ಕೋವಿಡ್ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದೆ. ಎಲ್ಲೆಡೆ ಬೆಡ್ಗಾಗಿ, ಆಕ್ಸಿಜನ್ ಮತ್ತು ಔಷಧಿಗಾಗಿ ಆಹಾಕಾರ ಎದ್ದಿದೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಮಿತಿ ಮೀರಿದ್ದು ಬೆಡ್ ಸಿಗದೇ ರಸ್ತೆಯಲ್ಲಿ, ಬೀದಿಬದಿಯಲ್ಲಿ ರೋಗಿಗಳು ಪರದಾಡುತ್ತಿರುವ ದೃಶ್ಯಗಳು ದಿನನಿತ್ಯ ವರದಿಯಾಗುತ್ತಿವೆ. ಕರ್ನಾಟಕಕ್ಕೆ ಇಂತಹ ಪರಿಸ್ಥಿತಿ ಏಕೆ ಬಂತು? ಕಳೆದ ಕೊರೊನಾ ಸೋಂಕು ಗೋಚರಿಸಿ 15 ತಿಂಗಳಾದರೂ ವೈದ್ಯಕೀಯ ಕ್ಷೇತ್ರವನ್ನು ಸಜ್ಜುಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದೇಕೆ ಎಂಬ ಪ್ರಶ್ನೆಗೆ ಬಿ.ಎಸ್ ಯಡಿಯೂರಪ್ಪನವರು ಉತ್ತರಿಸುವರೆ?
ಇನ್ನು ಕಳೆದ ವರ್ಷ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದಾಗ ಚಿಕಿತ್ಸೆ ಮತ್ತು ರೋಗಿಗಳ ಐಸೋಲೇಶನ್ಗಾಗಿ 10,100 ಹಾಸಿಗೆಗಳನ್ನು ಹೊಂದಿರುವ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಅನ್ನು ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ತೆರೆದಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂ ಖರ್ಚು ಮಾಡಿ ಭಾರೀ ಪ್ರಚಾರ ಗಿಟ್ಟಿಸಿತ್ತು.
ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ “ಈ ಸಾಂಕ್ರಾಮಿಕ ರೋಗವು ಇನ್ನೂ ಕೆಲವು ತಿಂಗಳುಗಳ ಕಾಲ ಉಳಿಯುತ್ತದೆ, ಮತ್ತು ಅದನ್ನು ನಿಭಾಯಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಅದರ ಭಾಗವಾಗಿ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಅನ್ನು ಸ್ಥಾಪಿಸುತ್ತಿದ್ದೇವೆ ಎಂದಿದ್ದರು. ಐಸಿಯು ರೋಗಿಗಳಿಗೆ 100 ಸೇರಿದಂತೆ 10,100 ಹಾಸಿಗೆಗಳೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಕೇಂದ್ರ ಇದಾಗಿದ್ದು ಹಿರಿಯ ಐಎಎಸ್ ಅಧಿಕಾರಿಗಳ ತಂಡವು ಇದನ್ನು ಸ್ಥಾಪಿಸಿದೆ” ಎಂದಿದ್ದರು.
ವೈದ್ಯರು ಮತ್ತು ಪೊಲೀಸರು ಸೇರಿದಂತೆ 2,200 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಇಲ್ಲಿ ನಿಯೋಜಿಸಲಾಗುವುದು. ಪ್ರತಿ 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ದಾದಿಯರು, ಇಬ್ಬರು ಶುಚಿಗೊಳಿಸುವ ಸಿಬ್ಬಂದಿ ಮತ್ತು ಮಾರ್ಷಲ್ಗಳು ಇರುತ್ತಾರೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ, ಮತ್ತು ಲಾಂಡ್ರಿಗಾಗಿ ಮೀಸಲಾದ ತಂಡ, ಬೆಡ್ಶೀಟ್ಗಳು, ಕಂಬಳಿಗಳು ಮತ್ತು ಮೆತ್ತೆ ಕವರ್ಗಳನ್ನು ತೊಳೆಯಲು ವ್ಯವಸ್ಥೆ ಇದೆ. ಕಡಿಮೆ ರೋಗಲಕ್ಷಣದ ರೋಗಿಗಳನ್ನು ಇಲ್ಲಿ ಇರಿಸಲಾಗುವುದು, ಹಾಸಿಗೆಯ ವ್ಯವಸ್ಥೆಗಾಗಿ ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿರುತ್ತದೆ. ಐಸಿಯು, ಇಸಿಜಿ ಮತ್ತು ಆಮ್ಲಜನಕ ಬೆಂಬಲ ಸೌಲಭ್ಯಗಳೂ ಇವೆ, ಮತ್ತು ಹತ್ತಿರದ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯು ಈ ಸೆಂಟರ್ಅನ್ನು 24×7 ಮೇಲ್ವಿಚಾರಣೆ ಮಾಡುತ್ತದೆ. “ಕೇಂದ್ರ ತಂಡವು ಈ ಸೆಂಟರ್ಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಶ್ಲಾಘಿಸಿದೆ. ಕೊರೊನಾ ಮಾರ್ಗಸೂಚಿಗಳನ್ನು ಅನ್ಲಾಕ್ ಮಾಡಿದ ನಂತರ ಪ್ರಕರಣಗಳು ಏರಿಕೆಯಾದಲ್ಲಿ ಅವರನ್ನು ಇಲ್ಲಿ ದಾಖಲಿಸಲಾಗುತ್ತಿದೆ. ನಾವು ಸಜ್ಜುಗೊಂಡಿದ್ದೇವೆ’’ ಎಂದು ಯಡಿಯೂರಪ್ಪ ದೃಢವಾಗಿ ಹೇಳಿದ್ದರು.
ಇದಕ್ಕೆ ಮಾಧ್ಯಮಗಳು ಸಾಕಷ್ಟು ಮಹತ್ವ ಕೊಟ್ಟು ವರದಿ ಮಾಡಿದ್ದವು. ಇದು ಸಾರ್ವಜನಿಕರಲ್ಲಿ ಭರವಸೆ ಮೂಡಿಸಿತ್ತು. ನಿಜಕ್ಕೂ ಅಂತಹ ವ್ಯವಸ್ಥೆ ಅಂದಿಗಿಂತ ಇಂದು ತುರ್ತು ಅಗತ್ಯವಿದೆ. ಆದರೆ ನೀವೀಗ ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ಹೋಗಿ ನೋಡಿದರೆ ಈ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಮಾಯವಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಕಳೆದ ವರ್ಷ ಜುಲೈ 27ರಂದು ಉದ್ಘಾಟನೆಯಾದ ಈ ಕೇಂದ್ರ ಈಗ ಉಪಯೋಗಕ್ಕೆ ಸಿಗುತ್ತಿಲ್ಲ ಏಕೆ?
Bruhat Bengaluru Mahanagara Palike (BBMP) announces closure of 10,100 bedded COVID Care Center at Bengaluru Exhibition Center. #Karnataka pic.twitter.com/Jw5iADxbl0
— ANI (@ANI) September 5, 2020
ಏಕೆಂದರೆ ಉದ್ಘಾಟನೆಯಾದ ಒಂದೂವರೆ ತಿಂಗಳಿನಲ್ಲಿಯೇ ಸರ್ಕಾರ ಈ ಸೆಂಟರ್ ಅನ್ನು ಮುಚ್ಚಿಬಿಟ್ಟಿದೆ. ಅದಕ್ಕೆ ಕಾರಣ ಹೆಚ್ಚಿನ ಸೋಂಕಿತರು ದಾಖಲಾಗುತ್ತಿಲ್ಲವೆಂಬುದಾಗಿದೆ! ಸೆಪ್ಟಂಬರ್ 05 ರಂದು ಈ ಕುರಿತು ತೀರ್ಮಾನ ತೆಗೆದುಕೊಂಡ ಬಿಬಿಎಂಪಿ ಸೆಪ್ಟಂಬರ್ 15ಕ್ಕೆ ಇದಕ್ಕೆ ಎಳ್ಳುನೀರು ಬಿಟ್ಟಿದೆ. ಇದು ಕಾರ್ಯ ನಿರ್ವಹಿಸುತ್ತಿದ್ದಾಗಲೂ ಅಗತ್ಯ ಮೂಲಸೌರ್ಕರ್ಯಗಳಿಲ್ಲ, ಸಾಮಾಗ್ರಿ ಖರೀದಿಯಲ್ಲಿ ಕೋಟ್ಯಂತರ ರೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು..
ಇದನ್ನೂ ಓದಿ: ಒಂದೂವರೆ ತಿಂಗಳಷ್ಟೇ ಬಳಕೆ: ಬೆಂಗಳೂರಿನ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಮುಚ್ಚಲು ನಿರ್ಧಾರ!
ಅದೇನೇ ಇರಲಿ ಇಂದು ಆ ಕೋವಿಡ್ ಕೇರ್ ಇದ್ದಿದ್ದೇ ಆದಲ್ಲಿ ಜನ ಇಷ್ಟು ಪ್ರಮಾಣದಲ್ಲಿ ಬೆಡ್ ಇಲ್ಲದೆ ಬೀದಿಯಲ್ಲಿ ಸಾಯುವು ನರಳುವ ಪರಿಸ್ಥಿತಿ ಬರುತ್ತಿತ್ತೇ? ಜನ ಬಾರದಿದ್ದರೂ ಪರವಾಗಿಲ್ಲ ಮುಂದೆ ಬೇಕಾಗುತ್ತದೆ ಎಂಬ ಮುನ್ನೋಟದೊಂದಿಗೆ ಅದನ್ನು ಉಳಿಸಿಕೊಂಡಿದ್ದರೆ ಇಂದು ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ?
ಅಂದು ಪ್ರಕರಣಗಳು ಹೆಚ್ಚಾಗುತ್ತವೆ, ನಾವು ಸಜ್ಜಾಗಿದ್ದೇವೆ ಎಂದು ವೀರಾವೇಶದಿಂದ ಮಾತನಾಡಿದ್ದ ಯಡಿಯೂರಪ್ಪನವರು ಈಗ ಏನು ಮಾಡುತ್ತಿದ್ದಾರೆ? ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಚಾರ ಕರ್ನಾಟಕದಲ್ಲಿ ಏಪ್ರಿಲ್ 21 ರಂದು ಒಟ್ಟು 116 ಸಾವುಗಳು ಸಂಭವಿಸಿ, 23,558 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಬೆಂಗಳೂರು ಒಂದರಲ್ಲೆ ಇದುವರೆಗೂ 24,600 ಸಕ್ರಿಯ ಪ್ರಕರಣಗಳಿವೆ. ಇಂದು ಆ ಸೆಂಟರ್ ಇದ್ದಲ್ಲಿ ಎಷ್ಟು ಜನ ಅದರ ಪ್ರಯೋಜನ ಪಡೆಯಬಹುದಿತ್ತಲ್ಲವೇ?
ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ದೆಹಲಿಯಲ್ಲೂ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಅದಿನ್ನೂ ಉಳಿದುಕೊಂಡಿದ್ದು, ಅದಕ್ಕೆ ಈಗ ಪುನರ್ ಚಾಲನೆ ಕೊಡಲು ಉದ್ದೇಶಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಪುನರ್ ಚಾಲನೆ ಕೊಡುವ ಪರಿಸ್ಥಿತಿಯಿಲ್ಲ. ಕನಿಷ್ಠ, ಅಲ್ಲಿ ಕೂಡಲೇ ಪುನರ್ ನಿರ್ಮಾಣಕ್ಕೆ ಮುಂದಾಗಿ ಒಂದು ವಾರದ ಒಳಗಾದರೂ ಆಕ್ಸಿಜನ್ ಸರಬರಾಜು ಇರುವ ಹಾಸಿಗೆಗಳಾಗಿ ಅದನ್ನು ಕಟ್ಟಲು ಈ ಸರ್ಕಾರವು ಮುಂದಾಗುತ್ತದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ.
ಈ ಸಂಬಂಧ ಸರ್ಕಾರದ ಉತ್ತರ ಪಡೆಯಲು ಸಚಿವ ಸುಧಾಕರ್ ಅವರಿಗೆ ನಾನುಗೌರಿ.ಕಾಂ ಪ್ರಯತ್ನಿಸುತ್ತಿದ್ದು, ಅವರು ಇದುವರೆಗೂ ಸಿಕ್ಕಿಲ್ಲ. ಅವರು ಪ್ರತಿಕ್ರಿಯಿಸಿದರೆ ಇಲ್ಲಿ ಅದನ್ನು ಅಪ್ʼಡೇಟ್ ಮಾಡಲಾಗುವುದು.
ಇದನ್ನೂ ಓದಿ: ಆಡಳಿತದಲ್ಲಿ ರಾಜ್ಯಪಾಲರ ಹಸ್ತಕ್ಷೇಪ: ಸಾಂವಿಧಾನಿಕ ಉಲ್ಲಂಘನೆ
ಈಗಲೂ ಕರ್ನಾಟಕದಲ್ಲಿ ಮಾಸ್ಕ್ ಹಾಕುವವರು ತೀರಾ ಕಡಿಮೆ. ಪೇಟೆಯಲ್ಲಿ ಪೊಲೀಸರಿಗೆ ಹೆದರಿ ಮಾಸ್ಕ್ ಧರಿಸಿದಂತೆ ತೋರುತ್ತದೆ. ವೈದ್ಯಕೀಯ ಪರಿಶೋಧನೆಯ ಸಂಖ್ಯೆಯೂ ಏನೇನೂ ಸಾಲದು.
ಕೇರಳದಲ್ಲಿ ಮಾಡಿದಂತೆ ಪ್ರತಿಯೊಬ್ಬರನ್ನೂ ಟೆಸ್ಟ್ ಮಾಡಲಿ. ಆರೋಗ್ಯ ಇಲಾಖೆಗೆ ದಿನಕ್ಕೆ ಇಂತಿಷ್ಟು ಲಕ್ಷ ಜನರನ್ನು ಎಂದು ಟಾರ್ಗೆಟ್ ಕೊಟ್ಟು ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಲಿ. ಆವಾಗ ಗೊತ್ತಾಗುವುದು ಕರ್ನಾಟಕದಲ್ಲಿಯ ಕೊರೋನಾ ವಿಜೃಂಭಣೆ. ಜನರನ್ನು ರಕ್ಷಿಸುವಲ್ಲಿ ಸರಕಾರ ಜವಾಬ್ದಾರಿ ತೆಗೆದುಕೊಳ್ಳಲಿ…. ಹೀಗೆ ರಾಜ್ಯಗಳೆಲ್ಲವೂ ಒಂದಾಗಿ ಶ್ರಮಿಸಲಿ. ಭಾರತ ರಕ್ಷೆಪಡುವುದು.