Homeಮುಖಪುಟನೀಟ್‌‌ ಸೀಟು ಹಂಚಿಕೆಯ ವಿಚಾರದಲ್ಲಿ ‘ಮತ್ತೆ ಮತ್ತೆ’ ಸುಳ್ಳು ಹೇಳಿತೇ ವಿಶ್ವವಾಣಿ?

ನೀಟ್‌‌ ಸೀಟು ಹಂಚಿಕೆಯ ವಿಚಾರದಲ್ಲಿ ‘ಮತ್ತೆ ಮತ್ತೆ’ ಸುಳ್ಳು ಹೇಳಿತೇ ವಿಶ್ವವಾಣಿ?

- Advertisement -
- Advertisement -

ನೀಟ್‌ ಟಾಪರ್‌‌ಗೆ ಸೀಟು ಸಿಗಲಿಲ್ಲ ಎಂದು ಸುಳ್ಳು ಸುದ್ದಿ ಬರೆದು, ಸೀಟು ಹಂಚಿಕೆ ಮತ್ತು ಮೀಸಲಾತಿ ಬಗ್ಗೆ ಓದುಗರ ದಾರಿ ತಪ್ಪಿಸಲು ಪ್ರಯತ್ನಿಸಿದ್ದ ಕನ್ನಡ ದಿನ ಪತ್ರಿಕೆ ‘ವಿಶ್ವವಾಣಿ’ ಮತ್ತು ಅದರ ಸಂಪಾದಕ ವಿಶ್ವೇಶ್ವರ ಭಟ್‌ ಮತ್ತೇ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಜನವರಿ 29ರ ಶನಿವಾರದಂದು ‘‘ನೀಟ್‌‌ ಪಿಜಿ ಪರೀಕ್ಷೆಯಲ್ಲಿ ಭಾರತಕ್ಕೆ ಮೊದಲ ರ್‍ಯಾಂಕ್ ಪಡೆದ ಬ್ರಾಹ್ಮಣ ವಿದ್ಯಾರ್ಥಿಗೆ ಮೀಸಲಾತಿಯ ಕಾರಣಕ್ಕೆ ಗದಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ” ಎಂದು ಪ್ರತಿಪಾದಿಸಿ ‘ವಿಶ್ವವಾಣಿ’ ಸುದ್ದಿಯೊಂದನ್ನು ಪ್ರಸಾರ ಮಾಡಿತ್ತು. ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌, “ಇದು ಕರ್ನಾಟಕದ ಅರ್ಹತೆಯ ಅಣಕ. ಮೊದಲ ರ್‍ಯಾಂಕ್‌ ಪಡೆದರೂ ಮೀಸಲಾತಿ ಕಾರಣಕ್ಕೆ ಎಂಡಿ ಸೀಟು ನಿರಾಕರಿಸಲಾಗಿದೆ” ಎಂದು ಬರೆದು, ತಮ್ಮ ಪತ್ರಿಕೆಯ ವರದಿಯ ಚಿತ್ರವನ್ನು ಪೋಸ್ಟ್‌ ಮಾಡಿದ್ದರು.

ವಿಶ್ವೇಶ್ವರ ಭಟ್‌ ಟ್ವೀಟ್

ವಾಸ್ತವದಲ್ಲಿ, ವಿಶ್ವವಾಣಿ ಪ್ರಕಟಿಸಿದ್ದ ಸುದ್ದಿಯಾಲಿ, ವಿಶ್ವೇಶ್ವರ ಭಟ್ ಅವರ ಟ್ವೀಟ್‌ ಆಗಲಿ, ಯಾವುದೂ ನಿಜವಾಗಿರಲಿಲ್ಲ. ಸುದ್ದಿಯಲ್ಲಿ ಹೇಳಿರುವಂತೆ ಗಗನ್‌ ಕುಬೇರ್‌ ಎನ್ನುವ ವ್ಯಕ್ತಿ ದೇಶಕ್ಕೆ ಮೊದಲನೇ ರ್‍ಯಾಂಕ್ ಪಡೆದಿರಲಿಲ್ಲ, ಈ ಬಗ್ಗೆ ಗಗನ್‌ ಅವರೇ ಸ್ಪಷ್ಟೀಕರಣ ನೀಡಿದ್ದರು.

ಇದನ್ನೂ ಓದಿ: ಫ್ಯಾಕ್ಚ್ ಚೆಕ್: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂಬ ಸುಳ್ಳು ವರದಿ – ವಿಶ್ವೇಶ್ವರ ಭಟ್ ಕ್ಷಮೆ ಕೇಳಿದ್ದು ನಿಜವೇ?

ಇಷ್ಟೇ ಅಲ್ಲದೆ, ಪತ್ರಿಕೆಯ ಇಡೀ ಸುದ್ದಿಯಲ್ಲಿ ಮತ್ತು ವಿಶ್ವೇಶ್ವರ ಭಟ್ ಅವರ ಪ್ರತಿಪಾದನೆಯಲ್ಲಿ ನೀಟ್‌ ಸೀಟ್‌ ಹಂಚಿಕೆಯ ಬಗ್ಗೆ ತಪ್ಪು ಮಾಹಿತಿ ಮತ್ತು ಮೀಸಲಾತಿ ಬಗ್ಗೆಗಿನ ಅಸಹನೆ ಮಾತ್ರವೇ ಇತ್ತು. ಈ ಬಗ್ಗೆ ನಾನುಗೌರಿ.ಕಾಂ ಫ್ಯಾಕ್ಟ್‌ಚೆಕ್ ಕೂಡಾ ಮಾಡಿದೆ. ಅದನ್ನು ಇಲ್ಲಿ ಓದಬಹುದು.

ಇದರ ನಂತರ, ಜನವರಿ 31ರ ಸೋಮವಾರದಂದು ವಿಶ್ವವಾಣಿ ಮತ್ತೇ ವರದಿ ಮಾಡಿ ಸೀಟು ಹಂಚಿಕೆಯ ಬಗೆಗಿನ ತಪ್ಪಾದ ಮಾಹಿತಿಯನ್ನು ಓದುಗರಿಗೆ ನೀಡಿದೆ. “ನೀಟ್‌ನಲ್ಲಿ ಎರಡನೇ ರ್‍ಯಾಂಕ್ ಪಡೆದ ಅರ್ಜುನ್‌ ಎಂಬ ವ್ಯಕ್ತಿ, ತನಗೆ ಬೇಕಾದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ ಎಂದು ಹೇಳಿದ್ದಾರೆ” ಎಂದು ಪ್ರತಿಪಾದಿಸಿ ಪತ್ರಿಕೆ ಸುದ್ದಿ ಪ್ರಕಟಿಸಿದೆ.

ಈ ಸುದ್ದಿಯಲ್ಲಿ ವಿಶ್ವವಾಣಿ, “ಸೀಟು ಹಂಚಿಕೆ ಎಡವಟ್ಟು, ಸಾಮಾನ್ಯರಿಗೆ ಇಕ್ಕಟ್ಟು” ಎಂಬ ಹೆಡ್‌ಲೈನ್‌ ಕೊಟ್ಟು, ಉಪಶೀರ್ಷಿಕೆಯಲ್ಲಿ, “ನೀಟ್‌ನಲ್ಲಿ 2ನೇ ರ್‍ಯಾಂಕ್‌ ಪಡೆದರೂ ದೆಹಲಿ ವಿದ್ಯಾರ್ಥಿಗೆ ಸಿಗಲಿಲ್ಲ ಇಷ್ಟಪಟ್ಟ ಕಾಲೇಜು, ಸರ್ಕಾರಿ ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗೋಲ್ಲ ಅವಕಾಶ” ಎಂದು ಬರೆದಿದೆ.

(ಆರ್ಕೈವ್‌ಗೆ ಇಲ್ಲಿ ಮತ್ತು ಇಲ್ಲಿ ನೋಡಿ)

ವಿಶ್ವವಾಣಿಯ ಈ ವರದಿ ಕೂಡಾ ತಪ್ಪು ಮಾಹಿತಿಯಿಂದ ಕೂಡಿದ್ದು, ಮುಖ್ಯವಾಗಿ ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದಿಲ್ಲ ಎಂಬ ಉಪಶೀರ್ಷಿಕೆಯು ಸುಳ್ಳಾಗಿದೆ. ಸರ್ಕಾರಿ ಸೀಟುಗಳಲ್ಲಿ ಸಾಮಾನ್ಯ ವರ್ಗಕ್ಕೆ ಎಂದು ಇಂತಿಷ್ಟು ಸೀಟುಗಳು ಇದ್ದೇ ಇರುತ್ತದೆ. ಇದರ ಜೊತೆಗೆ ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ 10% ಮೀಸಲಾತಿಯಿದೆ.

ಹಾಗೆ ನೋಡಿದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿ ಮಾತ್ರವಲ್ಲ, ಯಾವುದೇ ಕೆಟಗೆರಿ ವಿದ್ಯಾರ್ಥಿಗಳಿಗೂ ಇಂತಹದ್ದೇ ಕಾಲೇಜಿನಲ್ಲಿ ನಮಗೆ ಸರ್ಕಾರಿ ಸೀಟು ಬೇಕೆಂದರೆ ಸಿಗುವುದಿಲ್ಲ. ಈಗಾಗಲೇ ಹಂಚಿಕೆಯಾಗಿರುವ ಕಾಲೇಜಿನಲ್ಲಿ ಅವರು ತಮ್ಮ ಸೀಟುಗಳಿಗೆ ಅರ್ಜಿ ಹಾಕಬಹುದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’!

ಅಲ್ಲದೆ, ಈ ರೀತಿಯ ಮೀಸಲು ಕ್ಯಾಟಗರಿಗಳು ಯಾವಾಗಲೂ ಅದೇ ರೀತಿ ಇರುವುದಿಲ್ಲ. ವರ್ಷ ವರ್ಷವೂ ಬೇರೆ ಬೇರೆ ಕಾಲೇಜಿಗೆ ಬದಲಾಗುತ್ತಲೇ ಇರುತ್ತದೆ. ಉದಾಹರಣಗೆ ಹೇಳಬಹುದಾದರೆ, ಈ ವರ್ಷ ಗದಗ ಕಾಲೇಜಿಗೆ ಒಬಿಸಿ, ಎಸ್‌ಟಿ ಮತ್ತು ಸರ್ಕಾರಿ ಸೇವೆಯ ಸಾಮಾನ್ಯ ವರ್ಗಕ್ಕೆ ಇದ್ದರೆ, ಮುಂದಿನ ವರ್ಷ ಈ ಕಾಂಬಿನೇಷನ್‌ ಬದಲಾಗಿರುತ್ತದೆ. ಒಂದು ವೇಳೆ ಹಾಗೆ ಇದ್ದರೆ, ಒಂದು ಕಾಲೇಜಿಗೆ ಒಂದು ವರ್ಗದ ವಿದ್ಯಾರ್ಥಿಗಳ ಪ್ರವೇಶ ನಿರಾಕರಿಸದಂತಾಗುತ್ತದೆ. ಹಾಗಾಗಿ ಇದು ಬದಲಾಗುತ್ತಲೇ ಇರುತ್ತದೆ.

ಸುಳ್ಳು ಸುದ್ದಿಯ ತಪ್ಪನ್ನು ‘ಗಗನ್’ ಮೇಲೆ ಹೊರಿಸಿದ ವಿಶ್ವವಾಣಿ!

ಜನವರಿ 29ರ ಶನಿವಾರದಂದು ಪ್ರಕಟವಾಗಿದ್ದ ಸುದ್ದಿಯ ಸುಳ್ಳನ್ನು ವಿಶ್ವವಾಣಿಯು ಸುದ್ದಿಯ ಕೇಂದ್ರವಾಗಿದ್ದ ಗಗನ್‌ ಮೇಲೆ ಹೊರಿಸಿದೆ. ಪತ್ರಿಕೆಯು, ಸೋಮವಾರ ಪ್ರಕಟಿಸಿದ ವರದಿಯಲ್ಲಿ, “ರಾಜ್ಯದ ಗಗನ್ ಕುಬೇರ್‌ ವಿಷಯದಲ್ಲಿ ಆತ ಮೊದಲ ರ್‍ಯಾಂಕ್‌ ಪಡದೇ ಇಲ್ಲ. ಹೀಗಾಗಿ ಆತನ ತಪ್ಪಿದೆ ಎನ್ನುವ ಮಾತನ್ನು ಅನೇಕರು ಹೇಳಿದ್ದರು” ಎಂದು ಬರೆದಿದೆ.

ವಾಸ್ತವದಲ್ಲಿ, ಗಗನ್‌ ಕುಬೇರ್‌ ಅವರಿಗೆ ನೀಟ್‌ ಸೀಟ್‌ ಹಂಚಿಕೆಯ ಬಗ್ಗೆ ಸ್ಪಷ್ಟವಾದ ಅರಿವಿಲ್ಲ ಮತ್ತು ಮೀಸಲಾತಿ ಬಗ್ಗೆ ಅಸಮಾಧಾನವಿದೆ ಎಂಬುವುದನ್ನು ಬಿಟ್ಟರೆ, ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ‘ನಾನು ಮೊದಲ ರ್‍ಯಾಂಕ್ ಪಡೆದಿದ್ದೇನೆ’ ಎಂದು ಹೇಳಿಯೇ ಇಲ್ಲ.

ಅವರು ಸೀಟು ಹಂಚಿಕೆಯ ಬಗ್ಗೆ ಮಾತನಾಡುತ್ತಾ, ‘ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ’ ಎಂದು ಹೇಳಿದ್ದರು. ಆದರೆ ಪತ್ರಿಕೆಯು ಮೀಸಲಾತಿ ವಿರೋಧಿ ವರದಿ ಬರೆಯುವ ಭರದಲ್ಲಿ, ‘ನಾನು ಭಾರತ ಮಟ್ಟದಲ್ಲಿ ಒಂದನೇ ರ್‍ಯಾಂಕ್ ಪಡೆದರೂ, ನನಗೆ ಸೀಟು ಸಿಗುವುದಿಲ್ಲ’ ಎಂದು ಗಗನ್ ಅವರು ಉದಾಹರಣೆಯಾಗಿ ಹೇಳಿದ್ದ ಮಾತನ್ನು “ದೇಶಕ್ಕೆ ಮೊದಲ ರ್‍ಯಾಂಕ್” ಎಂದು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿದೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಸುಳ್ಳು ಹರಡಿ, ನಂತರ ಪೋಸ್ಟ್ ಡಿಲೀಟ್ ಮಾಡಿದ ಪೋಸ್ಟ್ ಕಾರ್ಡ್ ಕನ್ನಡ

ಈ ಬಗ್ಗೆ ಪತ್ರಿಕೆಯು ಇನ್ನೂ ತಪ್ಪೊಪ್ಪಿಕೊಂಡಿರುವ ಬಗೆಗಿನ ಮಾಹಿತಿ ನಾನುಗೌರಿ.ಕಾಂಗೆ ಸಿಕ್ಕಿಲ್ಲ. ಮಾಹಿತಿ ಸಿಕ್ಕ ಕೂಡಲೇ ಈ ಬಗ್ಗೆ ಇಲ್ಲಿ ಅಪ್‌ಡೇಟ್‌ ಮಾಡಲಾಗುವುದು. ಇಷ್ಟೇ ಅಲ್ಲದೆ, ವಿಶ್ವೇಶ್ವರ ಭಟ್ ಅವರು ಈ ತಪ್ಪು ಮಾಹಿತಿ ಇರುವ ತಮ್ಮ ಟ್ವೀಟ್ ಅನ್ನು ಕೂಡಾ ಇದುವರೆಗೂ ಡಿಲೀಟ್ ಮಾಡಿಲ್ಲ.

ಮತ್ತೆ ತಮ್ಮ ತಪ್ಪನ್ನು ಸಮರ್ಥಿಸಿಕೊಂಡ ವಿಶ್ವವಾಣಿ ಮತ್ತು ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌!

ಈ ಎಲ್ಲದರ ನಡುವೆ, ವೈದ್ಯಕೀಯ ಶಿಕ್ಷಣ ಇಲಾಖೆಯು ಸೀಟ್‌ ಮ್ಯಾಟ್ರಿಕ್ಸ್‌‌ನಲ್ಲಿ ರೋಸ್ಟರ್‌‌ ಅನ್ನು ಪುನರ್‌ ನಿಗದಿಪಡಿಸಿರುವುದರಿಂದ 2021ನೇ ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಸೋಮವಾರ ರದ್ದು ಪಡೆಸಿ, ಹಿಂಪಡೆದಿತ್ತು.

ಇದನ್ನು ಆಧಾರವಾಗಿಟ್ಟುಕೊಂಡು ಮತ್ತೆ ಟ್ವೀಟ್ ಮಾಡಿರುವ ವಿಶ್ವೇಶ್ವರ ಭಟ್‌, ‘‘ನಮ್ಮ ವರದಿಯ ಆಶಯ ಮತ್ತು ಕಳಕಳಿಯನ್ನು ಅರಿಯದ ಕೆಲವು ಅವಿವೇಕಿಗಳು, ವಿಶ್ವವಾಣಿ ಸುಳ್ಳು ವರದಿ ಮಾಡಿದೆ ಎಂದು ಅರಚಿಕೊಂಡಿದ್ದರು. ಇಂದು ವೈದ್ಯಕೀಯ ಶಿಕ್ಷಣ ಇಲಾಖೆ ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ರದ್ದುಪಡಿಸಿದೆ. ಈಗ ಏನಂತಾರೋ ?!” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕೆಯು ಈ ಬಗ್ಗೆ ಸುದ್ದಿ ಕೂಡಾ ಮಾಡಿದೆ.

ಪತ್ರಿಕೆಯ ಆರ್ಕೃವ್‌ ಲಿಂಕ್ ಇಲ್ಲಿದೆ.
ವಿಶ್ವೇಶ್ವರ ಭಟ್‌ ಟ್ವೀಟ್ ಆರ್ಕೈವ್‌‌ಗೆ ಇಲ್ಲಿ ಕ್ಲಿಕ್ ಮಾಡಿ

ವಾಸ್ತವದಲ್ಲಿ ವಿಶ್ವವಾಣಿ ಪತ್ರಿಕೆಯ ಸುದ್ದಿಗೂ, ಸೀಟು ಹಂಚಿಕೆ ರದ್ದು ಮಾಡಿರುವ ಸರ್ಕಾರದ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆರಿಯರ್‌ ಗೈಡನ್ಸ್‌ ಎಕ್ಸ್‌ಪರ್ಟ್ ಯು.ಎಚ್‌. ಉಮ್ಮರ್‌ ಅವರು ಹೇಳಿದ್ದಾರೆ.

“ಕೆಲವು ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಸೇರ್ಪಡೆಯಾಗಿವೆ. ಜೊತೆಗೆ ಮೊದಲ ಸುತ್ತಿನ ಆಪ್ಷನ್ ಎಂಟ್ರಿಯಲ್ಲಿ ಹಲವು ಎಡವಟ್ಟುಗಳಾಗಿವೆ. ಇಲ್ಲದ ಕೋರ್ಸ್ ಮತ್ತು ಫೀಸ್ ಅದರಲ್ಲಿ ಕಾಣಿಸುತ್ತಿದ್ದವು. ಇದು ಸೀಟ್ ಮ್ಯಾಟ್ರಿಕ್ಸ್‌‌ಗೆ ತಾಳೆಯಾಗಿತ್ತಿರಲಿಲ್ಲ. ಅದಕ್ಕಾಗಿ ಈ ಹಿಂದಿನ ಸೀಟು ಹಂಚಿಕೆ ರದ್ದಾಗಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡ ದಿನಪತ್ರಿಕೆಗಳಿಗೆ ‘ಮೇಕೆದಾಟು’ ಜಾಹೀರಾತು ಕೊಟ್ಟವರ್‍ಯಾರು? ಪತ್ರಿಕೆಗಳು ಹೇಳಿದ್ದೇನು?

“ಗಗನ್ ಕುಬೇರ್‌ ಮತ್ತು ವಿಶ್ವವಾಣಿ ವರದಿಗೂ, ಸೀಟು ಹಂಚಿಕೆ ರದ್ದಾಗಿರುವ ಈ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ಗದಗ ಮೆಡಿಕಲ್ ಕಾಲೇಜಿನ ಹಳೇ ಮತ್ತು ಹೊಸ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದು ಉಮ್ಮರ್‌ ಹೇಳಿದ್ದಾರೆ.

ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೂಡಾ ವೆಬ್‌ಸೈಟ್‌ನಲ್ಲಿ ಅದೇ ರೀತಿ ಹೇಳಿಕೊಂಡಿದೆ. “ಚಾಮರಾಜನಗರ, ಕಾರವಾರ ಮತ್ತು ಇಎಸ್‌ಐ, ಬೆಂಗಳೂರಿನ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸ ಸೀಟುಗಳನ್ನು ಸೇರಿಸಲಾಗಿದೆ” ಎಂದು ಪ್ರಾಧಿಕಾರ ಹೇಳಿದೆ. ಆದರೆ ಗದಗ ಕಾಲೇಜಿನಲ್ಲಿ ಯಾವುದೆ ಸೀಟು ಬದಲಾವಣೆ ಬಗ್ಗೆ ಮತ್ತು ಮೀಸಲಾತಿ ಕ್ಯಾಟಗರಿ ಬದಲಾವಣೆ ಬಗ್ಗೆ ಇದರಲ್ಲಿ ಮಾಹಿತಿಯಿಲ್ಲ.

ಒಟ್ಟಿನಲ್ಲಿ ಹೇಳಬಹುದಾದರೆ, ವಿಶ್ವವಾಣಿ ಮತ್ತು ಅದರ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಮೀಸಲಾತಿ ಬಗೆಗಿನ ಅಸಮಾಧಾನವನ್ನು ವರದಿಯಲ್ಲಿ ಮತ್ತು ಟ್ವೀಟ್‌ನಲ್ಲಿ ಹೇಳಿಕೊಂಡು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಗದಗಿನ ಕಾಲೇಜಿನಲ್ಲಿ ಯಾವುದೆ ಸೀಟನ್ನು ಸೇರಿಸಲಾಗಿಲ್ಲ. ಸರ್ಕಾರಿ ಸೀಟು ಹಂಚಿಕೆ ಈ ಹಿಂದೆ ಇದ್ದಂತೆ, ತಮ್ಮ ಕ್ಯಾಟಗರಿ ಇರುವ ಕಾಲೇಜನ್ನು ನೋಡಿಕೊಂಡೇ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಈಗಲೂ ಸಲ್ಲಿಸಬೇಕಾಗುತ್ತದೆ.

ವಿಶ್ವೇಶ್ವರ ಭಟ್‌ ಅವರ ದಾರಿ ತಪ್ಪಿಸುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಂಗಳೂರಿನ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು, “ನಿಮ್ಮ ಸುಳ್ಳು ಸುಳ್ಳೇ, ಸಮರ್ಥನೆಗೆ ಸಾವಿರ ಪ್ರಯತ್ನ ಪಟ್ಟರೂ ಸುಳ್ಳೇ. ಇದು ಕೆಇಎ ಪ್ರಕಟಣೆ. ಹೊಸ ಪಟ್ಟಿ ಮಾಡಿದ ಬಳಿಕವೂ ಗದಗದ ಅರಿವಳಿಕೆ ವಿಭಾಗ ಹಾಗೂ ನರಮಾನಸಿಕ ವಿಭಾಗದ ಈ ಬಾರಿಯ ಪಿಜಿ ಸೀಟು ಹಂಚಿಕೆ ಬದಲಾಗುವುದಿಲ್ಲ, ನಿಮ್ಮ ಸುಳ್ಳು ವರದಿಗೆ ಬೆಲೆ ಬರುವುದೂ ಇಲ್ಲ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅನಿಮೇಷನ್‌ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್‌ ಫಸ್ಟ್‌ ಕನ್ನಡ?’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...