ಜನವರಿ 26ರ ಗಣರಾಜ್ಯೋತ್ಸವಕ್ಕೆ ದೆಹಲಿ ಸಿದ್ದವಾಗಿದೆ. ಅದೇ ದಿನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರು ಟ್ರಾಕ್ಟರ್ ರ್ಯಾಲಿ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದಾರೆ. ಈ ನಡುವೆ ದೆಹಲಿಯಲ್ಲಿ ಭಯೋತ್ಪಾದಕರಿದ್ದಾರೆ ಎಂದು ದೆಹಲಿ ಪೊಲೀಸರು ಪೋಸ್ಟರ್ ಅಂಟಿಸಿದ್ದಾರೆ.
ಜನವರಿ 26 ರ ಗಣರಾಜ್ಯೋತ್ಸವದಂದು ಖಾಲಿಸ್ತಾನಿ, ಅಲ್ಖೈದ ಭಯೋತ್ಪಾದಕರಿಂದ ದೆಹಲಿಯಲ್ಲಿ ಅನಪೇಕ್ಷಿತ ಚಟುವಟಿಕೆಗಳು ನಡೆಯುವ ಕುರಿತು ಮಾಹಿತಿ ದೊರಕಿದ್ದು ಮುಂಜಾಗ್ರತಾ ಕ್ರಮವಾಗಿ ಜನರಿಗೆ ಜಾಗೃತಿ ಮೂಡಿಸಲು ದೆಹಲಿಯಲ್ಲಿ ಪೋಸ್ಟರ್ ಅಂಟಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕನೌಟ್ ಎಸಿಪಿ ಸಿದ್ಧಾರ್ಥ್ ಜೈನ್ ಮಾತನಾಡಿ “ಪೋಸ್ಟರ್ಗಳ ಜೊತೆಗೆ ಪೊಲಿಸ್ ಗಸ್ತು ಹೆಚ್ಚಿಸಿದ್ದೇವೆ. ಮಾರುಕಟ್ಟೆ ಮತ್ತು ದೆಹಲಿ ನಿವಾಸಿ ಸಂಘಗಳಿಗೆ ಈ ಕುರಿತು ಮಾಹಿತಿ ನಿಡಿದ್ದೇವೆ” ಎಂದಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವದಂದು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಒಂದೂವರೆ ಲಕ್ಷದಿಂದ 25 ಸಾವಿರಕ್ಕೆ ಇಳಿಸಿದ್ದೇವೆ. ಕೆಲವೇ ವ್ಯಕ್ತಿಗಳಿಗೆ ಮಾತ್ರ ಪಾಸ್ ನೀಡುತ್ತಿದ್ದೇವೆ. ಅವರು ತಮ್ಮ ಗುರುತಿನ ಚೀಟಿಗಳನ್ನು ತಂದು ಪರಿಶೀಲನೆ ನಡೆಸಿದ ನಂತರವೇ ಒಳಕ್ಕೆ ಬಿಡಲಾಗುತ್ತದೆ. ಯಾರೂ ನಿಂತುಕೊಂಡು ಕಾರ್ಯಕ್ರಮ ವೀಕ್ಷಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನೊಂದು ಕಡೆ ರೈತರ ಟ್ರಾಕ್ಟರ್ ರ್ಯಾಲಿಗೆ ತಡೆ ನೀಡಬೇಕೆಂದು ದೆಹಲಿ ಪೊಲೀಸರು ಸಲ್ಲಿಸಿದ ಪಿಐಎಲ್ ಅರ್ಜಿ ವಿಚಾರಣೆಗೆ ಬಂದಿದೆ. ಕೋರ್ಟ್ ಅನುಮತಿ ನೀಡುವ ಅಧಿಕಾರಿ ದೆಹಲಿ ಪೊಲೀಸರಿಗೆ ಎಂದು ಹೇಳಿ ವಿಚಾರಣೆಯನ್ನು ಜನವರಿ 20ಕ್ಕೂ ಮುಂದೂಡಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಪೋಲಿಸರ ಈ ಪೋಸ್ಟರ್ ಅಂಟಿಸುವ ನಡೆ ರೈತ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಎಂದು ಹಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ’ಪಂಜಾಬ್ಗೆ ಬಂದು ಕೃಷಿ ಕಾನೂನನ್ನು ವಿವರಿಸಿ’- BJP ಸಂಸದೆ ಹೇಮಾ ಮಾಲಿನಿಯನ್ನು ಆಹ್ವಾನಿಸಿದ ರೈತರು