ಕೊರೊನಾ ಎರಡನೇ ಅಲೆಯಿಂದ ದೇಶದಲ್ಲಿ ಜನ ತತ್ತರಿಸಿದ್ದಾರೆ. ಇಂತಹ ಸಮಯದಲ್ಲೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯುತ್ತಿದೆ. 8 ಹಂತಗಳ ಮತದಾನದಲ್ಲಿ ಇನ್ನೂ 2 ಹಂತಗಳು ಬಾಕಿ ಇವೆ.
ಮತದಾನದ ಹಂತಗಳನ್ನು ಕಡಿಮೆ ಮಾಡಿ ಒಂದೇ ದಿನ ಚುನಾವಣೆ ನಡೆಸಿ ಎಂದು ಹಲವು ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಅವರ ಮನವಿಯನ್ನು ತಿರಸ್ಕರಿಸಿದೆ.
ಕೊರೊನಾ ಪ್ರಕರಣಗಳ ಕರಿನೆರಳಿನಲ್ಲಿ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಚುನಾವಾಣ ರ್ಯಾಲಿಗಳಿಂದ ಕೊರೊನಾ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಬಂಗಾಳದಲ್ಲಿ ಪ್ರತಿದಿನದ ಕೊರೊನಾ ಪ್ರಕರಣಗಳು 10,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 10,748 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಈ ಹಂತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ 43 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ಇದನ್ನೂ ಓದಿ: ಕೇರಳದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ: ಸಿಎಂ ಪಿಣರಾಯಿ ವಿಜಯನ್ ಘೋಷಣೆ
ಉತ್ತರ 24 ಪರಗಣ ಜಿಲ್ಲೆಯ 17 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ, ನಾಡಿಯಾ ಮತ್ತು ಉತ್ತರ ದಿನಾಜ್ಪುರದಲ್ಲಿ ತಲಾ ಒಂಬತ್ತು ಮತ್ತು ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ಎಂಟು ಮತದಾನ ಆರಂಭವಾಯಿತು.
ಆರನೇ ಹಂತದ ಮತದಾನ ಹಲವಾರು ಪ್ರಮುಖ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. ಮೂವರು ಮಂತ್ರಿಗಳು, ಮೂವರು ಚಲನಚಿತ್ರ ತಾರೆಯರು, ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ಮೊದಲ ತೃಣಮೂಲ ನಾಯಕ ಮುಕುಲ್ ರಾಯ್ ಅವರ ಭವಿಷ್ಯ ಇಂದು ಮತ ಪೆಟ್ಟಿಗೆಯಲ್ಲಿ ಭದ್ರವಾಗಲಿದೆ.
ಮತದಾನ ನಡೆಯುತ್ತಿರುವ ಈ 43 ಸ್ಥಾನಗಳು, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಪಾಲನ್ನು ಹೆಚ್ಚಾಗಲು ಭಾರಿ ಕೊಡುಗೆ ನೀಡಿವೆ. 2016 ರ ವಿಧಾನಸಭಾ ಚುನಾವಣೆಯಲ್ಲಿ ಶೇ 10 ರಷ್ಟಿದ್ದ ಬಿಜೆಪಿಯ ಮತಗಳು 2019 ರಲ್ಲಿ ಶೇ 41 ರಷ್ಟು ಹೆಚ್ಚಾಗಲು ಈ 43 ಸ್ಥಾನಗಳ ಪಾತ್ರ ಅಧಿವಾಗಿದೆ.
ಕೊರೊನಾ ಹೆಚ್ಚಾಗುತ್ತಿದ್ದರೂ, ರಾಜಕೀಯ ನಾಯಕರು ಪ್ರಚಾರ ರ್ಯಾಲಿ ನಿಲ್ಲಿಸಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಮೂರು ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ನಾಲ್ಕು ರೋಡ್ ಶೋಗಳನ್ನು ಮಾಡಲಿದ್ದಾರೆ. ಬಿಜೆಪಿಯ ಸುವೇಂಧು ಅಧಿಕಾರಿ ಕೋಲ್ಕತ್ತಾದಲ್ಲಿ ಮೂರು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಲಸಿಕೆಯ ಬೆಲೆ ಘೋಷಿಸಿದ ಸೀರಮ್-ಕೇಂದ್ರಕ್ಕಿಂತ ರಾಜ್ಯಕ್ಕೆ ಹೆಚ್ಚು ಬೆಲೆ ನಿಗದಿ; ಕಾಂಗ್ರೆಸ್ ಆರೋಪ