ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ದಲಿತರನ್ನು ಗುರುತಿಸಲು, ನಾಯಕರನ್ನಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಾಗುತ್ತದೆ. ದಲಿತರು ಮುಖ್ಯಮಂತ್ರಿಯಾಗಲಿಕ್ಕೆ ನನ್ನ ವಿರೋಧವೇನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕ್ಲಬ್ಹೌಸ್ನಲ್ಲಿ ಅನುಭವ ಮಂಟಪ ಕ್ಲಬ್ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಪ್ರಶ್ನೆಗಳಿಗೆ ಉತ್ತರಿಸಿದರು.
‘ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯನವರ ಅಭ್ಯಂತರವೇನಾದರೂ ಇದೆಯೇ?’ ಎನ್ನುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
“ಭಾರತದ ದೇಶದಲ್ಲಿ ಐದಾರು ರಾಜ್ಯಗಳಲ್ಲಿ ದಲಿತ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ದಲಿತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಯಾರು ಮುಖ್ಯಮಂತ್ರಿ ಎಂಬುದಕ್ಕಿಂತ ದಲಿತರ ಪರವಾಗಿ ಕೆಲಸ ಮಾಡುವವರು ಮುಖ್ಯವಾಗುತ್ತಾರೆ. ಮೊದಲನೇ ಬಾರಿಗೆ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿಪಿ, ಟಿಎಸ್ಪಿ ಹಣ ಖರ್ಚು ಮಾಡಲು ಮುಂದಾಗಿದ್ದು ನಮ್ಮ ನೇತೃತ್ವದ ಸರ್ಕಾರ” ಎಂದು ತಿಳಿಸಿದರು.
ಬಜೆಟ್ನಲ್ಲಿ ಶೇ. 24ರಷ್ಟು ಹಣವನ್ನು ಎಸ್ಸಿಪಿ, ಟಿಎಸ್ಪಿಗೆ ಹಣ ಖರ್ಚು ಮಾಡಬೇಕು ಎಂದು ನಾವು ಕಾನೂನು ಮಾಡಿದೆವು. ಒಂದು ವರ್ಷಕ್ಕೆ ಮೂವತ್ತು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವ ಕೆಲಸವನ್ನು ನಾನು ಕೊನೆಯ ಬಜೆಟ್ ಮಂಡಿಸಿದಾಗ ಮಾಡಿದ್ದೇನೆ. ಸುಪ್ರೀಂ ಕೋರ್ಟ್ ಬಡ್ತಿ ರದ್ದು ಮಾಡಿದಾಗ ಅಹಿಂಸಾ ಸಂಘಟನೆಯ ತೀವ್ರ ವಿರೋಧದ ನಡುವೆಯೂ ಕಾನೂನು ರೂಪಿಸಿ ದಲಿತರಿಗೆ ರಕ್ಷಣೆ ನೀಡಿದ್ದು ನಮ್ಮ ಸರ್ಕಾರ. ದಲಿತರಿಗೆ ಮೊದಲ ಬಾರಿಗೆ ಇಡೀ ದೇಶದಲ್ಲಿ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ಸರ್ಕಾರ ಎಂದು ಹೇಳಿದರು.
ದಲಿತರು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ನಲ್ಲಿ ಮಾತ್ರ ಸಾಧ್ಯವಿದೆ ಹೊರತು ಬೇರೆ ಪಕ್ಷಗಳಲ್ಲಿ ಅಲ್ಲ. ಈಗ ಪಂಜಾಬ್ನಲ್ಲಿ ಸಿಖ್ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗಿದೆ. ಆಂಧ್ರದಲ್ಲಿ ಸಂಜೀವಯ್ಯನವರು ಮುಖ್ಯಮಂತ್ರಿ ಆಗಿದ್ದರು. ಹೀಗೆ ಬೇರೆ ಬೇರೆ ರಾಜ್ಯಗಳಲ್ಲೂ ದಲಿತರು ಮುಖ್ಯಮಂತ್ರಿಗಳಾಗಿದ್ದಾರೆ. ದಲಿತರು ಮುಖ್ಯಮಂತ್ರಿಯಾಗಲಿಕ್ಕೆ ನನ್ನ ವಿರೋಧವೇನೂ ಇಲ್ಲ ಎಂದರು.
‘ಕರಾವಳಿಯಲ್ಲಿ ಕೋಮುಗಲಭೆ ತಡೆಯುವಲ್ಲಿ ಹಿನ್ನಡೆಯಾಯಿತು’
‘ಕರಾವಳಿಯಲ್ಲಿ ನೈತಿಕ ಪೊಲೀಸ್ಗಿರಿ ಹೆಚ್ಚಾಗುತ್ತಿದೆ. ಒಂದು ಹುಡುಗ, ಒಂದು ಹುಡುಗಿ ಒಂದು ಕಡೆ ನಿಂತು ಮಾತನಾಡುತ್ತಿದ್ದರೆ, ಧರ್ಮದ ಹೆಸರಲ್ಲಿ ಗೂಂಡಾಗಿರಿ ಮಾಡುವವರಿಗೆ ಸುದ್ದಿ ಮುಟ್ಟಿಸಿ ಆ ಜೋಡಿಗಳಿಗೆ ತೊಂದರೆ ನೀಡುವ ಜಾಲ ದೊಡ್ಡದಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಪ್ರವೃತ್ತಿಯ ಕಡಿವಾಣಕ್ಕೆ ಕಠಿಣ ಕ್ರಮ ಜರುಗಿಸದಿರುವುದೂ ಇದಕ್ಕೆ ಕಾರಣವೇ?’ ಎಂದು ಶ್ರೀನಿವಾಸ ಕಾರ್ಕಳ ಅವರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು, ‘ಕರಾವಳಿ ಭಾಗವು ಕೋಮುವಾದದ ಪ್ರಯೋಗಾಲಯ ಎಂಬುದು ಸತ್ಯ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರಾವಳಿಯಲ್ಲಿ ಕೋಮುಗಲಭೆಗಳನ್ನು ತಡೆಯುವಲ್ಲಿ ಹಿನ್ನಡೆಯಾಯಿತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಹಾಗೆಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕುರಿತು ಯಾವುದೇ ಭಯವೇನೂ ಇಲ್ಲ ಎಂದರು.
ಬಜರಂಗದಳದ ಮಾಜಿ ಮುಖಂಡ ಸುನಿಲ್ ಬಜಿಲಕೇರಿಯವರು ಮಾತನಾಡಿ, “ವಿನಾಯಕ ಬಾಳಿಗ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವು ತಾಳಿದರು. ವಿನಾಯಕ ಬಾಳಿಗ ಪ್ರಕರಣಕ್ಕೆ ನ್ಯಾಯ ದೊರಕಿಸಿದರೆ ಕಾಂಗ್ರೆಸ್ಗೆ ಕರಾವಳಿ ಭಾಗದಲ್ಲಿ ಹೆಚ್ಚಿನ ಜನರು ಬೆಂಬಲ ನೀಡುತ್ತಾರೆ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಲು ಪ್ರಯತ್ನಿಸಿದರೆ ಕರಾವಳಿ ಭಾಗದ ಜನರು ಹೆಚ್ಚಿನ ಉದ್ಯೋಗ ಪಡೆಯುವರು. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸ್ಮರಿಸುವರು” ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, “ಕಾಂಗ್ರೆಸ್ ಯಾವುದೇ ಸಮುದಾಯದ ವಿರುದ್ಧವೂ ಇಲ್ಲ, ಪರವೂ ಇಲ್ಲ. ಯಾರಿಗೆ ಅನ್ಯಾಯವಾದರೂ ಕಾಂಗ್ರೆಸ್ ಪ್ರಶ್ನಿಸಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಲ್ಲರಿಗೂ ಉದ್ಯೋಗ ಕೊಡಬೇಕಲ್ಲವೇ? ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ನಡೆಸಲು ಅವಕಾಶ ನೀಡಬೇಕಲ್ಲವೇ?” ಎಂದು ಪ್ರಶ್ನಿಸಿದರು.
ನಾನು ಎಡಪಂಥೀಯ, ಹೀಗಾಗಿ ಅವರು ದ್ವೇಷಿಸುತ್ತಾರೆ
‘ನೀವು ಮುಖ್ಯಮಂತ್ರಿಯಾದಾಗಿನಿಂದಲೂ ನಿಮ್ಮ ಮೇಲೆ ಬಲಪಂಥೀಯರು ದ್ವೇಷ ಕಾರುವುದು ನಡೆಯುತ್ತಿದೆ. ನಿಮ್ಮನ್ನು ಈ ಪರಿಯಾಗಿ ದ್ವೇಷಿಸಲು ಕಾರಣವೇನು?” ಎಂದು ಹರ್ಷಕುಮಾರ್ ಕುಗ್ವೆಯವರು ಕೇಳಿದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯನವರು, “ಇದು ಬಹಳ ಸರಳವಾಗಿದೆ. ನಾನು ಎಡಪಂಥೀಯ ಎಂಬ ಕಾರಣಕ್ಕಾಗಿ ಬಲಪಂಥೀಯರು ನನ್ನನ್ನು ದ್ವೇಷಿಸುತ್ತಾರೆ. ನಾನು ದ್ವೇಷ ಮಾಡುವವರನ್ನೂ ಪ್ರೀತಿಸುತ್ತೇನೆ. ನನಗೂ ಮತ್ತು ಬಲಪಂಥೀಯರಿಗೂ ಇರುವ ವ್ಯತ್ಯಾಸವಿದು. ಪರಸ್ಪರ ಪ್ರೀತಿಸುವುದೇ ಮನುಷ್ಯತ್ವ.ಪರಸ್ವರ ಗೌರವಿಸುವುದೇ ಮನುಷ್ಯತ್ವ. ಮನುಷ್ಯತ್ವ ಇರದಿರುವವರು ದ್ವೇಷಿಸುತ್ತಾರೆ. ಹೀಗಾಗಿ ದ್ವೇಷ ಮಾಡುವವರನ್ನು ನಾನು ಪ್ರೀತಿಸುತ್ತೇನೆ” ಎಂದರು.
ಹಲವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು, ಬಿಜೆಪಿ ನಾಯಕರು ಆರ್ಎಸ್ಎಸ್ ಕೈಗೊಂಬೆಗಳಾಗಿದ್ದಾರೆ ಎಂದರು. ‘ಎನ್ಇಪಿ’ ಶಿಕ್ಷಣ ವ್ಯವಸ್ಥೆಗೆ ಮಾರಕ. ಅದು ನಾಗಪುರ ಎಜುಕೇಷನ್ ಪಾಲಿಸಿ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಟೀಕಿಸಿದರು.
‘ಸರ್ಕಾರ ಯಾವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ವಸತಿ ನಿರ್ಮಾಣ ಯೋಜನೆ ಪ್ರಗತಿಯನ್ನು ಸಾಧಿಸಿಲ್ಲ’ ಎಂದರು.
ಸಿದ್ದರಾಮಯ್ಯನವರ ಕಾರ್ಯಕ್ರಮ ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲೂ ಪ್ರಸಾರವಾಯಿತು. ಸುಮಾರು 1500 ಮಂದಿ ಕ್ಲಬ್ಹೌಸ್ನಲ್ಲಿ ಸಿದ್ದರಾಮಯ್ಯನವರ ಮಾತುಗಳನ್ನು ಆಲಿಸಿದರು. ಸಾವಿರಾರು ಜನರು ಯೂಟ್ಯೂಬ್ ಹಾಗೂ ಫೇಸ್ಬುಕ್ನಲ್ಲೂ ಮಾತುಗಳನ್ನು ಆಲಿಸಿದರು.
ಇದನ್ನೂ ಓದಿ: ಸದನದಲ್ಲಿ ಕುಮಾರವ್ಯಾಸನ ಪದ್ಯ ಓದಿ, ಭಾಮಿನಿ ಷಟ್ಪದಿ ಪಾಠ ಮಾಡಿದ ಸಿದ್ದರಾಮಯ್ಯ