//ನಾನು ಗೌರಿ ಡೆಸ್ಕ್//
ಇಂದು ನರೇಂದ್ರ ಮೋದಿಯವರಿಗೆ ಎರಡೆರಡು ಸವಾಲುಗಳು ಎದುರಾಗಿವೆ. ಒಂದು ಅವರ ಪಕ್ಷಕ್ಕೆ ಸೇರಿದ ಅಭ್ಯರ್ಥಿಗೆ ಸಂಬಂಧಿಸಿದ್ದರೆ, ಇನ್ನೊಂದು ಅವರ ಎದುರಾಳಿ ರಾಹುಲ್ಗಾಂಧಿಯದ್ದಾಗಿದೆ.
ಮಹಾತ್ಮಾಗಾಂಧಿಯವರ ಕೊಲೆಗಡುಕ ನಾಥೂರಾಂ ಗೋಡ್ಸೆ ದೇಶಭಕ್ತ ಎಂಬ ಪ್ರಗ್ಯಾ ಠಾಕೂರ್ ಹೇಳಿಕೆಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಕ್ಷಮೆ ಕೇಳಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಒತ್ತಾಯಿಸಿದ್ದಾರೆ. ಪ್ರಗ್ಯಾರ ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಬಿಜೆಪಿಯ ವಕ್ತಾರ ಜಿವಿಎಲ್ ನರಸಿಂಹರಾವ್ ಅದನ್ನು ಖಂಡಿಸಿದರಲ್ಲದೇ, ಪ್ರಗ್ಯಾ ಇದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದೂ ಹೇಳಿದ್ದರು. ಇದಕ್ಕೂ ಮುಂಚೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯ ವಿರುದ್ಧವೂ ಪ್ರಗ್ಯಾ ಹೇಳಿಕೆ ನೀಡಿ ಅವರ ಪಕ್ಷವನ್ನು ಮುಜುಗರಕ್ಕೆ ಸಿಕ್ಕಿಸಿದ್ದರು. ಅದರ ಬಗ್ಗೆಯೂ ಬಿಜೆಪಿಯು ಕ್ಷಮೆ ಕೇಳಲು ಸೂಚಿಸಿದ್ದರಿಂದ ಪ್ರಗ್ಯಾ ಕ್ಷಮೆ ಕೇಳಿದ್ದರು.
ಇದನ್ನೂ ಓದಿ: ಪ್ರಗ್ಯಾ ಹೇಳಿಕೆ ಏನು?
ಆದರೆ, ಈ ಸಾರಿ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಒಪ್ಪಲು ನೆಟ್ಟಿಗರು ಸಿದ್ಧರಿಲ್ಲ. ಅವರ ಪ್ರಕಾರ, ನರೇಂದ್ರ ಮೋದಿ ನಿರ್ದಿಷ್ಟ ಕಾರಣದಿಂದ ಪ್ರಗ್ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಸ್ವತಃ ಅವರೇ ಇದಕ್ಕೆ ಕ್ಷಮೆ ಯಾಚಿಸಬೇಕು ಎಂಬುದಾಗಿದೆ.
ಮೊಟ್ಟ ಮೊದಲಿಗೆ ಇದಕ್ಕೆ ಪ್ರತಿಕ್ರಿಯಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಾಥೂರಾಮ್ ಗೋಡ್ಸೆ ದೇಶಭಕ್ತನಾದರೆ, ಮಹಾತ್ಮಾ ಗಾಂಧಿ ದೇಶವಿರೋಧಿಯೇ ಎಂದು ಟ್ವಿಟ್ಟರ್ನಲ್ಲಿ ಕೇಳಿದ್ದರು.
ಇವೆಲ್ಲವೂ ಉದ್ಭವಿಸಿದ್ದು, ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆ ಮತ್ತು ಆತನೊಬ್ಬ ಹಿಂದು ಎಂದು ಹೇಳಿದ ನಂತರ. ಇದಕ್ಕೆ ಪ್ರತಿಕ್ರಿಯಿಸುತ್ತಾ, ಸ್ವತಃ ನರೇಂದ್ರ ಮೋದಿಯವರೂ ‘ಹಿಂದೂ ಒಬ್ಬ ಭಯೋತ್ಪಾದಕ ಆಗಲು ಸಾಧ್ಯವೇ ಇಲ್ಲ’ ಎಂದು ಚುನಾವಣಾ ಭಾಷಣದಲ್ಲೇ ಹೇಳಿದ್ದರು. ಹಾಗಾದರೆ, ನಾಥೂರಾಂ ಗೋಡ್ಸೆಯ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೆ ಪ್ರಧಾನಿಯವರು ಇನ್ನೂ ಉತ್ತರಿಸಿಲ್ಲ.
ಪತ್ರಕರ್ತೆ ನಿಧಿ ರಾಜ್ದಾನ್ ಸಹಾ ಈ ಬಗ್ಗೆ ಕಿಡಿಕಾರುತ್ತಾ, ಇಂತಹದೊಂದು ಸ್ಥಿತಿ ಬರುತ್ತದೆಂದು ನಾನೆಂದೂ ಬಗೆದಿರಲಿಲ್ಲ ಎಂದಿದ್ದಾರೆ.
Never thought this day would come where Godse would be called a deshbhakt. But this is a “new India”. A terror accused may become an MP, the killer of Mahatma Gandhi is called a patriot. Sick https://t.co/xsE348m0bK
— Nidhi Razdan (@Nidhi) May 16, 2019
ದುರಂತವೆಂದರೆ, ಪ್ರಗ್ಯಾ ಹೇಳಿಕೆಯನ್ನು ಖಂಡಿಸುತ್ತಾ ಎಐಎಂಐಎಂನ ಸಂಸದ ಓವೈಸಿ ಟ್ವೀಟ್ ಮಾಡಿ, ಇದು ಹೀಗೆಯೇ ಮುಂದುವರೆದು ‘ಶ್ರೀ ಶ್ರೀ ಗೋಡ್ಸೆಗೆ’ ಭಾರತರತ್ನ ಕೊಟ್ಟರೂ ಆಶ್ಚರ್ಯವಿಲ್ಲ ಎಂದಿದ್ದಕ್ಕೆ, ಚೌಕೀದಾರ್ ಶಿವಂ ಘಟಕ್ ಎಂಬಾತ, ಹೌದು ಗೋಡ್ಸೆಗೆ ಭಾರತರತ್ನ ಕೊಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
Remember, @narendramodi has defended & endorsed Pragya’s candidature
This is not a ‘lunatic fringe’ & is definitely not her “personal opinion”, it is the BJP standing by Independent India’s first terrorist. In few years, Sri Sri Godse will also be recommended with a Bharat Ratna https://t.co/2VVhc8xhQ3
— Asaduddin Owaisi (@asadowaisi) May 16, 2019
ಪತ್ರಕರ್ತ ನಿಖಿಲ್ ವಾಗ್ಲೆ ಸಹಾ ಇದನ್ನು ಖಂಡಿಸಿರುವುದಲ್ಲದೇ, ಇದರ ಹಿಂದೆ ಆರೆಸ್ಸೆಸ್ನ ಅಜೆಂಡಾ ಕೆಲಸ ಮಾಡುತ್ತಿದ್ದು, ರಾಷ್ಟ್ರದ ಭಾವನೆಗಳನ್ನು ಕೆರಳಿಸುತ್ತಿದ್ದಾರೆಂದು ಹೇಳಿದ್ದಾರೆ.
Pragya Thakur calling Nathuram Godse a patriot is a part of larger conspiracy. RSS is systematically testing the national sentiment to push Hindu Rashtra agenda.
— nikhil wagle (@waglenikhil) May 16, 2019
ಕಾಂಗ್ರೆಸ್ನ ಮಾಧ್ಯಮ ಉಸ್ತುವಾರಿ ನರೇಂದ್ರ ಸಲೂಜಾ, ‘ಇದು ಬಿಜೆಪಿಯ ತಾತ್ವಿಕತೆಯನ್ನು ತೋರಿಸುತ್ತದೆ ಮತ್ತು ಬಿಜೆಪಿ ಪಕ್ಷವು ಎಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದೆ ಎಂಬುದನ್ನು ಬಯಲುಗೊಳಿಸುತ್ತಿದೆ’ ಎಂದಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಕಟುವಾಗಿ ಪ್ರತಿಕ್ರಿಯಿಸಿ ‘ಗೋಡ್ಸೆಯ ಉತ್ತರಾಧಿಕಾರಿಗಳಾದ ಬಿಜೆಪಿಯವರಿಂದ ದೇಶದ ಆತ್ಮವೇ ದಾಳಿಗೊಳಗಾಗುತ್ತಿದೆ’ ಎಂದಿದ್ದಾರೆ. ‘ರಾಷ್ಟ್ರಪಿತನ ಕೊಲೆ ಮಾಡಿದವನನ್ನೇ ರಾಷ್ಟ್ರಭಕ್ತನೆಂದೂ, ದೇಶಕ್ಕಾಗಿ ಪ್ರಾಣತೆತ್ತ ಭಯೋತ್ಪಾದಕ ನಿರೋಧಕ ದಳದ ಮುಖ್ಯಸ್ಥ ಹುತಾತ್ಮ ಕರ್ಕರೆಯನ್ನು ದೇಶವಿರೋಧಿಯೆಂದೂ ಬಿಜೆಪಿಯವರು ಕರೆಯುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಪ್ರಗ್ಯಾ ಠಾಕೂರ್ರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ಸಿಂಗ್ ‘ಮೋದಿ ಮತ್ತು ಅಮಿತ್ಷಾ ತಮ್ಮ ಹೇಳಿಕೆಗಳನ್ನು ನೀಡಿ ದೇಶದ ಮುಂದೆ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪ್ರಗ್ಯಾ ಸಿಂಗ್ ಸಹಚರರಿಗೆ ಗೌರಿ ಲಂಕೇಶ್ ಹಂತಕರ ನಂಟು?
ಪದೇ ಪದೇ ಗೋಡ್ಸೆಯ ವಿಚಾರವನ್ನು ಬಿಜೆಪಿಯ ಕೆಲವರು ಮುಂದೆ ತರುತ್ತಿದ್ದಾಗ್ಯೂ ಪ್ರಧಾನಿ ಮೋದಿ ಬಾಯಿ ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿಯೂ ಮೋದಿ ಕ್ಷಮೆ ಯಾಚಿಸಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಪ್ರಧಾನಿಯವರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು.
ಮೋದಿಯವರಿಗೆ ಎದುರಾಗಿರುವ ಇನ್ನೊಂದು ಸಂಗತಿಯೆಂದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಯವರ ಸವಾಲು. ಮೋದಿಯವರಿಗೆ ಧೈರ್ಯವಿದ್ದರೆ ತನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬರಲಿ. ತಾನು ಕೇವಲ 15 ನಿಮಿಷ ಮಾತಾಡುತ್ತೇನೆ. ಮೋದಿಯವರು 2 ಗಂಟೆ ಮಾತಾಡಲಿ ಎಂಬುದು ರಾಹುಲ್ ಸವಾಲು. ಇದನ್ನು ಈ ಹಿಂದೆಯೂ ಹೇಳಿದ್ದ ರಾಹುಲ್ಗಾಂಧಿ, ಕಡೆಯ ಹಂತದ ಚುನಾವಣೆಗೆ ಮುಂಚೆ ಅದನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ರಾಫೇಲ್ ಡೀಲ್ಗೆ ಸಂಬಂಧಿಸಿದಂತೆ ರಾಹುಲ್ಗಾಂಧಿಯವರ ಬಳಿ ಇನ್ನೂ ದೊಡ್ಡ ಸತ್ಯವೊಂದಿದ್ದು, ಅದನ್ನು ಬಹಿರಂಗ ಪಡಿಸುವ ಅವಕಾಶಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆಂಬ ಕುತೂಹಲ ದೆಹಲಿಯ ರಾಜಕೀಯ ವಲಯಗಳಲ್ಲಿದೆ.
ಈ ವಿಚಾರಗಳ ಕುರಿತು ಪ್ರಧಾನಿಯವರು ಪ್ರತಿಕ್ರಿಯಿಸದೇ ಮೌನ ತಾಳುವುದು ಹಿಂದಿನಿಂದಲೂ ಟೀಕೆಗೊಳಗಾಗಿದ್ದು, ಈ ಸಾರಿ ಮೋದಿ ಮೌನ ಮುರಿಯುವರೇ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ಹೇಳುತ್ತವೆ.