Homeಮುಖಪುಟಎಲೆಕ್ಟ್ರಿಕ್ ವಾಹನಗಳ ಹಬ್ ಆಗಲಿದೆಯೇ ಭಾರತ?

ಎಲೆಕ್ಟ್ರಿಕ್ ವಾಹನಗಳ ಹಬ್ ಆಗಲಿದೆಯೇ ಭಾರತ?

- Advertisement -
- Advertisement -

ಭಾರತ ವಿಶ್ವದ 4ನೇ ಅತಿದೊಡ್ಡ ವಾಹನದ ಮಾರುಕಟ್ಟೆ. ಆಟೋಮೊಬೈಲ್ ಕ್ಷೇತ್ರ ಭಾರತದ ರಸ್ತೆಗಳಿಗೆ ಪ್ರತಿವರ್ಷ ಹೊಸಹೊಸ ವಾಹನಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಪರಿಣಾಮ ಭಾರತದ ಪ್ರತಿದಿನದ ಅಂದಾಜು ಇಂಧನದ ಬಳಕೆ ಕನಿಷ್ಠ 5,154 ಬ್ಯಾರೆಲ್ ಎನ್ನುತ್ತಿವೆ ಅಂಕಿಅಂಶಗಳು. ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಲೀಟರ್ ಪಳೆಯುಳಿಕೆ ಇಂಧನ (ಪೆಟ್ರೋಲ್-ಡೀಸೆಲ್) ದಹನವಾಗುತ್ತಲೇ ಇದೆ. ವಾಯುಮಾಲಿನ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಎಚ್ಚರಿಕೆಯ ಘಂಟೆ ಬಾರಿಸುತ್ತಲೇ ಇದೆ.

ಆದರೆ, ಕೊರೊನೋತ್ತರ ಕಾಲದಲ್ಲಿ ಜಗತ್ತಿನ ಹಲವು ರಾಷ್ಟ್ರಗಳು ನಿಜಕ್ಕೂ ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿವೆ ಎಂದೇ ಹೇಳಬೇಕು. ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗೆ ಅನೇಕ ಹೆಚ್ಚೆಚ್ಚು ಒತ್ತುನೀಡುತ್ತಿವೆ. ಜಾಗತಿಕ ತಾಪಮಾನ ಹೆಚ್ಚಿ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿಯೂ ’ಕ್ಲೀನ್ ಎನರ್ಜಿ’ ಎಂದು ಕರೆಯಲಾಗುವ ಇಂಧನಗಳಿಂದ ಚಾಲನೆಯಾಗುವ ವಾಹನಗಳ ಅಭಿವೃದ್ಧಿ ಮತ್ತು ಉತ್ಪಾದನೆಗೆ ಒತ್ತುನೀಡಲಾಗುತ್ತಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಹೀಗಾಗಿ ಭಾರತವೂ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ಅಣಿಯಾಗುತ್ತಿದೆ ಎಂದರೆ ತಪ್ಪಾಗಲಾರದು.

ಎಕ್ಟ್ರಿಕ್ ವಾಹನಗಳ ಹಬ್ ಆಗುತ್ತಿದೆಯೇ ಭಾರತ?

ಕಳೆದ ಐದಾರು ವರ್ಷಗಳ ಅವಧಿಯಲ್ಲಿ ದೇಶದ ಇಪ್ಪತ್ತೊಂದಕ್ಕೂ ಹೆಚ್ಚು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿ ರೂಪಿಸಿದ್ದು, ಹೊಗೆ ಉಗುಳುವ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ರಸ್ತೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ. ಗ್ಲಾಸ್ಗೊ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಸರ್ಕಾರ, 2030ರ ವೇಳೆಗೆ ನೂರು ಕೋಟಿ ಟನ್ ಇಂಗಾಲದ ಹೊಮ್ಮುವಿಕೆಯನ್ನು ಕಡಿಮೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದೆ. ದೇಶದ ಪ್ರತೀ ನಗರಕ್ಕೂ ತನ್ನದೇ ಆದ ಶುದ್ಧ ಗಾಳಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆ ದಿಸೆಯಲ್ಲಿ 132 ನಗರಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ.

ಭಾರತದ ಪಾಲಿಗೆ ದೊಡ್ಡ ಪ್ರಮಾಣದಲ್ಲಿ ಇಂಗಾಲವನ್ನು ಉಗುಳುತ್ತಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ. ಹೀಗಾಗಿ ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ದಶಕದ ಕೊನೆಯ ವೇಳೆಗೆ ತಲಾ ಹತ್ತು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ತಯಾರಿಸಿವೆ. ಮೇಘಾಲಯ, ಗೋವಾ, ಹರಿಯಾಣ, ದೆಹಲಿ, ಒಡಿಶಾ, ಅಸ್ಸಾಂ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಇನ್ನೈದು ವರ್ಷಗಳಲ್ಲಿ ತಮ್ಮ ರಾಜ್ಯದ ರಸ್ತೆಗಳ ಮೇಲೆ ಶೇ.30ರಷ್ಟು ಎಲೆಕ್ಟ್ರಿಕ್ ವಾಹನಗಳು ಸಂಚರಿಸಲಿವೆ ಎಂದಿವೆ.

ಕೇಂದ್ರ ಸರ್ಕಾರ ಇದಕ್ಕಾಗಿ -10 ಸಾವಿರ ಕೋಟಿ ಬಂಡವಾಳ ಮೀಸಲಿಟ್ಟಿದೆ. ಇದರಿಂದ 10 ಲಕ್ಷ ದ್ವಿಚಕ್ರ, 5 ಲಕ್ಷ ತ್ರಿಚಕ್ರ ವಾಹನಗಳು, 55 ಸಾವಿರ ಕಾರು ಹಾಗೂ 70,000 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ ಇಳಿಯಲಿವೆ. ಸತತ ವಾಯುಮಾಲಿನ್ಯದಿಂದ ಕಂಗಾಲಾಗಿರುವ ದೆಹಲಿ ಸರ್ಕಾರ ಮುಂದಿನ ವರ್ಷದ ಕೊನೆಯ ವೇಳೆಗೆ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿ ಇಟ್ಟುಕೊಂಡಿದ್ದು, ಈ ವರ್ಷಾಂತ್ಯಕ್ಕೆ, ಡೀಸೆಲ್‌ನಿಂದ ಓಡುವ ಎಲ್ಲ ತ್ರಿಚಕ್ರ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸುವ ತೀರ್ಮಾನ ಮಾಡಿದೆ.

ಒಡಿಶಾ ತನ್ನ ರಾಜ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್‌ನಿಂದ ಓಡುವ ಆಟೊರಿಕ್ಷಾಗಳನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸುವ ಕೆಲಸಕ್ಕೆ ಕೈ ಹಾಕಿದೆ. ಕೊಚ್ಚಿನ್ ನಗರದಲ್ಲಿ ಚಾಲಕರು ಕೈನೆಟಿಕ್ ಗ್ರೀನ್ ಕಂಪನಿಯಿಂದ ಇ-ಆಟೊ ರಿಕ್ಷಾಗಳನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ಒಂದೂವರೆ ಲಕ್ಷ ಇ-ವಾಹನಗಳಿವೆ. ಇವುಗಳಿಗಾಗಿ 2016ರಲ್ಲೇ ನೀತಿ ರೂಪಿಸಿದ್ದ ದೇಶದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಸರ್ಕಾರ ಅಂದಿನಿಂದಲೇ ಇ-ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಿತ್ತು. ಇತರ ರಾಜ್ಯಗಳು ಶೂನ್ಯ ರಸ್ತೆ ತೆರಿಗೆಯ ಜೊತೆ ಹಲವು ರಿಯಾಯಿತಿಗಳನ್ನೂ ನೀಡುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯವು 2021ರ ಆಗಸ್ಟ್‌ನಲ್ಲಿ ಇ-ವಾಹನಗಳ ನೋಂದಣಿ ಹಾಗೂ ನವೀಕರಣ ಶುಲ್ಕ ಎರಡನ್ನೂ ತೆಗೆದುಹಾಕಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ.

ಭಾರತ ಮಾರುಕಟ್ಟೆಗೆ ಪೈಪೋಟಿ

ಎಲೆಕ್ಟ್ರಿಕ್ ವಾಹನಗಳು ಅಭಿವೃದ್ಧಿಯಾಗುತ್ತಿದ್ದಂತೆ ವಿಶ್ವದ ಅನೇಕ ವಾಹನ ಕಂಪನಿಗಳು ಡೀಸೆಲ್ ಎಂಜಿನ್ ಅಭಿವೃದ್ಧಿಯನ್ನು ನಿಲ್ಲಿಸಿ ಅಥವಾ ಕಡಿತಗೊಳಿಸಿ ಇ ಮತ್ತು ಹೈಬ್ರಿಡ್ ಕಾರುಗಳ ತಯಾರಿಕೆಗೆ ಮುಂದಾಗಿವೆ. ಪರಿಣಾಮ ಭಾರತ ಇದೀಗ ಅಂತಹ ವಾಹನಗಳ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗುತ್ತಿದೆ.

ಬೆಂಗಳೂರಿನ ನವೋದ್ಯಮ ಏಥರ್ ಎನರ್ಜಿ ಕಳೆದ ನಾಲ್ಕೈದು ವರ್ಷಗಳಿಂದ ದೇಶದ ಆಯ್ದ ನಗರಗಳಲ್ಲಿ ಇ-ಸ್ಕೂಟರ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ರಾವಿನ್, ಮಹೀಂದ್ರ, ಟಾಟಾ ಕಾರು ಕಂಪನಿಗಳು ಇ-ಕಾರುಗಳನ್ನು ಪರಿಚಯಿಸಿ ಈಗಾಗಲೇ ದಶಕಗಳೇ ಕಳೆದಿವೆ.

ಇದಲ್ಲದೆ, ದೇಶದ ಗ್ರೀನ್ ಮೊಬಿಲಿಟಿ ವಲಯದ ಅತಿದೊಡ್ಡ ಒಪ್ಪಂದವೊಂದಕ್ಕೆ ಟಾಟಾ ಮೋಟಾರ್ಸ್ ಮತ್ತು ಉಬರ್ ಇತ್ತೀಚೆಗೆ ಸಹಿ ಹಾಕಿರುವುದು ಭಾರತದ ಆಟೋಮೊಬೈಲ್ ಕ್ಷೇತ್ರದ ಪಾಲಿಗೆ ಗಮನಾರ್ಹ ಬೆಳವಣಿಗೆ. ಈ ಒಪ್ಪಂದದ ಪ್ರಕಾರ ಉಬರ್‌ಗೆ 25,000 ಎಕ್ಸ್‌ಪ್ರೆಸ್-ಟಿ ಎಲೆಕ್ಟ್ರಿಕ್ ವಾಹನಗಳನ್ನು ಟಾಟಾ ಮೊಟಾರ್ಸ್ ಪೂರೈಸಲಿದೆ.

ಈ ಎರಡು ಕಂಪನಿಗಳ ನಡುವಿನ ಒಪ್ಪಂದದ ಪ್ರಕಾರ ಉಬರ್ ತನ್ನ ಪ್ರೀಮಿಯಂ ವರ್ಗದ ಸೇವೆಯಲ್ಲಿ ಎಲೆಕ್ಟ್ರಿಕ್ ಸೆಡಾನ್ ವಾಹನಗಳನ್ನು ಬಳಸಿಕೊಳ್ಳಲಿದೆ. ಈ ಎಲೆಕ್ಟ್ರಿಕ್ ವಾಹನಗಳು ದಿಲ್ಲಿ ಎನ್‌ಸಿಆರ್, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಒಪ್ಪಂದ ಯಶಸ್ವಿಯಾದರೆ ಭಾರತದ ಆಟೋಮೊಬೈಲ್ ಕ್ಷೇತ್ರದ ಪಾಲಿಗೆ “ಗೇಮ್ ಚೇಂಜರ್” ಆಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ವಿಶ್ವದ ಪ್ರಮುಖ ಕಾರ್ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ನಿಸ್ಸಾನ್ ಸಹ, 2026ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅತಿದೊಡ್ಡ ಮಾರುಕಟ್ಟೆ ಸೃಷ್ಟಿಯಾಗಲಿರುವುದನ್ನು ಊಹಿಸಿ, ಅತೀ ಶೀಘ್ರದಲ್ಲಿ ತಮ್ಮ ಕಂಪೆನಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ. ನಿಸ್ಸಾನ್ ಕಂಪೆನಿ ಈಗಾಗಲೇ ಯೂರೋಪ್ ಮತ್ತು ಜಪಾನ್ ದೇಶಗಳಲ್ಲಿ ತಮ್ಮ ಕಂಪೆನಿಯ ಎಲೆಕ್ಟ್ರಿಕ್ ಕಾರ್‌ಗಳನ್ನು ಪರಿಚಯಿಸಿ ಯಶಸ್ವಿಯಾಗಿದೆ ಎಂಬುದು ಉಲ್ಲೇಖಾರ್ಹ.

ಇನ್ನು ವಿಶ್ವದಲ್ಲೇ ಅತ್ಯಂತ ಯಶಸ್ವಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪೆನಿಯಾದ ಟೆಸ್ಲಾ ಸಹ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ವರದಿಗಳ ಪ್ರಕಾರ ಕರ್ನಾಟಕ ಸರಕಾರದ ಅಧಿಕಾರಿಗಳ ಜೊತೆ ಟೆಸ್ಲಾ ಪ್ರತಿನಿಧಿಗಳ ಮೊದಲ ಸಭೆ 2021 ಸೆಪ್ಟೆಂಬರ್ 10 ರಂದೇ ನಡೆದಿತ್ತು.

ಸಭೆಗೆ ಮುನ್ನವೇ ಅಂದರೆ 2021 ಜನವರಿ 8ರಂದೇ ಟೆಸ್ಲಾ ಕಂಪೆನಿ ಬೆಂಗಳೂರಿನಲ್ಲಿ ತನ್ನ ಅಂಗಸಂಸ್ಥೆಯಾಗಿ ಟೆಸ್ಲಾ ಇಂಡಿಯಾ ಮೊಟರ್ಸ್ ಆಂಡ್ ಎನರ್ಜಿ ಪ್ರೈ. ಲಿ. ಎಂಬ ಹೆಸರಿನಲ್ಲಿ ಕಚೇರಿ ತೆರೆದಿತ್ತು. ಆದರೆ, ಮುಂದಿನ ಸಭೆ ಏನಾಯ್ತು? ಬೆಂಗಳೂರಿನಲ್ಲಿ ಟೆಸ್ಲಾ ಕಂಪೆನಿಯ ಭವಿಷ್ಯವೇನು? ಎಂಬ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದು ವೇಳೆ ಟೆಸ್ಲಾ ಭಾರತಕ್ಕೆ ಕಾಲಿಟ್ಟರೆ ಎಲೆಕ್ಟ್ರಿಕ್ ವಾಹನಗಳ ಉದ್ಯಮ ಮತ್ತೊಂದು ಮೈಲುಗಲ್ಲಿಗೆ ಏರಲಿರುವುದು ಖಚಿತ.

ಭಾರತದಲ್ಲಿ ಸದ್ಯಕ್ಕೆ ಎಷ್ಟು ಎಲೆಕ್ಟ್ರಿಕ್ ವಾಹನಗಳಿವೆ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಅನೇಕ ರಾಜ್ಯಗಳು ನಾನಾ ನೀತಿಗಳನ್ನು ರೂಪಿಸಿವೆ. ಆದರೂ, ದೇಶದಾದ್ಯಂತ ನೋಂದಣಿಯಾಗಿರುವ ಇ-ವಾಹನಗಳ ಸಂಖ್ಯೆ ಕೇವಲ 18 ಲಕ್ಷ ಮಾತ್ರ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು 4.1 ಲಕ್ಷ, ದೆಹಲಿ 1.8 ಲಕ್ಷ, ಮಹಾರಾಷ್ಟ್ರ 1.7 ಲಕ್ಷ, ಕರ್ನಾಟಕ 1.5 ಲಕ್ಷ, ರಾಜಸ್ಥಾನ 1.2 ಲಕ್ಷ, ಬಿಹಾರ 1.1 ಲಕ್ಷ ಮತ್ತು ತಮಿಳುನಾಡಿನಲ್ಲಿ 1 ಲಕ್ಷ ಇ-ವಾಹನಗಳಿವೆ. ಆದರೆ, ಇಷ್ಟೇ ಪ್ರಮಾಣದ ವಾಹನಗಳ ಬಳಕೆಯಿಂದ 107 ಲಕ್ಷ ಲೀಟರ್ ಇಂಧನವನ್ನು ಉಳಿಸಲಾಗಿದೆ ಎಂಬುದು ಆಶಾದಾಯಕ ಬೆಳವಣಿಗೆ.

ಆದರೂ, ಮೇಲಿನ ಅಂಕಿಅಂಶಗನ್ನು ಗಮನಿಸಿದರೆ ಭಾರತದ ಮಟ್ಟಿಗೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ನಿರೀಕ್ಷಿತ ಮಟ್ಟದಲ್ಲಿ ಆಕರ್ಷಿತರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಿರುವುದು ಮತ್ತು ಇ-ಚಾರ್ಜಿಂಗ್ ಘಟಕಗಳ ಕೊರತೆ. ಭಾರತದಲ್ಲಿರುವ ಒಟ್ಟಾರೆ ಇ-ಚಾಜಿಂಗ್ ಘಟಕಗಳ ಸಂಖ್ಯೆ ಕೇವಲ 6,000 ಮಾತ್ರ.

ಎಲೆಕ್ಟ್ರಿಕ್ ವಾಹನಗಳ ಬೆಲೆ ಅಧಿಕವಾಗಿರಲು ಕಾರಣ ಲಿಥಿಯಂ. ಈ ಮಾದರಿ ವಾಹನಗಳ ಬ್ಯಾಟರಿಯನ್ನು ಲಿಥಿಯಂನಿಂದಲೇ ತಯಾರಿಸಲಾಗುತ್ತದೆ. ಲಿಥಿಯಂಅನ್ನು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದು ಸಾಕಷ್ಟು ದುಬಾರಿಯಾಗಿದೆ. ಅದರ ನೇರ ಪರಿಣಾಮವನ್ನು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹಾಗೂ ನೂತನ ಖರೀದಿದಾರರು ಎದುರಿಸಬೇಕಾಗಿದೆ.

ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಮಾಹಿತಿ ನೀಡಿದೆ. ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯು ಇಲ್ಲಿನ ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನಾ ಎಂಬಲ್ಲಿ 59 ಲಕ್ಷ ಟನ್ ಲಿಥಿಯಂ ನಿಕ್ಷೇಪವಿರುವುದನ್ನು ಶೋಧಿಸಿದೆ. ಇಲ್ಲಿಂದ ಲಿಥಿಯಂಅನ್ನು ಪಡೆಯಲು ಸಾಧ್ಯವಾದರೆ ವಿದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಕಾರುಗಳ ಬೆಲೆ ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.

ಇದರ ಜೊತೆಗೆ “ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಲಿಥಿಯಂ-ಐಯಾನ್ ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಆಮದಿಗೆ ಸುಂಕ ವಿನಾಯಿತಿ ವಿಸ್ತರಿಸಲಾಗಿದೆ” ಎಂದು ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಘೋಷಿಸಿದ್ದರು ಎಂಬುದು ಉಲ್ಲೇಖಾರ್ಹ.

ಈ ನಡುವೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪೆನಿಗಳು ಇ-ಚಾರ್ಜಿಂಗ್ ಘಟಕಗಳನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಿರುವುದು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿಗಳನ್ನು ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಚಾರ್ಚ್ ಮಾಡಿಕೊಳ್ಳಲು ಅನುವಾಗುವಂತೆ ಅಭಿವೃದ್ಧಿ ಪಡಿಸಿರುವುದು ಗಮನಾರ್ಹ ಬೆಳವಣಿಗೆ. ಒಟ್ಟಾರೆ ಪ್ರಸ್ತುತ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಎಲ್ಲ ಮಹತ್ವದ ಬೆಳವಣಿಗೆಗಳ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಮುಂಬರುವ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪಾರಮ್ಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...