ಓದುಗರ ಸಂಪಾದಕ ಎಂದು ಖ್ಯಾತಿ ಗಳಿಸಿದ್ದ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಬರೆಹಗಳ ಸಂಕಲನವಾದ ‘ಬೇರೆಯೇ ಮಾತು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 16ರ ಶನಿವಾರ ಬೆಂಗಳೂರಿನ ಗಾಂಧಿಭವನದಲ್ಲಿ ಜರುಗಲಿದೆ.
ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರು ತದನಂತರ ‘ಓದುಗರ ಒಡೆತನದ ಪತ್ರಿಕೆ’ ಕಟ್ಟುವ ಆಶಯದಲ್ಲಿ ‘ಮುಂಗಾರು’ ಎಂಬ ಪತ್ರಿಕೆ ಸ್ಥಾಪಿಸಿದ್ದರು. ಸ್ಥಾಪಿತ ಮೇಲ್ವರ್ಗದ ಹಿತಾಸಕ್ತಿಯುಳ್ಳ ಪತ್ರಿಕೆಗಳಿಗೆ ಎದುರಾಗಿ ಜನಪರ ಉದ್ದೇಶ ಮತ್ತು ಕಾಳಜಿ ಹೊಂದಿದ್ದ ಮುಂಗಾರು ಪತ್ರಿಕೆ ಅಲ್ಪಕಾಲದಲ್ಲಿಯೇ ಖ್ಯಾತಿ ಗಳಿಸಿತ್ತು. ಹಾಗಾಗಿ ವಡ್ಡರ್ಸೆಯವರು ಓದುಗರ ಸಂಪಾದಕ ಎಂದೇ ಕರೆಯಲ್ಪಡುತ್ತಿದ್ದರು. ಅವರ ಅಮೂಲ್ಯ ಬರೆಹಗಳನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ಸಂಪಾದಿಸಿ ‘ಬೇರೆಯೇ ಮಾತು’ ಕೃತಿ ರೂಪ ನೀಡಿದ್ದಾರೆ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ.
ಇದನ್ನೂ ಓದಿ: ‘ಅಂಬೇಡ್ಕರ್ ಆ ಕಾಲದಲ್ಲಿ ಸಂವಿಧಾನ ಬರ್ದಿದ್ಕೋ, ನಮ್ಮಪ್ಪಾಮ್ಮ ಸ್ಕೂಲಿಗೆ ಕಳ್ಸಿದ್ಕೊ, ಇಷ್ಟೆಲ್ಲಾ ಜಗತ್ತು ತಿಳ್ಕೋಣಕ್ಕಾಯ್ತು’
ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜನನುಡಿ ಬಳಗ ಮತ್ತು ಅಹರ್ನಿಶಿ ಪ್ರಕಾಶನ ಜೊತೆಗೂಡಿ ಆಯೋಜಿಸಿವೆ. ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಿಎಂ ಮತ್ತು ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ, ಲೇಖಕರಾದ ಕೆ.ಪುಟ್ಟಸ್ವಾಮಿ, ಪುಸ್ತಕದ ಸಂಪಾದಕರಾದ ದಿನೇಶ್ ಅಮಿನ್ ಮಟ್ಟು, ಜನನುಡಿ ಬಳಗದ ಮುನೀರ್ ಕಾಟಿಪಳ್ಳ ಮತ್ತು ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆಯವರು ಉಪಸ್ಥಿತರಿರುತ್ತಾರೆ.