕ ಹಳ್ಳಿಗಳಲ್ಲಿ ಬಿಜೆಪಿ ನೆಲೆಯನ್ನು ಮಜಬೂತು ಮಾಡಿಕೊಂಡರೆ ವಲಸಿಗ ಶಾಸಕರ ಹಂಗಿರುವುದಿಲ್ಲ ಎಂಬ ಕರಾರುವಾಕ್ ಲೆಕ್ಕಾಚಾರ ಆರ್‌ಎಸ್‌ಎಸ್ ತಂತ್ರಗಾರರದು.

ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಕರಾವಳಿಯಲ್ಲಿ ಗೆದ್ದ ಬಿಜೆಪಿಯ ಮೂರು ಶಾಸಕರು ಮೂಲ ಸಿದ್ಧಾಂತದವರಲ್ಲ. ಇವರೆಲ್ಲ ವಲಸಿಗರು. ಇಲೆಕ್ಷನ್ ಹತ್ತಿರ ಬಂದಾಗಲೇ ನಿಗೂಢವಾಗಿ ಸತ್ತುಹೋದ ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಸಂಘಪರಿವಾರ ಹುಟ್ಟು ಹಾಕಿದ ಹಿಂದುತ್ವದ ಹುಚ್ಚು ಅಲೆಯೇರಿ ದಡ ತಲುಪಿದವರು. ಇವರಿಂದ ಪಾರ್ಟಿ ಬೆಳೆಯುತ್ತದೆ ಮತ್ತು ಇವರೆಲ್ಲ ಮತ್ತೆ ಗೆಲ್ಲುತ್ತಾರೆಂಬ ನಂಬಿಕೆ ಸಂಘ ಪರಿವಾರದ ಕಟ್ಟರ್ ಸರದಾರರಿಗಿಲ್ಲ. ಈಗಾಗಲೇ ಕಾರವಾರದ ರೂಪಾಲಿನಾಯ್ಕ್ ಮತ್ತು ಭಟ್ಕಳದ ಸುನೀಲ್ ನಾಯ್ಕ್ರನ್ನು ಅನ್‌ಪಾಪ್ಯುಲರ್ ಮಾಡುವ ಮಸಲತ್ತು ನಡೆದಿದೆ. ಕುಮಟೆಯ ಸಣ್ಣ ಗಾಣಿಗ ಜಾತಿಯ ದಿನಕರ ಶೆಟ್ಟಿಯ ದುಡ್ಡಿನ ವ್ಯಾಮೋಹಕ್ಕೆ ಹೆದರಿ ಬಹುಸಂಖ್ಯಾತ ಬ್ರಾಹ್ಮಣ ಅಥವಾ ಕೊಂಕಣಿ ಒಬ್ಬನಿಗೆ ಟಿಕೆಟ್ ಕೊಡುವ ನಿರ್ಧಾರ ಸಂಘ ಪರಿವಾರದ ಬೈಠಕ್‌ನಲ್ಲಿ ಅದೆಂದೋ ತೀರ್ಮಾನ ಆಗಿಹೋಗಿದೆ!!

ಆಪರೇಷನ್ ಕಮಲ ಮಾಡಿಕೊಂಡ ಹದಿನೇಳು ಅನರ್ಹ ಶಾಸಕರ ತಂಡದಲ್ಲಿರುವ ಯಲ್ಲಾಪುರದ ಮಂತ್ರಿ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿ ಯಡಿಯೂರಪ್ಪನವರ ಯುಗ ಮುಗಿದ ನಂತರ ನೆಲೆ-ಬೆಲೆ ಕಳೆದುಕೊಳ್ಳುತ್ತಾರೆಂಬುದು ಯಲ್ಲಾಪುರದ ಕಾಳಮ್ಮದೇವಿಗೂ ಪಕ್ಕಾ ಆಗಿಹೋಗಿದೆ!! ಸ್ಪೀಕರ್ ಕಾಗೇರಿಯವರನ್ನು ಶಿರಸಿ ಶಾಸಕನ ಸೀಟಿಂದ ಎಳೆದುಹಾಕಿ ತಾನು ಅಲ್ಲಿ ಕುಳಿತುಕೊಳ್ಳುವ ಕನಸು ಹಲವು ದಿನದಿಂದ ಕಾಣುತ್ತಿರುವ ಸಂಸದ ಅನಂತ್ ಹೆಗಡೆ ಈ ಗ್ರಾಪಂ ಇಲೆಕ್ಷನ್‌ನಿಂದ ಆ ಗುರಿ ಈಡೇರಿಸಿಕೊಳ್ಳು ಸ್ಕೆಚ್ ಹೆಣೆದಿದ್ದಾರೆ. ಬಿಜೆಪಿಗೆ ನೆಲೆಯಿಲ್ಲದ ಹಳಿಯಾಳದಲ್ಲಿ ಕಾಂಗ್ರೆಸ್‌ನ ಹಳೆ ಹುಲಿ ಆರ್.ವಿ ದೇಶಪಾಂಡೆ ಮತ್ತು ಅವರೇ ಸಾಕಿಸಲುಹಿ ಎರಡು ಬಾರಿ ಎಂಎಲ್‌ಸಿ ಮಾಡಿರುವ ಎಸ್.ಎಲ್ ಘೋಟನೇಕರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. 1983ರಿಂದ ಒಮ್ಮೆ ಮಾತ್ರ ಸೋತಿರುವ ದೇಶಪಾಂಡೆಗೆ ರಾಜಕೀಯ ನಿವೃತ್ತಿ ಕೊಡಿಸಿ ಹಳಿಯಾಳದ ಎಂಎ¯ ಎಯಾಗುವ ಯೋಚನೆ ಘೋಟನೇಕರ್ ಮಾಡುತ್ತಿದ್ದಾರೆ.

ಬೆಂಗಳೂರು ಮಟ್ಟದ ರಾಜಕಾರಣಿಯಾಗಿರುವ ದೇಶಪಾಂಡೆ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಘೋಟನೇಕರ್ ಜನರ ನಡುವೆ ಓಡಾಡಿಕೊಂಡಿದ್ದಾರೆ. ಬಹುಸಂಖ್ಯಾತ ಮರಾಠ ಕೋಮಿನ ಘೋಟನೇಕರ್ ಅವರ ಆಟ ಅರಿತಿರುವ ದೇಶಪಾಂಡೆ, ಅವರಿಗೆ ಮೂಗುದಾರ ಹಾಕಲು ನೋಡುತ್ತಿದ್ದಾರೆ. ಗ್ರಾಪಂ ಇಲೆಕ್ಷನ್‌ನಲ್ಲಿ ಹಳಿಯಾಳದ ಉಸ್ತುವಾರಿಯಾಗಿ ಕ್ಷೇತ್ರದಲ್ಲಿ ಭಾವಿ ಶಾಸಕನ ಗೆಟಪ್ ಪ್ರದರ್ಶಿಸಲು ಹೊರಟ ಘೋಟೇಕರ್‌ಗೆ ದೇಶಪಾಂಡೆ ಪಕ್ಕದ ಯಲ್ಲಾಪುರ ಕ್ಷೇತ್ರಕ್ಕೆ ಸಾಗಾಕಿಸಿದ್ದಾರೆ. ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಷ್ಟು ದಿನ ಆತನೊಂದಿಗೆ ಸೇರಿ ತನ್ನನ್ನ ಕಾಡಿದ ಘೋಟನೇಕರ್‌ನನ್ನು ಈಗ ಹೆಬ್ಬಾರ್‌ನ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಡಿ ದೇಶಪಾಂಡೆ ಪರಿಣಾಮಗಳಿಗಾಗಿ ಕಾದಿದ್ದಾರೆ. ಮರಾಠರು ಹೆಚ್ಚಿರುವ ಯಲ್ಲಾಪುರ, ಮುಂಡಗೋಡಲ್ಲಿ ಗೆಳೆಯ ಹೆಬ್ಬಾರ್ ಎದುರು ಸ್ಪರ್ಧಿಸುವ ಹಾಗೆ ಮಾಡಿ ಘೋಟನೇಕರ್‌ನ ಇಕ್ಕಟ್ಟಿಗೆ ಸಿಲುಕಿಸಲು ದೇಶಪಾಂಡೆ ಯೋಚನೆ ಹಾಕಿದ್ದಾರೆ!!

ಕಾರವಾರ ಮತ್ತು ಭಟ್ಕಳದಲ್ಲಿ ಅಲ್ಲಿನ ಮಾಜಿ ಶಾಸಕರಾದ ಸತೀಶ್ ಸೈಲ್ ಹಾಗೂ ಮಂಕಾಳ ವೈದ್ಯರಿಗೆ ಕಾಂಗ್ರೆಸ್ ಗೆಲ್ಲಿಸುವ ಹೊಣೆಗಾರಿಕೆ ಕೊಡಲಾಗಿದೆ. ಮತ್ತೆ ಶಾಸಕರಾಗುವ ಹಠದಲ್ಲಿರುವ ಈ ಇಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಗೆ ಪ್ರಬಲ ಮುಖಾಮುಖಿಯಾಗುವುದು ಖಂಡಿತ! ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕುಮಟೆಯ ಉಸ್ತುವಾರಿ ತಪ್ಪಿಸಿರುವುದರ ಹಿಂದೆ ಆಕೆಯ ಹಿತಶತ್ರು ದೇಶಪಾಂಡೆಯವರ ಕುತಂತ್ರವಿದೆ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿದೆ. ಇನ್ನೊಂದು ಊಹಾಪೋಹದಂತೆ ತನ್ನ ಆಪ್ತ ವಲಯದಲ್ಲಿರುವ ಶಾರದಾ ಶೆಟ್ಟಿಯವರಿಗೆ ಕ್ಷೇತ್ರವನ್ನು ಹದಮಾಡಿಸಲು, ಡಿಕೆಶಿ ಉಪಾಯವಾಗಿ ದೇಶಪಾಂಡೆಯವರನ್ನು ಕುಮಟಾದಲ್ಲಿ ಬಿಟ್ಟಿದ್ದಾರಂತೆ. ದೇಶಪಾಂಡೆಯವರು ಕುಮಟಾ ಕ್ಷೇತ್ರದ ಬಹುಸಂಖ್ಯಾತ ಬ್ರಾಹ್ಮಣ ಸಮುದಾಯದ ತಮ್ಮ ಶಿಷ್ಯ ಶಿವಾನಂದ ಹೆಗಡೆಯವರಿಗೆ ಮುಂದಿನ ಟಿಕೆಟ್ ಕೊಡಿಸಲು ಯೋಚಿಸಿದ್ದಾರಂತೆ. ಹಾಗೊಮ್ಮೆ ಬ್ರಾಹ್ಮಣರಿಗೆ ಟಿಕೆಟ್ ಕೊಡಬೇಕೆಂದಿದ್ದರೆ ಮಧು ಬಂಗಾರಪ್ಪ ಜತೆ ಕಾಂಗ್ರೆಸ್‌ಗೆ ಬರಲು ಸಿದ್ಧವಾಗಿರುವ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯೇ ಗಟ್ಟಿ ಹುರಿಯಾಳೆಂದು ದೇಶಪಾಂಡೆ ವಿರೋಧಿ ಬ್ರಾಹ್ಮಣ ಬಣ ವಾದ ಮಂಡಿಸುತ್ತಿದೆ.

ಸಣ್ಣ-ಸಣ್ಣ ಅಂತರದಲ್ಲಿ ಎರಡು ಬಾರಿ ಬಿಜೆಪಿಯಿಂದ ಕುಮಟೆಯಲ್ಲಿ ಮತ್ತು ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿರುವ ಶಶಿಭೂಷಣ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಎರಡೂ ಕಡೆ ಗೆಲ್ಲಬಲ್ಲ ಬುದ್ಧಿವಂತ-ಜನಪರ ತರುಣ. ಬಹಳ ವರ್ಷದಿಂದ ಶಿರಸಿಯಲ್ಲಿ ದರಬಾರು ಮಾಡಿಕೊಂಡಿರುವ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಅವರಿಗೆ ರೆಸ್ಟ್ ನೀಡಲಾಗಿದೆ. ಇದು ಡಿಕೆಶಿಗೆ ತೀರಾ ಸನಿಹದಲ್ಲಿರುವ ಶಿರಸಿ ಮೂಲದ ಬೆಂಗಳೂರು ನಿವಾಸಿ ಸುಷ್ಮಾ ಹೊನ್ನಾವರ(ರೆಡ್ಡಿ) ಪ್ರಭಾವದಿಂದಾದದ್ದೆಂದು ಕಾಂಗ್ರೆಸ್‌ನಲ್ಲಿ ಗೊಣಗಾಟ ನಡೆದಿದೆ. ಮಾರ್ಗರೇಟ್ ಆಳ್ವ ಬಣದ ಸುಷ್ಮಾರೆಡ್ಡಿ ಹಣವಂತ ಮಹಿಳೆ. ಶಿರಸಿಯಿಂದ ಶಾಸಕಿಯಾಗುವ ತಯಾರಿಯಲ್ಲಿ ಆಕೆ ಈಗಾಗಲೇ ಓಡಾಟ ಆರಂಭಿಸಿದ್ದಾರೆ.

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ. ಒಡೆದು ಹೋಗಿ ದುರ್ಬಲಗೊಂಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಆರ್ಭಟ ಎದುರಿಸಲಾಗುತ್ತಿಲ್ಲವೆಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ!

  • ಶುದ್ಧೋದನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...