Homeಅಂಕಣಗಳುಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

ಬಹುಜನ ಭಾರತ: ನಗೆಗೆ ಹೊಗೆ ಇಡುತ್ತಿದ್ದಾರೇಕೆ ನರೇಂದ್ರ ಮೋದಿ?

- Advertisement -
- Advertisement -

ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ.

ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ. ಟ್ವಿಟರ್ ಅವರಿಗೆ ನೋಟಿಸ್ ನೀಡಿದೆ. ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ’ಕಾನೂನಾತ್ಮಕ ವಿನಂತಿ’ಯನ್ನು ತನಗೆ ಮಾಡಿಕೊಂಡಿರುವುದಾಗಿ ಟ್ವಿಟರ್ ನೋಟಿಸಿನಲ್ಲಿ ವಿವರಿಸಿದೆ.

ಮಂಜುಲ್

ಭಾರತದ ವ್ಯಂಗ್ಯಚಿತ್ರ ಕಲೆಯ ಪಿತಾಮಹ ಎಂದೇ ಹೆಸರಾದವವರು ಕೇಶವನ್ ಶಂಕರ ಪಿಳ್ಳೆ.

ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವ ನಾಲ್ಕು ಸಾವಿರದಷ್ಟು ವ್ಯಂಗ್ಯಚಿತ್ರಗಳನ್ನು ಶಂಕರ ಪಿಳ್ಳೆ ತಮ್ಮ ಪ್ರಸಿದ್ಧ ನಿಯತಕಾಲಿಕ ’ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ್ದುಂಟು. ವಿಡಂಬನೆ-ವಿನೋದದಿಂದ ತಿವಿದರೂ ಸವಿದು ನಗುವ ಗುಣ ನೆಹರೂಗಿತ್ತು.

ನೆಹರೂ ನಂತರ ನಮ್ಮ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳ ವಿಷಯವಸ್ತು ಆದವರು ಪ್ರಾಯಶಃ ಲಾಲೂ ಪ್ರಸಾದ್ ಯಾದವ್. ಆದರೆ ಈತ ಸರ್ವಾಧಿಕಾರಿಯಂತೆ ಉರಿದೆದ್ದ ಉದಾಹರಣೆಯಿಲ್ಲ.

ನಗೆಯಾಡುವ ಅವಕಾಶಗಳನ್ನು ಪ್ರಜೆಗಳಿಗೆ ನಿರಾಕರಿಸುವುದು ಸರ್ವಾಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸರ್ವಾಧಿಕಾರಿಯನ್ನು ಸದಾಸರ್ವದಾ ಕಾಡುತ್ತಿರುತ್ತದೆ. ಅಡಾಲ್ಫ್ ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವೂ ಜರ್ಮನ್ನರಿಗೆ ನೋಡಲು ಸಿಗಲಿಲ್ಲ ಎಂದಿದ್ದಾರೆ ಶಂಕರಪಿಳ್ಳೆ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಘೋಷಣೆಯ ನಂತರ ’ವೀಕ್ಲಿ’ಯನ್ನು ಬಂದ್ ಮಾಡಿದ್ದ ಸಂದರ್ಭವದು.

ವ್ಯಂಗ್ಯಚಿತ್ರಗಳು ಮತ್ತು ತಮ್ಮನ್ನು ಕುರಿತು ತಾವೇ ನಗುವ ಸ್ವಸ್ಥಮನಸ್ಸಿನ ಪ್ರವವೃತ್ತಿಯ ಕುರಿತು ನೆಹರೂ ಮತ್ತು ಖುದ್ದು ಶಂಕರ ಪಿಳ್ಳೆ ಹೇಳಿರುವ ವಿವೇಕದಮಾತುಗಳು ಅರ್ಧ ಶತಮಾನದಷ್ಟು ಹಳೆಯವಾದರೂ ಅತ್ಯಂತ ಪ್ರಸ್ತುತ.

‘Don`t spare me Shankar… Hit me, hit me hard’ ಎಂದು ಶಂಕರ ಪಿಳ್ಳೆಯವರಿಗೆ ಹೇಳುತ್ತಿದ್ದರು ನೆಹರೂ. ಅವರ ಈ ಕೆಳಗಿನ ಮಾತುಗಳು ಇಂದಿಗೂ ಪ್ರಸ್ತುತ.

ನಮ್ಮಲ್ಲಿ ಬಹಳ ಮಂದಿ ಶಂಕರ್ ವ್ಯಂಗ್ಯಚಿತ್ರಕ್ಕಾಗಿ ನಿತ್ಯ ಕಾಯುತ್ತಿದ್ದೆವು. ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಆ ದಿನದ ಪ್ರಮುಖ ಸುದ್ದಿಯನ್ನು ಬಿಟ್ಟು ನೇರವಾಗಿ ಶಂಕರ್ ವ್ಯಂಗ್ಯಚಿತ್ರ ಇರುತ್ತಿದ್ದ ಪುಟ ತೆರೆಯುತ್ತಿದ್ದೆವು. ಮನಸ್ಸನ್ನು ಮುದಗೊಳಿಸುತ್ತಿದ್ದುದು ಮಾತ್ರವಲ್ಲ, ಪ್ರಚಲಿತ ವಿದ್ಯಮಾನಗಳಿಗೆ ಒಳನೋಟವನ್ನು ಕಟ್ಟಿಕೊಡುತ್ತಿದ್ದವು ಶಂಕರ್ ವ್ಯಂಗ್ಯಚಿತ್ರಗಳು.

“ಶಂಕರ್ ಬಿಡಿಸುತ್ತಿದ್ದ ವ್ಯಂಗ್ಯಚಿತ್ರಗಳು ಸಮಾಜಸೇವೆಯೇ ಹೌದು. ನಾವೆಲ್ಲ ಋಣಿಯಾಗಿರಬೇಕಾದ ಸೇವೆಯಿದು. ಒಂದಲ್ಲ ಒಂದು ಹಂತದಲ್ಲಿ ಸ್ವಾರ್ಥಕೇಂದ್ರಿತರೂ ಬೊಗಳೆ ಬಿಟ್ಟು ಬಡಾಯಿ ಕೊಚ್ಚಿಕೊಳ್ಳುವವರೂ ಆಗಿಬಿಡಬಹುದಾದ ನಮ್ಮಂತಹವರ ಕಣ್ಣಿಗೆ ಕಟ್ಟುವ ಪೊರೆಯನ್ನು
ಹರಿಯುವುದು ಒಳಿತಿನ ಕೆಲಸ” ಎಂದಿದ್ದರು ನೆಹರೂ.

ಅಂದಿನ ರಾಜಕಾರಣಿಗಳು ಮತ್ತು ಮಂತ್ರಿಗಳ ವಲಯದಲ್ಲಿ ಡೆಲ್ಲಿ ಡೆವಿಲ್ ಎಂದೇ ಹೆಸರಾಗಿದ್ದರು ಶಂಕರ ಪಿಳ್ಳೆ. ಅವರು ತಮ್ಮ ಪತ್ರಿಕೆಯ ಓದುಗರನ್ನು ಉದ್ದೇಶಿಸಿ ಬರೆದಿದ್ದ ಈ ಕೆಳಕಂಡ ಮಾತುಗಳನ್ನು ಮತ್ತೆ ನೆನೆಯಬೇಕಿದೆ.

ಕೇಶವನ್ ಶಂಕರ ಪಿಳ್ಳೆ

“ನೀವು ನಗಲು ನೆರವಾಗೋದು ನಮ್ಮ ಪತ್ರಿಕೆಯ ಉದ್ದೇಶ. ಜಗತ್ತಿನ ಇತರೆ ದೇಶಗಳ ಜನ ಸಂಘರ್ಷಗಳ ನಡುವೆಯೂ ಮನಸಾರೆ ನಗುತ್ತಿದ್ದಾರೆ. ವಿನೋದ ವಿಡಂಬನೆಗಳೇ ಇಲ್ಲದ ಪೀಳಿಗೆ ನಮ್ಮದು, ಒಂಥರಾ ವರ್ಣರಹಿತ ಬೊಂಬೆಗಳ ಮೆರವಣಿಗೆ. ನಗುವ ವರವನ್ನು ವರ್ಷಗಳ ಹಿಂದೆಯೇ ಕಳೆದುಕೊಂಡವರು. ಜಡ್ಡಿನಂತಹ ಗಾಂಭೀರ್ಯವನ್ನು ಗಳಿಸಿಕೊಂಡುಬಿಟ್ಟಿದ್ದೇವೆ. ಹೆಚ್ಚೆಂದರೆ ಕೃತಕ ಹುಸಿನಗೆ ಧರಿಸಿ ಹಲ್ಲು ಕಿರಿದೇವು. ಆಕಳಿಸಿ ಕಿಸಿಕಿಸಿ ನಕ್ಕೇವು. ಹೊಟ್ಟೆ ತುಂಬ ನಗುವುದೆಂದರೆ ಅಸಭ್ಯವೆಂದು ತಿಳಿದವರು ನಾವು, ನಮ್ಮ ಕುರಿತು ನಾವೇ ನಗುವುದಂತೂ ಇಲ್ಲವೇಇಲ್ಲ. ಇತರರ ಕುರಿತು ಮತ್ತು ನಿಮ್ಮನ್ನೇ ಕುರಿತು ನಗುವುದಕ್ಕೆ ನೆರವಾಗಲಿದೆ ಶಂಕರ್ಸ್ ವೀಕ್ಲಿ… ಭಾರೀ ಬೋರುಗಳ ದೇಶವಾಗಬಾರದು ನಾವು.. ಜನರನ್ನು ನಗಿಸೋ ಪಾಲಿಸಿ ಬಿಟ್ರೆ ಈ ಪ್ರಯತ್ನದ ಹಿಂದೆ ಬೇರೆ ಯಾವ ಪಾಲಿಸಿಯೂ ಇಲ್ಲ. ನಮ್ಮನ್ನು ಏನೆಂದು ಬೇಕಾದರೂ ಕರೀರಿ. ಸೋಷಲಿಸ್ಟರು, ಕಮ್ಯುನಿಸ್ಟರು, ಹುಚ್ಚರು ಇಲ್ಲವೇ ವಕ್ರರು… ಆದ್ರೆ ನಗುವಿಗೆ ಸೈದ್ಧಾಂತಿಕ ಇಲ್ಲವೇ ಇಸಮ್ಮುಗಳ ಅಂಟು ಇರೋದು ಸಾಧ್ಯ ಇಲ್ಲ.

ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವೂ ಸಂಪೂರ್ಣ ಇಂಡಿಯನ್. ಇಂಗ್ಲಿಷ್ ಸಾಹೇಬರಿಗೆ ಬದಲಾಗಿ ಇಂಡಿಯನ್ ಸಾಹೇಬರುಂಟು. ನಮ್ಮ ದೌರ್ಬಲ್ಯಗಳು ರಾಷ್ಟ್ರೀಯ ದೌರ್ಬಲ್ಯಗಳು, ನಗಬೇಕು ಇಲ್ಲವೇ ಸಾಯಬೇಕು ನಾವು. ಹಾಸ್ಯಾಸ್ಪದ ಸ್ವಸಂತುಷ್ಟಿಯನ್ನು ನಗೆಯಲ್ಲಿ ಉಡಾಯಿಸಬೇಕು. ನಗಬೇಕೆಂದರೆ ತಲೆ ಕೆಳಗಾಗಿ ನಿಲ್ಲಬೇಕಿಲ್ಲ. ಪಾದ ಊರಿಯೇ ನಿಲ್ಲಿರಿ. ಬದುಕು ತಲೆ ಊರಿ ತಿರುಗುವುದನ್ನು ನೋಡಿ ಅದರ ಹತ್ತು ಹಲವು ಮುಖಗಳನ್ನು ಕಂಡು ಮನಸಾರೆ ನಗೋಣ.

“ಆಹಾ ಎಂಥಾ ಬದುಕಿದು! ಬುಶ್ಟ್ ಶರ್ಟ್ ನಾಗರಿಕತೆ, ಕಾಕ್ಟೇಲ್ಸ್ ಮತ್ತು ಮೊನಾಲಿಸಾ ನಗೆ ಹೊತ್ತ ಮೇಮ್ ಸಾಹೇಬ್, ಸೆಕ್ರೆಟೆರಿಯಟೀನಲ್ಲಿ ಖಾಲಿ ರುಂಡಗಳನ್ನು ಹೊತ್ತು ತಿರುಗುವ ಭ್ರಷ್ಟ ಮುಂಡಗಳು. ಕಪಟ ನಗುವಿನ ಕಳ್ಳಸಂತೆಕೋರರು, ಜನರ ಆದಾಯ ವೆಚ್ಚಗಳನ್ನು ನಿಯಂತ್ರಿಸುವ ಬಿಗ್ ಬಿಸಿನೆಸ್ಸುಗಳು, ಸಡಗರದ ಕುಪ್ಪಳಿಕೆಯ ರಾಜಕಾರಣಿಗಳು, ಅರಮನೆ ಕ್ರಾಂತಿಗಳ ಪ್ರಮೋಟರುಗಳು, ದೇಶೀ ರುಚಿಗಳು, ವಿದೇಶೀ ವಿಲಾಸಗಳು, ಯಾತಕ್ಕಾಗಿ ಇಂಥ ಕತ್ತೆ ಚಾಕರಿಯೆಂದು ಅರಿಯದೆ ಗುಲಾಮಗಿರಿ ಮಾಡ್ತಿರೋ ಶ್ರಮಜೀವಿ, ಏರುತ್ತಿರುವ ಸಂಬಳ-ಕೂಲಿಯ ಜೊತೆಜೊತೆಗೇ ಜಿಗಿಯುತ್ತಿರುವ ದರಗಳು, ಲೈಸೆನ್ಸ್ ಇರೋ ಲಂಚಗುಳಿತನ ಮತ್ತು ವಿಶೇಷಾಧಿಕಾರ ಎಂಬಂತಹ ಲಾಭಬಡುಕತನ, ಅರೆನಿಯಂತ್ರಿತ ಬದುಕಿನ ಅರಾಜಕತೆ, ಜನಿಸಲು ಒಲ್ಲದ ಸಂಸ್ಕೃತಿಯೊಂದರ ಎಲ್ಲ ತಮಾಷೆ ಮತ್ತು ವಿಕಟ ಹಾಸ್ಯ. ಬದುಕನ್ನು ನೋಡಬೇಕಿದ್ದರೆ ಅದು ಆರಾಮವಾಗಿ ಹರಿಯುವುದನ್ನು ಕಾಣಬೇಕೇ ವಿನಾ ಅದರ ಪಾರ್ಶ್ವನೋಟವನ್ನಷ್ಟೇ ಕಂಡರೆ ಸಾಲದು. ಒಂದಷ್ಟು ಪೀಡನೆ ಇಲ್ಲವೇ ಕೇಡಿಗತನ, ಪ್ರಾಯಶಃ ಪ್ರೀತಿ ಸಹಿಷ್ಟುತೆಗಿಂತ ಹೆಚ್ಚು ಪೀಡನೆಯೇ ಎನಿಸೀತು. ಆದರೆ ನಗೆಗೆ ಲಾಯಕ್ಕಾದ ಎಲ್ಲವನ್ನು ಕಂಡು ನಗಲೇಬೇಕು”.


ಇದನ್ನೂ ಓದಿ: ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...