ಮೋದಿ ಸರಕಾರ ಒಂಬತ್ತು ವರ್ಷ ತುಂಬಿಸಿದ ಸಂತಸವನ್ನು, ದೇಶದ ತುಂಬ ಸಭೆ ಸಮಾರಂಭ ಯಜ್ಞ ಹೋಮ ಹವನ ಇತ್ಯಾದಿ ವೈದಿಕಾಚರಣೆಗಳಿಂದ ವಿಜೃಂಭಿಸಲು ತಯಾರಾಗುತ್ತಿರುವಾಗಲೇ ಭೀಕರ ರೈಲ್ವೆ ಅಪಘಾತ ಸಂಭವಿಸಿದೆ. ಎದೆ ನಡುಗಿಸುವ ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಗೆ ಕಾರಣರ್ಯಾರು, ಹೊಣೆಗಾರರಾರು ಎಂಬ ಚರ್ಚೆಯು ಅವ್ಯಾಹತವಾಗಿ ನಡೆದಿದೆ. ಇದು ಒಂದೆಡೆಯಾದರೆ ಮೋದಿಯವರ ಒಂಬತ್ತು ವರ್ಷದ ಸಂಭ್ರಮದ ಸಮಯದಲ್ಲಿ ಸಂಭವಿಸಿದ ಸಾವುಗಳನ್ನು ನೆನೆಯುವುದಾದರೆ: 2019ರಲ್ಲಿ ನಡೆದ ಘಟನೆಯಲ್ಲಿ, 40 ಜನ ಸೈನಿಕರ ಬಲಿದಾನಕ್ಕೆ ಸರಕಾರದ ನಿರ್ಲಕ್ಷವೇ ಕಾರಾಣವೆಂದು ಜಮ್ಮುಕಾಶ್ಮೀರದ ಮಾಜಿ ರಾಜ್ಯಪಾಲರು ಬಹಿರಂಗಂಪಡಿಸಿದ್ದಾರೆ; ನಂತರ ಕೃಷಿಕಾಯ್ದೆ ಜಾರಿಯನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ 750 ಜನ ರೈತರು ಅಸುನೀಗಿದರು. ಆ ಸಾವುಗಳ ಬಗ್ಗೆ ಮಾತನಾಡದ ಪ್ರಧಾನಿಯವರು, ಶಿವಮೊಗ್ಗ ಸುಬ್ಬಣ್ಣ ಎಂಬ ಗಾಯಕರೊಬ್ಬರು ತೀರಿಕೊಂಡಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾವಿನಂಚಿನಲ್ಲಿದ್ದ ಸಿದ್ದೇಶ್ವರ ಸ್ವಾಮಿಗಳಿಗೆ ಫೋನ್ ಮಾಡಿದರು; ಆದರೆ ಸಿದ್ದೇಶ್ವರರಿಗೆ ಮಾತನಾಡಲು ಸಾಧ್ಯವಾಯಿತೋ ಇಲ್ಲವೋ! ಇವೆಲ್ಲಾ ಘಟನೆ ಪ್ರಧಾನಿಯ ಒಂಬತ್ತು ವರ್ಷದ ಸಂಭ್ರಮದಲ್ಲಿ ನೆನೆಸುವ ಘಟನೆಗಳಂತಲ್ಲಾ, ಥೂತ್ತೇರಿ.
*****
ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನು, ಸರ್ಕಾರ ರಚಿಸಿದ ಮೇಲೆ ಜಾರಿ ಮಾಡಲು ತೆಗೆದುಕೊಂಡ ಹದಿನೈದು ದಿನಗಳ ಅವಧಿಯಲ್ಲಿ, ಮನೆಯಿಂದ ಈಚೆಗೆದ್ದು ಬಂದ ಸೋತ ಬಿಜೆಪಿ ಎಮ್ಮೆಲ್ಲೆಗಳು, ಗ್ಯಾರಂಟಿಗಳನ್ನು ತಕ್ಷಣವೇ ಜಾರಿ ಮಾಡದಿದ್ದರೆ ಹೋರಾಟ ಮಾಡುತ್ತೇವೆ ಎಂದಿದ್ದರು. ದಳದ ಕುಮಾರಣ್ಣನವರು ಬೀದಿಗಿಳಿಯುವ ಬೆದರಿಕೆ ಹಾಕಿದರು. ಇದಾವುದಕ್ಕೂ ಕಿವಿಗೊಡದ ಸಿದ್ದು ಟೀಮು ಗ್ಯಾರಂಟಿಗಳನ್ನು ಜಾರಿ ಮಾಡಿಯೇಬಿಟ್ಟಿತು. ಇದರಿಂದ ಆಘಾತಗೊಂಡಂತಾದ ಟಿ.ವಿ ಮಾಧ್ಯಮದವರು ಸರಕಾರವನ್ನು ಅಕಾರಣವಾಗಿ ಟೀಕಿಸುವ ಅಡ್ನಾಡಿಗಳನ್ನು ತಂದು ಕೂರಿಸಿಕೊಂಡು ಎರಡು ಸಾವಿರ ರೂಗಳಿಂದ ಅತ್ತೆ ಸೊಸೆ ಜಗಳ ಶುರುವಾಗುತ್ತೆ, ಲಕ್ಷ ರೂಗಳ ಸಂಬಳ ತೆಗೆಯುವ ಕೆಲ ಮಹಿಳೆಯರಿಗೆ 2000 ಕೊಡುವುದು ಎಷ್ಟು ಸರಿ, ಈ ಭಾಗ್ಯಗಳಿಂದ ದೇಶ ದಿವಾಳಿಯಾಗುತ್ತೆ, ಇವುಗಳ ಮುಂದುವರಿಕೆ ಸಾಧ್ಯವಿಲ್ಲ ಎಂದು ಬೊಬ್ಬೆ ಹೊಡೆದವಲ್ಲ. ಸಾಮಾನ್ಯವಾಗಿ ಬಿಜೆಪಿ ಮನಸ್ಸುಗಳು ಬಡವರು ಸಫಲರಾಗುವುದನ್ನು ಸಹಿಸುವುದಿಲ್ಲವಂತಲ್ಲಾ, ಥೂತ್ತೇರಿ.
*****
ಬಿಜೆಪಿ ಮನಸ್ಸುಗಳಿಗೆ ಗ್ಯಾರಂಟಿ ಭಾಗ್ಯಗಳನ್ನು ಏಕೆ ಸಹಿಸಲಾಗುವುದಿಲ್ಲ ಎಂದರೆ ಅವರ ಧರ್ಮಗುರುವಾದ ಗೋಳವಲಕರ ಬಡವರ ಉದ್ಧಾರದ ವಿರೋಧಿ; ಬಡವರು ಅದರಲ್ಲೂ ಶೋಷಿತಜಾತಿ ಜನರಿಗೆ ಯಾವ ಸವಲತ್ತನ್ನು ಕೊಡಬಾರದು, ಅವರು ಉನ್ನತ ಹುದ್ದೆಗೆ ಬರದಂತೆ ನೋಡಿಕೊಳ್ಳಬೇಕು, ಅವರು ಎ.ಸಿ ಮತ್ತು ಡಿ.ಸಿ ಹಾಗೂ ತಹಸೀಲ್ದಾರನಾಗದಂತೆ ನೋಡಿಕೊಳ್ಳಬೇಕು, ನಿಮ್ಮನ್ನ ನೋಡಿದ ಕೂಡಲೇ ಅವರು ನಿಮ್ಮ ಪಾದ ನೋಡುತ್ತ ನಿಲ್ಲಬೇಕು, ಅದು ಬಿಟ್ಟು ಸರಿಸಮಾನರಾಗಿ ವರ್ತಿಸಬಾರದು, ಬಡವರು ಮತ್ತು ಕೆಳಜಾತಿಗಳು ಎಂದಿನವರೆಗೆ ಬಡವರಾಗಿರುತ್ತಾರೊ ಅಲ್ಲಿಯವರೆಗೆ ನೀವು ಸುಖವಾಗಿರುತ್ತೀರಿ ತಿಳಿಯಿರಿ ಎಂದು ಆತ ಹೇಳಿದ್ದಾನೆ. ಈ ವೇದವಾಕ್ಯ ಅವರ ಬರವಣಿಗೆಯಲ್ಲಿ ದಾಖಲಾಗಿದೆ. ಅನುಮಾನಗೊಂಡವರು ಗೋಳವಲಕರನನ್ನ ಓದಬಹುದು. ಅದನ್ನು ಓದಿಕೊಂಡ ಬಿಜೆಪಿಗಳು ಗ್ಯಾರಂಟಿ ಜಾರಿಯಾದಂದಿನಿಂದ ನಿದ್ದೆಯನ್ನೆ ಕಳೆದುಕೊಂಡು, ಗ್ಯಾರಂಟಿ ನಂಬಬೇಡಿ ಎಂದು ಕೂಗಾಡುತ್ತ ತಿರುಗುತ್ತಿವೆಯಂತಲ್ಲಾ, ಥೂತ್ತೇರಿ.
*****
ರಾಜಕಾರಣದಲ್ಲಿದ್ದರೆ ಮಾತ್ರ ಎಲ್ಲ ರೀತಿಯ ಮಜಗಳನ್ನೂ ಮಾಡುತ್ತ, ಆಸ್ತಿಪಾಸ್ತಿ ಗಳಿಸುತ್ತ, ಅದನ್ನು ನಿಭಾಯಿಸುತ್ತಾ ಇರಬಹುದುದೆಂದು ನಂಬಿರುವ ರಾಜಕಾರಣಿಗಳ ಪೈಕಿ ಮುಂಚೂಣಿಯಲ್ಲಿರುವ ಹೊನ್ನಾಳಿ ರೇಣುಕಾಚಾರಿ ಚುನಾವಣಾ ಫಲಿತಾಂಶ ಬಂದಕೂಡಲೇ ಸಿಡಿಲು ಬಡಿದವನಂತೆ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಹೊನ್ನಾಳಿಯ ಜೊತೆಗೆ ಇಡೀ ನಾಡೇ ಬೆಚ್ಚುವಂತೆ ಮಾಡಿಬಿಟ್ಟರಲ್ಲಾ. ಬಿಜೆಪಿಯ ಜೊತೆಗೆ ಇಡೀ ನಾಡನ್ನೇ ಡಲ್ಲು ಮಾಡಿದ ರೇಣುಕಾಚಾರಿಯನ್ನು ಮಾತನಾಡಿಸಿ ಸಾಂತ್ವಾನ ಹೇಳುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ಟೋನ್: “ನೀವು ಪ್ರಯತ್ನಿಸುತ್ತಿರುವ ಗ್ರಾಹಕ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”; ಮತ್ತೆಮತ್ತೆ ಫೋನ್ ಮಾಡಲಾಗಿ ರಿಂಗಾಯ್ತು. “ಕ್ಯಂಚಾಲೊ ಮಚ್ಚಾಲೊ ಯಂಗವುಲಾ ನಿನ್ ಡವ್ಗಳು”..
“ಹಲೊ ಯಾರ್ರಿ?”
“ನಾನು ಸಾರ್ ಯಾಹು. ನಿಮ್ಮ ಬಾಮೈದುನ ಗೆಳೆಯ.”
“ಬಾಮೈದನ ಗೆಳೆಯ ಆಗಿದ್ರೆ ಅವುನಿಗೆ ಫೋನ್ ಮಾಡ್ರಿ.”
“ನಿಮ್ಮತ್ರ ಒಂದೆರಡು ಮಾತಾಡಬೇಕು ಸಾರ್.”
“ಅದೇನು ಜಲ್ದಿ ಹೇಳ್ರಿ.”
“ಬ್ಯುಸಿನಾ ಸಾರ್?”
“ಇಲ್ಲಿ ಕ್ರಿಕೆಟ್ ಆಡ್ತಾಯಿದ್ದಿನಿ ಕಂಡ್ರಿ.”
“ಎಲ್ಲಿ ಸಾರ್?”
“ನಮ್ಮೂರ ಸ್ಕೂಲು ಮೈದಾನದಲ್ಲಿ.”
“ಯಾರ ಜೊತೆ ಸಾರ್?”
“ಇನ್ಯಾರು.. ನಮ್ಮೂರ ಹುಡುಗರ ಜೊತೆ ಆಡ್ತಾಯಿದ್ದಿನಿ ಕಂಡ್ರೀ.”
“ನಿಜಕ್ಕೂ ನೀವು ಅಪರೂಪದ ರಾಜಕಾರಣಿ ಸಾರ್. ಮಂಡಿ ಉದ್ದ ನೀರಲ್ಲಿ ತೆಪ್ಪ ನಡುಸ್ತಿರಿ. ಸಣ್ಣುಡಗರ ಜೊತೆ ಕ್ರಿಕೆಟ್ ಆಡ್ತಿರಿ. ರಾಜಕಾರಣಿ ಈ ತರ ತಮಾಸಿಯಾಗಿರಬೇಕು ಸಾರ್.”
“ನಾನು ಯಾವತ್ತು ತಮಾಸಿ ಕಂಡ್ರಿ. ಯಾವುದ್ನೂ ಸೀರಿಯಸ್ಸಾಗಿ ತಗಳದಿಲ್ಲ.”
“ತಗೊಬಾರ್ದು ಸಾ. ಅಂಗೆ ತಗಂಡಿದ್ರೆ ಇಷ್ಟೊತ್ತಿಗೆ ಮನೆ ಬಿಟ್ಟು ಎಲ್ಲೋ ಇರ್ತಿದ್ರಿ ಅಲ್ಲುವಾ ಸರ್?”
“ಮುಗದೋದ ಕತೆನೆಲ್ಲ ನಾನೇ ಯೋಚನೆ ಮಾಡ್ತಯಿಲ್ಲ, ಇನ್ನ ನೀವ್ಯಾಕೆ ತಲೆ ಕೆಡಿಸಿಕೊಳ್ತಿರಿ.”
“ಈಶ್ವರಪ್ಪ ಅಂಥ ವ್ಯಕ್ತಿ ಮತ್ತೆ ನೀವು ಜೊತೆಲಿ ಸೋತರಿ; ಅವುರು ಚುನಾವಣಾ ರಾಜಕೀಯದಿಂದ ನಿವೃತ್ತರಾದ್ರೆ ನೀವು ರಾಜಕಾರಣದಿಂದ್ಲೇ ನಿವೃತ್ತರಾದರಲ್ಲಾ ಸಾರ್.”
“ರೀ ನಾನಿನ್ನೂ ನಿವೃತ್ತಿಯಾಗಿಲ್ಲ ಕಂಡ್ರಿ.”
“ಮತ್ತೆ ಘೋಷಣೆ ಮಾಡಿದರಲ್ಲಾ ಸಾರ್?”
“ಅದು ರಿಜಲ್ಟ್ ಬಂದಾಗ ಅಂಗಂದೆ; ಈಗ ನಮ್ಮ ಕ್ಷೇತ್ರದ ಜನತೆ ನೀವು ನಿವೃತ್ತಿಯಾದ್ರೆ ನಮ್ಮ ಕತೆಯೇನು ಅಂತಾವುರೆ..”
“ಗೆದ್ದಿರೋರು ನೋಡಕತರೆ ಬುಡಿ ಸಾರ್.”
“ಗೆದ್ದಿರೋರು ಅವುರ ಕಡಿಯೋರ್ನ ನೋಡಕತರೆ ಕಂಡ್ರಿ. ನನ್ನ ಪಾಲೊಯರ್ಸ್ನ ಯಾರು ರಕ್ಷಣೆ ಮಾಡ್ತರ್ರಿ?”
“ರಕ್ಷಣೆ ಮಾಡಬೇಕಾದ ಸ್ಥಿತಿಯಿದಿಯಾ ಸಾರ್?”
“ಇಲ್ಲಿನ ಮುಸ್ಲಿಮರಿಗೂ ನನಿಗೂ ಆಗಲ್ಲ ಕಂಡ್ರಿ.”
“ಶಾಸಕನಾದವನು ಎಲ್ಲಾ ಜನಾಂಗದ ರಕ್ಷಕನಾಗಬೇಕು ಸಾರ್. ಅದು ಬಿಟ್ಟು ಒಂದು ಜನಾಂಗನ ಅಪಾಯಕಾರಿಗಳು ದೇಶದ್ರೋಹಿಗಳು, ನಂಬಿಕೆಗೆ ಯೋಗ್ಯರಲ್ಲ ಅಂತ ಸುಳ್ಳುಸುಳ್ಳೆ ಬೈದರೆ ಅವರ ಮನಸ್ಸಿಗೆ ನೋವಾಗಲ್ಲಾವಾ ಸಾರ್?”
“ನೋವಾಗೋ ಅಂತ ಕೆಲಸ ಯಾಕ್ ಮಾಡಬೇಕ್ರಿ?”
“ಹೊನ್ನಾಳಿಲಿ ಯಾರಿಗೂ ಆಗದೆಯಿರೊ ಸಮಸ್ಯೆ ನಿಮಗ್ಯಂಗಾಯ್ತು ಸಾರ್? ಅಲ್ಲಿನ ಮುಸ್ಲಿಮರು, ಕುರುಬರು, ಲಿಂಗಾಯತರು ಮತ್ತು ಇತರೆ ಶೋಷಿತ ಜಾತಿಗಳ ಜೊತೆ ಆರಾಮಾಗಿರುವಾಗ, ನೀವು ಬಂದು ಈ ಮುಸ್ಲಿಮರ ನಂಬಬೇಡಿ ಅವರ ಮಸೀದಿಲಿ ವೆಪನ್ನಿವೆ, ಮಾರಕಾಸ್ತ್ರಗಳಿವೆ ಅಂತ ರೈಲು ಬುಟ್ಟು ಬೊಬ್ಬೆ ಹೊಡೆದರಲ್ಲಾ, ಇದು ಹೊನ್ನಾಳಿ ಜನಗಳಿಗೆ ಸುಳ್ಳು ಅನ್ನಸ್ತು. ಅದಕ್ಕೆ ತಕ್ಕ ಶಿಕ್ಷೆ ಅಂದ್ರೆ ನಿಮ್ಮನ್ನ ಚುನಾವಣೆಲಿ ಸೋಲುಸೋದನ್ನ ಯಲ್ಲ ಜನಾಂಗ ಮಾಡಿ ತೋರಿಸಿದಾವೆ ಸಾರ್. ಈ ಟೈಮಲ್ಲಿ ನಿಮ್ಮ ನಿವೃತ್ತಿ ಘೋಷಣೆ ಬಹಳ ಸೂಕ್ತವಾಗಿದೆ ಸಾರ್. ನಿಜಕ್ಕೂ ಪ್ರಾಯಶ್ಚಿತ್ತ ಅಂದ್ರೆ ಇದೆನೆ.”
“ನಾನು ನಿವೃತ್ತಿಯಾಗಿಲ್ಲ ಕಣ್ರಿ. ಮತ್ತೆ ಚುನಾವಣೆಗೆ ಬರ್ತಿನಿ.”
“ಜನ ಪುನಹ ಸೋಲಿಸಿದ್ರೆ?”
“ಆಗ ಬೇಕಾದ್ರೆ ನಿವೃತ್ತಿ ಘೋಷಣೆ ಮಾಡ್ತಿನಿ.”
“ಥೂತ್ತೇರಿ.”