ಮಹಿಳಾ ಹೊರಾಟಗಾರ್ತಿಯೊಂದಿಗೆ “ನಾನು ಬಹಳ ಕೆಟ್ಟ ಮನುಷ್ಯ, ಹೇಯ್, ಮುಚ್ಚು ಬಾಯಿ ರಾಸ್ಕಲ್” ಎಂದು ಗದರುವ ಮೂಲಕ ದುರ್ವರ್ತನೆ ತೋರಿದ ಸಚಿವ ಮಾಧುಸ್ವಾಮಿ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಕೂಡಲೇ ಆ ಮಹಿಳೆಯ ಬಳಿ ಕ್ಷಮೆ ಕೇಳಬೇಕು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.
ಕೋಲಾರ ತಾಲೂಕಿನ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಕೆರೆಕಟ್ಟೆ ಹೊಡೆಯದಂತೆ ಕ್ರಮ ತೆಗೆದುಕೊಳ್ಳಿ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರಿಗೆ ಮನವಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿಯವರ ಮೇಲೆ ಸಚಿವರು ದರ್ಪ ಮೆರೆದಿದ್ದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಯತ್ನಿಸಿದ ರೈತ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಸಚಿವ ಮಾಧುಸ್ವಾಮಿ ವಿಡಿಯೋ ವೈರಲ್ ಆಗಿದ್ದು ನಾಗರೀಕರು ಛೀಮಾರಿ ಹಾಕುತ್ತಿದ್ದಾರೆ#NaanuGauri #madhuswamy #kolara #muniraju
Posted by Naanu Gauri on Wednesday, May 20, 2020
ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಸಚಿವರು ಆ ರೈತ ಮಹಿಳೆಯ ಕ್ಷಮೆ ಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
“ನಾನು ಬಹಳ ಕೆಟ್ಟ ಮನುಷ್ಯ” ಎಂದು ಬೆರಳು ತೋರಿಸಿ ಹೆದರಿಸುತ್ತಾ ಸಾರ್ವಜನಿಕವಾಗಿ ಮಹಿಳೆಯೊಬ್ಬರಿಗೆ ಏಕವಚನದಲ್ಲಿ “ಹೇಯ್, ಮುಚ್ಚು ಬಾಯಿ, ರಾಸ್ಕಲ್” ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ಅನರ್ಹರು. ಕೆಟ್ಟ ಜನರಿಗೆ, ಅದರಲ್ಲಿಯೂ ಸ್ವಘೋಷಿತ ಕೆಟ್ಟವರಿಗೆ, ಯಾವುದೇ ಅಧಿಕಾರ, ಪದವಿ ನೀಡಬಾರದು. ಮಾನಸಿಕ ಅಸ್ವಸ್ಥರು ಹೇಗೆ ಜವಾಬ್ದಾರಿಯುತ ಹುದ್ದೆ ನಿಭಾಯಿಸಲು ಅನರ್ಹರೋ ಅದೇ ರೀತಿ ಇವರೂ ಸಹ” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿಕೃಷ್ಣಾರೆಡ್ಡಿಯವರು ಕಿಡಿಕಾರಿದ್ದಾರೆ.
ಏನು ದುರಹಂಕಾರ! ಏನು ಉಡಾಫೆ! ಏನು ಧೈರ್ಯ! ರಾಜ್ಯದ ಕಾನೂನು ಇಲಾಖೆ ಸಚಿವ ಮಾಧುಸ್ವಾಮಿಯವರು ಸಾರ್ವಜನಿಕವಾಗಿ ವರ್ತಿಸುವುದು ಹೇಗೆ ಮತ್ತು ತಮ್ಮ ಅಸಹನೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂದು Anger Management Counselor ಗಳಿಂದ ಸೂಕ್ತ ಪಾಠ ಮಾಡಿಸಿಕೊಂಡು ಪ್ರಮಾಣಪತ್ರ ತರುವ ತನಕ ಅವರನ್ನು ಸಂಪುಟದಿಂದ ಹೊರಗಿಡಬೇಕು. ಈಗಾಗಲೇ ಜನರು ಮನೋವೇದನೆಯೂ ಸೇರಿದಂತೆ ಹಲವು ತರಹದ ವೇದನೆ ಮತ್ತು ಸಂಕಷ್ಟಗಳಿಂದ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕಾರಸ್ಥರು ಮಾತೃಹೃದಯದಿಂದ ವರ್ತಿಸದಿದ್ದರೆ ಭಾರೀ ಅಪಾಯ ಕಾದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಾನ್ ಭಾಳ ಕೆಟ್ಟ ಮನುಷ್ಯ, ಬಾಯಿ ಮುಚ್ಚೆ ರಾಸ್ಕಲ್’ ಇದು ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಬಳಸಿದ ಪದ. ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿಚಾರದಲ್ಲಿ ವೀರಾವೇಷದಿಂದ ಖಂಡಿಸಿದ ಬಿಜೆಪಿಯ “ಸಭ್ಯ”ರಾರೂ ಖಂಡಿಸುತ್ತಿಲ್ಲ. ಶೋಭಾಕ್ಕನ ಬಾಯಿಗೆ ಯಾರಾದರೂ ಮೈಕ್ ಹಿಡಿಯಿರಪ್ಪ ಎಂದು ಪತ್ರಕರ್ತೆ ಹೇಮಾವತಿ ವೆಂಕಟ್ರವರು ಆಗ್ರಹಿಸಿದ್ದಾರೆ.
ಓಟು ಕೇಳೋಕೆ ಬಂದಾಗ ಕಾಲಿಗೆ ಬೀಳ್ತಾರೆ. ಅಧಿಕಾರ ಸಿಕ್ಕಮೇಲೆ ಮತದಾರರ ಮೇಲೆಯೇ ದರ್ಪ ತೋರಿಸುತ್ತಾರೆ.
ಇಂತಹ ದುಷ್ಟ ಸಚಿವರು/ ಅಧಿಕಾರಿಗಳ ವಿರುದ್ಧ ಯುವಜನರು ದನಿ ಎತ್ತಬೇಕು. ಯುವ ರೈತ ಹೋರಾಟಗಾರ್ತಿ ನಳಿನಿಯ ಧೈರ್ಯ ಮೆಚ್ಚುವಂಥದ್ದು. ಅವರ ಜೊತೆ ನಾವಿದ್ದೇವೆ. ಸಚಿವ ಮಾಧುಸ್ವಾಮಿ ರಾಜೀನಾಮೆ ನೀಡಲೇಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ ಒತ್ತಾಯಿಸಿದ್ದಾರೆ.
ಮಾಧುಸ್ವಾಮಿಯಂತೆ ಒಬ್ಬ ಬಿಜೆಪಿಯೇತರ ಪಕ್ಷದ ನಾಯಕ ಹೀಗೆ ವರ್ತಿಸಿದ್ದರೆ ಮಾಧ್ಯಮಗಳು ಅದರಲ್ಲೂ ನ್ಯೂಸ್ ಚಾನೆಲುಗಳು ಹೇಗೆ ವರದಿ ಮಾಡುತ್ತಿದ್ದವು? ಎಂದು ಹಿರಿಯ ಪತ್ರಕರ್ತ ಮತ್ತು ಖ್ಯಾತ ಕಾರ್ಟೂನಿಷ್ಟ್ ಪಿ.ಮಹಮ್ಮದ್ ಪ್ರಶ್ನಿಸಿದ್ದಾರೆ.
ಮಾಧುಸ್ವಾಮಿ ಯವರು ಒಳ್ಳೆಯ ಮನುಷ್ಯ ಎಂದುಕ್ಕೊಂಡಿದ್ದೆವು. ನಾನು ಕೆಟ್ಟವನು ಎಂದು ಘೋಷಣೆ ಮಾಡಿಕ್ಕೊಂಡು ನಮ್ಮ ಅಭಿಪ್ರಾಯ ತಿದ್ದಿದ್ದೀರಿ ಸರ್ ಎಂದು ನ.ಲಿ ಕೃಷ್ಣರವರು ವ್ಯಂಗ್ಯವಾಡಿದ್ದಾರೆ.
ಇನ್ನು ಮಾಧುಸ್ವಾಮಿಯವರು ಕ್ಷಮೆ ಕೇಳಬೇಕು, ಇಲ್ಲವೇ ರಾಜೀನಾಮೆ ನೀಡಬೇಕಂದು ಒತ್ತಾಯಿಸಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
ಇದನ್ನೂ ಓದಿ: ನಾವು ನಿನ್ನನ್ನು ಮುಸ್ಲಿಂ ಎಂದು ತಿಳಿದಿದ್ದೆವು: ವಕೀಲನಿಗೆ ಥಳಿಸಿದ ಮಧ್ಯಪ್ರದೇಶ ಪೊಲೀಸರ ಕ್ಷಮೆಯಾಚನೆ!