ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ್ ಕಿಸಾನ್ ಮೋರ್ಚಾ ಇಂದು ಸಭೆ ಸೇರಲಿದ್ದು, ರೈತ ಹೋರಾಟದ ಮುಂದೆಯಿರುವ ಗುರಿಗಳ ಬಗ್ಗೆ ನಿರ್ಧರಿಸಲಿದೆ.
ಒಂದೂವರೆ ವರ್ಷಗಳ ಕಾಲ ಕಾನೂನುಗಳನ್ನು ಅಮಾನತಿನಲ್ಲಿಡುವ ಕೇಂದ್ರದ ಪ್ರಸ್ತಾಪವನ್ನು ಸಂಯುಕ್ತ್ ಕಿಸಾನ್ ಮೋರ್ಚಾವು ಈಗಾಗಲೇ ತಿರಸ್ಕರಿಸಿದೆ. ಈ ನಿರಾಕರಣೆಯ ನಂತರ, 11 ನೇ ಸುತ್ತಿನ ಮಾತುಕತೆಯಾದರೂ, ಮುಂದಿನ ಮಾತುಕತೆಗೆ ಯಾವುದೆ ಹೊಸ ದಿನಾಂಕವನ್ನು ನಿರ್ಧರಿಸಲಾಗಿಲ್ಲ. ಆದರೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ’ಟ್ರಾಕ್ಟರ್ ಕ್ರಾಂತಿ’ಯಲ್ಲಿ ಭಾಗವಹಿಸಿ: ದೇಶಕ್ಕೆ ರೈತ ಮುಖಂಡ ಟಿಕಾಯತ್ ಕರೆ
ಗಣರಾಜ್ಯೋತ್ಸವದಂದು ನಡೆದ ಅಹಿತಕರ ಘಟನೆಯ ನಂತರ, ಇಲ್ಲಿಯವರೆಗೆ ರೈತರ ಹೋರಾಟವು ಮತ್ತೊಂದು ದಿಕ್ಕಿನತ್ತ ಹೊರಳಿದೆ. ರೈತ ಸಂಘದ ಮುಖಂಡರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡಲು ಪ್ರಾರಂಭಿಸಿದ ನಂತರ ದೆಹಲಿ ಕೇಂದ್ರವಾಗಿ ಇದ್ದ ಹೋರಾಟದ ಕಾವು ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿ ’ರೈತ ಮಹಾಪಂಚಾಯತ್’ ನಡೆಯುವ ಮೂಲಕ ಹೋರಾಟದ ವ್ಯಾಪ್ತಿ ಹೆಚ್ಚಾಗತೊಡಗಿದೆ.
ಇಲ್ಲಿಯವರೆಗೆ ನಡೆದ ಮಹಾಪಂಚಾಯತ್ಗಳಿಗೆ ಭಾರಿ ಬೆಂಬಲ ದೊರೆತಿರುವುದರಿಂದ, ಇಂತಹ ಹೆಚ್ಚಿನ ಮಹಾಪಂಚಾಯತ್ಗಳನ್ನು ಆಯೋಜಿಸುವುದರತ್ತ ಗಮನಹರಿಸಲಾಗುತ್ತಿದೆ. ಗಣರಾಜ್ಯೋತ್ಸವದಲ್ಲಿ ನಡೆದ ಅಹಿತಕರ ಘಟನೆಯ ನಂತರ, ಹೋರಾಟದ ದಿಕ್ಕನ್ನೆ ಬದಲಾಯಿಸಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, ಇಂತಹ ಮಹಾಪಂಚಾಯತ್ಗಳಿಗೆ ಹೆಚ್ಚಿನ ಸಂಖ್ಯೆಯ ಜನಸಮೂಹವನ್ನು ಸೆಳೆಯಲು ಪ್ರಾರಂಭಿಸಿದ್ದಾರೆ.
ಟಿಕಾಯತ್ ಇದುವರೆಗೆ ಜಿಂದ್, ದಾದ್ರಿ, ಕುರುಕ್ಷೇತ್ರ ಒಟ್ಟು ಮೂರು ಮಹಾಪಂಚಾಯತ್ಗಳಿಗೆ ಹಾಜರಾಗಿದ್ದಾರೆ. ಇತ್ತ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಹಾಪಂಚಾಯತ್ ನಡೆಸಿ ಭಾಷಣ ಮಾಡಿದ್ದಾರೆ; ಪ್ರಿಯಾಂಕಾ ಗಾಂಧಿ ಸಹರಾನ್ಪುರದಲ್ಲಿ ಭಾಷಣ ಮಾಡಲಿದ್ದಾರೆ.
ಹೋರಾಟ ನಿರತ ರೈತರ ಕೊನೆಯ ಕಾರ್ಯಕ್ರಮ ಶಾಂತಿಯುತ ‘ಚಕ್ಕಾ ಜಾಮ್’ ಆಗಿದ್ದು, ಇದಕ್ಕೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಯಿತು. ಕೇಂದ್ರಕ್ಕೆ ಅಕ್ಟೋಬರ್ವರೆಗೆ ಕಾನೂನನ್ನು ಕೈಬಿಡುವುದಕ್ಕೆ ಅಕ್ಟೋಬರ್ವರೆಗೆ ಸಮಯವಿದೆ ಎಂದು ಹೇಳುವ ಮೂಲಕ ರಾಕೇಶ್ ಟಿಕಾಯತ್, ಪ್ರತಿಭಟನೆಯು ಅಲ್ಲಿಯವರೆಗೆ ನಡೆಯಲಿದೆ ಎಂದು ಸೂಚಿಸಿದ್ದರು.
ಇದನ್ನೂ ಓದಿ: ದೇಶವ್ಯಾಪಿ ಹರಡುತ್ತಿರುವ ರೈತ ಹೋರಾಟ: ಪ್ರತಿಭಟನೆ ಜೀವಂತವಾಗಿಡಲು ವಾರಕ್ಕೊಮ್ಮೆ ‘ಚಕ್ಕಾ ಜಾಮ್’?