ಮಸೀದಿಯ ಬಳಿ ಮದುವೆ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿದ್ದಕ್ಕಾಗಿ ಶನಿವಾರ (ಮಾರ್ಚ್ 11) ಗುಜರಾತ್ನ ವಡೋದರಾ ತಾಲೂಕಿನ ಸಾಮಿಯಾಲ ಗ್ರಾಮದಲ್ಲಿ ಕೋಮು ಘರ್ಷಣೆ ಸಂಭವಿಸಿತ್ತು. ಈ ಘಟನೆಯಲ್ಲಿ ಒಟ್ಟು 37 ಜನರನ್ನು ಬಂಧಿಸಲಾಗಿತ್ತು. ಈಗ ಅವರ ಜಾಮೀನು ಪ್ರಕ್ರಿಯೆಯಲ್ಲಿ ಗ್ರಾಮಸ್ಥರು ಒಬ್ಬರಿಗೊಬ್ಬರು ಜಾಮೀನುದಾರರಾಗಲು ಒಪ್ಪಿಕೊಂಡಿದ್ದಾರೆ.
ಭಾನುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಾಮಿಯಾಲ ಗ್ರಾಮದ ಎರಡೂ ಸಮುದಾಯದವರೊಂದಿಗೆ ಜತೆ ಶಾಂತಿ ಸಭೆ ಏರ್ಪಡಿಸಿದ್ದರು. ಜಾಮೀನು ಪ್ರಕ್ರಿಯೆಯಲ್ಲಿ ಪರಸ್ಪರ ಜಾಮೀನುದಾರರಾಗಿರಲು ಅಧಿಕಾರಿಗಳು ಮತ್ತು ಪೊಲೀಸರ ಶಿಫಾರಸನ್ನು ಗ್ರಾಮದ ಹಿರಿಯರು ಮತ್ತು ಸಮಾಜದ ಮುಖಂಡರು ಒಪ್ಪಿಕೊಂಡರು.
ಬಂಧಿತರಾಗಿದ್ದ 37ಜನರಿಗೆ (22 ಹಿಂದೂ ಸಮುದಾಯದಿಂದ ಮತ್ತು 15 ಮುಸ್ಲಿಂ) ಇತರ ಸಮುದಾಯದವರು ಪರಸ್ಪರ ಜಾಮೀನುದಾರರಾಗಲು ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯು “ಹಳೆಯ ತಲೆಮಾರಿನ” ನಡುವೆ ಅಸ್ತಿತ್ವದಲ್ಲಿದ್ದ “ಸೋದರತ್ವ”ದ ಮನೋಭಾವವನ್ನು ಮತ್ತೆ ಜಾರಿಗೆ ತಂದಂತಾಗಿದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಮುಸ್ಲಿಂ ಎನ್ನುವ ಕಾರಣಕ್ಕೆ ಝೊಮಾಟೊ ಸಿಬ್ಬಂದಿ ಮೇಲೆ ಹಲ್ಲೆ; ಕೋಮುವಾದಿ ಅಂಶ ಇಲ್ಲ ಎಂದ ಪೊಲೀಸ್
ಸಭೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಚ್.ಚಾವಡಾ, ತಾಲೂಕು ಪೊಲೀಸ್ ಠಾಣಾ ಪ್ರಭಾರ ಉಪನಿರೀಕ್ಷಕ ವಿ.ಜಿ.ಲಂಬಾರಿಯಾ ಹಾಗೂ ಇತರೆ ಪೊಲೀಸ್ ಆಡಳಿತ ಅಧಿಕಾರಿಗಳು, ಗ್ರಾಮದ ಎರಡೂ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ, ಸಂಪೂರ್ಣ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಒತ್ತಾಯಿಸಿದರು.
ಹಿಂದು ಸಮುದಾಯದವರು ಶನಿವಾರ (ಮಾ.11) ಮಧ್ಯರಾತ್ರಿ ಡಿಜೆ ಸಂಗೀತದೊಂದಿಗೆ ವಿವಾಹದ ಮೆರವಣಿಗೆಯಲ್ಲಿ ಬಂದು ಮಸೀದಿಯ ಬಳಿ ಪಟಾಕಿ ಸಿಡಿಸಿರುವುದು ಪ್ರಚೋದನೆಗೆ ಕಾರಣವಾಗಿದೆ. ಆ ಬಳಿಕ ಎರಡು ಸಮುದಾಯಗಳ ಗುಂಪುಗಳ ನಡುವೆ ಸಂಘರ್ಷ ಆರಂಭವಾಗಿ, ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿ ಮತ್ತು ಹಲವರು ಹಾನಿಗೊಳಗಾದರು. ಈ ಘಟನೆ ನಡೆದ ಎರಡು ದಿನಗಳ ನಂತರ ಗ್ರಾಮವು ಸಹಜ ಸ್ಥಿತಿಗೆ ಮರಳಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಧ್ಯಪ್ರವೇಶದ ನಂತರ, ಗ್ರಾಮಸ್ಥರು ಈ ವಾರಾಂತ್ಯದಲ್ಲಿ ಕೋಮು ಸೌಹಾರ್ದತೆಗಾಗಿ ಮತ್ತೊಂದು ಸಭೆ ಕರೆಯಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಬಗ್ಗೆ ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಸಬ್-ಇನ್ಸ್ಪೆಕ್ಟರ್ ಲಂಬಾರಿಯಾ, ”2017ರಲ್ಲಿ ಎರಡು ಕೋಮಿನ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟ ನಂತರ ಅಹಿತಕರ ಘಟನೆಗಳನ್ನು ತಪ್ಪಿಸಲು ಗ್ರಾಮಸ್ಥರು ಮೆರವಣಿಗೆಗಳು, ಧಾರ್ಮಿಕ ಹಬ್ಬಗಳು ಮತ್ತು ಪೂಜಾ ಸ್ಥಳಗಳ ಬಗ್ಗೆ ನಿಯಮಗಳನ್ನು ರಚಿಸಿದ್ದರು. ಆದರೆ ಕೆಲ ವರ್ಷದಿಂದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಗ್ರಾಮಸ್ಥರು ನಮಗೆ ತಿಳಿಸಿದರು. ಈಗ ಅದೇ ನಿಯಮಗಳನ್ನು ಬಲಪಡಿಸಲು ಅವರು ಸಭೆಯನ್ನು ಕರೆಯಲು ನಿರ್ಧರಿಸಿದ್ದಾರೆ” ಎಂದು ಲಂಬಾರಿಯಾ ಅವರು ತಿಳಿಸಿದರು.
ಸಾಮಿಯಾಲ ಗ್ರಾಮದಲ್ಲಿ ಒಟ್ಟು 6,000 ಜನಸಂಖ್ಯೆ ಇದ್ದು, ಸುಮಾರು 2,000 ಮುಸ್ಲಿಮರಿದ್ದಾರೆ. 12 ಪಂಚಾಯಿತಿ ಸದಸ್ಯರಲ್ಲಿ ಇಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.