ಕನ್ನಡ ನಾಡಿಗೆ ನ್ಯಾಯಸಮ್ಮತವಾಗಿ ಬರಬೇಕಾದ GST ಪರಿಹಾರ, ನೆರೆ ಪರಿಹಾರ, SDRF ಹಾಗೂ NSRF ನಿಧಿ ನೀಡದೇ ಮಲತಾಯಿ ಧೋರಣೆ ತಳೆದಿರುವ ಭಾರತ ಒಕ್ಕೂಟ ಸರ್ಕಾರದ ನಡೆ ಖಂಡಿನೀಯ. ರಾಜ್ಯದ ಪಾಲಿನ GST, ನೆರೆ ಪರಿಹಾರ ಕೊಡಿ, ಇಲ್ಲದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ! ಎಂದು ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇಂದು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂದೆ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪರ ಸಹಭಾಗಿತ್ವದಲ್ಲಿ ‘ಕರ ನಿರಾಕರಣೆ ಚಳವಳಿ’ ಎಂಬ ವಿನೂತನ ವಿಭಿನ್ನ ಸತ್ಯಾಗ್ರಹ ಚಳವಳಿ ಹಮ್ಮಿಕೊಳ್ಳಲಾಗಿದೆ.
ಕರ ನಿರಾಕರಣೆ ಎಂದರೆ ನಾವು ಜಿಎಸ್ಟಿ ಬಿಲ್ ಇರುವ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ನಾವು ರೈತರಿಂದ ನೇರವಾಗಿ ಕೊಳ್ಳುತ್ತೇವೆ. ನೇಕಾರರಿಂದ ನೇಯ್ದ ಬಟ್ಟೆಯನ್ನು ಕೊಂಡುಕೊಳ್ಳುತ್ತೇವೆ.. ಈ ರೀತಿಯಾಗಿ ಎಲ್ಲೆಡೆ ಜಾಗೃತಿ ಮೂಡಿಸುತ್ತೇವೆ. ಕೊನೆಗೆ ತೆರಿಗೆ ಕಟ್ಟದೇ ಪ್ರತಿರೋಧ ಒಡ್ಡುತ್ತೇವೆ ಎಂದು ಕನ್ನಡ ರಣಧೀರರ ಪಡೆಯ ಚೇತನ್ ಗೌಡ ತಿಳಿಸಿದ್ದಾರೆ.
“ದಕ್ಷಿಣದ ರಾಜ್ಯಗಳ ಮೇಲಿನ ಹಿಂದಿ ಹೇರಿಕೆ ಹಾಗೂ ಭಾಷಾತಾರತಮ್ಯ ನೀತಿಯನ್ನು ಭಾರತದ ಒಕ್ಕೂಟ ಸರ್ಕಾರವು ನಿಲ್ಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ಕೈಬಿಡಬೇಕು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಮತ್ತು ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ (ILP) ಜಾರಿಯಾಗಬೇಕು. ಜೊತೆಗೆ ಭೂಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.
“ಕರ್ನಾಟಕ ರಾಜ್ಯವು ಭಾರತದ ಒಕ್ಕೂಟ ಸರ್ಕಾರಕ್ಕೆ 2014-15ರಲ್ಲಿ 60,595 ಕೋಟಿ, 2015-16ರಲ್ಲಿ 72,040ಕೋಟಿ, 2016-17 ರಲ್ಲಿ 85,920 ಕೋಟಿ, 2017-18 ರಲ್ಲಿ 98,460 ಕೋಟಿ ಮತ್ತು 2018-19 ರಲ್ಲಿ 1,19,796 ಕೋಟಿ ರೂಗಳನ್ನು ತೆರಿಗೆಯಾಗಿ ನೀಡಿದೆ. ಆದರೆ ಇಷ್ಟೊಂದು ತೆರಿಗೆ ಕಟ್ಟಿದರು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ನಮ್ಮದೇ ಹಣವನ್ನು ನಮಗೆ ಕೊಡಲು ಹಿಂಜರಿಕೆಯೇಕೆ? ಕಳೆದ ವರ್ಷಗಳಲ್ಲಿ ಸರಾಸರಿ 100 ಪ್ರತಿಶತ ಹೆಚ್ಚಿನ ತೆರಿಗೆಯನ್ನು ನೀಡಿದ್ದೇವೆ. ಇದಕ್ಕೆ ನಮಗೆ ಸಿಕ್ಕ ಉಡುಗೊರೆಯೆಂದರೆ ನಮ್ಮ ಪಾಲಿನ 11,324 ಕೋಟಿ ರೂ ಜಿಎಸ್ಟಿ ಪರಿಹಾರ ಹಣ ಕೊಡದೇ ಆರ್ಬಿಐನಿಂದ ಸಾಲ ಪಡೆಯಿರಿ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಲೈವ್ ನೋಡಿ
ಬೆಂಗಳೂರು: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಕನ್ನಡ ರಣಧೀರ ಪಡೆ ಮತ್ತು ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ "ಕರೆ ನಿರಾಕರಣೆ ಸತ್ಯಾಗ್ರಹ"
Posted by Naanu Gauri on Thursday, October 1, 2020
ಇಡೀ ಭಾರತ ಒಕ್ಕೂಟದಲ್ಲಿಯೇ 2ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ಆದರೆ ನಮ್ಮ ಪಾಲಿನ ಹಣ ಕೇಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ತಾವೇ ಭ್ರಷ್ಟರಾಗಿದ್ದುಕೊಂಡು ಹೈಕಮಾಂಡ್ ಎದುರು ಜೀ ಹುಜೂರ್ ಎನ್ನುತ್ತಿದ್ದಾರೆ. ಇನ್ನು ಇಲ್ಲಿಂದ ಆಯ್ಕೆಯಾದ ಸಂಸದರು ಯಾವುದಕ್ಕೂ ಪ್ರಯೋಜನವಿಲ್ಲವೆಂದು ಹೋರಾಟಕಾರರು ಆಕ್ರೋಶ ಹೊರಹಾಕಿದ್ದಾರೆ.
ಕರ ನಿರಾಕರಣೆ ಮುಖೇನ ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆಯಲು ನಾಡಿನ ಜನತೆ ಮುಂದಾಗಬೇಕು, ಅಧಿಕಾರ ಹಣ ಲಾಲಸೆಗಳಿಗೆ ಕನ್ನಡದ ಅಸ್ಮಿತೆಯನ್ನು ಅಡಮಾನವಿಟ್ಟಿರುವ ನಾಡದ್ರೋಹಿಗಳ ವಿರುದ್ಧ ನಮ್ಮ ಹೋರಾಟ ನಿತ್ಯ ನಿರಂತರವಾಗಿರಬೇಕು. ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ನಾಡಿನ ಸರ್ಕಾರದ ಉದ್ಯಮ, ನೆಲ, ಜಲಗಳನ್ನು ಮಾರಾಟಕ್ಕಿಟ್ಟಿರುವ, ನಮಗೆ ಬರಬೇಕಾದ ಪಾಲನ್ನು ಪಡೆಯಲಾಗದೆ ನಮ್ಮ ಭೂಮಿಯನ್ನು ಮಾರುತ್ತಿರುವ ರಣಹೇಡಿ ಸರ್ಕಾರದ ನಡೆಯನ್ನು ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪಡೆ ಜಂಟಿಯಾಗಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೋರಾಟಗಾರರು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಗುರುದೇವ್ ನಾರಾಯಣ ಕುಮಾರ್ ಮಾತನಾಡಿ “ನಮ್ಮ ನಾಡಿನ ತೆರಿಗೆ ಪಡೆಯುವ ಭಾರತ ಒಕ್ಕೂಟ ಸರ್ಕಾರ ನಮಗೆ ನೀಡಬೇಕಾದ ನ್ಯಾಯಸಮ್ಮತ ಹಣ ನೀಡದೆ, ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿರುವುದು ತೀರಾ ಖಂಡನೀಯ. ನಾಡಿನ ನೆಲ ಸಂಸ್ಕೃತಿಗೆ ಬೆಲೆ ನೀಡದೆ, ಹಿಂದಿ ಹೇರಿಕೆ ಮಾಡುತ್ತಿರುವ ನೀತಿಯನ್ನು ಖಂಡಿಸಿ, ಭಾರತ ಒಕ್ಕೂಟ ಸರ್ಕಾರ ತನ್ನ ಮಲತಾಯಿ ಧೋರಣೆ ಮುಂದುವರಿಸಿದಲ್ಲಿ ಮಗದೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ದೋಷಪೂರಿತ ಜಿಎಸ್ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ