ಹಿಂಸಾಚಾರ ಮತ್ತು ಮತಯಂತ್ರಗಳನ್ನು ಒಡೆದುಹಾಕಿದ ಆರೋಪದಡಿ ಮರು ಮತದಾನಕ್ಕೆ ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ ಮುಂದಾಗಿದ್ದು, ರಾಜ್ಯಾದ್ಯಂತ 696 ಬೂತ್ಗಳಲ್ಲಿ ಸೋಮವಾರ ಬೆಳಿಗ್ಗೆ ಪಂಚಾಯತ್ ಚುನಾವಣೆಗಳಿಗೆ ಮರುಮತದಾನ ಪ್ರಾರಂಭವಾಗಿದೆ.
ಜುಲೈ 8ರಂದು ನಡೆದ ಪಂಚಾಯತ್ ಚುನಾವಣೆಗಳಲ್ಲಿ ವ್ಯಾಪಕ ಹಿಂಸಾಚಾರದಲ್ಲಿ 15 ಜನರು ಸಾವಿಗೀಡಾಗಿದ್ದಾರೆ. ರಾಜ್ಯದ ಕೆಲವೆಡೆ ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿ ಮತದಾರರನ್ನು ಬೆದರಿಸಿದ ಘಟನೆಗಳೂ ವರದಿಯಾಗಿವೆ.
ಹಿಂಸಾಚಾರ ಮತ್ತು ಮತಪೆಟ್ಟಿಗೆಗಳು ಮತ್ತು ಮತಯಂತ್ರಗಳನ್ನು ಧ್ವಂಸ ಪ್ರಕರಣಗಳು ವರದಿಯಾದ್ದರಿಂದ 19 ಜಿಲ್ಲೆಗಳ 696 ಬೂತ್ಗಳಲ್ಲಿ ಮರು ಮತದಾನ ಮಾಡುವಂತೆ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಅತಿ ಹೆಚ್ಚು ಸಂಖ್ಯೆಯಲ್ಲಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ (175), ನಂತರದ ಸ್ಥಾನದಲ್ಲಿ ಮಾಲ್ಡಾ (109). ನಾಡಿಯಾದಲ್ಲಿ 89, ಕೂಚ್ ಬೆಹಾರ್ನಲ್ಲಿ 46, ಉತ್ತರ 24 ಪರಗಣಗಳಲ್ಲಿ 46, ಉತ್ತರ ದಿನಜ್ಪುರದಲ್ಲಿ 42, ದಕ್ಷಿಣ 24 ಪರಗಣಗಳಲ್ಲಿ 36, ಪುರ್ಬಾ ಮೇದಿನಿಪುರದಲ್ಲಿ 31 ಮತ್ತು ಹೂಗ್ಲಿಯಲ್ಲಿ 29 ಬೂತ್ಗಳಲ್ಲಿ ಮರುಮತದಾನ ನಡೆಯುತ್ತಿದೆ. ಡಾರ್ಜಿಲಿಂಗ್, ಜಾಗ್ರಾಮ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿಲ್ಲ.
ಇಂದು ಬೆಳಿಗ್ಗೆ 7 ಗಂಟೆಯಿಂದ ಮರು ಮತದಾನ ಆರಂಭಗೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ರಾಜ್ಯ ಪೊಲೀಸರನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. ಸಂಜೆ ಐದು ಗಂಟೆಯವರೆಗೆ ಮರು ಮತದಾನ ನಡೆಯಲಿವೆ. ಪಂಚಾಯತ್ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.
#WATCH | West Bengal panchayat election re-poll | Voters queue up outside the polling booth at Tikiapara Primary High School in Murshidabad to cast their votes.
A voter, Anjana Majumdar says, "The first day there were no central forces. There were just three Police personnel.… pic.twitter.com/aPupguHwj3
— ANI (@ANI) July 10, 2023
ರಾಜ್ಯ ಚುನಾವಣಾ ಆಯೋಗದ ಪ್ರಕಾರ ಜುಲೈ 8 ರಂದು ನಡೆದ ಪಂಚಾಯತ್ ಚುನಾವಣೆಯಲ್ಲಿ ಅಂತಿಮ ಮತದಾನವು 81% ಆಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪುರ್ಬಾ ಮೇದಿನಿಪುರ್ ಜಿಲ್ಲೆಯಲ್ಲಿ (84.7%), ಬಿರ್ಭುಮ್ (83.1%) ಮತ್ತು ಬಂಕುರಾ (83%) ನಲ್ಲಿ ಅತಿ ಹೆಚ್ಚು ಮತದಾನವಾಗಿದೆ.
ಹತ್ಯೆಗೀಡಾದ 15 ಜನರಲ್ಲಿ 10 ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷದವರು. ಬಿಜೆಪಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ನಿಂದ ತಲಾ ಒಬ್ಬ ಪಕ್ಷದ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರ ಬೆಂಬಲಿಗರೂ ಸೇರಿದ್ದಾರೆ.
ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹಿಂಸಾಚಾರ ನಡೆಸಿ ಸರ್ಕಾರವನ್ನು ಅಪಖ್ಯಾತಿಗೊಳಿಸಲು ಮುಂದಾಗಿವೆ ಎಂದು ಟಿಎಂಸಿ ಆರೋಪಿಸಿದೆ.
”ಇಡೀ ಚುನಾವಣಾ ಪ್ರಕ್ರಿಯೆಯನ್ನು ಹಿಂಸಾತ್ಮಕವಾಗಿ ಚಿತ್ರಿಸಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ, ಆದರೆ ಬಹುಮಟ್ಟಿಗೆ ಶಾಂತಿಯುತ ಮತ್ತು ನ್ಯಾಯಯುತ ಚುನಾವಣೆಯ ಶ್ರೇಯಸ್ಸು ಸಾರ್ವಜನಿಕರಿಗೆ ಸಲ್ಲುತ್ತದೆ” ಎಂದು ತೃಣಮೂಲ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.
”ಹೆಚ್ಚಿನ ಸಾವುಗಳು ತೃಣಮೂಲ ಕಾರ್ಯಕರ್ತರದ್ದಾಗಿವೆ, ತೃಣಮೂಲ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದರೆ, ಅವರು ತಮ್ಮ ಸ್ವಂತ ಕಾರ್ಯಕರ್ತರನ್ನು ಏಕೆ ಗುರಿಯಾಗಿಸುತ್ತಾರೆ?” ಎಂದು ಘೋಷ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣಾ ಹಿಂಸಾಚಾರ: ಸೂಕ್ಷ್ಮ ಮತಗಟ್ಟೆಗಳ ಕುರಿತು ಆಯೋಗ ಮಾಹಿತಿ ನೀಡಿಲ್ಲ; ಬಿಎಸ್ಎಫ್ ಆರೋಪ